
ಬಾಗಲಕೋಟೆ (ಜ.11): ರಾಜ್ಯದ ಮಾಜಿ ಸಚಿವ ಎಚ್.ವೈ. ಮೇಟಿ ಅವರ ದೂರದ ಸಂಬಂಧಿ ಕುಟುಂಬದಲ್ಲಿ ಬಡತನದಿಂದ ಬೇಸತ್ತಿದ್ದ ತಾಯಿಯೊಬ್ಬಳು ತನ್ನ ಮೂವರು ಹೆಣ್ಣು ಮಕ್ಕಳಿಗೆ ವಿಷವುಣಿಸಿ ಕೊಂದು ಕೊನೆಗೆ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ನಡೆದಿದೆ.
ರೇಖಾ ಬಗಲಿ(28) ತಾಯಿ, ಮಕ್ಕಳಾದ ಸನ್ನಿಧಿ (8), ಸಮೃದ್ದಿ (5) ಹಾಗೂ ಶ್ರೀನಿಧಿ (3) ಮೃತ ದುರ್ದೈವಿಗಳು. ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ತನ್ನ ಮೂವರು ಮಕ್ಕಳಿಗೆ ವಿಷವುಣಿಸಿದ ತಾಯಿ ಕೊನೆಗೆ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಆದರೆ, ಮೂವರು ಮಕ್ಕಳಿಗೆ ವಿಷವುಣಿಸಿದ ತಾಯಿ ರೇಖಾ ಇತ್ತೀಚಿನ ಕೆಲವು ದಿನಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಳು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Shivamogga: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ
ಬಡತನದಿಂದ ಬೇಸತ್ತು ಆತ್ಮಹತ್ಯೆಯ ಶಂಕೆ: ಮೃತ ರೇಖಾಳನ್ನು ಬೀಳಗಿ ತಾಲ್ಲೂಕಿನ ಸುನಗ ಗ್ರಾಮಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಕಳೆದ ೭ ವರ್ಷಗಳಿಂದ ತವರು ಮನೆಗೆ ಬಂದಿದ್ದ ರೇಖಾ ಹಾಗೂ ಕುಟುಂಬ ತಿಮ್ಮಾಪುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ರೇಖಾಳ ಗಂಡ ಅರ್ಜುನ ಕಬ್ಬು ಕಟಾವು ಮಾಡುವ ಕೆಲಸ ಮಾಡ್ತಿದ್ದನು. ಮೂರು ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ಓದು, ಅವರ ಬೆಳವಣಿಗೆ ಹಾಗೂ ಅವರ ಮದುವೆ ಮಾಡುವುದು ಹೇಗೆ ಎಂದು ಚಿಂತಿಸಿ ಮಾನಸಿಕವಾಗಿ ಬಳಲಿದ್ದಳು ಎಂಬ ಮಾಹಿತಿಯಿದೆ. ಹೀಗಾಗಿ, ಬಡತನದಿಂದಲೇ ಮಾನಸಿಕ ಚಿಂತನೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.
ಜ್ಯೂಸ್ನಲ್ಲಿ ವಿಷ ಬೆರಿಸಿ ಕುಡಿಸಿದ ತಾಯಿ: ಮೂರೂ ಹೆಣ್ಣು ಮಕ್ಕಳಿಗೆ ಜಗತ್ತಿನ ಅರಿವೇ ಇಲ್ಲ. ತಾಯಿ ಹೇಳಿದ್ದನ್ನು ಕೇಳಿಕೊಂಡು, ಮನೆಯಲ್ಲಿ ಇದ್ದುದನ್ನು ತಿಂದು ಆಟವಾಡಿಕೊಂಡು ಇರುತ್ತಿದ್ದರು. ಆದರೆ, ಇಂದು ಮನೆಗೆ ಜ್ಯೂಸ್ ಬಾಟಲಿಯೊಂದನ್ನು ತರಿಸಿದ ತಾಯಿ ರೇಖಾ ಅದರಲ್ಲಿ ವಿಷ ಬೆರೆಸಿದ್ದಾಳೆ. ಈ ಜ್ಯೂಸ್ ಅನ್ನು ಎಲ್ಲ ಮಕ್ಕಳಿಗೂ ಕೊಟ್ಟು ಕುಡಿಸಿದ್ದಾಳೆ. ಮಕ್ಕಳೆಲ್ಲರ ಪ್ರಾಣ ಹೋದ ನಂತರ ತಾನೂ ಕೂಡ ಅದೇ ಜ್ಯೂಸ್ ಕುಡಿದ್ದಾಳೆ. ವಿಷ ಸೇವನೆಯಿಂದ ತಾನೂ ಮೃತಪಟ್ಟಿದ್ದಾಳೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರೂ ತನ್ನ ಹೆತ್ತ ಮಕ್ಕಳನ್ನು ಸಾಯಿಸುವಷ್ಟು ಕ್ರೂರ ನಿರ್ಧಾರ ಕೈಗೊಳ್ಳಬಾರದಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮನಕಲಕುವ ಘಟನೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ದಾವಣಗೆರೆ: ಮೆಟ್ರೋ ಪಿಲ್ಲರ್ ದುರಂತ, ಸಾವಿನಲ್ಲಿ ಒಂದಾದ ತಾಯಿ-ಮಗು ಬೇರೆ ಬೇರೆಯಾಗಿ ಅಂತ್ಯಕ್ರಿಯೆ
ಮಾಜಿ ಸಚಿವ ಎಚ್.ವೈ.ಮೇಟಿ ದೂರದ ಸಂಬಂಧಿ:
ಅರ್ಜುನ್ ಹಾಗೂ ರೇಖಾ ಅವರು ಮಾಜಿ ಸಚಿವ ಎಚ್.ವೈ. ಮೇಟಿ ಅವರ ದೂರದ ಸಂಬಂಧಿಗಳಾಗಬೇಕು ಎಂದು ತಿಳಿದುಬಂದಿದೆ. ಈ ಬಗ್ಗೆ ನರೆಹೊರೆ ಜನರು ಮಾಹಿತಿ ನೀಡಿದ್ದಾರೆ. ರಾಜಕೀಯದ ನಂಟಿಲ್ಲದೇ ಕುಟುಂಬವು ದುಡಿದು ಜೀವನ ಸಾಗಿಸುತ್ತಿತ್ತು. ಕುಟುಂಬದಲ್ಲಿ ಮೂವರು ಹೆಣ್ಣು ಮಕ್ಕಳಿದ್ದರೂ ಗಂಡ ದುಡಿದು ಕೈಲಾದ ಮಟ್ಟಿಗೆ ಕುಟುಂಬ ಪೋಷಣೆ ಮಾಡುತ್ತಿದ್ದನು. ಆದರೆ, ತಾಯಿ ರೇಖಾ ತನ್ನ ಬಡತನವನ್ನೇ ನೆನದುಕೊಂಡು ಗಂಡನೊಂದಿಗೂ ಜಗಳ ತೆಗೆದಿದ್ದಳು. ಇನ್ನು ಗಂಡು ಮಗು ಇಲ್ಲದಿರುವುದೂ ಚಿಂತೆಯಾಗಿತ್ತು ಎಂದು ತಿಳಿದುಬಂದಿದೆ. ಆದರೆ ತಾಯಿಯ ದುಡುಕಿನ ನಿರ್ಧಾರದಿಂದ ಮೂರು ಅಮಾಯಕ ಜೀವಗಳು ಸೇರಿದಂತೆ ಒಟ್ಟು ನಾಲ್ಕು ಜೀವಗಳು ಇಹಲೋಕ ತ್ಯಜಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ