Shootout At Bengaluru: ಆಂಧ್ರದ ರೌಡಿ ಮೇಲೆ ನಗರದಲ್ಲಿ ಶೂಟೌಟ್‌

By Govindaraj SFirst Published Dec 9, 2022, 7:03 AM IST
Highlights

ಹಳೇ ದ್ವೇಷದ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಮೂಲದ ಕುಖ್ಯಾತ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ದುಷ್ಕರ್ಮಿಗಳು ಎಂಟು ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. 

ಬೆಂಗಳೂರು (ಡಿ.09): ಹಳೇ ದ್ವೇಷದ ಹಿನ್ನಲೆಯಲ್ಲಿ ಆಂಧ್ರಪ್ರದೇಶ ಮೂಲದ ಕುಖ್ಯಾತ ರೌಡಿ ಹಾಗೂ ಆತನ ಕಾರು ಚಾಲಕನ ಮೇಲೆ ದುಷ್ಕರ್ಮಿಗಳು ಎಂಟು ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ ಶಿವಶಂಕರ್‌ ರೆಡ್ಡಿ (29) ಹಾಗೂ ಆತನ ಕಾರು ಚಾಲಕ ಅಶೋಕ್‌ ರೆಡ್ಡಿ (33)ಗೆ ಗುಂಡೇಟು ಬಿದ್ದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ. 

ಕೆ.ಆರ್‌.ಪುರ ಸಮೀಪದ ಕುರು ಸೋನ್ನೇನಹಳ್ಳಿ ಸಮೀಪ ತಾನು ಕಟ್ಟಿಸುತ್ತಿರುವ ಅಪಾರ್ಚ್‌ಮೆಂಟ್‌ ಕಟ್ಟಡ ಪರಿಶೀಲನೆಗೆ ಮಧ್ಯಾಹ್ನ ಬಂದಿದ್ದಾಗ ಶಿವಶಂಕರ್‌ ರೆಡ್ಡಿ ಹಾಗೂ ಆತನ ಕಾರು ಚಾಲಕನ ಮೇಲೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.

ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಉದ್ಯಮಿಗೆ ಜೀವ ಬೆದರಿಕೆ: ಮದನಪಲ್ಲಿಯ ಶಿವಶಂಕರ್‌ ರೆಡ್ಡಿ ಕ್ರಿಮಿನಲ್‌ ಹಿನ್ನಲೆಯುಳ್ಳವನಾಗಿದ್ದು, ಕಳೆದ ಹತ್ತು ವರ್ಷಗಳಿಂದ ಪಾತಕ ಲೋಕದಲ್ಲಿ ಆತ ಸಕ್ರಿಯವಾಗಿದ್ದ. ಮದನಪಲ್ಲಿಯಲ್ಲಿ ರೆಡ್ಡಿ ಮೇಲೆ ಕೊಲೆ, ಕೊಲೆ ಯತ್ನ ಹಾಗೂ ಸುಲಿಗೆ ಪ್ರಕರಣಗಳಿವೆ. ಹೀಗಾಗಿ ರೆಡ್ಡಿ ವಿರುದ್ಧ ರೌಡಿಪಟ್ಟಿತೆರೆಯಲಾಗಿತ್ತು. ಎರಡು ತಿಂಗಳ ರಿಯಲ್‌ ಎಸ್ಟೇಟ್‌ ಉದ್ಯಮಿ ಸ್ನೇಹಿತ ಬಾಬು ಎಂಬಾತನಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆಗೆ ಯತ್ನಿಸಿದ್ದ ರೆಡ್ಡಿಯನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

8 ಸುತ್ತು ಗುಂಡಿನ ದಾಳಿ: ಕೆಲ ತಿಂಗಳಿಂದ ಮದನಪಲ್ಲಿಯಿಂದ ತನ್ನ ಕಾರ್ಯಚುವಟಿಕೆಗಳನ್ನು ಬೆಂಗಳೂರಿನ ವೈಟ್‌ಫೀಲ್ಡ್‌ ಹಾಗೂ ಕೆ.ಆರ್‌.ಪುರ ಕಡೆಗೆ ಶಿವಶಂಕರ್‌ ರೆಡ್ಡಿ ವಿಸ್ತರಿಸಿಕೊಂಡಿದ್ದು, ಸ್ಥಳೀಯವಾಗಿ ಭೂ ವ್ಯವಹಾರದಲ್ಲಿ ಆತ ಸಕ್ರಿಯವಾಗಿ. ಕೆ.ಆರ್‌.ಪುರದ ಕುರು ಸೋನ್ನೇನಹಳ್ಳಿಯಲ್ಲಿ 60/40 ನಿವೇಶನದಲ್ಲಿ ಅಪಾರ್ಚ್‌ಮೆಂಟ್‌ ಕಟ್ಟಲು ಮುಂದಾಗಿದ್ದ. ಐದಾರು ದಿನಗಳಿಂದ ಕಟ್ಟಡದ ಕಾಮಗಾರಿ ಶುರುವಾಗಿತ್ತು. ಇದೇ ಕಾಮಗಾರಿ ಪರಿಶೀಲನೆಗೆ ಮಧ್ಯಾಹ್ನ 3ಕ್ಕೆ ಬಂದಿದ್ದಾಗ ರೆಡ್ಡಿ ಮೇಲೆ ಬೈಕ್‌ನಲ್ಲಿ ಬಂದ ನಾಲ್ವರು ಪಿಸ್ತೂಲ್‌ನಿಂದ ಎಂಟು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ರೆಡ್ಡಿ ಭುಜ ಹಾಗೂ ಕಾಲುಗಳಿಗೆ 4 ಗುಂಡುಗಳು ಬಿದ್ದಿದ್ದರೆ, ಆತನ ಚಾಲಕ ಅಶೋಕ್‌ ಕಾಲಿಗೆ ಒಂದು ಗುಂಡು ತಾಕಿದೆ. ಗುಂಡು ಬಿದ್ದಿದ್ದರೂ ಲೆಕ್ಕಿಸದೆ ತಾನೇ ಕಾರು ಚಾಲನೆ ಮಾಡಿಕೊಂಡು ಹೋಗಿ ರೆಡ್ಡಿಯನ್ನು ಅಶೋಕ್‌ ಆಸ್ಪತ್ರೆಗೆ ದಾಖಲಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಣ್ಮುಂದೆಯೇ ತಂದೆ ಕೊಂದವನ ಕೊಚ್ಚಿ ಹತ್ಯೆ: 2011ರಲ್ಲಿ ಕೊಲೆ ಪ್ರಕರಣದ ವಿಚಾರಣೆಗೆ ತೆರಳುವಾಗ ಶಿವಶಂಕರ್‌ ರೆಡ್ಡಿ ತಂದೆ ಜಯಚಂದ್ರ ರೆಡ್ಡಿಯನ್ನು ಆತನ ಎದುರಾಳಿಗಳು ಹಲ್ಲೆ ನಡೆಸಿ ಕೊಂದಿದ್ದರು. ತನ್ನ ಕಣ್ಣುಂದೆಯೇ ತಂದೆಯನ್ನು ಕೊಂದವನನ್ನು ಅಟ್ಟಾಡಿಸಿಕೊಂಡು ಹೋಗಿ ರೆಡ್ಡಿ ಹತ್ಯೆಗೈದು ಪ್ರತೀಕಾರ ತೀರಿಸಿಕೊಂಡಿದ್ದ. ಇದಾದ ನಂತರ ಕಳೆದ ವರ್ಷ ತನ್ನ ಸೋದರಿಗೆ ಕಾಟ ಕೊಡುತ್ತಿದ್ದ ಸ್ಥಳೀಯ ರೌಡಿಯೊಬ್ಬನನ್ನು ರೆಡ್ಡಿ ಕೊಂದು ಹಾಕಿದ್ದ. ತನ್ನ ಇಬ್ಬರು ಸೋದರರಿಯನ್ನು ಮದುವೆ ಮಾಡಿಕೊಡುವಂತೆ ಮದನಪಲ್ಲಿಯ ಇಬ್ಬರು ರೌಡಿಗಳು ರೆಡ್ಡಿ ಬೆನ್ನುಹತ್ತಿದ್ದರು. ಆಗ ಒಬ್ಬಾತನನ್ನು ಮದುವೆ ಮಾತುಕತೆ ನೆಪದಲ್ಲಿ ಕರೆಸಿ ರೆಡ್ಡಿ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಲಾಡ್ಜ್​ನಲ್ಲಿ ಒಟ್ಟಿಗೆ ನೇಣಿಗೆ ಶರಣಾದ ಯುವಕ, ಯುವತಿ

ಆಂಧ್ರಪ್ರದೇಶದ ಮದನಪಲ್ಲಿಯ ರೌಡಿ ಶಿವಶಂಕರ್‌ ರೆಡ್ಡಿ ಹಾಗೂ ಆತನ ಚಾಲಕನ ಮೇಲಿನ ಗುಂಡಿನ ದಾಳಿ ಪ್ರಕರಣದ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೃತ್ಯದಲ್ಲಿ ಆಂಧ್ರ ಮೂಲದ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ಶಂಕೆ ಇದೆ.
-ಎಸ್‌.ಗಿರೀಶ್‌, ಡಿಸಿಪಿ, ವೈಟ್‌ಫೀಲ್ಡ್‌ ವಿಭಾಗ

click me!