
ಬೆಂಗಳೂರು(ಏ.28): ಕೇಂದ್ರ ಸರ್ಕಾರದ ಯೋಜನೆಯಡಿ ಸಾಲ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ನಂಬಿಸಿ 62.77 ಲಕ್ಷವನ್ನು ಖಾತೆಗೆ ಹಾಕಿಸಿಕೊಂಡು ಸೈಬರ್ ವಂಚಕರು ಟೋಪಿ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಅರೆಕೆರೆ ನಿವಾಸಿ ಹರೀಶ್ ಬಾಬು ವಂಚನೆಗೆ ಒಳಗಾಗಿದ್ದು, ಇವರು ನೀಡಿದ ದೂರಿನ ಮೇರೆಗೆ ಗೌರವ್, ಅಮಿತ್ ಶರ್ಮಾ, ಕಿರಣ್ ಗೌಡ, ರಾಧಿಕಾ, ಉದಯ್ ಗೌಡ, ಜಿತೇಶ್ ಮತ್ತು ರೇಣುಕಾ ಮಿತ್ತಲ್ ಸೇರಿದಂತೆ ಇತರರ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಹಣ ವರ್ಗಾವಣೆ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಧು, ಪೋಷಕರು, ಪೂಜಾರಿ ಎಲ್ಲರೂ ನಕಲಿ.. ಮದುವೆ ಆಸೆಗೆ ಹಣ ಕಳೆದುಕೊಂಡ!
ನವೋದ್ಯಮದ ಕನಸು ಕಂಡಿದ್ದ ಹರೀಶ್ ಅವರು, ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರದ ಮುದ್ರಾ ಹಾಗೂ ನವೋದ್ಯಮದ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ವೆಬ್ಸೈಟ್ನಲ್ಲಿ ಹರೀಶ್ ಅವರ ಮಾಹಿತಿ ಕದ್ದಿರುವ ಆರೋಪಿಗಳು, ಬಳಿಕ ಹರೀಶ್ ಅವರಿಗೆ ಸಾಲ ವಿತರಿಸುವ ನೆಪದಲ್ಲಿ ವಂಚಿಸಿದ್ದಾರೆ. ಸಾಲ ಮಂಜೂರಾಗಿದೆ, ಆದರೆ ಹಣ ಬಿಡುಗಡೆ ಮುನ್ನ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲವು ಶುಲ್ಕ ಭರಿಸಬೇಕಿದೆ ಎಂದಿದ್ದರು. ಈ ಮಾತು ನಂಬಿ ಹರೀಶ್ ಹಂತ ಹಂತವಾಗಿ ಆರೋಪಿಗಳಿಗೆ 62.77 ಲಕ್ಷವನ್ನು ಅವರು ವರ್ಗಾಯಿಸಿದ್ದಾರೆ. ಹಣ ಸಂದಾಯದ ಬಳಿಕ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಆಗಿದೆ. ವಂಚನೆಗೆ ಒಳಗಾಗಿರುವ ಬಗ್ಗೆ ಮನಗೊಂಡ ಹರೀಶ್ ಸಿಸಿಬಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ