ಆಂಜನೇಯ ದೇಗುಲದಲ್ಲಿ ನಿಧಿ ಶೋಧ ಆಂಧ್ರ ಮೂಲದ 5 ಮಂದಿ ಬಂಧನ

By Kannadaprabha NewsFirst Published Jul 26, 2022, 1:29 PM IST
Highlights

ಪಾವಗಡದ ವೆಂಕಟಾಪುರಲ್ಲಿ ಇಂಥದ್ದೇ ಕೃತ್ಯ ನಡೆದಿದೆ. ನಿಧಿ ಶೋಧನೆಗಾಗಿ ರಾತ್ರೋರಾತ್ರಿ ದೇವಸ್ಥಾನದ ಬಳಿ ಆಗಮಿಸಿ,ಗುಂಡಿ ತೋಡುತ್ತಿರುವ ವೇಳೆ ಗ್ರಾಮಸ್ಥರೆ ಹಿಡಿದು 5 ಮಂದಿ ನಿಧಿಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ

ಪಾವಗಡ (ಜು.26:)   ಮನಸಿಗೆ ನೆಮ್ಮದಿ ನೀಡುವ ಸ್ಥಳಗಳೆಂದರೆ ಪುರಾತನ ದೇವಾಲಯಗಳು. ಈ ದೇಶ ಗತಕಾಲದಲ್ಲಿ ಎಷ್ಟು ಸಂಪದ್ಭರಿತವಾಗಿತ್ತು ಎಂಬುದನ್ನು ಇಲ್ಲಿನ ಪ್ರಾಚೀನ ದೇವಾಲಯಗಳ ನಿರ್ಮಾಣ, ವಾಸ್ತುಶಿಲ್ಪ ನೊಡಿಯೇ ಅರಿಯಬಹುದು.  ದೇಶದಲ್ಲಿ ಪ್ರಖ್ಯಾತ ದೇವಾಲಯಗಳಿವೆ. ನಮ್ಮ ಕರ್ನಾಟಕದಲ್ಲಿಯೂ ಪುರಾತನ ದೇವಾಲಯಗಳಿವೆ.ಇಂಥ ಪುರಾತನ ದೇವಾಲಯಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ದುರಂತವೆಂದರೆ ನಿಧಿ ಆಸೆಗಾಗಿ ದುಷ್ಟರು ಪುರಾತನ ದೇವಾಲಯಗಳನ್ನು ಹಾಳುಗೆಡುತ್ತಿದ್ದಾರೆ. ಹಂಪಿ, ಪಟ್ಟದಕಲ್ಲು, ಹಳೇಬಿಡು ಇಲ್ಲೆಲ್ಲ ನಿಧಿಗಾಗಿ ದೇವಾಲಯ, ಮೂರ್ತಿ ಭಗ್ನಗೊಳಿಸುವ ಕೃತ್ಯ ನಡೆಯುತ್ತಿದೆ. ಇದೀಗ  ಪಾವಗಡದ ವೆಂಕಟಾಪುರಲ್ಲಿ ಇಂಥದ್ದೇ ಕೃತ್ಯ ನಡೆದಿದೆ. ನಿಧಿ ಶೋಧನೆಗಾಗಿ ರಾತ್ರೋರಾತ್ರಿ ದೇವಸ್ಥಾನದ ಬಳಿ ಆಗಮಿಸಿ,ಗುಂಡಿ ತೋಡುತ್ತಿರುವ ವೇಳೆ ಗ್ರಾಮಸ್ಥರೆ ಹಿಡಿದು 5 ಮಂದಿ ನಿಧಿಗಳ್ಳರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ತಡರಾತ್ರಿ ತಾಲೂಕಿನ ವೆಂಕಟಾಪುರ ಗ್ರಾಮದ ಚೋಳಪುರ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದಿದೆ.

ಗಂಗಾವತಿ: ನಿಧಿ ಆಸೆಗೆ ಹಿಂದೂ ಆರಾಧನಾ ಸ್ಥಳಗಳು ಬಲಿ?

ಪಾವಗಡ ತಾಲೂಕು ಕಸಬಾ ವ್ಯಾಪ್ತಿಯ ವೆಂಕಟಾಪುರ ಹೊರವಲಯದಲ್ಲಿ ಸುಮಾರು 700 ವರ್ಷಗಳ ಹಳೇಯದಾದ ಚೋಳಪುರ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವಿದ್ದು ಅಪಾರ ಸಂಖ್ಯೆಯ ಭಕ್ತ ವೃಂದ ಹೊಂದಿದೆ. ದೇವಸ್ಥಾನದಲ್ಲಿ ಟೈಲ್ಸ್‌ ಹಾಕುವ ನೆಪದಲ್ಲಿ ದೇಗುಲಕ್ಕೆ ಆಗಮಿಸಿದ್ದ 5 ಮಂದಿ ನಿಧಿ ಚೋರರು ದೇವಾಲಯದ ಒಳಭಾಗದಲ್ಲಿ ಗುಂಡಿ ತೋಡಿ ನಿಧಿ ಶೋಧ ಕೈಗೊಂಡಿದ್ದರು. ಈ ವೇಳೆ ಅನುಮಾನ ವ್ಯಕ್ತಪಡಿಸಿದ ವೆಂಕಟಾಪುರ ಗ್ರಾಮಸ್ಥರು, ದೇವಸ್ಥಾನದ ಬಳಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಳವಾಗಿ ಗುಂಡಿ ತೋಡಿದ್ದನ್ನು ಪ್ರಶ್ನಿಸಿ, ಕಳ್ಳರ ಸಂಚಿನ ಬಗ್ಗೆ ಅರಿತ ಗ್ರಾಮಸ್ಥರು, ನಿಧಿಗಳ್ಳರನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಮಾಹಿತಿ ನೀಡಿದ ಮೇರೆಗೆ ಪಾವಗಡ ಠಾಣಾ ಪೊಲೀಸರು ಸ್ಥಳಕ್ಕೆ ದಾವಿಸಿ ನಿಧಿಗಳ್ಳರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಬಂಧಿತ ಆರೋಪಿಗಳು ನೆರೆಯ ಆಂಧ್ರದ ಆನಂತಪುರ ಜಿಲ್ಲಾ ವ್ಯಾಪ್ತಿಯ ಕಂದೂರು ಮುರಳಿ, ನಾಗರಾಜ್‌, ಚಿನ್ನರೆಡ್ಡಿ, ವೆಂಕಟರಮಣಪ್ಪ, ಸಾಯಿಮುರಳಿ ಎಂದು ತಿಳಿದು ಬಂದಿದ್ದು, ಪ್ರಕರಣ ದಾಖಲಾಗಿದೆ. ನಿಧಿ ಕದ್ದಿಯಲು ಬಂದಿದ್ದ ಕಳ್ಳರನ್ನು ಶ್ರೀ ಆಂಜನೇಯಸ್ವಾಮಿಯೇ ಪೊಲೀಸರಿಗೆ ಒಪ್ಪಿಸಿ ತಕ್ಕ ಪಾಠ ಕಲಿಸಿದ್ದಾನೆಂದು ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.

ದಾವಣಗೆರೆ: ನಿಧಿ ಆಸೆಗೆ ಪತ್ನಿಗೆ ಇಂಜೆಕ್ಷನ್‌ ನೀಡಿ ಕೊಂದ Doctor..!

ಪಾವಗಡ ತಾಲೂಕಿನ ವೆಂಕಟಾಪುರದ ಚೋಳಪುರ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಿಧಿ ಶೋಧ ಮಾಡಲು ಬಂದಿದ್ದ 5 ಮಂದಿ ಕಳ್ಳರನ್ನು ಬಂಧಿಸಿದ ಪೊಲೀಸರು.

click me!