* ಮಾನವ ಕಳ್ಳ ಸಾಗಾಟ ಜಾಲ ಪತ್ತೆ
* ತಮಿಳುನಾಡು ಮೂಲಕ ಮಂಗಳೂರಿಗೆ ಬಂದು ಅಕ್ರಮವಾಗಿ ನೆಲೆಸಿದ್ದ ಲಂಕಾ ಪ್ರಜೆಗಳು
* ತಮಿಳುನಾಡು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ
ಮಂಗಳೂರು(ಜೂ.12): ಉದ್ಯೋಗ ಅರಸಿ ಕೆನಡಾ ತೆರಳುವ ಯತ್ನದಲ್ಲಿ ತಮಿಳುನಾಡು ಮೂಲಕ ಮಂಗಳೂರಿಗೆ ಬಂದು ಅಕ್ರಮವಾಗಿ ಆಶ್ರಯ ಪಡೆದಿದ್ದ 38 ಮಂದಿ ಪ್ರಜೆಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾನವ ಕಳ್ಳಸಾಗಾಟದ ಗಂಭೀರ ಪ್ರಕರಣ ಇದಾಗಿದ್ದು, ವಶಕ್ಕೆ ಪಡೆಯಲಾದವರು ಉತ್ತರ ಶ್ರೀಲಂಕಾದ ನಿವಾಸಿಗಳು. ಇವರು ಸೀ ಪೋರ್ಟ್ ಹಾಗೂ ಮಂಗಳೂರು ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಸಿಟಿ ಲಾಡ್ಜ್ ಹಾಗೂ ಕಸಬಾ ಬೆಂಗರೆಯ ಮನೆಯೊಂದರಲ್ಲಿ ಕೂಲಿ ಆಳೆಂದು ಹೇಳಿಕೊಂಡು ನೆಲೆಸಿದ್ದರು. ಇವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ವಿದೇಶಿ ಕಾಯ್ದೆ, ಐಪಿಸಿ ಸೆಕ್ಷನ್ 14ರ ವಿದೇಶಿಯರ ಕಾಯ್ದೆ 1964 ಸೆಕ್ಷನ್ 12 (1) (ಎ) ಪಾಸ್ಪೋರ್ಟ್ ಕಾಯ್ದೆ 1967ರಂತೆ ಪ್ರಕರಣ ದಾಖಲಾಗಿದೆ ಎಂದರು.
ಬೆಳಗಾವಿ: ಲಾಕ್ಡೌನ್ ವೇಳೆ ಹಣ ಸುಲಿಗೆ, ಪೊಲೀಸಪ್ಪನ ಬಂಧನ
ಶ್ರೀಲಂಕಾ ಏಜೆಂಟರ ಮೂಲಕ ಕೆನಡಾದಲ್ಲಿ ಉದ್ಯೋಗ ಭರವಸೆಯೊಂದಿಗೆ 6ರಿಂದ 10 ಲಕ್ಷದ ಶ್ರೀಲಂಕಾ ಕರೆನ್ಸಿ ಪಡೆದು ಖಾಸಗಿ ಬೋಟ್ ಮೂಲಕ ಮಾ.17ರಂದು ಚೆನ್ನೈಯ ತೂತುಕುಡಿಗೆ ಕರೆತರಲಾಗಿತ್ತು. ಆದರೆ ಅಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ತಪಾಸಣೆ ಆರಂಭಗೊಂಡಾಗ ಬಂಧನ ಭೀತಿಯಲ್ಲಿ ಬೆಂಗಳೂರಿಗೆ ಬಸ್ನಲ್ಲಿ ಕಳುಹಿಸಿ ಅಲ್ಲಿಂದ ಮಂಗಳೂರಿಗೆ ಸಾಗಿಸಲಾಗಿತ್ತು.
ಇವರು ಮಂಗಳೂರಿನಲ್ಲಿ ಒಂದೂವರೆ ತಿಂಗಳಿನಿಂದ ವಾಸವಾಗಿದ್ದರು. ತಮಿಳುನಾಡು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಮೇರೆಗೆ 78 ಗಂಟೆಗಳ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ತಿಳಿಸಿದರು.