ಆರ್‌ಸಿಬಿಗೆ ಸಿಕ್ಕ ನಿಧಿ ರಜತ್ ಪಾಟೀದಾರ್! ಬೆಂಗಳೂರಿಗೆ ಎರಡನೇ ಐಪಿಎಲ್ ಟ್ರೋಫಿ ಗೆಲ್ಲಲು ಪಣತೊಟ್ಟ ಕ್ಯಾಪ್ಟನ್

Kannadaprabha News   | Kannada Prabha
Published : Apr 07, 2026, 09:15 AM IST
Rajat Patidar

ಸಾರಾಂಶ

ಬದಲಿ ಆಟಗಾರನಾಗಿ ಆರ್‌ಸಿಬಿ ಸೇರಿದ ರಜತ್ ಪಾಟೀದಾರ್, ಇದೀಗ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿದ್ದಾರೆ. ಸ್ಪಿನ್ ಹಾಗೂ ವೇಗದ ಬೌಲಿಂಗ್ ಎರಡನ್ನೂ ಸಮರ್ಥವಾಗಿ ಎದುರಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಅವರು, ಭಾರತ ತಂಡದಲ್ಲಿ ಸ್ಥಾನ ಪಡೆಯುವ ಹಾಗೂ ನಾಯಕತ್ವದ ಸ್ಪರ್ಧೆಯಲ್ಲಿದ್ದಾರೆ.

ಬೆಂಗಳೂರು: 2022ರಲ್ಲಿ ಕರ್ನಾಟಕದ ಲವ್‌ನಿತ್‌ ಸಿಸೋಡಿಯಾ ಗಾಯಗೊಂಡ ಕಾರಣ ಆರ್‌ಸಿಬಿ ತಂಡದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆಯಾಗಿದ್ದು ಮಧ್ಯಪ್ರದೇಶ ಕ್ರಿಕೆಟಿಗ ರಜತ್‌ ಪಾಟೀದಾರ್‌. ಬದಲಿ ಆಟಗಾರನಾಗಿ ತಂಡಕ್ಕೆ ಸೇರುವ ಮನಸ್ಸಿಲ್ಲದಿದ್ದರೂ ರಜತ್‌ ಅನಿವಾರ್ಯವಾಗಿ ಆರ್‌ಸಿಬಿಗೆ ಬಂದಿದ್ದರು. ಆದರೆ ಈಗ ಅವರು ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಆಧಾರಸ್ತಂಭ. ಸ್ಪಿನ್‌ ಹಾಗೂ ವೇಗದ ಬೌಲರ್ಸ್‌ ಇಬ್ಬರನ್ನೂ ಪುಡಿಗಟ್ಟಬಲ್ಲ ಬಲಿಷ್ಠ ಬ್ಯಾಟರ್‌. ಆರ್‌ಸಿಬಿಗೆ ಕಪ್‌ ಗೆಲ್ಲಿಸಿಕೊಟ್ಟ ಸಮರ್ಥ ನಾಯಕ. ಒಂದರ್ಥದಲ್ಲಿ, ಆರ್‌ಸಿಬಿಗೆ ಸಿಕ್ಕ ನಿಧಿ.

ಅರ್‌ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು

ಚಿನ್ನಸ್ವಾಮಿಯಲ್ಲಿ ಭಾನುವಾರ ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ ರಜತ್ ಎದುರಿಸಿದ್ದು ಕೇವಲ 19 ಎಸೆತ. ಬಾರಿಸಿದ್ದು 6 ಸಿಕ್ಸರ್‌. ಐಪಿಎಲ್‌ನಲ್ಲಿ 2024ರ ಬಳಿಕ ಮಧ್ಯಮ ಓವರ್‌ಗಳಲ್ಲಿ(7ರಿಂದ 16) ಅವರ ಸ್ಟ್ರೈಕ್‌ರೇಟ್‌ 174.03. ಸ್ಪಿನ್ನರ್‌ಗಳ ವಿರುದ್ಧ ಸ್ಟ್ರೈಕ್‌ರೇಟ್‌ 180.64 ಇದೆ. 2024ರ ಬಳಿಕ ಐಪಿಎಲ್‌ನಲ್ಲಿ 200+ ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಇದು 2ನೇ ಶ್ರೇಷ್ಠ ಸ್ಟ್ರೈಕ್‌ರೇಟ್‌. ಇನ್ನು, ವೇಗಿಗಳ ವಿರುದ್ಧವೂ ಅವರ ಸ್ಟ್ರೈಕ್‌ರೇಟ್‌ ಉತ್ತಮವಾಗಿದ್ದು, 167.04 ಇದೆ.

ಮೂರೂ ಬಾಕ್ಸ್‌ಗೆ ಟಿಕ್‌:ಮಧ್ಯಮ ಓವರ್‌ಗಳಲ್ಲಿ, ಸ್ಪಿನ್‌ ಹಾಗೂ ವೇಗಿಗಳ ವಿರುದ್ಧ ಆಕ್ರಮಣಕಾರಿ ಆಟ. ಈ ಮೂರೂ ಬಾಕ್ಸ್‌ಗಳನ್ನು ಟಿಕ್‌ ಮಾಡಬಲ್ಲ ಬೆರಳೆಣಿಕೆಯಷ್ಟು ಆಟಗಾರರನ್ನು ಮಾತ್ರ ಈಗ ಕಾಣಬಹುದು. ಅವರಲ್ಲಿ ರಜತ್ ಪ್ರಮುಖರು. ಕಳೆದ ವರ್ಷ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡಲು ಪ್ರಮುಖ ಪಾತ್ರ ವಹಿಸಿದ್ದ ರಜತ್‌, ಈ ಬಾರಿ ಮತ್ತಷ್ಟು ಆಕ್ರಮಣಕಾರಿಯಾಗಿದ್ದಾರೆ. ಸನ್‌ರೈಸರ್ಸ್‌ ವಿರುದ್ಧ 12 ಎಸೆತಕ್ಕೆ 31 ರನ್‌ ಸಿಡಿಸಿದ್ದ ಅವರು, ಸಿಎಸ್‌ಕೆ ವಿರುದ್ಧ 19 ಎಸೆತದಲ್ಲಿ ಔಟಾಗದೆ 48 ರನ್‌ ಗಳಿಸಿದ್ದಾರೆ. ಸುದೀರ್ಘ ಟೂರ್ನಿಯಲ್ಲಿ ಅವರು ಮತ್ತಷ್ಟು ಪಂದ್ಯಗಳಲ್ಲಿ ಅಬ್ಬರಿಸಿ, ತಂಡವನ್ನು ಗೆಲ್ಲಿಸಿದರೆ ಭಾರತ ತಂಡದಲ್ಲೂ ಸ್ಥಾನ ಗಟ್ಟಿಸಿಕೊಳ್ಳುವ ಎಲ್ಲಾ ಅವಕಾಶವೂ ಇದೆ. ಅಂದಹಾಗೆ, ರಜತ್‌ ಭಾರತ ಪರ ಈಗಾಗಲೇ 3 ಟೆಸ್ಟ್‌, 1 ಏಕದಿನ ಪಂದ್ಯವಾಡಿದ್ದಾರೆ. ಈ ಐಪಿಎಲ್‌ ಬಳಿಕ ಅವರು ಭಾರತ ಟಿ20 ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಭಾರತ ನಾಯಕತ್ವ, 4ನೇ ಕ್ರಮಾಂಕದ ಮೇಲೆ ರಜತ್‌ ಕಣ್ಣು

ಭಾರತ ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದರು. ಆದರೆ ಈಗ ಅವರಿಗೆ 35 ವರ್ಷ. ಹೀಗಾಗಿಯೇ ತಂಡದ ಆಡಳಿತ ಬೇರೆ ಯುವ ಪ್ರತಿಭೆಗಳ ಮೇಲೆ ಕಣ್ಣಿಟ್ಟಿದೆ. ರಜತ್‌ಗೆ 33 ವರ್ಷವಾಗಿದ್ದರೂ, ಕೆಲ ಕಾಲ ಅವರು ಭಾರತ ತಂಡಕ್ಕೆ ಆಸ್ತಿಯಾಗಬಲ್ಲರು. ಸದ್ಯ ಅವರಿಗೆ ಪೈಪೋಟಿ ನೀಡಬಲ್ಲ ಆಟಗಾರನೆಂದರೆ 31 ವರ್ಷದ ಶ್ರೇಯಸ್‌ ಅಯ್ಯರ್‌. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಜೊತೆ ನಾಯಕತ್ವಕ್ಕೂ ಶ್ರೇಯಸ್‌ ಹಾಗೂ ರಜತ್‌ ನಡುವೆ ಪೈಪೋಟಿಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಹ್ಯಾಟ್ರಿಕ್ ಸೋಲಿನ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್‌ಗೆ ಗುಡ್ ನ್ಯೂಸ್!
ಪಂಜಾಬ್ ಕಿಂಗ್ಸ್ ಕ್ರಿಕೆಟಿಗನ ಮನಸ್ಸು ಕದ್ರಾ ನಟಿ ಸಮ್ರೀನ್? ಲವ್ ಸ್ಟೋರಿ ಸುಳಿವು ನೀಡಿದ ಐಪಿಎಲ್