ಲಂಕಾ ಪ್ರವಾಸಕ್ಕೆ ದ್ರಾವಿಡ್‌ ಕೋಚ್‌: ಗೊಂದಲಗಳಿಗೆ ಸೌರವ್ ತೆರೆ

By Suvarna NewsFirst Published Jun 16, 2021, 1:20 PM IST
Highlights

* ಭಾರತದ ತಂಡದ ಲಂಕಾ ಸರಣಿಗೆ ರಾಹುಲ್ ದ್ರಾವಿಡ್ ಕೋಚ್

* ಗೊಂದಲಗಳಿಗೆ ತೆರೆ ಎಳೆದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

* ಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿ ಜುಲೈ 13ರಿಂದ ಆರಂಭ

ನವದೆಹಲಿ(ಜೂ.16): ಮುಂದಿನ ತಿಂಗಳು ಅಂದರೆ ಜುಲೈ 13ರಿಂದ ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ತಂಡಕ್ಕೆ ರಾಹುಲ್‌ ದ್ರಾವಿಡ್‌ ಪ್ರಧಾನ ಕೋಚ್‌ ಆಗಿ ಕಾರ‍್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಸಹ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಲಂಕಾ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಕುರಿತಂತೆ ಬಿಸಿಸಿಐ ಮೂಲಗಳು ಖಚಿತ ಪಡಿಸಿದ್ದವು. ಆದರೆ ಬಿಸಿಸಿಐನಿಂದ ಯಾವುದೇ ಪ್ರಕಟಣೆ ಹೊರಬಿದ್ದಿರಲಿಲ್ಲ.

ಇದೀಗ ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತೆರೆ ಎಳೆದಿದ್ದು, ಲಂಕಾ ಸರಣಿಯಲ್ಲಿ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಸದ್ಯ ರಾಹುಲ್ ದ್ರಾವಿಡ್ ನಾಷನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಂಡೋ-ಲಂಕಾ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ ಪ್ರಕಟ..!

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿರುವಾಗಲೇ ಭಾರತದ ಮತ್ತೊಂದು ತಂಡ ಸೀಮಿತ ಓವರ್‌ಗಳ ಸರಣಿಯನ್ನಾಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶಿಖರ್‌ ಧವನ್‌ ತಂಡವನ್ನು ಮುನ್ನಡೆಸಲಿದ್ದು, ಲಂಕಾ ವಿರುದ್ಧ ಭಾರತ 3 ಟಿ20, 3 ಏಕದಿನ ಪಂದ್ಯಗಳನ್ನು ಆಡಲಿದೆ.

ಲಂಕಾ ವಿರುದ್ದದ ಸರಣಿಗೆ ಕರ್ನಾಟಕದ ಮನೀಶ್ ಪಾಂಡೆ ಹಾಗೂ ಇದೇ ಮೊದಲ ಬಾರಿಗೆ ಅಲ್ರೌಂಡರ್ ಕೃಷ್ಣಪ್ಪ ಗೌತಮ್ ಹಾಗೂ ದೇವದತ್ ಪಡಿಕ್ಕಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಲಂಕಾ ವಿರುದ್ದದ ಏಕದಿನ ಸರಣಿ ಜುಲೈ 13ರಿಂದ ಆರಂಭವಾಗಲಿದೆ.
 

click me!