
ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾ ಸಮಸ್ಯೆ ಎದುರಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (Karnataka State Cricket Association) ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಕೆಲವು ವರದಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಸಂಘವು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.
ಕ್ರಿಕೆಟ್ ಅಸೋಸೊಯೇಷನ್ ಹೇಳಿಕೆಯ ಪ್ರಕಾರ, ಕ್ರೀಡಾಂಗಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಖಾಸಗಿ ವ್ಯವಸ್ಥೆಯ ಭಾಗವಾಗಿದ್ದು, ಅವುಗಳನ್ನು ಮಾರಾಟಗಾರರು ತಮ್ಮ ಆಂತರಿಕ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಸ್ಥಾಪಿಸಿದ್ದಾರೆ. ಈ ಕ್ಯಾಮೆರಾಗಳು ಪೊಲೀಸ್ ಇಲಾಖೆಯ ಭದ್ರತಾ ಮೂಲಸೌಕರ್ಯದ ಭಾಗವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇನ್ನು, ಕ್ರೀಡಾಂಗಣದಲ್ಲಿ ಭದ್ರತೆಗಾಗಿ ಪೊಲೀಸ್ ಇಲಾಖೆ ಸ್ವತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲಾಗಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದ ತೊಂದರೆ ಮಾರಾಟಗಾರ ಮತ್ತು ನೌಕರರ ನಡುವಿನ ಆಂತರಿಕ ವಿಷಯವಾಗಿದ್ದು, ಪಾವತಿ ಸಂಬಂಧಿತ ಸಮಸ್ಯೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ.
ಸಂಬಂಧಪಟ್ಟ ಸರ್ವರ್ ಕೊಠಡಿಗಳು ಹಾಗೂ ಇತರೆ ತಾಂತ್ರಿಕ ವ್ಯವಸ್ಥೆಗಳು ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿದ್ದವು. ಇದರಲ್ಲಿ ಪೊಲೀಸ್ ಇಲಾಖೆ ಅಥವಾ ಕೆಎಸ್ಸಿಎಯ ಪ್ರಮುಖ ಭದ್ರತಾ ಚೌಕಟ್ಟಿನ ಯಾವುದೇ ಪಾತ್ರವಿಲ್ಲ ಎಂದು ಸಂಘ ತಿಳಿಸಿದೆ.
ಮುಖ್ಯವಾಗಿ, ಕ್ರೀಡಾಂಗಣದ ದ್ವಾರಗಳನ್ನು ಸಾರ್ವಜನಿಕ ಪ್ರವೇಶಕ್ಕಾಗಿ ತೆರೆಯುವ ಮೊದಲು ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ. ಈ ಘಟನೆಯಿಂದ ಯಾವುದೇ ಭದ್ರತಾ ವೈಫಲ್ಯ ಉಂಟಾಗಿಲ್ಲ ಹಾಗೂ ಕಾರ್ಯಾಚರಣೆಯಲ್ಲಿ ಯಾವುದೇ ಅಡ್ಡಿ ಎದುರಾಗಿಲ್ಲ ಎಂದು ಕೆಎಸ್ಸಿಎ ಸ್ಪಷ್ಟಪಡಿಸಿದೆ.
ಪ್ರೇಕ್ಷಕರು, ಆಟಗಾರರು ಅಥವಾ ಅಧಿಕಾರಿಗಳ ಸುರಕ್ಷತೆಗೆ ಯಾವುದೇ ಅಪಾಯ ಉಂಟಾಗಿಲ್ಲ. ಯಾವುದೇ ವಿಧ್ವಂಸಕ ಕೃತ್ಯಗಳು ನಡೆದಿಲ್ಲ ಹಾಗೂ ಪರಿಸ್ಥಿತಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ ಎಂದು ಸಂಘ ತಿಳಿಸಿದೆ.
ಒಟ್ಟಿನಲ್ಲಿ, ಸಿಸಿಟಿವಿ ಸಮಸ್ಯೆ ಕುರಿತು ಹರಿದಾಡುತ್ತಿದ್ದ ಆತಂಕಗಳಿಗೆ ತೆರೆ ಎಳೆದಿರುವ ಕೆಎಸ್ಸಿಎ, ಕ್ರೀಡಾಂಗಣದ ಭದ್ರತಾ ವ್ಯವಸ್ಥೆ ಸದಾ ದೃಢವಾಗಿಯೇ ಇರುತ್ತದೆ ಎಂಬುದನ್ನು ಪುನರುಚ್ಚರಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.