
ತಿರುವನಂತಪುರಂ: ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಯಾರು ಕೀಪಿಂಗ್ ಮಾಡುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ವಿಶ್ವಕಪ್ಗೆ ತಂಡವನ್ನು ಪ್ರಕಟಿಸಿದಾಗ ಸಂಜು ಮೊದಲ ಆಯ್ಕೆಯ ವಿಕೆಟ್ ಕೀಪರ್ ಮತ್ತು ಆರಂಭಿಕ ಆಟಗಾರರಾಗಿದ್ದರು. ಇಶಾನ್ ಕಿಶನ್, ಸಂಜುಗೆ ಬ್ಯಾಕಪ್ ಆಗಿದ್ದರು. ಆದರೆ ತಿಲಕ್ ವರ್ಮಾಗೆ ಗಾಯವಾದ ಕಾರಣ ಕಿಶನ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಕ್ಕಿತು. ಈ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಂಡಿದ್ದಾರೆ. ಇ
ಲ್ಲಿನ ಗ್ರೀನ್ಫೀಲ್ಡ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಸ್ಪೋಟಕ ಶತಕ ಚಚ್ಚಿದರು. ಮತ್ತೊಂದು ತುದಿಯಲ್ಲಿ ಸಂಜು ಸ್ಯಾಮ್ಸನ್ ಅವರ ನಿರಾಶಾದಾಯಕ ಪ್ರದರ್ಶನ ಐದನೇ ಟಿ20 ಪಂದ್ಯದಲ್ಲೂ ಮುಂದುವರೆದಿದೆ. ಕಿವೀಸ್ ಎದುರಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಕೇವಲ 46 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇದರ ಬೆನ್ನಲ್ಲೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಹಿಂದಿಕ್ಕಿ ಇಶಾನ್ ಕಿಶನ್, ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಆಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಇದೆಲ್ಲದರ ನಡುವೆ ಐದನೇ ಟಿ20 ಪಂದ್ಯದಲ್ಲಿ ವಿಕೆಟ್ ಕೀಪಿಂಗ್ಗೆ ಸಜ್ಜಾಗುತ್ತಿದ್ದ ಸಂಜು ಸ್ಯಾಮ್ಸನ್ಗೆ ಹೆಡ್ ಕೋಚ್ ಗೌತಮ್ ಗಂಭೀರ್ ಶಾಕ್ ನೀಡಿದ್ದಾರೆ.
ಹೌದು, ಭಾರತ ಮೊದಲು ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ಕಲೆಹಾಕಿದ ಬಳಿಕ ಫೀಲ್ಡಿಂಗ್ ಮಾಡಲು ಮೈದಾನಕ್ಕಿಳಿಯಲು ಸಜ್ಜಾಗಿತ್ತು. ಈ ವೇಳೆ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸಿ ಇಳಿಯಲು ಸಿದ್ಧರಾಗಿದ್ದ ಸಂಜು ಸ್ಯಾಮ್ಸನ್ ಅವರನ್ನು ಕೊನೆ ಕ್ಷಣದಲ್ಲಿ ಬದಲಾಯಿಸುತ್ತಿರುವಂತೆ ವಿಡಿಯೋದಲ್ಲಿ ಕಾಣುತ್ತದೆ. ಗ್ಲೌಸ್, ಹೆಲ್ಮೆಟ್ ಮತ್ತು ಗಾರ್ಡ್ ಧರಿಸಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದ ಸಂಜು ಅವರನ್ನು ತಡೆಯಲಾಯಿತು. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಇಶಾನ್ ಕಿಶನ್ ನಿರ್ವಹಿಸಲಿದ್ದಾರೆ ಎಂಬ ಸಂದೇಶ ಈ ಸಮಯದಲ್ಲಿ ಸಂಜುಗೆ ತಲುಪಿತು. ಇದರಿಂದ ಸಿದ್ಧತೆಗಳನ್ನೆಲ್ಲಾ ಬಿಟ್ಟು ಸಂಜು ಫೀಲ್ಡರ್ ಆಗಿ ಮೈದಾನಕ್ಕೆ ಇಳಿದರು. ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರೇ ಕೊನೆಯ ಕ್ಷಣದಲ್ಲಿ ಸಂಜು ಸ್ಯಾಮ್ಸನ್ಗೆ ಈ ಬಿಗ್ ಶಾಕ್ ನೀಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಶತಕ ಬಾರಿಸಿ ಮಿಂಚುತ್ತಿರುವ ಇಶಾನ್ ಕಿಶನ್ಗೆ ಕೀಪಿಂಗ್ನಲ್ಲೂ ಅವಕಾಶ ನೀಡುವ ಮ್ಯಾನೇಜ್ಮೆಂಟ್ನ ನಡೆ ಇದಾಗಿರಬಹುದು ಎಂದು ಹೇಳಲಾಗುತ್ತಿದೆ. ವಿಶ್ವಕಪ್ನಲ್ಲಿ ಯಾರು ಆಡುತ್ತಾರೆ ಎಂಬುದಕ್ಕೆ ಈ ಮೂಲಕ ತಂಡದ ಮ್ಯಾನೇಜ್ಮೆಂಟ್ ಸ್ಪಷ್ಟ ಸೂಚನೆ ನೀಡಿದೆ.
ಪಂದ್ಯ ಮುಕ್ತಾಯದ ಬಳಿಕ ಮಾಧ್ಯಮದವರು ಈ ಕುರಿತಂತೆ ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ತುಂಬಾ ಚಾಣಾಕ್ಷ ಉತ್ತರ ನೀಡಿದ್ದಾರೆ. 'ತಿಲಕ್ ವರ್ಮಾ ಲಭ್ಯವಿಲ್ಲದ ಕಾರಣ, ಮೊದಲ ಪಂದ್ಯದಿಂದಲೇ ಇಬ್ಬರೂ ವಿಕೆಟ್ ಕೀಪರ್ಗಳು ಪ್ಲೇಯಿಂಗ್ ಇಲೆವೆನ್ನಲ್ಲಿದ್ದರು. ಸರಣಿ ಆರಂಭಕ್ಕೂ ಮುನ್ನವೇ ನಾವು ಒಂದು ನಿರ್ಧಾರ ತೆಗೆದುಕೊಂಡಿದ್ದೆವು. ಸಂಜು ಮೂರು ಪಂದ್ಯಗಳಲ್ಲಿ ಮತ್ತು ಇಶಾನ್ ಎರಡು ಪಂದ್ಯಗಳಲ್ಲಿ ಕೀಪಿಂಗ್ ಮಾಡುತ್ತಾರೆ ಎಂದು. ಗಾಯದ ಕಾರಣ ಇಶಾನ್ ಕಳೆದ ಪಂದ್ಯವನ್ನು ಕಳೆದುಕೊಂಡರೂ, ಇಂದಿನ ಪಂದ್ಯದಲ್ಲಿ ಅವರು ಕೀಪರ್ ಆಗುತ್ತಾರೆ ಎಂದು ಮೊದಲೇ ನಿರ್ಧರಿಸಲಾಗಿತ್ತು. ಇಶಾನ್ ಅಥವಾ ಸಂಜು ಪ್ಲೇಯಿಂಗ್ ಇಲೆವೆನ್ನಲ್ಲಿ ಇರುತ್ತಾರೆಯೇ ಎಂಬುದು ಫೆಬ್ರವರಿ 7 ರಂದು ನಿಮಗೆ ತಿಳಿಯುತ್ತದೆ. ತಂಡದ 15 ಮಂದಿಯೂ ಆಡಲು ಅರ್ಹರು. ಇದು ಆಯ್ಕೆಗಾರರಿಗೆ ಒಂದು ಒಳ್ಳೆಯ ತಲೆನೋವು,' ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.