
ಮುಲ್ಲಾನ್ಪುರ(ಚಂಡೀಗಢ): ಆರಂಭಿಕ ಟಿ20 ಪಂದ್ಯದಲ್ಲಿ ಭಾರತ 101 ರನ್ಗಳಿಂದ ಭರ್ಜರಿ ಜಯಗಳಿಸಿದ್ದರೂ ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಇದಕ್ಕೆ ಕಾರಣ ತಾರಾ ಬ್ಯಾಟರ್ಗಳ ಕಳಪೆ ಆಟ. ಶುಭ್ಮನ್ ಗಿಲ್ ಹಾಗೂ ಸೂರ್ಯಕುಮಾರ್ ಯಾದವ್ ರನ್ ಗಳಿಸಲು ಪರದಾಡುತ್ತಿದ್ದು, ಗುರುವಾರ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಾದರೂ ಅಬ್ಬರಿಸಬಲ್ಲದೇ ಎಂಬ ಪ್ರಶ್ನೆ ಮೂಡಿದೆ.
5 ಪಂದ್ಯಗಳ ಸರಣಿಯಲ್ಲಿ ಭಾರತ ಈಗ 1-0 ಮುನ್ನಡೆಯಲ್ಲಿದೆ. ಮುಲ್ಲಾನ್ಪುರದ ಪಂದ್ಯದಲ್ಲೂ ಗೆದ್ದು ಸರಣಿ ಮುನ್ನಡೆ ಸಾಧಿಸುವುದು ತಂಡದ ಗುರಿ. ಆದರೆ ತಾರಾ ಬ್ಯಾಟರ್ಗಳು ಕೈಕೊಡುತ್ತಿರುವುದು ತಂಡದ ಆತ್ಮವಿಶ್ವಾಸ ಕುಗ್ಗಿಸಿದೆ. ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರಿಸದಿದ್ದರೆ ತಂಡದ ಫಲಿತಾಂಶ ಬೇರೆಯೇ ಇರುತ್ತಿತ್ತು. ಇದು ಪುನರಾವರ್ತನೆ ಆಗದೆ ಸಂಘಟಿತ ಆಟವಾಡಬೇಕಾದ ಅಗತ್ಯ ತಂಡಕ್ಕಿದೆ. ಅಲ್ಲದೆ, ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಈ ಸರಣಿ ‘ಅಭ್ಯಾಸ’ ಎಂಬಂತೆ ಇರುವುದರಿಂದ ಆಟಗಾರರು ತಮ್ಮ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ ಉತ್ತಮ ಪ್ರದರ್ಶನ ನೀಡಬೇಕಿದೆ.
ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಯ್ಕೆಯಾಗಿದ್ದರು. ಆರಂಭಿಕ ಸ್ಥಾನಕ್ಕೆ ಗಿಲ್ ಮರಳಿರುವುದರಿಂದ ಸಂಜುಗೆ ಅಲ್ಲೂ ಸ್ಥಾನ ಸಿಗುತ್ತಿಲ್ಲ. ತಂಡದ ಆಡಳಿತ ಜಿತೇಶ್ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದು, ಸರಣಿಯಲ್ಲಿ ಅವರಿಗೆ ಮತ್ತಷ್ಟು ಸ್ಥಾನ ಸಿಗುವ ಸಾಧ್ಯತೆಯಿದೆ. ಹೀಗಾದರೆ ಸಂಜು ಈ ಪಂದ್ಯಕ್ಕೂ ಆಯ್ಕೆಯಾಗುವ ನಿರೀಕ್ಷೆಯಿಲ್ಲ. ಇನ್ನು ಅರ್ಶ್ದೀಪ್ ಸಿಂಗ್ ಹಾಗೂ ಕುಲ್ದೀಪ್ ಯಾದವ್ ಒಟ್ಟಿಗೆ ಕಣಕ್ಕಿಳಿಯುವುದು ತಂಡ ಸಂಯೋಜನೆಗೆ ಅಡ್ಡಿ ಎಂದು ಪರಿಗಣಿಸಿರುವ ತಂಡದ ಆಡಳಿತ, ಈ ಪಂದ್ಯದಲ್ಲೂ ಕುಲ್ದೀಪ್ರನ್ನು ಹೊರಗಿಡುವ ಸಾಧ್ಯತೆಯಿದೆ.
ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ದ.ಆಫ್ರಿಕಾ ಈ ಪಂದ್ಯದಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದ್ದು, ಸರಣಿ ಸಮಬಲದ ಕಾತರದಲ್ಲಿದೆ. ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಿತ ಆಟ ಕಂಡುಬರಬೇಕಿದ್ದು, ನಾಯಕ ಮಾರ್ಕ್ರಮ್, ಡಿ ಕಾಕ್, ಮಿಲ್ಲರ್, ಬ್ರೆವಿಸ್, ಸ್ಟಬ್ಸ್ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.
ಪಂದ್ಯ ಆರಂಭ: ಸಂಜೆ 7 ಗಂಟೆಗೆ
ನೇರಪ್ರಸಾರ: ಸ್ಟಾರ್ಸ್ಪೊರ್ಟ್ಸ್, ಹಾಟ್ಸ್ಟಾರ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಈವರೆಗೂ ಕೇವಲ ಮೂವರು ಮಾತ್ರ 100+ ಸಿಕ್ಸರ್, 100+ ವಿಕೆಟ್ ಸಾಧನೆ ಮಾಡಿದ್ದಾರೆ. ಅವರೆಂದರೆ ಜಿಂಬಾಬ್ವೆಯ ಸಿಕಂದರ್ ರಝಾ, ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಹಾಗೂ ಮಲೇಷ್ಯಾದ ವಿರನ್ದೀಪ್ ಸಿಂಗ್. ಈ ಸಾಧನೆ ಮಾಡಿದ ವಿಶ್ವದ 4ನೇ, ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲು ಹಾರ್ದಿಕ್ ಪಾಂಡ್ಯಗೆ ಕೇವಲ 1 ವಿಕೆಟ್ ಅಗತ್ಯವಿದೆ. ಅವರು ಭಾರತ ಪರ 121 ಟಿ20 ಪಂದ್ಯಗಳಲ್ಲಿ 100 ಸಿಕ್ಸರ್ ಬಾರಿಸಿದ್ದು, 99 ವಿಕೆಟ್ ಪಡೆದಿದ್ದಾರೆ. 1919 ರನ್ ಕಲೆಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.