
ತಿರುವನಂತಪುರಂ: ಎರಡು ಪಂದ್ಯ, ಎರಡು ದೊಡ್ಡ ಗೆಲುವು. ಶ್ರೀಲಂಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಅಧಿಕಾರಯುತ ಗೆಲುವುಗಳೊಂದಿಗೆ 2-0 ಮುನ್ನಡೆ ಸಾಧಿಸಿದ್ದು, ಶುಕ್ರವಾರ ಇಲ್ಲಿನ ಗ್ರೀನ್ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ.
ಕಳೆದೆರಡು ಪಂದ್ಯಗಳಲ್ಲಿ ಪ್ರವಾಸಿ ತಂಡದ ವಿರುದ್ಧ ಆತಿಥೇಯರು ಎಲ್ಲಾ ಮೂರೂ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದ್ದಾರೆ. ಪ್ರಚಂಡ ಬೌಲಿಂಗ್ ಮೂಲಕ ಲಂಕಾವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಭಾರತ, ತನ್ನ ಅಗ್ರಕ್ರಮಾಂಕದ ನಿರ್ಭೀತ ಬ್ಯಾಟಿಂಗ್ನ ನೆರವಿನಿಂದ ನಿರಾಯಾಸವಾಗಿ ಗೆಲುವುಗಳನ್ನು ದಾಖಲಿಸಿತು.
ಮುಂದಿನ ವರ್ಷ ಜೂ.12ರಂದು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ಗೆ ಸಿದ್ಧತೆ ಆರಂಭಿಸಿರುವ ಭಾರತ, ಸದೃಢವಾಗಿ ಕಾಣುತ್ತಿದ್ದು, ತನ್ನ ಆಯುಧಗಳನ್ನು ಇನ್ನಷ್ಟು ಹರಿತಗೊಳಿಸಿಕೊಳ್ಳಲು ಈ ಸರಣಿ ಸೇರಿ ಮುಂಬರುವ ಎಲ್ಲಾ ಸರಣಿಗಳನ್ನು ಬಳಸಿಕೊಳ್ಳಲಿದೆ.
ತಂಡಕ್ಕೆ ವಾಪಸಾದ ಬಳಿಕ ಶಫಾಲಿ ವರ್ಮಾ ಓಟಕ್ಕೆ ತಡೆಯೇ ಇಲ್ಲದಂತಾಗಿದ್ದರೆ, ವೈಯಕ್ತಿಕ ಜೀವನದಲ್ಲಿ ಆದ ನೋವು ತಮ್ಮ ಆಟಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸುವಲ್ಲಿ ಸ್ಮೃತಿ ಮಂಧನಾ ಯಶಸ್ವಿಯಾಗಿದ್ದಾರೆ. ಜೆಮಿಮಾ ರೋಡ್ರಿಗ್ಸ್ ಅತ್ಯದ್ಭುತ ಲಯದಲ್ಲಿದ್ದು, ಹರ್ಮನ್ಪ್ರೀತ್, ದೀಪ್ತಿ ಶರ್ಮಾ, ರಿಚಾ ಘೋಷ್ ಸಹ ಸ್ಥಿರತೆ ಉಳಿಸಿಕೊಂಡರೆ, ಭಾರತವು ಅಪಾಯಕಾರಿ ತಂಡವಾಗಿ ವಿಶ್ವಕಪ್ಗೆ ಕಾಲಿಡುವುದರಲ್ಲಿ ಅನುಮಾನವಿಲ್ಲ.
ಸರಣಿಯಲ್ಲಿ ಎಲ್ಲರಿಗಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ಯುವ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ. ಮುಂದಿನ ವಿಶ್ವಕಪ್ಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವತ್ತ ವೈಷ್ಣವಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ್ತಿ ಜಿ.ಕಮಲಿನಿ ಸಹ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್ಸ್ಟಾರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.