ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್‌ ಗಿರಿನಾಥ್‌

By Kannadaprabha NewsFirst Published Mar 22, 2023, 7:21 AM IST
Highlights

ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆ ಪ್ರಮಾಣವನ್ನು 6 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. 

ಬೆಂಗಳೂರು (ಮಾ.22): ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆ ಪ್ರಮಾಣವನ್ನು 6 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕಾರಣ ದಿನಕ್ಕೆ ಆರು ಸಾವಿರ ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ಆದರೆ, ನಿತ್ಯ ನಾಲ್ಕು ಸಾವಿರ ಮಂದಿ ಪರೀಕ್ಷೆ ಮಾಡುತ್ತಿದ್ದೇವೆ. ಮುಖ್ಯವಾಗಿ ಸೋಂಕಿತ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಹೆಚ್ಚಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಗರದಲ್ಲಿ ಕೊರೋನಾ ಪಾಸಿಟಿವ್‌ ದರ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ಎಂದು ಹೇಳಿದರು.

71 ಜನರಲ್ಲಿ ಕೊರೋನಾ: ನಗರದಲ್ಲಿ ಮಂಗಳವಾರ 71 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.8.32 ದಾಖಲಾಗಿದೆ. ಸೋಂಕಿನಿಂದ 38 ಜನ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. 427 ಸಕ್ರಿಯ ಸೋಂಕು ಪ್ರಕರಣಗಳಿದ್ದು, 68 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 62 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 16 ಮಂದಿ ಮೊದಲ ಡೋಸ್‌, 13 ಮಂದಿ ಎರಡನೇ ಡೋಸ್‌ ಮತ್ತು 33 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 756 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

5, 8ನೇ ಕ್ಲಾಸ್‌ ಪರೀಕ್ಷೆ ಮುಂದೂಡಿಕೆಗೆ ಹೈಕೋರ್ಟ್‌ ನಕಾರ

ರಾಜ್ಯದಲ್ಲಿ 5.21%ಕ್ಕೆ ಜಿಗಿದ ಪಾಸಿಟಿವಿಟಿ ದರ: ರಾಜ್ಯದಲ್ಲಿ ಸೋಮವಾರ 71 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿನ ಪಾಸಿಟಿವಿಟಿ ದರ ಶೇ.5.21ರಷ್ಟುದಾಖಲಾಗುವ ಮೂಲಕ ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಇತ್ತೀಚೆಗೆ ಶೇ.1.5 ರಿಂದ ಶೇ.3ರಷ್ಟುಪಾಸಿಟಿವಿಟಿ ದರದೊಂದಿಗೆ ಸೋಂಕು ವರದಿಯಾಗುತ್ತಿತ್ತು. ಆದರೆ, ಇದೀಗ ಕೊನೆಯದಾಗಿ ಮೂರನೇ ಅಲೆ ವೇಳೆ ವರದಿಯಾಗಿದ್ದಂತೆ ಶೇ.5.21 ರಷ್ಟು ಪಾಸಿಟಿವಿಟಿ ದರದಲ್ಲಿ ಸೋಂಕು ಕಾಣಿಸಿಕೊಂಡಿದೆ. ರೋಗಾಣು ತಜ್ಞರ ಪ್ರಕಾರ, ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ ಸೋಂಕು ಉಲ್ಬಣಿಸಿದೆ ಎಂದರ್ಥ. ಈ ಹಿನ್ನೆಲೆಯಲ್ಲಿ ಸೋಮವಾರದ ವರದಿ ಆತಂಕ ಉಂಟು ಮಾಡಿದೆ.

ಮತ್ತೆ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ: ಬೆಳಗಾವಿ ಕೈದಿ ಹೆಸರಲ್ಲಿ ಮಂಗಳೂರಿಂದ ಬೆದರಿಕೆ

ಕಳೆದ 24 ಗಂಟೆಗಳ ಅವಧಿಯಲ್ಲಿ 883 ಪರೀಕ್ಷೆ ನಡೆಸಿದ್ದು 71 ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ 71 ಮಂದಿ ಗುಣಮುಖರಾಗಿದ್ದು 615 ಸಕ್ರಿಯ ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 71 ಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 53, ಚಿತ್ರದುರ್ಗ 4, ಮೈಸೂರು 3, ಬಳ್ಳಾರಿ, ಕಲಬುರಗಿ, ಕೊಡಗು ಜಿಲ್ಲೆಗಳಲ್ಲಿ ತಲಾ ಎರಡು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಗದಗ, ಮಂಡ್ಯ, ರಾಯಚೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.

click me!