ಜೈಲಿಗೆ ಬಂಧುಗಳ ಭೇಟಿ ರದ್ದು: ಕೈದಿಗಳಿಂದ ‘ದಂಗೆ’ ರೀತಿಯ ವಾತಾವರಣ ಸೃಷ್ಟಿ!

By Kannadaprabha NewsFirst Published Apr 2, 2020, 7:36 AM IST
Highlights

ಜೈಲಿಗೆ ಬಂಧುಗಳ ಭೇಟಿ ರದ್ದು: ಕೈದಿಗಳಿಂದ ‘ದಂಗೆ’ ರೀತಿಯ ವಾತಾವರಣ ಸೃಷ್ಟಿ!ಜೈಲಿಗೆ ಬಂಧುಗಳ ಭೇಟಿ ರದ್ದು: ಕೈದಿಗಳಿಂದ ‘ದಂಗೆ’ ರೀತಿಯ ವಾತಾವರಣ ಸೃಷ್ಟಿ!

ಎನ್‌.ಲಕ್ಷ್ಮಣ್‌

ಬೆಂಗಳೂರು(ಏ.02): ಮಹಾಮಾರಿ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿದ ನಂತರ ರಾಜ್ಯದ ಜೈಲುಗಳಲ್ಲಿ ‘ದಂಗೆ’ ರೀತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹದ್ದೊಂದು ಆತಂಕವನ್ನು ಸ್ವತಃ ಸ್ವತಃ ರಾಜ್ಯ ಕಾರಾಗೃಹ ಇಲಾಖೆಗಳ ಪೊಲೀಸ್‌ ಮಹಾ ನಿರ್ದೇಶಕರೇ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಹಾಗೂ ಸಜಾ ಕೈದಿಗಳಲ್ಲಿ ದಿನೇ-ದಿನೇ ಹತಾಶೆ ಮನೋಭಾವ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ವಿಷಮವಾಗುತ್ತಿದೆ. ಕೊರೋನಾ ವ್ಯಾಪಿಸುವ ಭೀತಿಯಿಂದ ಈಗಾಗಲೇ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಸಂದರ್ಶನ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಂಬಂಧಿಕರು ಮತ್ತು ಸ್ನೇಹಿತರ ಭೇಟಿ-ಸಮಾಲೋಚನೆಗೆ ಅವಕಾಶ ಇಲ್ಲದಂತಾಗಿದೆ. ಅಲ್ಲದೆ, ಮನೆಗಳಲ್ಲಿರುವ ತಮ್ಮ ಕುಟುಂಬ ಸದಸ್ಯರ ಪರಿಸ್ಥಿತಿ ಏನು? ಕೊರೋನಾ ಸೋಂಕು ಅವರಿಗೆ ಹರಡಿದೆಯೇನೋ ಎಂಬ ಅನುಮಾನಗಳು ಕೈದಿಗಳ ಮನದಲ್ಲಿ ಮೂಡಿವೆ. ಆ ಬಗ್ಗೆ ತಿಳಿಯೋಣವೆಂದರೆ ಕೈದಿಗಳ ಕುಟುಂಬಸ್ಥರ ಸಂಪರ್ಕ ಇಲ್ಲವಾಗಿದೆ.

ಕರ್ನಾಟಕದಲ್ಲಿ ಕೊರೋನಾ ವೈರಸ್ ಸಂಕಟ: ಇತ್ತ ಕೈದಿಗಳು ಫುಲ್ ಖುಷ್..!

ಮತ್ತೊಂದೆಡೆ ನ್ಯಾಯಾಲಯಗಳು ಕಾರ್ಯನಿರ್ವಹಿಸದ ಕಾರಣ ಜಾಮೀನು ದೊರಕುವ ನಿರೀಕ್ಷೆಯೂ ಹುಸಿಯಾಗಿದೆ. ಇದೇ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಕಾರಣ ಕೈದಿಗಳಿಗೆ ದೈಹಿಕ ಚಟುವಟಿಕೆಗಳೂ ಇಲ್ಲವಾಗಿದೆ. ಇದರಿಂದ ಒಂದು ರೀತಿ ಕೈದಿಗಳಲ್ಲಿ ಹತಾಶ ಮನೋಭಾವನೆ ಹೆಚ್ಚುತ್ತಿದ್ದು, ಜೈಲುಗಳಲ್ಲಿ ದಂಗೆಯಾಗಬಹುದು ಎಂಬ ಗಂಭೀರ ಹೆದರಿಕೆ ಹಾಗೂ ಆತಂಕ ಜೈಲಧಿಕಾರಿಗಳಲ್ಲಿ ಮನೆ ಮಾಡಿದೆ. ಇದೇ ಆತಂಕವನ್ನು ರಾಜ್ಯ ಕಾರಾಗೃಹ ಇಲಾಖೆ ಪೊಲೀಸ್‌ ಮಹಾ ನಿದೇರ್ಶಕ ಅಲೋಕ್‌ ಮೋಹನ್‌ ಅವರು ಕಾನೂನು ಸೇವೆಗಳ ಕಾರ್ಯನಿರ್ವಾಹಕ ಅಧ್ಯಕ್ಷರ ನೇತೃತ್ವದಲ್ಲಿ ರಚನೆಯಾಗಿರುವ ‘ಉನ್ನತಾಧಿಕಾರ ಸಮಿತಿ’ ನಡೆಸಿದ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕೈದಿಗಳ ಒತ್ತಾಯ ಏನು:

ಜೈಲಿಗಳಲ್ಲಿ ಸಂದರ್ಶನ ವ್ಯವಸ್ಥೆ ರದ್ದಾಗಿರುವುದರಿಂದ ಕುಟುಂಬದ ಸದಸ್ಯರ ಸಂಪರ್ಕ ಇಲ್ಲವಾಗಿದೆ. ಆದ ಕಾರಣ ಮನೆಯವರ ಬಗ್ಗೆ ನಮಗೆ ಆತಂಕ ಎದುರಾಗಿದೆ. ಹೀಗಾಗಿ ಕುಟುಂಬದ ಸದಸ್ಯರ ಸಂಪರ್ಕಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೈದಿಗಳು ಜೈಲಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಕಾರಾಗೃಹ ಇಲಾಖೆಯು ಬೇರೆ ಬೇರೆ ಚಟುವಟಿಕೆಗಳ ನಿಮಿತ್ತ ಯಾರೊಬ್ಬರನ್ನೂ ಹೊರಗೆ ಕಳುಹಿಸದ ಕಾರಣ ಎಲ್ಲರೂ ಒತ್ತಡಕ್ಕೆ ಒಳಗಾಗಿದ್ದಾರೆ.

ಜಾಮೀನು ಅರ್ಜಿಗಳ ಹಾಗೂ ಪ್ರಕರಣದ ಮುಖ್ಯ ವಿಚಾರಣೆ ನಿಮಿತ್ತ ನ್ಯಾಯಾಲಯಗಳಿಗೆ ಹಾಜರಾಗಲು ಕೈದಿಗಳು ಜೈಲಿನಿಂದ ಹೊರಗಡೆ ಹೋಗುತ್ತಿದ್ದರು. ಇದರಿಂದ ಸ್ವಲ್ಪ ಮಟ್ಟಿಗೆ ಮಾನಸಿಕ ಒತ್ತಡದಿಂದ ಹೊರಬರುತ್ತಿದ್ದರು. ಗಂಭೀರ ಸ್ವರೂಪವಲ್ಲದ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿಗೆ ನಾಲ್ಕೈದು ದಿನದಲ್ಲಿ ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಇನ್ನು ಕುಟುಂಬದ ಸದಸ್ಯರು ಬಂದು ಧೈರ್ಯ ತುಂಬಿ ಸಾಂತ್ವನ ಹೇಳುತ್ತಿದ್ದರು. ಇದರಿಂದ ಕೈದಿಗಳಲ್ಲಿ ಸಮಾಧಾನದ ಭಾವನೆ ಮೂಡುತ್ತಿತ್ತು. ಆದರೆ ಲಾಕ್‌ಡೌನ್‌ನಿಂದ ಇದ್ಯಾವ ಪರಿಸ್ಥಿತಿಯೂ ಇಲ್ಲವಾದ ಕಾರಣ ಕೈದಿಗಳು ಹತಾಶೆಗೆ ಒಳಗಾಗುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕಾರಾಗೃಹ ಇಲಾಖೆಯ ಅಧೀಕ್ಷಕರೊಬ್ಬರು ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ಕೊರೋನಾ ಸೋಂಕು ಹರಡದಿರಲು ವಿಚಾರಣಾಧೀನ ಕೈದಿಗಳ ಬಿಡುಗಡೆ

ಕೈದಿಗಳಿಗೆ ಕೌನ್ಸೆಲಿಂಗ್‌

ಜೈಲಿನಿಂದ ಹೊರಗೆ ಬಿಡುವಂತೆ ಒತ್ತಾಯ ಮಾಡುತ್ತಿರುವ ಕೈದಿಗಳ ಮನವೊಲಿಕೆಗೆ ಈಗಾಗಲೇ ಸಂವಾದ ನಡೆಸಿ, ಹೊರಗಿನ ಸ್ಥಿತಿ-ಗತಿ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ. ತೀರಾ ಒತ್ತಡಕ್ಕೆ ಒಳಗಾದವರಿಗೆ ಕೌನ್ಸೆಲಿಂಗ್‌ ಮಾಡಲಾಗುತ್ತಿದೆ. ಈ ಮೂಲಕ ಪರಿಸ್ಥಿತಿಯನ್ನು ತಹಬದಿಯಲ್ಲಿ ಇಡಲಾಗಿದೆ. ಜೈಲಿನಲ್ಲಿರುವುದೇ ಸೂಕ್ತ ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.

click me!