ಯುಗಾದಿ ನಂತ್ರ ದಿಢೀರ್ ಹೆಚ್ಚಿದ ಶಂಕಿತರ ಸಂಖ್ಯೆ: ಮೈಸೂರಿನಲ್ಲಿ 1122 ಮಂದಿ ಮೇಲೆ ನಿಗಾ

By Suvarna NewsFirst Published Mar 27, 2020, 3:29 PM IST
Highlights

ಕೊರೋನಾ ವೈರಾಣು ಕಾಯಿಲೆ (ಕೋವಿಡ್‌-19) ಸಂಬಂಧ ಮೈಸೂರು ಜಿಲ್ಲೆಯಲ್ಲಿ ಈವರೆಗೂ ಒಟ್ಟು 1122 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಮೈಸೂರು(ಮಾ.27): ಕೊರೋನಾ ವೈರಾಣು ಕಾಯಿಲೆ (ಕೋವಿಡ್‌-19) ಸಂಬಂಧ ಮೈಸೂರು ಜಿಲ್ಲೆಯಲ್ಲಿ ಈವರೆಗೂ ಒಟ್ಟು 1122 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಗುರುವಾರದವರೆಗೆ ಜಿಲ್ಲೆಯಲ್ಲಿ 1122 ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಇದರಲ್ಲಿ 896 ಮಂದಿ ಹೋಮ್‌ ಐಸೋಲೇಶನ್‌ ಇರಿಸಲಾಗಿದೆ. 223 ಮಂದಿ ಹದಿನಾಲ್ಕು ದಿನಗಳ ಹೋಮ್‌ ಐಸೋಲೇಶನ್‌ ಮುಗಿಸಿದ್ದಾರೆ. ಒಟ್ಟು 59 ಜನರನ್ನು ಸ್ಯಾಂಪಲ್‌ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 56 ವ್ಯಕ್ತಿಗೆ ನೆಗೆಟಿವ್‌ ಬಂದಿದೆ. ಮೂವರಿಗೆ ಸೋಂಕು ಇರುವುದು ಧೃಡಪಟ್ಟಿದ್ದು, ಅವರನ್ನು ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಪರೀಕ್ಷೆ ತಿರಸ್ಕೃತಗೊಂಡಿದೆ ಎಂದು ಅವರು ವಿವರಿಸಿದ್ದಾರೆ.

ಕೊರೋನಾ ಸೋಂಕಿತನಿಗೆ ಏಡ್ಸ್ ಮದ್ದು ಬಳಸಿದ ಕೇರಳ; ಗುಣಮುಖರಾದ ಬ್ರಿಟಿಷ್ ಪ್ರಜೆ!

ಕೊರೋನಾ ಕುರಿತು ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ 1077 ಹಾಗೂ ಆರೋಗ್ಯ ಸಹಾಯವಾಣಿ ಸಂಖ್ಯೆ 104ಗೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಯುಗಾದಿ ಕೊರೋನಾ!

ಮಂಗಳವಾರದವರೆಗೆ 452 ಮಂದಿ ಮೇಲೆ ನಿಗಾ ವಹಿಸಲಾಗಿತ್ತು. ಎರಡು ದಿನಗಳ ಅಂತರದಲ್ಲಿ ಈ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಾಗಿದ್ದು, ಪ್ರಸ್ತುತ 1122 ಮಂದಿ ಮೇಲೆ ನಿಗಾ ವಹಿಸಲಾಗಿದೆ. ಇದರಲ್ಲಿ 670 ಮಂದಿ ಕಳೆದ ಎರಡು ದಿನಗಳಲ್ಲಿ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಬಹುತೇಕರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಬಂದವರಿದ್ದಾರೆ.

click me!