
ಚಿಕ್ಕಬಳ್ಳಾಪುರ (ಸೆ.04): ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಕನಿಷ್ಠ ಅಕ್ಷರಜ್ಞಾನವೂ ಇಲ್ಲದಿದ್ದರೆ, ಅಂತಹ ಮಕ್ಕಳಿಗೆ 1 ರಿಂದ 6ನೇ ತರಗತಿವರೆಗೆ ಪಾಠ ಬೋಧನೆ ಮಾಡಿದ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿ, ಅಮಾನತಿಗೆ ಶಿಫಾರಸು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅಧಿಕೃತ ಪತ್ರದ ಮೂಲಕ ಖಡಕ್ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಶೈಕ್ಷಣಿಕ ಪ್ರಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಪ್ರದೀಪ್ ಈಶ್ವರ್, ಬಿಇಒ ಅವರಿಗೆ ಬರೆದಿರುವ ಪತ್ರದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳಿಗೆ ಆದೇಶಿಸಿದ್ದಾರೆ:
ಅಕ್ಷರಜ್ಞಾನವಿಲ್ಲದ ಮಕ್ಕಳ ಗುರುತಿಸುವಿಕೆ: ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ, ಮೂಲಭೂತ ಓದು-ಬರಹ ಅಥವಾ ಅಕ್ಷರಗಳೇ ಬಾರದ ಮಕ್ಕಳನ್ನು ತಕ್ಷಣವೇ ಗುರುತಿಸಬೇಕು.
ಹಿಂದಿನ ತರಗತಿ ಶಿಕ್ಷಕರಿಗೆ ನೋಟಿಸ್: ಮಗು 7ನೇ ತರಗತಿಗೆ ಬಂದರೂ ಅಕ್ಷರಜ್ಞಾನ ಕಲಿಯದಿರಲು ಕಾರಣರಾದ, 1 ರಿಂದ 6ನೇ ತರಗತಿಯವರೆಗೆ ಆ ಮಕ್ಕಳಿಗೆ ಪಾಠ ಬೋಧನೆ ಮಾಡಿದ ಎಲ್ಲಾ ಶಿಕ್ಷಕರಿಗೂ ನಿಯಮಾನುಸಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು.
ಅಮಾನತಿಗೆ ಶಿಫಾರಸು: ಶಿಕ್ಷಕರು ನೀಡುವ ಸಮಜಾಯಿಷಿ (ಲಿಖಿತ ವಿವರಣೆ) ಸಮಂಜಸವಾಗಿರದಿದ್ದರೆ, ಅಂತಹ ಬೇಜವಾಬ್ದಾರಿ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳಿಗೆ ಶಿಫಾರಸು ಮಾಡಿ ತಕ್ಷಣ ವರದಿ ನೀಡಬೇಕು.
ವರ್ಷಪೂರ್ತಿ ಸರ್ಕಾರದಿಂದ ಉತ್ತಮ ವೇತನ ಮತ್ತು ಸವಲತ್ತುಗಳನ್ನು ಪಡೆಯುವ ಶಿಕ್ಷಕರು, ಮಕ್ಕಳಿಗೆ ಕನಿಷ್ಠ ಅಕ್ಷರಜ್ಞಾನವನ್ನೂ ಕಲಿಸದೆ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುತ್ತಿರುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಮಗು ಪ್ರಾಥಮಿಕ ಹಂತ ದಾಟಿದರೂ ಓದಲು-ಬರೆಯಲು ಬಾರದಿರುವುದಕ್ಕೆ ಸಂಬಂಧಪಟ್ಟ ಬೋಧಕರೇ ನೇರ ಹೊಣೆ ಎಂದು ಶಾಸಕರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ಅವರ ಈ ದಿಟ್ಟ ನಿರ್ಧಾರವು ಚಿಕ್ಕಬಳ್ಳಾಪುರ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುಸಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಬೋಧಕರಲ್ಲಿ ಶಿಸ್ತು ಮತ್ತು ಬದ್ಧತೆ ಮೂಡಿಸಲು ಶಾಸಕರು ಕೈಗೊಂಡಿರುವ ಈ ಕಠಿಣ ಕ್ರಮಕ್ಕೆ ಸಾರ್ವಜನಿಕರು ಹಾಗೂ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.