ಜಾಲಪ್ಪ ಅಳಿಯ ನಾಗರಾಜ್‌ ಮನೆ ಮೇಲೆ ಐಟಿ ದಾಳಿ ಇದೇ ಮೊದಲಲ್ಲ..!

By Kannadaprabha NewsFirst Published Oct 11, 2019, 10:42 AM IST
Highlights

ಮಾಜಿ ಸಚಿವ ಆರ್‌.ಎಲ್‌. ಜಾಲಪ್ಪ ಅವರ ಅಳಿಯ ಜಿ.ಎಚ್‌.ನಾಗರಾಜ್‌ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಇದೇ ಮೊದಲಲ್ಲ. ಕಳೆದ ಮೂರು ವರ್ಷಗಳ ಹಿಂದೆಯೂ ದಾಳಿ ನಡೆದಿತ್ತು.

ಚಿಕ್ಕಬಳ್ಳಾಪುರ(ಅ.11): ಮಾಜಿ ಸಚಿವ ಆರ್‌.ಎಲ್‌. ಜಾಲಪ್ಪ ಅವರ ಅಳಿಯ ಜಿ.ಎಚ್‌.ನಾಗರಾಜ್‌ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಇದೇ ಮೊದಲಲ್ಲ. ಕಳೆದ ಮೂರು ವರ್ಷಗಳ ಹಿಂದೆಯೂ ದಾಳಿ ನಡೆದಿತ್ತು. ಈ ಸಂದರ್ಭದಲ್ಲಿ ವಾಸ್ತವ ಏನೇ ಇದ್ದರೂ ಹಲವಾರು ಊಹಾಪೋಹಗಳು ಎದ್ದಿದ್ದವು.

ಜಿ.ಎಚ್‌.ನಾಗರಾಜ್‌ ತಮ್ಮ ಮನೆಯ ತಳ ಮಹಡಿಯಲ್ಲಿ ನಿರ್ಮಿಸಿರುವ ಸಂಪಿನಲ್ಲಿ ಅಪಾರ ಪ್ರಮಾಣದ ಹಣ ಶೇಖರಿಸಿಟ್ಟಿದ್ದರು. ಹಳೆಯ 1 ಸಾವಿರ ಮತ್ತು 500 ಮುಖ ಬೆಲೆಯ ನೋಟಿನ ಕಂತೆಗಳನ್ನು ಶೇಖರಿಸಿಟ್ಟಿದ್ದು, ಐಟಿ ಅಧಿಕಾರಿಗಳು ದಾಳಿ ನಡೆಸಲಿರುವ ಮಾಹಿತಿ ತಿಳಿಯುತ್ತಿದ್ದಂತೆ ಇಡೀ ಸಂಪಿಗೆ ಬೆಂಕಿ ಹಚ್ಚಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಇದರಿಂದಾಗಿ ಹಣವೆಲ್ಲ ಬೂದಿಯಾಗಿ ಐಟಿ ಅಧಿಕಾರಿಗಳಿಗೆ ಏನೂ ಸಿಗದೆ ವಾಪಸ್‌ ಆಗಿದ್ದರು ಎನ್ನಲಾಗಿದೆ.

ದೇವಾಲಯದ ಮೇಲೆ ಬಂಡವಾಳ

ಜಿ.ಎಚ್‌.ನಾಗರಾಜ್‌ ಅವರು ಚಿಕ್ಕಬಳ್ಳಾಪುರ ಹೊರವಲಯದ ಹಾರೋಬಂಡೆ ಸಮೀಪ ಶಿರಿಡಿ ಸಾಯಿಬಾಬಾ ಅವರ ಬೃಹತ್‌ ಮಂದಿರ ನಿರ್ಮಿಸಿದ್ದಾರೆ. ಇದರ ಗರ್ಭಗುಡಿಯ ಗೋಡೆಗಳಿಗೆ ಚಿನ್ನದ ಲೇಪನ ಮಾಡಲಾಗಿದೆ ಎಂಬ ಮಾತುಗಳು ದೇವಾಲಯ ಉದ್ಘಾಟನೆ ವೇಳೆ ಕೇಳಿಬಂದಿದ್ದವು.

ಚಿಕ್ಕಬಳ್ಳಾಪುರ: ಮಾಜಿ ಸಚಿವರ ಅಳಿಯ, ಮಗನ ನಿವಾಸದ ಮೇಲೆ ಐಟಿ ದಾ

ಇದಕ್ಕೆ ಪೂರಕವಾಗಿ ಬಾಬಾ ಅವರ ಗರ್ಭ ಗುಡಿಯಲ್ಲಿ ಚಿನ್ನದ ಬಣ್ಣದಲ್ಲಿರುವ ಶೀಟ್‌ ಹಾಕಲಾಗಿದ್ದು, ಇದು ನಿಜವಾಗಿಯೂ ಚಿನ್ನದ್ದೇ ಅಥವಾ ಲೇಪನ ಮಾಡಲಾಗಿದೆಯೇ ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಅಲ್ಲದೆ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಿಸಿರುವ ಈ ದೇವಾಲಯದಲ್ಲಿ ಇತ್ತೀಚಿಗೆ ನವರಾತ್ರಿ ಉತ್ಸವ ನಡೆಸಿ, ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಹರಿಶಿಣ ಕುಂಕುಮದ ಹೆಸರಿನಲ್ಲಿ ಸೀರೆಗಳನ್ನು ಹಂಚಲಾಯಿತು.

ಲಾಕರ್‌ ಕೀ ನೀಡಲಿಲ್ಲ?

ದೊಡ್ಡಬಳ್ಳಾಪುರದಲ್ಲಿರುವ ಜಾಲಪ್ಪ ಅವರ ಪುತ್ರರಾಜೇಂದ್ರ ಅವರ ನಿವಾಸದ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರು ಅಲ್ಲಿನ ದೇವರ ಮನೆಯ ಗೋಡೆಯಲ್ಲಿ ಲಾಕರ್‌ ಮಾಡಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಕೀಲಿಕೈಯನ್ನು ಮನೆಯವರು ನೀಡದ ಕಾರಣ ಹೊರಗಿನಿಂದ ಬೀಗದ ರಿಪೇರಿ ಮಾಡುವವರನ್ನು ಕರೆತಂದು ಲಾಕರ್‌ ತೆಗೆಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಲಾಕರ್‌ನಲ್ಲಿ ಏನಾದರೂ ಸಿಕ್ಕಿದೆಯೇ ಇಲ್ಲವೆ ಎಂಬುದು ಅಧಿಕಾರಿಗಳೇ ಬಹಿರಂಗಪಡಿಸಬೇಕಿದೆ.

ಕೇಂದ್ರದ ವಿರುದ್ಧ ಆಕ್ರೋಶ

ಜಾಲಪ್ಪ ಸೇರಿದಂತೆ ಕಾಂಗ್ರೆಸ್‌ ಮುಖಂಡರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಜಿ.ಎಚ್‌.ನಾಗರಾಜ್‌ ನಿವಾಸದ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಿಸಿದ ಘಟನೆಯೂ ನಡೆಯಿತು. ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರು ಜಮಾಯಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.

'ಎರಡು ಬಾರಿ ಗೆದ್ದಿರುವ ಶಿವಶಂಕರರೆಡ್ಡಿ ಏನು ಅಭಿವೃದ್ಧಿ ಮಾಡಿದ್ದಾರೆ'..?

click me!