ಕಾರಿನ ಹಿಂಬದಿ ಸೀಟಲ್ಲಿ ಕುಳಿತು ಬೆಲ್ಟ್ ಹಾಕಿಲ್ಲ ಅಂದ್ರೆ ಹೊಡೆದು ಕೊಳ್ಳುತ್ತೆ ಅಲರಾಂ!

By Suvarna NewsFirst Published Mar 15, 2024, 2:56 PM IST
Highlights

ರಸ್ತೆ ಅಪಘಾತ ತಡೆಗೆ ರಸ್ತೆ ಸಾರಿಗೆ ಸಚಿವಾಲಯ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಸುರಕ್ಷತೆ ಇಲ್ಲಿ ಮುಖ್ಯವಾಗಲಿದೆ. ನಿಯಮ ಮೀರಿದ್ರೆ ದಂಡ ನಿಶ್ಚಿತ. 
 

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗ್ತಿದೆ. ಲಕ್ಷಾಂತರ ಮಂದಿ ಪ್ರತಿ ವರ್ಷ ಈ ಅಪಘಾತಕ್ಕೆ ಬಲಿಯಾಗ್ತಿದ್ದಾರೆ. ರಸ್ತೆ ಅಪಘಾತ ತಡೆಗೆ ಸಂಬಂಧಿಸಿದಂತೆ ಸರ್ಕಾರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ತಿದೆ. ನಿಯಮ ಮೀರಿದವರಿಗೆ ದಂಡ, ಶಿಕ್ಷೆಗಳನ್ನು ವಿಧಿಸುತ್ತಿದೆ. ಆದ್ರೂ ಅಪಘಾತದ ಸಂಖ್ಯೆ ಕಡಿಮೆ ಆಗ್ತಿಲ್ಲ. 

ರಸ್ತೆ (Road) ಅಪಘಾತ (Accident) ಕ್ಕೆ ಒಂದು ಚಾಲಕರ ನಿರ್ಲಕ್ಷ್ಯ, ಕಳಪೆ ರಸ್ತೆ ಕಾರಣವಾದ್ರೆ ಇನ್ನೊಂದು ಪ್ರಯಾಣಿಕ (Passenger) ರ ನಿರ್ಲಕ್ಷ್ಯವೂ ಇದ್ರಲ್ಲಿ ಸೇರಿದೆ. ಕಾರುಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ವರದಾನವಾಗಿದೆ. ಚಾಲಕ ಹಾಗೂ ಮುಂದಿನ ಸೀಟ್ ನಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಸೀಟ್ ಬೆಲ್ಟ್ ಧರಿಸಿದ್ದರೆ ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ ಓಪನ್ ಆಗುವ ಕಾರಣ ಅನೇಕರ ಜೀವ ಉಳಿಯುತ್ತದೆ. ಈ ಸೀಟ್ ಬೆಲ್ಟ್ ಧರಿಸದೆ ಕಾರು ಚಲಾಯಿಸಿದ್ರೆ ಚಾಲಕನಿಗೆ ಕಾರ್ ಎಚ್ಚರಿಕೆ ನೀಡುತ್ತದೆ. ಸೈರನ್ ಒಂದೇ ಸಮನೆ ಹೊಡೆದುಕೊಳ್ಳುವ ಕಾರಣ ಚಾಲಕ ಹಾಗೂ ಮುಂಬದಿ ಪ್ರಯಾಣಿಕ ಸೀಟ್ ಬೆಲ್ಟ್ ಕಡ್ಡಾಯವಾಗಿ ಧರಿಸುತ್ತಾರೆ.  

ಭಾರತೀಯರ ಜೀವಿತಾವಧಿ ಭಾರಿ ಏರಿಕೆ! ತಲಾದಾಯ 5.75 ಲಕ್ಷ ರೂ ಭಾರತದ ಪ್ರಗತಿ ಅದ್ಭುತ ಎಂದ ವಿಶ್ವಸಂಸ್ಥೆ

ಕಾರಿನಲ್ಲಿ ಪ್ರಯಾಣಿಸುವ ಬಹುತೇಕರು ಹಿಂದಿನ ಸೀಟ್ ನಲ್ಲಿ ಕುಳಿತುಕೊಂಡಾಗ ಸೀಟ್ ಬೆಲ್ಟ್ ಧರಿಸುವುದಿಲ್ಲ. ಹಿಂದೆ ಆರಾಮವಾಗಿ ಕುಳಿತುಕೊಳ್ಳಲು ಸೀಟ್ ಬೆಲ್ಟ್ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಅನೇಕರು ಸೀಟ್ ಬೆಲ್ಟ್ ಧರಿಸುವುದಿಲ್ಲ. ಹಿಂಬದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅಗತ್ಯವಿಲ್ಲವೆಂದು ಪರಿಗಣಿಸಿರುವವರ ಸಂಖ್ಯೆಯೂ ಹೆಚ್ಚಿದೆ. ಆದ್ರೆ ಇದು ತಪ್ಪು. ಈ ಸೀಟ್ ಬೆಲ್ಟ್ ಹಿಂಬದಿ ಸವಾರರ ಜೀವ ಉಳಿಸುತ್ತೆ ಎನ್ನುವ ಸತ್ಯ ಅನೇಕರಿಗೆ ತಿಳಿದಿಲ್ಲ. 

ಪ್ರಯಾಣಿಕರ ಜೀವ ಉಳಿಸಲು ಈಗ ರಸ್ತೆ ಸಾರಿಗೆ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. ಏಪ್ರಿಲ್ 1, 2025 ರಿಂದ ತಯಾರಿಸಲಾಗುವ ಎಲ್ಲಾ ಕಾರುಗಳಲ್ಲಿ ಹಿಂಬದಿ ಸೀಟ್ ಬೆಲ್ಟ್ ಅಲಾರಂ ಒದಗಿಸಬೇಕೆಂದು ನಿಯಮ ಜಾರಿಗೆ ತಂದಿದೆ.  ಹಿಂಬದಿ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ ಕಾರಿನಲ್ಲಿ ಅಲಾರಾಂ ಸದ್ದು ಮಾಡುತ್ತದೆ. ಇದು ಪ್ರಯಾಣಿಕರನ್ನು ಎಚ್ಚರಿಸುತ್ತದೆ. ಜೊತೆಗೆ ಟ್ರಾಫಿಕ್ ಪೊಲೀಸರಿಗೂ ಸೂಚನೆ ನೀಡುವ ಕಾರಣ ದಂಡ ವಿಧಿಸುವುದು ಸುಲಭವಾಗುತ್ತದೆ. ಕಳೆದ ವರ್ಷ ಈ ಕುರಿತು ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರ್ಕಾರ ಅದನ್ನು ಜಾರಿಗೆ ತರಲು ಹೊರಟಿದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಿಸ್ತ್ರಿ ಸಾವಿನ ನಂತ್ರ ಕ್ರಮ : 2023 ರಲ್ಲಿ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದ ವೇಳೆ ಸೈರಸ್ ಮಿಸ್ತ್ರಿ ಹಿಂದಿನ ಸೀಟಿನಲ್ಲಿ ಕುಳಿತಿದ್ದು, ಸೀಟ್ ಬೆಲ್ಟ್ ಧರಿಸಿರಲಿಲ್ಲ. ಮಿಸ್ತ್ರಿ ಮಾತ್ರವಲ್ಲ ಕಾರು ಅಪಘಾತದಲ್ಲಿ  ಸಾವನ್ನಪ್ಪುತ್ತಿರುವ ಬಹುತೇಕರ ಸಾವಿಗೆ ಸೀಲ್ಟ್ ಬೆಲ್ಟ್ ಕಾರಣವಾಗ್ತಿದೆ.

ಉಳಿತಾಯ ಮಾಡೋ ಆಸೆಯೇ? ಹಾಗಿದ್ರೆ ಇವತ್ತಿಂದಲ್ಲೇ ಈ ಮಹಿಳೆ ಮಾಡಿದಂತೆ ನೀವೂ ಮಾಡಿ

ಸೀಟ್ ಬೆಲ್ಟ್ ಧರಿಸದ ಪ್ರಯಾಣಿಕರಿಗೆ ದಂಡ (Fine) : ಸದ್ಯ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು ಸೀಟ್ ಬೆಲ್ಟ್ ಧರಿಸದೆ ಹೋದ್ರೆ ದಂಡ ವಿಧಿಸಲಾಗುತ್ತದೆ. ಆರಂಭದಲ್ಲಿ ದಂಡ ನೂರು ರೂಪಾಯಿ ಇತ್ತು. ಅದನ್ನು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ವಾಹನವನ್ನು ವಶಕ್ಕೆ ಪಡೆಯುವುದಲ್ಲದೆ ಚಾಲನಾ ಪರವಾನಿಗೆ ರದ್ದುಪಡಿಸುವ ನಿಯಮ ಇದೆ. ಈ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಕೆಲ ರಾಜ್ಯದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರಸ್ತೆ ಸಾರಿಗೆ ಸಚಿವಾಲಯದ ಹೊಸ ನಿಯಮ ಜಾರಿಯಾದ ನಂತರ ಕಾರಿನಲ್ಲಿ ಹಿಂದೆ ಕುಳಿತವರು ಸೀಟ್ ಬೆಲ್ಟ್ ಧರಿಸದೇ ಹೋದಲ್ಲಿ ಅವರಿಗೂ ದಂಡ ವಿಧಿಸಲಾಗುವುದು. ಸುಮಾರು 1000 ರೂಪಾಯಿ ದಂಡ ವಿಧಿಸುವ ನಿರೀಕ್ಷೆ ಇದೆ. 
 

click me!