ನೋಟ್ ಬ್ಯಾನ್: ಉತ್ತರಿಸಬೇಕಾಗಿರುವುದೂ ಒನ್ ಮ್ಯಾನ್!

By nikhil vkFirst Published Aug 30, 2018, 1:31 PM IST
Highlights

ಚರ್ಚೆಗೆ ಗ್ರಾಸವಾದ ಆರ್‌ಬಿಐ ವರದಿ! ನಾಣ್ಯ ಅಮಾನ್ಯೀಕರಣ ಕುರಿತಾದ ಆರ್‌ಬಿಐ ವರದಿ! ಶೇ. 99 ರಷ್ಟು ಹಳೆ ನೋಟು ಆರ್‌ಬಿಐಗೆ ವಾಪಸ್!  ಕಪ್ಪುಹಣ ಯಾವುದು? ಎಲ್ಲಿದೆ? ಎಂಬುದೇ ಪ್ರಶ್ನೆ! 15.3 ಟ್ರಿಲಿಯನ್ ಹಳೆ ನೋಟು ವಾಪಸ್ ಬಂದಿವೆ! ಜಿಡಿಪಿ ಕುಸಿತಕ್ಕೆ ಕಾರಣವಾಯ್ತಾ ನಣ್ಯ ಅಮಾನ್ಯೀಕರಣ?
 

ನವದೆಹಲಿ(ಆ.30): ನಾಣ್ಯ ಅಮಾನ್ಯೀಕರಣದ ಬಳಿಕ ಶೇ.99 ರಷ್ಟು ಹಳೆ ನೋಟುಗಳು ಮರಳಿ ಬಂದಿವೆ ಎಂಬ ಆರ್‌ಬಿಐ ಮಾಹಿತಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಯಾವುದು ಕಪ್ಪುಹಣ?:

ಆರ್‌ಬಿಐ ಮಾಹಿತಿ ಪ್ರಕಾರ ನವೆಂಬರ್ 8, 2016 ರಂದು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಘೋಷಿಸಿತ್ತು. ಆಗ ದೇಶದಲ್ಲಿ ಒಟ್ಟು 15.4 ಟ್ರಿಲಿಯನ್ ಹಳೆ ಕರೆನ್ಸಿ ಚಲಾವಣೆಯಲ್ಲಿತ್ತು. ಅದರಂತೆ ಈವರೆಗೆ 15.3 ಟ್ರಿಲಿಯನ್ ಹಳೆ ನೋಟುಗಳು ವಾಪಸ್ ಬಂದಿವೆ.

ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ 5 ಟ್ರಿಲಿಯನ್ ಹಳೆ ನೋಟುಗಳು ಕಪ್ಪುಹಣವಾಗಿದ್ದು, ಇದು ವಾಪಸ್ ಬರುವುದಿಲ್ಲ ಎಂದು ಎಣಿಸಲಾಗಿತ್ತು. ಆದರೆ ಆರ್‌ಬಿಐ ಮಾಹಿತಿಯಂತೆ ಶೇ. 99 ರಷ್ಟು ಹಳೆ ನೋಟುಗಳು ವಾಪಸ್ ಬಂದಿದೆ ಎಂದಾದರೆ ಕಪ್ಪುಹಣ ಯಾವುದು? ಮತ್ತು ಅದು ಎಲ್ಲಿದೆ? ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬರುತ್ತಿವೆ. 

ಆರ್‌ಬಿಐ ವರದಿಯಲ್ಲಿ ಉಲ್ಲೇಖಿಸಿರುವಂತೆ ಕೇವಲ 107 ಬಿಲಿಯನ್ ಹಳೆ ನೋಟುಗಳು ಮರಳಿ ಬಂದಿಲ್ಲ. ವಾಪಸ್ ಬಂದಿರುವ ಹಳೆ ನೋಟುಗಳ ಪ್ರಮಾಣಕ್ಕೆ ಹೋಲಿಸಿದರೆ ಇದು ನಿರ್ಲಕ್ಷಿಸಬಹುದಾದ ಪ್ರಮಾಣ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನೀತಿ ಪರ್ಯಾಯಗಳ ಕೇಂದ್ರದ ಮುಖ್ಯಸ್ಥ ಮೋಹನ್ ಗೋಸ್ವಾಮಿ, ನೋಟು ಅಮಾನ್ಯೀಕರಣ ಎಂಬುದು ಸಂಪೂರ್ಣವಾಗಿ ವಿಫಲವಾದ ಯೋಜನೆ ಎಂದು ಜರೆದಿದ್ದಾರೆ.

ಹೊಸ ನೋಟಿನಲ್ಲೇನಿದೆ?:

ಆದರೆ ಹಳೆ ನೋಟುಗಳಿಗಿಂತ ಹೊಸ ನೋಟುಗಳಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ, ನೋಟು ಅಮಾನ್ಯೀಕರಣ ಉತ್ತಮ ನಡೆ ಎಂಬುದು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷಚಂದ್ರ ಗರ್ಗ್ ಅಭಿಪ್ರಾಯ. ಆದರೆ ಕೇವಲ ಈ ಕಾರಣಕ್ಕೆ ಮಾತ್ರ ನೋಟು ಅಮಾನ್ಯೀಕರಣ ಮಾಡಲಾಗಿತ್ತೇ ಎಂಬುದೇ ಎಲ್ಲರ ಮುಂದಿರುವ ಸದ್ಯದ ಪ್ರಶ್ನೆ.

ಕಪ್ಪುಹಣದ ಮೇಲಿನ ಪ್ರಹಾರ ಎಂಬ ವ್ಯಾಖ್ಯಾನವನ್ನೇ ಇದೀಗ ಹೆಚ್ಚಾಗಿ ಪ್ರಶ್ನಿಸಲಾಗುತ್ತಿದ್ದು, ಎಲ್ಲಾ ಹಳೆ ನೋಟು ವಾಪಸ್ ಬಂದಿದೆ ಎಂದಾದ ಮೇಲೆ ಕಪ್ಪುಹಣ ಇರುವುದಾದರೂ ಎಲ್ಲಿ ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ. 

ಇದಕ್ಕೂ ಮಿಗಿಲಾಗಿ ಸದ್ಯ ಜುಲೈ 1, 2017 ರವೆರೆಗೆ ಆರ್ ಬಿಐ ಕೇವಲ 500 ಬಿಲಿಯನ್ ಹೊಸ ಕರೆನ್ಸಿ ನೋಟುಗಳನ್ನಷ್ಟೇ ಮುದ್ರಿಸಲು ಸಾಧ್ಯವಾಗಿದೆ ಎಂಬ ಅಂಶ ಕೂಡ ಚಿಂತೆಗೀಡು ಮಾಡಿದೆ. ಹೊಸ ಕರೆನ್ಸಿ ನೊಟುಗಳನ್ನು ಮುದ್ರಿಸಲು ಆರ್‌ಬಿಐ ಖರ್ಚು ಮಾಡಿದ ಹಣ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಕ್ಯಾಶ್‌ಲೆಸ್‌ ಎಕನಾಮಿ ಗತಿ?:

ಇನ್ನು ನಾಣ್ಯ ಅಮಾನ್ಯೀಕರಣದ ಸಂದರ್ಭದಲ್ಲಿ ಸರ್ಕಾರ ಹೇಳಿದಂತೆ, ದೇಶವನ್ನು ನಗದುರಹಿತ ಆರ್ಥಿಕತೆ(Cashless Economy)ಯತ್ತ ಕೊಂಡೊಯ್ಯುವ ಗುರಿಯೂ ಬಹುತೇಕ ವಿಫಲತೆ ಕಂಡಿದೆ. ಕಾರಣ ಆರ್ ಬಿಐ ವರದಿ ಪ್ರಕಾರ 2018 ರಲ್ಲಿ ಕರೆನ್ಸಿ ಬಳಕೆ ಪ್ರಮಾಣ 2.8 ರಷ್ಟು ಹೆಚ್ಚಾಗಿದ್ದು, ಹಣದ ರೂಪದಲ್ಲಿ ವ್ಯವಹಾರ ನಡೆಸುವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ಹಣಕಾಸಿನ ಉಳಿತಾಯದಲ್ಲಿ ಎಡವಿರುವುದು ಕೂಡ ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

 

ಮೋದಿ ಮೇಲೆ ಮುಗಿಬಿದ್ದ ವಿದೇಶಿ ಮಾಧ್ಯಮಗಳು:

ಇದೇ ಕಾರಣಕ್ಕೆ ವಿದೇಶಿ ಮಾಧ್ಯಮಗಳು ಕೂಡ ಮೋದಿ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದು, ನಾಣ್ಯ ಅಮಾನ್ಯೀಕರಣದ ಬಳಿಕ ದೇಶದ ಜಿಡಿಪಿ ಶೇ.1.5 ರಷ್ಟು ಕುಸಿದಿದ್ದು, ಒಟ್ಟು 2.25 ಟ್ರಿಲಿಯನ್ ನಷ್ಟು ನಷ್ಟವಾಗಿದೆ. ಅಲ್ಲದೇ ನಾಣ್ಯ ಅಮಾನ್ಯೀಕರಣದ ಸಂದರ್ಭದಲ್ಲಿ ಬಳಿಕ 100ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ.

ಜೊತೆಗೆ ಸಣ್ಣ, ಮಧ್ಯಮ ಮತ್ತು ಗುಡಿ ಕೈಗಾರಿಕೆಗಳು ನೆಲ ಕಚ್ಚಿವೆ. ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾದ ನಾಣ್ಯ ಅಮಾನ್ಯೀಕರಣಕ್ಕೆ ಮೋದಿ ಸರ್ಕಾರ ನೀಡಿದ್ದ ಒಂದೂ ಸಕಾರಣ ಈಡೇರಿಲ್ಲ ಯಾಕೆ ಎಂದು ವಿದೇಶಿ ಮಾಧ್ಯಮಗಳು ಪ್ರಶ್ನಿಸಿವೆ.

ಏರುತ್ತಾ ಜಿಡಿಪಿ ಗ್ರಾಫ್?:

ಇಷ್ಟೆಲ್ಲದರ ನಡುವೆಯೂ ದೇಶದ ಜಿಡಿಪಿ 2019 ರ ಆರ್ಥಿಕ ವರ್ಷದಲ್ಲಿ ಶೇ.7.4 ರಷ್ಟು ಇರಲಿದೆ ಎಂದು ಆರ್‌ಬಿಐ ಭರವಸೆ ವ್ಯಕ್ತಪಡಿಸಿದೆ. ಅಲ್ಲದೇ ಚಾಲ್ತಿ ಖಾತೆ ಕೊರತೆ ಕೂಡ ಉತ್ತಮ ಹಂತಕ್ಕೆ ಬರುವ ಆಶಾವಾದವನ್ನು ವ್ಯಕ್ತಪಡಿಸಲಾಗಿದೆ.

ಬೆಟ್ಟದಷ್ಟು ಸವಾಲುಗಳು:

ಇದೆಲ್ಲಕ್ಕಿಂತ ಹೆಚ್ಚಾಗಿ ಕೇಂದ್ರ ಸರ್ಕಾರದ ಮುಂದೆ ಹಲವು ಆರ್ಥಿಕ ಸವಾಲುಗಳು ಎದುರಾಗಿದ್ದು, ಪ್ರಮುಖವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಮತ್ತು ಅದರ ಪರಿಣಾಮವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ನಿಯಂತ್ರಣ ತರುವುದು ತುರ್ತು ಅಗತ್ಯವಾಗಿದೆ.

ಅದರಂತೆ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದ ನಿರಂತರ ಕುಸಿತ, ಜಿಡಿಪಿ ಬೆಳವಣಿಗೆಯಲ್ಲಿ ಸ್ಥಿತ್ಯಂತರ, ಉದ್ಯೋಗ ಸೃಷ್ಟಿ, ಈ ಎಲ್ಲಾ ಆರ್ಥಿಕ ಸವಾಲುಗಳನ್ನು ಮೋದಿ ಸರ್ಕಾರ ಅತ್ಯಂತ ಕಡಿಮೆ ಅವಧಿಯಲ್ಲಿ ನಿವಾರಸಿಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಆದರೆ ನೋಟು ಅಮಾನ್ಯೀಕರಣದ ಕುರಿತು ಆರ್‌ಬಿಐ ವರದಿಯಿಂದ ಸದ್ಯ ಮೋದಿ ಸರ್ಕಾರ ಪ್ರಶ್ನೆಗಳನ್ನು ಎದುರಿಸಬೇಕಾಗಿರುವುದು ಮಾತ್ರ ಸತ್ಯ. ಅದರಲ್ಲಿ ಅತ್ಯಂತ ಪ್ರಮುಖವಾದ ಪ್ರಶ್ನೆ 15.4 ಟ್ರಿಲಿಯನ್ ಹಳೆ ನೋಟುಗಳ ಪೈಕಿ 15.3  ಟ್ರಿಲಿಯನ್ ನೋಟುಗಳು ವಾಪಸ್ ಬಂದಿದೆ ಎಂದಾದರೆ ಕಪ್ಪುಹಣದ ಮೇಲಿನ ಪ್ರಹಾರ ಹೇಗಾಗಿದೆ ಎಂಬುದೇ ಆರ್ಥಿಕ ತಜ್ಞರು ಕೇಳುತ್ತಿರುವ ಪ್ರಶ್ನೆ.

 

ನೀವ್ ಕೊಟ್ರಲ್ಲಾ ಹಳೇ ನೋಟು, ಕ್ರಾಸ್ ಆಗಿದೆ ಆರ್‌ಬಿಐ ಗೇಟು! 

ನೋಟ್ ಬ್ಯಾನ್ ಬಳಿಕ ಮರಳಿದ ಹಣವೆಷ್ಟು : ಆರ್ ಬಿಐ ನಿಂದ ಮಾಹಿತಿ

ನೋಟು ಅಪನಗದೀಕರಣ : ಬಿಜೆಪಿಯಿಂದಲೇ ನಡೆಯಿತಾ ಭಾರೀ ಅಕ್ರಮ .?

ಪ್ರಧಾನಿ ಮೋದಿಗೆ ರಾಹುಲ್ ಕಪ್ಪು ಹಣ ಟಾಂಗ್

ಸ್ವಿಸ್ ಬ್ಯಾಂಕ್ ಭಾರತೀಯರ ಹಣದ ವಿರುದ್ಧ ಕ್ರಮದ ಭರವಸೆ!

click me!