
ಬೆಂಗಳೂರು (ಮಾ.06): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಬಜೆಟ್ನಲ್ಲಿ ಅಬಕಾರಿ ಇಲಾಖೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವ ಮತ್ತು ತೆರಿಗೆ ಪದ್ಧತಿಯನ್ನು ವಿಶ್ವದರ್ಜೆಗೆ ಏರಿಸುವ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. 60 ವರ್ಷ ಹಳೆಯದಾದ ಅಬಕಾರಿ ಕಾಯ್ದೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ಹೊಸ ಸುಧಾರಣೆಗಳನ್ನು ತರಲಾಗಿದೆ.
ಕಳೆದ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ ಶೇ.12.7 ರಷ್ಟು ಬೆಳವಣಿಗೆಯೊಂದಿಗೆ 36,492 ಕೋಟಿ ರೂ. ರಾಜಸ್ವ ಸಂಗ್ರಹವಾಗಿದ್ದು, ಮುಂಬರುವ 2026-27ನೇ ಸಾಲಿಗೆ 45,000 ಕೋಟಿ ರೂ.ಗಳ ಬೃಹತ್ ಸಂಗ್ರಹಣಾ ಗುರಿಯನ್ನು ನೀಡಲಾಗಿದೆ. ಈ ಗುರಿ ತಲುಪಲು ಸರ್ಕಾರವು ಮದ್ಯದ ಮೇಲಿನ ತೆರಿಗೆ ಪದ್ಧತಿಯನ್ನೇ ಬದಲಿಸಿದೆ.
ಇದುವರೆಗೆ ಮದ್ಯದ ಮಾರಾಟ ಬೆಲೆಯ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಏಪ್ರಿಲ್ 2026 ರಿಂದ ಜಾಗತಿಕ ಮಟ್ಟದ 'ಗೋಲ್ಡ್ ಸ್ಟ್ಯಾಂಡರ್ಡ್' ಎನಿಸಿಕೊಂಡಿರುವ 'ಮದ್ಯದ ಅಂಶ ಆಧಾರಿತ ತೆರಿಗೆ' (Alcohol-in-Beverage – AIB) ಪದ್ಧತಿಯನ್ನು ಜಾರಿಗೆ ತರಲಾಗುವುದು. ಅಂದರೆ ಪಾನೀಯದಲ್ಲಿರುವ ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಮದ್ಯದ ಬೆಲೆಗಳಲ್ಲಿ ತೀವ್ರ ವ್ಯತ್ಯಾಸವಾಗದಂತೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಸರ್ಕಾರವು ಮದ್ಯದ ಬೆಲೆ ನಿರ್ಧಾರದ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದು, ಮಾರುಕಟ್ಟೆಯ ಆಧಾರದ ಮೇಲೆ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಸಂಪೂರ್ಣವಾಗಿ ಮದ್ಯ ಉತ್ಪಾದಕರಿಗೇ ನೀಡಿದೆ. ಅಲ್ಲದೆ, ಪ್ರಸ್ತುತ ಇರುವ 16 ತೆರಿಗೆ ಸ್ಲ್ಯಾಬ್ಗಳನ್ನು ಕೇವಲ 8 ಸ್ಲ್ಯಾಬ್ಗಳಿಗೆ ಇಳಿಸುವ ಮೂಲಕ ವ್ಯವಸ್ಥೆಯನ್ನು ಸರಳೀಕರಿಸಲಾಗಿದೆ.
ತೆರಿಗೆ ಸೋರಿಕೆಯನ್ನು ತಡೆಯಲು ಸರ್ಕಾರ ಹೈಟೆಕ್ ಮೊರೆ ಹೋಗಿದೆ. ಬ್ಲಾಕ್ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯ ಮೂಲಕ ಮದ್ಯದ ಚಲನವಲನದ ಮೇಲೆ ನಿಗಾ ಇಡಲಾಗುವುದು. ಮದ್ಯ ರವಾನೆಯ ವೇಳೆ ಹಳೆಯ ಕಾಲದ ಬೆಂಗಾವಲು ವ್ಯವಸ್ಥೆಯ ಬದಲಿಗೆ 'ಜಿಯೋ-ಫೆನ್ಸ್ಡ್ ಇ-ಲಾಕ್' (Geo-fenced e-lock) ವ್ಯವಸ್ಥೆ ಅಳವಡಿಸಲಾಗುವುದು. ಇದರಿಂದ ಮದ್ಯದ ಅಕ್ರಮ ಸಾಗಾಟಕ್ಕೆ ಬ್ರೇಕ್ ಬೀಳಲಿದೆ.
ರಾಜ್ಯದಲ್ಲಿ ವೈನ್ ಪ್ರವಾಸೋದ್ಯಮ ಮಾದರಿಯಲ್ಲಿ ಡಿಸ್ಟಿಲರಿಗಳು ಮತ್ತು ಬ್ರೂವರಿಗಳಲ್ಲಿ ಪ್ರವಾಸಿಗರಿಗೆ ಮದ್ಯ ಸವಿಯಲು (Tasting) ಮತ್ತು ಅಲ್ಲಿ ತಯಾರಾದ ಉತ್ಪನ್ನಗಳನ್ನು ನೇರವಾಗಿ ಖರೀದಿಸಲು ಅವಕಾಶ ನೀಡಲಾಗಿದೆ. ಇದು ಪ್ರವಾಸೋದ್ಯಮ ವಲಯಕ್ಕೆ ಹೊಸ ಚೈತನ್ಯ ನೀಡಲಿದೆ.
ಬಜೆಟ್ನ ಮತ್ತೊಂದು ವಿಶೇಷವೆಂದರೆ ಹೊಣೆಗಾರಿಕೆಯ ಹಂಚಿಕೆ. ಅಬಕಾರಿ ಇಲಾಖೆಯು ಕೇವಲ ತೆರಿಗೆ ಸಂಗ್ರಹಣೆಯ ಮೇಲೆ ಗಮನ ಹರಿಸಿದರೆ, ಮದ್ಯ ವ್ಯಸನಮುಕ್ತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯು ನಿರ್ವಹಿಸಲಿದೆ. ಸಿದ್ದರಾಮಯ್ಯ ಅವರ ಈ ಮಹತ್ವದ ಸುಧಾರಣೆಗಳು ಅಬಕಾರಿ ವಲಯದಲ್ಲಿ ಪಾರದರ್ಶಕತೆ ತರುವುದಲ್ಲದೆ, ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವ ನಿರೀಕ್ಷೆಯಿದೆ.