
ಬೆಂಗಳೂರು: ಟ್ರೈನ್ ಟಿಕೆಟ್ ಬುಕ್ ಮಾಡುವಾಗ ಮಾಡಿದ ಒಂದು ಸಣ್ಣ ತಪ್ಪು ಬೆಂಗಳೂರು ಮೂಲದ ಪ್ರಯಾಣಿಕನೊಬ್ಬನಿಗೆ ಬರೋಬ್ಬರಿ 7,035 ರೂಪಾಯಿ ದಂಡ ಪಾವತಿಸುವಂತೆ ಮಾಡಿದೆ. ಟಿಕೆಟ್ನಲ್ಲಿ ವಯಸ್ಸು 24ರ ಬದಲು 1 ವರ್ಷ ಎಂದು ನಮೂದಾಗಿದ್ದೇ ಈ ಭಾರೀ ದಂಡಕ್ಕೆ ಕಾರಣ.
ಜೂನ್ 23 ರಂದು ಬೆಂಗಳೂರಿನ ರಮಾಕಾಂತ್ ಎಂ (24) ಎಂಬುವವರು ಕೆಎಸ್ಆರ್ ಬೆಂಗಳೂರು-ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ಪ್ರೆಸ್ (ರೈಲು ಸಂಖ್ಯೆ 22691) ಮೂಲಕ ನಾಗ್ಪುರಕ್ಕೆ ಪ್ರಯಾಣಿಸುತ್ತಿದ್ದರು. ಟಿಕೆಟ್ ಪರಿಶೀಲನೆ ವೇಳೆ ಟಿಕೆಟ್ ಪರೀಕ್ಷಕರು (TTE), ಇ-ಟಿಕೆಟ್ನಲ್ಲಿ ಪ್ರಯಾಣಿಕನ ವಯಸ್ಸು 1 ವರ್ಷ ಎಂದು ಇರುವುದನ್ನು ಗಮನಿಸಿದರು. ರಮಾಕಾಂತ್ ಅವರು ಇದು ಟೈಪಿಂಗ್ ದೋಷವಾಗಿದ್ದು, ಬುಕ್ಕಿಂಗ್ ಮಾಡುವಾಗ ಆದ ತಪ್ಪು ಎಂದು ಅಧಿಕಾರಿಗಳಿಗೆ ವಿವರಿಸಿದರು.
ತಮ್ಮ ವಯಸ್ಸನ್ನು ದೃಢೀಕರಿಸಲು ಸರ್ಕಾರದ ಅಧಿಕೃತ ಗುರುತಿನ ಚೀಟಿಯನ್ನೂ (ID Card) ತೋರಿಸಿದರು. ಆದರೆ, ಟಿಕೆಟ್ನಲ್ಲಿರುವ ವಿವರಗಳು ಪ್ರಯಾಣಿಕನ ವಿವರಕ್ಕೆ ಹೊಂದಾಣಿಕೆಯಾಗದ ಕಾರಣ ಅದನ್ನು ಅಮಾನ್ಯ ಟಿಕೆಟ್ ಎಂದು ಪರಿಗಣಿಸಿದ ಟಿಟಿಇ, ರಮಾಕಾಂತ್ ಅವರಿಗೆ 7,035 ರೂ. ದಂಡ ವಿಧಿಸಿದರು. ಅನಿವಾರ್ಯವಾಗಿ ರಮಾಕಾಂತ್ ಯುಪಿಐ ಮೂಲಕ ದಂಡ ಪಾವತಿಸಿದ್ದಾರೆ.
ನನ್ನ ವಯಸ್ಸು ತಪ್ಪಾಗಿ ನಮೂದಾಗಿದ್ದರೂ, ಅದರಿಂದ ರೈಲ್ವೆ ಇಲಾಖೆಗೆ ಯಾವುದೇ ನಷ್ಟವಾಗಿಲ್ಲ. 1 ವರ್ಷ ಅಥವಾ 24 ವರ್ಷದವರಿಗೂ ಟಿಕೆಟ್ ದರದಲ್ಲಿ ಯಾವುದೇ ರಿಯಾಯಿತಿ ವ್ಯತ್ಯಾಸವಿರುವುದಿಲ್ಲ. ನಾನು ಅಸಲಿ ಐಡಿ ಕಾರ್ಡ್ ತೋರಿಸಿದರೂ ದಂಡ ವಿಧಿಸಿರುವುದು ಸರಿಯಲ್ಲ ಎಂದು ರಮಾಕಾಂತ್ ವಾದಿಸಿದ್ದಾರೆ. ನಾಗ್ಪುರ ತಲುಪಿದ ನಂತರ ಅವರು ರೈಲ್ ಮದದ್ ಪೋರ್ಟಲ್ನಲ್ಲಿ ದೂರು ನೀಡಿ ದಂಡದ ಮೊತ್ತವನ್ನು ಮರುಪಾವತಿಸುವಂತೆ ಕೋರಿದ್ದಾರೆ.
ರಮಾಕಾಂತ್ ಅವರ ದೂರನ್ನು ಪರಿಶೀಲಿಸಿದ ರೈಲ್ವೆ ಇಲಾಖೆ, ಟಿಟಿಇ ಕ್ರಮ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದೆ. ನಿಯಮಗಳ ಪ್ರಕಾರ, ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರು ವಿವರಗಳನ್ನು ಪರಿಶೀಲಿಸಬೇಕು. ಏನಾದರೂ ತಪ್ಪುಗಳಿದ್ದರೆ ರೈಲು ಹೊರಡುವ ಮೊದಲೇ ಪಿಆರ್ ಎಸ್ (PRS) ಕೌಂಟರ್ಗಳಲ್ಲಿ ಸರಿಪಡಿಸಿಕೊಳ್ಳಬೇಕು. ಪ್ರಯಾಣದ ಸಮಯದಲ್ಲಿ ವಿವರಗಳು ತಾಳೆಯಾಗದಿದ್ದರೆ ಅವರನ್ನು ಟಿಕೆಟ್ ರಹಿತ ಪ್ರಯಾಣಿಕ ಎಂದು ಪರಿಗಣಿಸಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಕಾಯ್ದೆ ಸೆಕ್ಷನ್ 138ರ ಅಡಿ ದಂಡ ವಿಧಿಸಲಾಗಿದೆ.
ಈ ಘಟನೆ ಒಂದು ಪ್ರಮುಖ ಪ್ರಶ್ನೆಯನ್ನು ಎತ್ತಿದೆ. 1 ವರ್ಷದ ಮಗು ಒಬ್ಬಂಟಿಯಾಗಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಲು ರೈಲ್ವೆ ಬುಕ್ಕಿಂಗ್ ಸಿಸ್ಟಮ್ ಹೇಗೆ ಅವಕಾಶ ನೀಡಿತು? ಎಂಬುದು ರಮಾಕಾಂತ್ ಅವರ ಪ್ರಶ್ನೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ, ಒಬ್ಬನೇ ಪ್ರಯಾಣಿಸುವ 1 ವರ್ಷದ ಮಗುವಿನ ಹೆಸರಿನಲ್ಲಿ ಟಿಕೆಟ್ ಹೇಗೆ ಜನರೇಟ್ ಆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಕಾನೂನುಬದ್ಧವಾಗಿ ದಂಡ ವಿಧಿಸಲಾಗಿದ್ದರೂ, ಈ ಪ್ರಕರಣವನ್ನು ನಿರ್ವಹಿಸಿದ ರೀತಿಯ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.