
ಬೆಂಗಳೂರು: ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA - Kempegowda International Airport Bengaluru) ಹೊಂದಿದ್ದು, ಇದು ಅಂದಾಜು ಸಾಮರ್ಥ್ಯ ಮಿತಿಯನ್ನು ತಲುಪಿದೆ. ಈ ಹಿನ್ನೆಲೆ ಕರ್ನಾಟಕಕ್ಕೆ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆಂಬ ಒತ್ತಾಯಗಳು ಕೇಳಿ ಬಂದಿದೆ. ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮುಂದಾಗಿದ್ದು, ಈ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಲು ಸಿದ್ಧತೆ ನಡೆಸಿದ್ದರೆ ಎಂದು TOI ವರದಿ ಮಾಡಿದೆ.
ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಆಗಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಏಪ್ರಿಲ್ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI- Airports Authority of India) ಮೂರು ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದೆ. ಆದ್ರೆ ಈ ಮೂರು ಸ್ಥಳಗಳ ಕುರಿತು ಅಂತಿಮ ವರದಿ ಇನ್ನು ಸಲ್ಲಿಕೆಯಾಗಿಲ್ಲ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ನಗರದಿಂದ ಅಂದಾಜು 30 ಕಿಮೀ ದೂರದಲ್ಲಿದೆ.
ಮೂರು ಸ್ಥಳಗಳು ಶಾರ್ಟ್ ಲಿಸ್ಟ್
ಮೊದಲು ಏಳು ಸ್ಥಳಗಳನ್ನು ಗುರುತಿಸಲಾಗಿದೆ. ಏಳು ಸ್ಥಳಗಳಲ್ಲಿ ಮೂರು ಅಂತಿಮಗೊಳಿಸಲಾಗಿದೆ. ಎರಡು ಸ್ಥಳಗಳು ಕನಕಪುರ ರಸ್ತೆ ವ್ಯಾಪ್ತಿಗೆ ಮತ್ತೊಂದು ಸ್ಥಳ ನೆಲಮಂಗಲ-ಕುಣಿಗಲ್ ರಸ್ತೆಯ ವ್ಯಾಪ್ತಿಗೆ ಬರುತ್ತದೆ. ಈ ಮೂರು ಸ್ಥಳಗಳು ಬೆಂಗಳೂರು ನಗರ ಕೇಂದ್ರದಿಂದ 25 ರಿಂದ 45 ಕಿ.ಮೀ. ದೂರದಲ್ಲಿವೆ. ಶಾರ್ಟ್ಲಿಸ್ಟ್ ಆಗಿರುವ ಮೂರು ಸ್ಥಳಗಳು ಯಾವವು?
1.ಕಗ್ಗಲಿಪುರ (ಕನಕಪುರ ರಸ್ತೆ)
2.ಹಾರೋಹಳ್ಳಿ (ಕನಕಪುರ ರಸ್ತೆ)
3.ಚಿಕ್ಕಸೋಲುರು (ನೆಲಮಂಗಲ-ಕುಣಿಗಲ್ ರಸ್ತೆ)
ಕೇಂದ್ರಕ್ಕೆ ಔಪಚರಿಕ ಪ್ರಸ್ತಾವನೆ ಸಲ್ಲಿಕೆ
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಕುರಿತು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಔಪಚರಿಕ ಪ್ರಸ್ತಾವನೆಯನ್ನು ಸಲ್ಲಿಸಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ 4,500 ಎಕರೆ ಭೂಮಿಯ ನೀಡಲು ಒಪ್ಪಲಾಗಿದೆ ಮತ್ತು ಪ್ರಸ್ತಾವಿತ ಸ್ಥಳಗಳ ಸೂಕ್ತತೆಯ ಬಗ್ಗೆಯೂ ಯಾವುದೇ ನಿರ್ಧಾರ ಅಂತಿಮವಾಗಿಲ್ಲ. ಉತ್ತಮ ಸಂಪರ್ಕ ಮತ್ತು ಕೈಗಾರಿಕೆ ಕೇಂದ್ರಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಮತ್ತು ಮೈಸೂರು ನಡುವೆ ಎರಡನೇ ವಿಮಾನ ನಿಲ್ದಾಣ ಸ್ಥಾಪಿಸಬೇಕೆಂದು ವಿಮಾನಯಾನ ವಿಶ್ಲೇಷಕರು ಹೇಳುತ್ತಾರೆ. ಇನ್ನು ಕೆಲವರು ನೆಲಮಂಗಲ ವ್ಯಾಪ್ತಿಯಲ್ಲಿಯೇ ಎರಡನೇ ವಿಮಾನ ನಿಲ್ದಾಣವಾಗಬೇಕು ಎಂಬ ವಾದಗಳು ಕೇಳಿ ಬರುತ್ತಿವೆ.
ಸೀಮಿತ ಕಾರ್ಯಚರಣೆಗೆ HAL ವಿಮಾನ ನಿಲ್ದಾಣ
ಬೆಂಗಳೂರು ನಗರ ಮಿತಿಯೊಳಗೆ ಕಾರ್ಯನಿರ್ವಹಿಸಲು HAL ವಿಮಾನನಿಲ್ದಾಣವನ್ನು ಪುನರಾಭಿವೃದ್ಧಿ ಮಾಡುವ ಅಗತ್ಯವಿದೆ. ದೀರ್ಘಕಾಲದ ಬಳಕೆಗಾಗಿ ಹೆಚ್ಎಎಲ್ ವಿಮಾನ ನಿಲ್ದಾಣ ಮತ್ತಷ್ಟು ಮುಕ್ತಗೊಳಿಸಬೇಕಿದೆ. HAL ವಿಮಾನನಿಲ್ದಾಣನಿಂದ ಸೀಮಿತ ಕಾರ್ಯಾಚರಣೆ ನಡೆಸಬಹುದಾಗಿದೆ.
ತಮಿಳುನಾಡಿನಿಂದ ವಿರೋಧ ಸಾಧ್ಯತೆ?
ಕರ್ನಾಟಕದ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಗೆ ತಮಿಳುನಾಡು ಅಡ್ಡಿ ಮಾಡುವ ಸಾಧ್ಯತೆಗಳಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 150 ಕಿ.ಮೀ. ದೂರದಲ್ಲಿರುವ ಹೊಸೂರಿನಲ್ಲಿ 2ನೇ ವಿಮಾನ ನಿಲ್ದಾಣ ಸ್ಥಾಪನೆಗೆ ತಮಿಳುನಾಡು ಒತ್ತಾಯಿಸುತ್ತಿದೆ. ಹೊಸೂರು ಬೆಂಗಳೂರಿನ ಕೂಗಳತೆಯ ದೂರದಲ್ಲಿದೆ. ಕರ್ನಾಟಕ ರಡು ಸಂಭಾವ್ಯ ಸ್ಥಳಗಳನ್ನು ಗುರುತಿಸಿದ್ದು, ಮುಂದುವರಿಯಲು ಬಿಐಎಎಲ್ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಅಗತ್ಯವಿದೆ. ಬೆಂಗಳೂರಿನ ವ್ಯಾಪ್ತಿಯಲ್ಲಿ ಎರಡನೇ ವಿಮಾನ ನಿಲ್ದಾಣ ಸ್ಥಾಪನೆಗೆ ಭೂಸ್ವಾಧೀನ ಪಡೆದುಕೊಳ್ಳೋದು ಅತಿದೊಡ್ಡ ಸಮಸ್ಯೆಯಾಗಲಿದೆ.