
ಬೆಂಗಳೂರು: ನಗರದ ಸಿಲ್ಕ್ ಬೋರ್ಡ್ ಸಮೀಪದ ಬಿಟಿಎಂ ಲೇಔಟ್ 2ನೇ ಹಂತದ ಕೆಎಎಸ್ ಕಾಲೋನಿಯಲ್ಲಿ ಮಧ್ಯರಾತ್ರಿ ಭೀಕರ ಪೈಶಾಚಿಕ ಕೃತ್ಯ ನಡೆದಿರುವ ಆರೋಪ ಕೇಳಿಬಂದಿದೆ. 65 ವರ್ಷದ ಮಹಿಳೆಯ ಮೇಲೆ ಅತ್ಯಾ*ಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಅಮಾನುಷ ಕೃತ್ಯಕ್ಕೆ ಮನೆಗೆಲಸ ಮಾಡುತ್ತಿದ್ದ ದೇವರಾಜು (50) ಎಂಬಾತನೇ ಕಾರಣ ಎನ್ನಲಾಗಿದ್ದು, ಕೃತ್ಯ ಎಸಗಿದ ಬಳಿಕ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇಂದು ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಪತಿ ಉದ್ಯೋಗ ನಿಮಿತ್ತ ದುಬೈಗೆ ತೆರಳಿದ್ದರು. ಅವರು ಇಂದು ಬೆಳಗ್ಗೆ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿ, ಮನೆ ಬಳಿಗೆ ಬಂದು ಬೇಳ್ ಹೊಡೆದಿದ್ದಾರೆ.
ಮೊದಲ ಮಹಡಿಯಲ್ಲಿ ವಾಸವಿದ್ದ 27 ವರ್ಷದ ಮಗಳು ಬಾಗಿಲು ತೆರೆದು ತನ್ನ ರೂಂಗೆ ತೆರಳಿದ್ದಾಳೆ. ನಂತರ ಮಹಿಳೆ ಇದ್ದ ಕೊಠಡಿಗೆ ಪತಿ ತೆರಳಿದಾಗ, ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ.
ಘಟನೆ ನಡೆಯುವ ವೇಳೆ ಮಹಿಳೆಯ ಮಗಳು ಕೂಡ ಮನೆಯಲ್ಲಿಯೇ ಇದ್ದಳು, ಆದರೆ ಮೊದಲ ಮಹಡಿಯಲ್ಲಿ ತನ್ನ ಕೊಠಡಿಯಲ್ಲಿ ಇದ್ದ ಕಾರಣ ಘಟನೆ ಗಮನಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದ ಕೂಡಲೇ ಮೈಕೋ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.