
ಬೆಂಗಳೂರು (ಅ.11) ಬೆಂಗಳೂರಿನ ನಮ್ಮ ಮೆಟ್ರೋ ದರ ಏರಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದರೂ ಇದೀಗ ಜನ ಅನಿವಾರ್ಯವಾಗಿ ಪ್ರಯಾಣ ಮಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಪ್ರತಿ ದಿನ ದುಬಾರಿ ಟಿಕೆಟ್ ದರ ಶಪಿಸುತ್ತಾ ಪ್ರಯಾಣಿಕರು ನಮ್ಮ ಮೆಟ್ರೋ ಪ್ರಯಾಣ ಮಾಡುತ್ತಿದ್ದಾರೆ. ಮೆಟ್ರೋ ದರ ಏರಿಕೆ ಕುರಿತು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಸಂಸಜ ತೇಜಸ್ವಿ ಸೂರ್ಯ ಇದೀಗ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ಮಹಾ ತಪ್ಪಾಗಿದೆ. ಶೇಕಡಾ 50 ರಿಂದ 55ರಷ್ಟು ಏರಿಕೆ ಮಾಡಬೇಕಿದ್ದ ದರವನ್ನು ಶೇಕಡಾ 105ರಷ್ಟು ಏರಿಕೆ ಮಾಡಿದ್ದಾರೆ. ಕನಿಷ್ಠ ಗಣಿತ ಗೊತ್ತಿಲ್ಲದೆ ಏರಿಕೆ ಮಾಡಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳು ಇದಕ್ಕಿಂತ ಉತ್ತಮವಾಗಿ ಕ್ಯಾಲ್ಕುಲೇಶನ್ ಮಾಡಿಕೊಡುತ್ತಿದ್ದರು ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಮೆಟ್ರೋ ದರ ಏರಿಕೆಯಲ್ಲಿ ಆಗಿರುವ ತಪ್ಪು ಕುರಿತು ಸುದೀರ್ಘ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ದರ ಏರಿಕೆ ಸಮಿತಿ ನೀಡಿರುವ ಶಿಫಾರಸು ಜಾರಿಗೆ ತಂದೆ ಮೆಟ್ರೋ ದರ ಏರಿಕ ಶೇಕಡಾ 50 ರಿಂದ 55ರಷ್ಟು ಮಾತ್ರ. ಆದರೆ ಬಿಎಂಆರ್ಸಿಎಲ್ ತಪ್ಪಾಗಿ ಲೆಕ್ಕಹಾಕಿ ಶೇಕಡಾ 105ರಷ್ಟು ದರ ಏರಿಕೆ ಮಾಡಿದೆ. ತೇಜಸ್ವಿ ಸೂರ್ಯ ತಮ್ಮ ಪತ್ರದಲ್ಲಿ ಬಿಎಂಆರ್ಸಿಎಲ್ ಹೇಳಿದ ನಿರ್ವಹಣಾ ವೆಚ್ಚ ಹಾಗೂ ಆಗುತ್ತಿರುವ ವೆಚ್ಚಕ್ಕೂ ವ್ಯತ್ಯಾಸವಿದೆ ಎಂದಿದ್ದಾರೆ. ನಿರ್ವಹಣೆ ಹಾಗೂ ಆಡಳಿತಕ್ಕೆ ಶೇಕಾಡ 355ರಷ್ಟು ವೆಚ್ಚ ತಗುಲುತ್ತಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ. ಆದರೆ ತೇಜಸ್ವಿ ಸೂರ್ಯ ವರದಿ ಪ್ರಕಾರಣ ನಿರ್ವಹಣೆ ಹಾಗೂ ಆಡಳಿತಕ್ಕೆ ಶೇಕಡಾ 118ರಷ್ಟು ಮಾತ್ರ ಖರ್ಚಾಗುತ್ತಿದೆ. ಇದಕ್ಕೆ ಕಾರಣ ವಾರ್ಷಿಕ ವರದಿಯ ಅಂಕಿ ಅಂಶಗಳನ್ನು ತಪ್ಪಾಗಿ ಕ್ಯಾಲ್ಕುಲೇಶನ್ ಮಾಡಿದ್ದಾರೆ. ಹಲವು ತಪ್ಪು ಮಾಹಿತಿಗಳನ್ನು ಇಟ್ಟುಕೊಂಡು ಈ ರೀತಿ ಲೆಕ್ಕಾ ಹಾಕಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬಿಎಂಆರ್ಸಿಪಿ ತನ್ನ ವರದಿಯಲ್ಲಿ ವೆಚ್ಚದ ಪ್ರಮಾಣ ಶೇಕಡಾ 73.16ರಷ್ಟು ಏರಿಕೆಯಾಗಿದೆ ಎಂದಿದೆ. ಆದರೆ ತೇಜಸ್ವಿ ಸೂರ್ಯ ತಮ್ಮ ಪತ್ರದಲ್ಲಿ ಈ ವೆಚ್ಚ ಏರಿಕೆ ಪ್ರಮಾಣ ಶೇಕಡಾ 23.7ರಷ್ಟು ಮಾತ್ರ. ವೆಚ್ಚ ಏರಿಕೆ, ಆಡಳಿತ ವೆಚ್ಚ, ಹಣದುಬ್ಬರ ಸೇರಿದಂತೆ ಎಲ್ಲವನ್ನೂ ಕೂಡಿಸಿದರೆ ಶೇಕಡಾ 105ಕ್ಕಿಂತ ಮೇಲೆ ಹೋಗುತ್ತಿಲ್ಲ. ಆದರೆ ಬಿಎಂಆರ್ಸಿಎಲ್ ಶೇಕಡಾ 355 ಎಂದು ಹೇಳುತ್ತಿದೆ. ಮೆಟ್ರೋ ಪ್ರಯಾಣ ದರ ಸಮಿತಿ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚು ಬಿಎಂಆರ್ಸಿಎಲ್ ದರ ಏರಿಕೆ ಮಾಡಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.
ಅಧಿಕಾರಿಗಳು ಆಗಿರುವ ತಪ್ಪನ್ನು ತಕ್ಷಣವೇ ಮರು ಪರಿಶೀಲನೆ ನಡೆಸಬೇಕು. ಬಳಿಕ ಆಗಿರುವ ಮಹಾ ತಪ್ಪನ್ನು ಸರಿಪಡಿಸಬೇಕು. ಜನರಿಂದ ಸುಲಿಗೆ ಮಾಡುತ್ತಿದೆ. ಇದನ್ನು ನಿಲ್ಲಿಸಿ, ಸರಿಯಾದ ಪ್ರಮಾಣದಲ್ಲಿ ದರ ಏರಿಕೆ ಮಾಡಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.