
ಬೆಂಗಳೂರು (ಮಾ.10): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ನಗರಾದ್ಯಂತ ಅಡುಗೆ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಸಂಪೂರ್ಣ ಮೆನು ನೀಡಲು ಸಾಧ್ಯವಾಗುತ್ತಿಲ್ಲ, ಸಹಕರಿಸಿ" – ಇದು ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಗಾಂಧಿನಗರದಲ್ಲಿರುವ 'ಸ್ಯಾಂಕ್ಟಮ್ ಹೋಟೆಲ್' ಎದುರು ಹಾಕಲಾಗಿರುವ ನೋಟಿಸ್. ಇದು ಕೇವಲ ಒಂದು ಹೋಟೆಲ್ನ ಕಥೆಯಲ್ಲ, ಇಡೀ ಹೋಟೆಲ್ ಉದ್ಯಮವೇ ಈಗ ಇಂತಹ ಸಂಕಷ್ಟಕ್ಕೆ ಸಿಲುಕಿದೆ.
ವಾಣಿಜ್ಯ ಸಿಲಿಂಡರ್ಗಳ ದಾಸ್ತಾನು ಖಾಲಿಯಾಗುತ್ತಿದ್ದಂತೆ, ಪ್ರತಿಷ್ಠಿತ ಹೋಟೆಲ್ಗಳ ಅಡುಗೆ ಮನೆಯಲ್ಲಿ ಈಗ ಪ್ಲೈವುಡ್ ಶೀಟ್, ಚಾರ್ಕೋಲ್ (ಕಲ್ಲಿದ್ದಲು) ಮತ್ತು ಸೌದೆಗಳು ಕಾಣಿಸಿಕೊಳ್ಳುತ್ತಿವೆ. "ನಮ್ಮಲ್ಲಿ ಪ್ರತಿದಿನ 350ಕ್ಕೂ ಹೆಚ್ಚು ಅತಿಥಿಗಳಿರುತ್ತಾರೆ. ಗ್ಯಾಸ್ ಇಲ್ಲದ ಕಾರಣ ಅನಿವಾರ್ಯವಾಗಿ ಸೌದೆ ಒಲೆಗಳನ್ನು ಬಳಸುತ್ತಿದ್ದೇವೆ" ಎಂದು ಹೋಟೆಲ್ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಹೆಚ್ಚು ಗ್ಯಾಸ್ ಬಳಸುವ ಖಾದ್ಯಗಳ ಮೇಲೆ ಈ ಬಿಕ್ಕಟ್ಟು ನೇರ ಪರಿಣಾಮ ಬೀರಿದೆ. "ದೋಸೆ ತಯಾರಿಸಲು ತವಾ ಸದಾ ಬಿಸಿಯಾಗಿರಬೇಕು, ಇದಕ್ಕೆ ಹೆಚ್ಚು ಗ್ಯಾಸ್ ವ್ಯಯವಾಗುತ್ತದೆ. ನಮ್ಮಲ್ಲಿರುವ 4 ತವಾಗಳಲ್ಲಿ ಎರಡನ್ನು ಈಗಾಗಲೇ ಬಂದ್ ಮಾಡಿದ್ದೇವೆ" ಎಂದು ವಿದ್ಯಾರ್ಥಿ ಭವನದ ಮಾಲೀಕ ಅರುಣ್ ಅಡಿಗ ತಿಳಿಸಿದ್ದಾರೆ. "ನಾಳೆಯಿಂದ ದೋಸೆ ನೀಡುವುದು ಸಾಧ್ಯವಾಗಲಿಕ್ಕಿಲ್ಲ. ಬದಲಿಗೆ ಒಮ್ಮೆ ಬೇಯಿಸಿ ಇಡಬಹುದಾದ ಅನ್ನ-ಸಾಂಬಾರ್ನಂತಹ ಖಾದ್ಯಗಳತ್ತ ಗಮನ ಹರಿಸುತ್ತಿದ್ದೇವೆ" ಎನ್ನುತ್ತಾರೆ ನಿಸರ್ಗ ಗ್ರಾಂಡ್ ಹೋಟೆಲ್ ಮಾಲೀಕ ಕೃಷ್ಣರಾಜ್ ಕೊಯಮತ್ತೂರಿನ ಖ್ಯಾತ 'ಅನ್ನಪೂರ್ಣ' ಹೋಟೆಲ್ ಕೂಡ ಮೆನುವನ್ನು ಸೀಮಿತಗೊಳಿಸಿದೆ.
ವಾಣಿಜ್ಯ ಸಿಲಿಂಡರ್ನ ಅಧಿಕೃತ ಬೆಲೆ ಸುಮಾರು ₹1,940 ಇದ್ದರೆ, ಕಾಳಸಂತೆಯಲ್ಲಿ ₹2,800 ರಿಂದ ₹3,000 ನೀಡಿದರೂ ಸಿಲಿಂಡರ್ ಸಿಗುತ್ತಿಲ್ಲ. ತೈಲ ಕಂಪನಿಗಳು ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಮೊದಲ ಆದ್ಯತೆ ನೀಡುತ್ತಿರುವುದರಿಂದ ಹೋಟೆಲ್ಗಳಿಗೆ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಕೆಲವರು ಸೋಲಾರ್ ಅಥವಾ ಇಂಡಕ್ಷನ್ ಸ್ಟೌವ್ ಬಳಸಲು ಯೋಚಿಸುತ್ತಿದ್ದಾರಾದರೂ ಅದು ತಕ್ಷಣಕ್ಕೆ ಸಾಧ್ಯವಿಲ್ಲ. ಇಂಡಕ್ಷನ್ ಒಲೆಗಳಿಗೆ ಸುಮಾರು 20 ಕಿಲೋವ್ಯಾಟ್ನಷ್ಟು ಹೆಚ್ಚಿನ ವಿದ್ಯುತ್ ಲೋಡ್ ಬೇಕಾಗುತ್ತದೆ. ಅಲ್ಲದೆ, ಅದಕ್ಕೆ ಪೂರಕವಾದ ಪಾತ್ರೆಗಳನ್ನು ಹೊಸದಾಗಿ ಖರೀದಿಸುವುದು ಹೋಟೆಲ್ಗಳಿಗೆ ಆರ್ಥಿಕ ಹೊರೆಯಾಗಲಿದೆ.
ಚೆನ್ನೈ ಮೂಲದ 'ಅಡ್ಯಾರ್ ಆನಂದ ಭವನ' (A2B) ಬಳಿ ಕೇವಲ ಎರಡು ದಿನಕ್ಕೆ ಆಗುವಷ್ಟು ಮಾತ್ರ ಗ್ಯಾಸ್ ದಾಸ್ತಾನು ಇದೆ. ಇನ್ನೊಂದೆಡೆ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮಾರ್ಚ್ 10 ರಿಂದ ಬೆಂಗಳೂರಿನ ಹೋಟೆಲ್ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಸಿದೆ. ಪಶ್ಚಿಮ ಏಷ್ಯಾದಲ್ಲಿ ಇರಾನ್ ಒಳಗೊಂಡಂತೆ ನಡೆಯುತ್ತಿರುವ ಸಂಘರ್ಷದಿಂದಾಗಿ ನೈಸರ್ಗಿಕ ಅನಿಲ ರಫ್ತಿನಲ್ಲಿ ವ್ಯತ್ಯಯವಾಗಿದೆ. ಗೃಹಬಳಕೆಯ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು ಕೂಡ 21 ರಿಂದ 25 ದಿನಗಳಿಗೆ ಏರಿಸಲಾಗಿದೆ ಎಂಬ ವರದಿಗಳು ಬಿಕ್ಕಟ್ಟಿನ ತೀವ್ರತೆಯನ್ನು ಸಾರುತ್ತಿವೆ.