HAL: ದೇಶದಲ್ಲೇ ಮೊದಲು, ಎಚ್‌ಎಎಲ್‌ನಲ್ಲಿ ಉಪಗ್ರಹ ಬಳಸಿ ಹೆಲಿಕಾಪ್ಟರ್‌ ಲ್ಯಾಂಡ್‌

Published : Aug 08, 2026, 07:11 AM IST
HAL

ಸಾರಾಂಶ

ಬೆಂಗಳೂರಿನ ಎಚ್‌ಎಎಲ್ ಏರ್ಪೋರ್ಟ್, ಹೆಲಿಕಾಪ್ಟರ್‌ಗಳಿಗಾಗಿ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಈ ನೂತನ ತಂತ್ರಜ್ಞಾನವು ಲ್ಯಾಂಡಿಂಗ್ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಪ್ರತಿಕೂಲ ಹವಾಮಾನದಲ್ಲೂ ಸುರಕ್ಷಿತ ಲ್ಯಾಂಡಿಂಗ್‌ಗೆ ಸಹಕರಿಸುತ್ತದೆ.

ಬೆಂಗಳೂರು: ಹೆಲಿಕಾಪ್ಟರ್‌ಗಳಿಗೆ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಎಚ್‌ಎಎಲ್ ಏರ್ಪೋರ್ಟ್‌ನಲ್ಲಿ ಜಾರಿಗೆ ತರಲಾಗಿದೆ. ಇಂಥ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಎಚ್‌ಎಎಲ್ ಏರ್ಪೋರ್ಟ್‌ ಪಾತ್ರವಾಗಿದೆ.

ರಿಕ್ವೈರ್ಡ್ ನೇವಿಗೇಷನ್ ಪರ್ಫಾರ್ಮೆನ್ಸ್-ಕೆಟಗೆರಿ ಎಚ್ (ಆರ್‌ಎನ್‌ಪಿ-ಕೆಟಗೆರಿ ಎಚ್) ವ್ಯವಸ್ಥೆಯಿಂದ ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್ ಸಮಯ ಸರಾಸರಿ 12 ನಿಮಿಷಗಳಿಂದ 4 ನಿಮಿಷಕ್ಕೆ ಕಡಿಮೆಯಾಗಲಿದೆ.

ಹೆಲಿಕಾಪ್ಟರ್‌ಗಳ ಲ್ಯಾಂಡಿಂಗ್‌ಗಾಗಿ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅಭಿವೃದ್ಧಿಪಡಿಸಿದೆ. ಎಚ್‌ಎಎಲ್‌ನ ಪರೀಕ್ಷಾ ಪೈಲಟ್‌ಗಳು ಹಲವು ಹಂತಗಳಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಪರೀಕ್ಷೆ ಮೂಲಕ ನೂತನ ತಂತ್ರಜ್ಞಾನ ಬಳಕೆಗೆ ಯೋಗ್ಯವೆಂದು ಧೃಡೀಕರಿಸಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದಕ್ಕೆ ಅಂತಿಮ ಅನುಮೋದನೆ ನೀಡಿದೆ.

ಸಮಯ ಉಳಿತಾಯ:

ನೂತನ ವ್ಯವಸ್ಥೆಯು ನಗರ ಪ್ರದೇಶಗಳಲ್ಲಿನ ಏರ್ಪೋರ್ಟ್‌ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಎತ್ತರದ ಕಟ್ಟಡಗಳು ಮತ್ತಿತರ ಅಡೆತಡೆಗಳು ಇರುವ ಕಾರಣ ಹೆಲಿಕಾಪ್ಟರ್‌ ಅನ್ನು ನಿಖರವಾಗಿ ಲ್ಯಾಂಡಿಂಗ್ ಮಾಡಲು ಪೈಲಟ್‌ಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಆದರೆ, ನೂತನ ಉಪಗ್ರಹ ಆಧಾರಿತ ನ್ಯಾವಿಗೇಷನ್‌ನಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲೂ ನಿಖರವಾಗಿ ಮತ್ತು ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಬಹುದು ಎಂದು ಎಚ್‌ಎಎಲ್ ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಚ್‌ಎಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ರವಿ, ಭಾರತದ ಮೊದಲ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಎಚ್‌ಎಎಲ್‌ನಲ್ಲಿ ಪರಿಚಯಿಸಿರುವುದು ದೇಶದ ವಿಮಾನಯಾನ ವಲಯಕ್ಕೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ನೂತನ ವ್ಯವಸ್ಥೆಯನ್ನು ದೇಶದ ಇತರ ವಿಮಾನ ನಿಲ್ದಾಣಗಳಿಗೂ ಪರಿಚಯಿಸಬಹುದಾಗಿದೆ ಎಂದರು.

ಎಚ್‌ಎಎಲ್‌ನಲ್ಲಿ ಪ್ರತಿದಿನ ಸುಮಾರು 50 ಹೆಲಿಕಾಪ್ಟರ್‌ಗಳು ಲ್ಯಾಂಡಿಂಗ್ ಆಗುತ್ತವೆ. ಇಲ್ಲಿ ಈ ತಂತ್ರಜ್ಞಾನವು ಬಹುದಿನಗಳ ಕೊರತೆ ನೀಗಿಸಿದೆ. ಇದು ಏರ್ ಅಂಬ್ಯುಲೆನ್ಸ್ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ತ್ವರಿತ ಮತ್ತು ಸುರಕ್ಷಿತ ಮಾರ್ಗ ಒದಗಿಸುವ ಜೊತೆಗೆ ಶಬ್ದ ಮಾಲಿನ್ಯ ಮತ್ತು ಇಂಧನ ಬಳಕೆ ತಗ್ಗಿಸಲು ನೆರವಾಗಲಿದೆ ಎಂದು ಕೆ.ರವಿ ಹೇಳಿದ್ದಾರೆ.

PREV
Read more Articles on
click me!

Recommended Stories

ಸ್ಟಾರ್‌ ಹೋಟೆಲಲ್ಲಿ ಕೊಳೆತ ತರಕಾರಿ, ಹಳತಾದ ಮಾಂಸ! 26 ಹೋಟೆಲ್‌ ಮೇಲೆ ಆಹಾರ ಇಲಾಖೆ ದಾಳಿ!
‘ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ’: ಕೈಮಗ್ಗಕ್ಕೆ ಸರ್ಕಾರದ ಬಿಗ್ ಪ್ಲ್ಯಾನ್