2026ರ ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಮಾಣೆಕ್‌ ಷಾ ಮೈದಾನ ಸಜ್ಜು; ಈ ಬಾರಿ ಏನು ಹೊಸತು?

Published : Jan 25, 2026, 07:41 AM IST
manekshaw parade ground

ಸಾರಾಂಶ

ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ, 2 ಸಾವಿರಕ್ಕೂ ಹೆಚ್ಚು ಪೊಲೀಸರ ಭದ್ರತೆ ಜೊತೆಗೆ 30 ತುಕಡಿಗಳಿಂದ ಪಥ ಸಂಚಲನ ನಡೆಯಲಿದ್ದು, ಈ ಬಾರಿ ವಾಯುಸೇನೆಯ ಬೈಕ್‌ ಸಾಹಸ ಪ್ರದರ್ಶನ ಇರುವುದಿಲ್ಲ.

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸೋಮವಾರ ನಡೆಯಲಿರುವ 77ನೇ ಗಣರಾಜ್ಯೋತ್ಸವಕ್ಕೆ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತ್‌ಗೆ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ಗಣರಾಜ್ಯೋತ್ಸವಕ್ಕೆ ಪೂರ್ವಭಾವಿಯಾಗಿ ಜ. 22ರಿಂದ 24ರವರೆಗೆ ತಾಲೀಮು ಮಾಡಲಾಗಿದೆ. ಜ. 26ರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ಮಾಡಿ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ನಂತರ ರಾಜ್ಯದ ಜನರಿಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ನಂತರ ಪಥ ಸಂಚಲನ ನಡೆಯಲಿದೆ ಎಂದರು.

ಕಾರ್ಯಕ್ರಮ ವೀಕ್ಷಿಸಲು ಸುಮಾರು 10 ಸಾವಿರಕ್ಕೂ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಅತಿಗಣ್ಯರಿಗೆ ಮೂರು ಸಾವಿರ, ಆಡಳಿತಾಧಿಕಾರಿಗಳು, ಮಾಧ್ಯಮದವರಿಗೆ 3,200, ಸಾರ್ವಜನಿಕರಿಗೆ ನಾಲ್ಕು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಈ ಬಾರಿಯ ಕವಾಯತಿನಲ್ಲಿ ತಮಿಳುನಾಡಿನ ಪೊಲೀಸ್‌ ತಂಡ ಸೇರಿದಂತೆ ಭಾರತೀಯ ಸೇನೆ, ವಾಯು ಸೇನೆ, ಸಿಆರ್‌ಪಿಎಫ್‌, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಎನ್‌ಸಿಸಿ, ಸೇವಾದಳ ಮತ್ತು ವಿವಿಧ ಶಾಲೆಗಳ ತಂಡಗಳು ಸೇರಿದಂತೆ ಒಟ್ಟು 30 ತುಕಡಿಗಳ ಒಂದು ಸಾವಿರಕ್ಕೂ ಹೆಚ್ಚಿನವರು ಕವಾಯತಿನಲ್ಲಿ ಭಾಗವಹಿಸಲಿದ್ದಾರೆ. ಉಳಿದಂತೆ ಏಳು ಬ್ಯಾಂಡ್ ತಂಡಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.

100ಕ್ಕೂ ಹೆಚ್ಚು ಕ್ಯಾಮೆರಾ ಅಳವಡಿಕೆ

ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಮಾತನಾಡಿ, ಗಣರಾಜ್ಯೋತ್ಸವ ಕಾರ್ಯಕ್ರಮದಂದು ಭದ್ರತೆಗಾಗಿ ಎರಡು ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಮಾಣೆಕ್‌ ಶಾ ಪರೇಡ್‌ ಮೈದಾನದ ಸುತ್ತಲು 100ಕ್ಕೂ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಒದಗಿಸಲಾಗುತ್ತಿದೆ ಗಣ್ಯರ ಓಡಾಟ ಹೆಚ್ಚಿರುವ ಕಾರಣದಿಂದಾಗಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ 10-30ರವರೆಗೆ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗಿನ ಎರಡೂ ದಿಕ್ಕುಗಳಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದರು.

ಬೈಕ್‌ ಸಾಹಸ ಪ್ರದರ್ಶನ ಇಲ್ಲ

ಗಣರಾಜ್ಯೋತ್ಸವ ಅಂಗವಾಗಿ ಹೇರೋಹಳ್ಳಿಯ ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಕ್ರಾಂತಿ ಸಂಭ್ರಮ, ಬಾಗಲಕುಂಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಭಾರತದ ಏಕೀಕರಣ ಮತ್ತು ನವಭಾರತ ಹಾಗೂ ಪೊಲೀಸ್‌ ಇಲಾಖೆಯಿಂದ ಕರ್ನಾಟಕ ಪೊಲೀಸ್‌ ಸಾಮೂಹಿಕ ವಾದ್ಯಮೇಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಆದರೆ, ಪ್ರತಿ ಗಣರಾಜ್ಯೋತ್ಸವದ ಆಕರ್ಷಣೆಯಾಗಿದ್ದ ವಾಯುಸೇನೆಯ ಬೈಕ್‌ ಸಾಹಸ ತಂಡ ಟ್ರಾನಡೋಸ್‌ನ ಪ್ರದರ್ಶನ ಈ ಬಾರಿ ಇರುವುದಿಲ್ಲ. ಟ್ರಾನಡೋಸ್‌ ತಂಡವನ್ನು ಬೇರೆ ಕಡೆ ನಿಯೋಜಿಸಿರುವ ಕಾರಣದಿಂದಾಗಿ ಈ ಬಾರಿ ಬೈಕ್‌ ಸಾಹಸ ಪ್ರದರ್ಶನ ಇಲ್ಲದಂತಾಗಿದೆ.

ಇ-ಪಾಸ್‌ ವ್ಯವಸ್ಥೆ

ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಸುಲಭವಾಗಿ ಪಾಸ್‌ಗಳನ್ನು ನೀಡುವ ಉದ್ದೇಶದೊಂದಿಗೆ ಇ-ಪಾಸ್‌ ವ್ಯವಸ್ಥೆ ಮಾಡಲಾಗಿತ್ತು. ಆಸಕ್ತರು ಸೇವಾವಿಂದು ಪೋರ್ಟಲ್‌ನಲ್ಲಿ ಆಧಾರ್‌ ಸಂಖ್ಯೆ ಸೇರಿದಂತೆ ಮತ್ತಿತರ ಸೂಕ್ತ ದಾಖಲೆಗಳನ್ನು ನೀಡಿ ಪಾಸ್‌ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಒಟ್ಟು 2 ಸಾವಿರ ಇ-ಪಾಸ್‌ಗಳನ್ನು ನೀಡಲಾಗಿದೆ.

ಮೈದಾನದ ಪ್ರವೇಶ ದ್ವಾರದ ವಿವರ

ಗೇಟ್‌ 2: ಅತಿ ಗಣ್ಯ ವ್ಯಕ್ತಿಗಳು, ರಕ್ಷಣಾ ಇಲಾಖೆ, ಸರ್ಕಾರದ ಹಿರಿಯ ಅಧಿಕಾರಿಗಳು

ಗೇಟ್‌ 3: ಸಿಎಂ,ಡಿಸಿಎಂ, ಸಿಎಸ್‌, ಡಿಜಿ. ಐಜಿ, ರಕ್ಷಣಾ ಇಲಾಖೆ ಹಿರಿ ಅಧಿಕಾರಿಗಳು

ಗೇಟ್‌ 4: ಆಡಳಿತಾಧಿಕಾರಿಗಳು, ಮಾಧ್ಯಮದವರು

ಗೇಟ್‌ 5: ಸಾರ್ವಜನಿಕರು

 

PREV
Read more Articles on
click me!

Recommended Stories

ಮನೆ ಮುಂದೆ ಕಾರು ನಿಲ್ಲಿಸಿದ್ದಕ್ಕೆ ಕಾಂಗ್ರೆಸ್‌ ನಾಯಕನ ಕುಟುಂಬದವರ ಜತೆ ಸ್ಥಳೀಯರ ಜಗಳ
ಲ್ಯಾಂಬೊರ್ಗಿನಿ ಕಾರು ಅಪಾಯಕಾರಿ ಚಾಲನೆ ಕೇಸ್‌: ಮಾಲೀಕನ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ