
ಬೆಂಗಳೂರು (ಸೆ.11) ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಈಗಾಗಲೇ ಬೆಂಗಳೂರಿನ ಕೆಲೆವೆಡೆ ಚಿರತೆ ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ. ಕೆಲ ದಿನಗಳಿಂದ ನೆಮ್ಮದಿಯಿಂದ ಜನರಿಗೆ ಇದೀಗ ಮತ್ತೆ ಚಿರತೆ ಹಾವಳಿ ಶುರುವಾಗಿದೆ. ಈ ಬಾರಿ ಬೆಂಗಳೂರಿನ ಬನಶಂಕರಿಯ 6ನೇ ಸ್ಟೇಜ್ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಕೇಶವ್ ಎಂಬುವವರ ಮನೆ ಮುಂದೆ ಚಿರತೆ ಓಡಾಡುತ್ತಿರುವುದು ಪತ್ತೆಯಾಗಿದೆ. ಕೇಶವ್ ಮನೆ ಮುಂದೆ ಹಾಕಿರುವ ಸಿಸಿಟಿವಿಯಲ್ಲಿ ಚಿರತೆ ದೃಶ್ಯಗಳು ಸೆರೆಯಾಗಿದೆ. ಮನೆ ಮುಂಭಾಗ, ರಸ್ತೆಯಲ್ಲಿ ರಾಜಾರೋಷವಾಗಿ ಚಿರತೆ ಓಡಾಡುತ್ತಿದೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬನಶಂಕರಿ 6ನೇ ಸ್ಟೇಜ್ನಲ್ಲಿ ನಿನ್ನೆ (ಸೆ.10) ಮುಂಜಾನೆ ಚಿರತೆ ಕಾಣಿಸಿಕೊಂಡಿದೆ. ಕೇಶವ್ ಅನ್ನೋ ನಿವಾಸಿಯ ಮನೆ ಮುಂದೆ ಚಿರತೆ ಓಡಾಡಿದೆ. ನಾಯಿ ಬೊಗಳಿದ ಕಾರಣ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಬೆಳಗಿನ ಜಾವ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಮನೆ ಸುತ್ತು ಮುತ್ತ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಸಿಸಿಟಿವಿ ಪರಿಶೀಲಿಸಿದಾಗ ಚಿರತೆ ಪ್ರತ್ಯಕ್ಷವಾಗಿರುವುದು ಖಚಿತವಾಗಿದೆ.
ಬನಶಂಕರಿ 6ನೇ ಸ್ಟೇಜ್ನಲ್ಲಿ ಕಾಣಿಸಿಕೊಂಡ ಚಿರತೆ 2 ವರ್ಷದ ಗಂಡು ಚಿರತೆ ಎಂದು ಅರಣ್ಯ ಇಲಾಖೆ ಹೇಳಿದೆ. ಕೇಶವ್ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸಿಸಿಟಿವಿ ಪರಿಶೀಲಿಸಿದ್ದಾರೆ. ಇತ್ತ ಕೇಶವ್ ಈ ಕುರಿತು ಆತಂಕ ಹೊರಹಾಕಿದ್ದು, ಚಿರತೆ ಮನೆ ಮುಂದೆ ಬರುತ್ತಿದೆ ಎಂದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಅರಣ್ಯದಂಚಿನ ಪ್ರದೇಶವಾಗಿರುವ ಕಾರಣ ಚಿರತೆ ಬರುತ್ತಿದೆ.ಹೀಗಾಗಿ ಟ್ರೆಂಟ್ ಹಾಕಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಬರದಂತೆ ತಡೆಯಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಮಾಡಬೇಕು ಎಂದು ಕೇಶವ್ ಆಗ್ರಹಿಸಿದ್ದಾರೆ.
ಚಿರತೆ ಪ್ರತ್ಯಕ್ಷ ಎಂದರೆ ಮಕ್ಕಳು ಹೆಚ್ಚು ಜಾಗೃತೆ ವಹಿಸಬೇಕು. ಚಿರತೆಗಳು ಮಕ್ಕಳನ್ನು ಟಾರ್ಗೆಟ್ ಮಾಡಲಿದೆ. ಇದೀಗ ಮನೆಯಿಂದ ಹೊರಗೆ ಕಾಲಿಡಲು ಭಯಪಡುವ ಪರಿಸ್ಥಿತಿ ಇದೆ ಎಂದು ಕೇಶವ್ ಹೇಳಿದ್ದಾರೆ.