'ಸಿದ್ದರಾಮಯ್ಯಗೆ ಕೆಲಸವಿಲ್ಲ ಹೀಗಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ'

By Web DeskFirst Published Oct 26, 2019, 10:27 AM IST
Highlights

ಸ್ಪೀಕರ್‌ ವಿರುದ್ಧದ ಮಾತು ಸಿದ್ದರಾಮಯ್ಯಗೆ ಶೋಭೆಯಲ್ಲ:ಕಾರಜೋಳ| ನನಗೆ ತಿಳಿವಳಿಕೆ ಬಂದ ನಂತರ ಸ್ಪೀಕರ್‌ ವಿರುದ್ಧ ಯಾರು ಏಕವಚನದಲ್ಲಿ ಮಾತನಾಡಿಲ್ಲ| ಜೆಡಿಎಸ್‌ ಸಹವಾಸ ಮಾಡಿದ್ದೇ ತಪ್ಪಾಯಿತು ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ನಿಜವಿದೆ| 

ಬಾಗಲಕೋಟೆ(ಅ.26): ಸ್ಪೀಕರ್‌ ವಿರುದ್ಧ ಹಗುರವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಡಿಸಿಎಂ ಗೋವಿಂದ ಕಾರಜೋಳ ಸ್ಪೀಕರ್‌ ವಿರುದ್ಧ ಸಿದ್ದರಾಮಯ್ಯ ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತಿಳಿವಳಿಕೆ ಬಂದ ನಂತರ ಸ್ಪೀಕರ್‌ ವಿರುದ್ಧ ಯಾರು ಏಕವಚನದಲ್ಲಿ ಮಾತನಾಡಿಲ್ಲ. ಆದರೆ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡಿರುವುದು ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯಗೆ ಕೆಲಸವಿಲ್ಲ:

ನೆರೆ ಸಂಬಂಧ ಸಿದ್ದರಾಮಯ್ಯ ಅವರು ಪಾದಯಾತ್ರೆ ನಡೆಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಅವರಿಗೆ ಕೆಲಸ ಮಾಡೋಕೆ ಏನು ಇಲ್ಲ ಪ್ರತಿ ಪಕ್ಷದ ಸ್ಥಾನದಲ್ಲಿದ್ದಾರೆ. ಹೀಗಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಬೇಕಾಗುತಿತ್ತು. ಈಗ ಏನು ಕೆಲಸ ಇಲ್ಲದೆ ಇರುವುದರಿಂದ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ರಾಜಕಾರಣದಲ್ಲಿರುವವರು ಖಾಲಿ ಕುಳಿತುಕೊಳ್ಳಲು ಆಗುವುದಿಲ್ಲ. ನಿರಂತರ ಪ್ರಯತ್ನ ಮಾಡಬೇಕಾಗುತ್ತೆ ಎಂದು ಹೇಳಿದರು.
ನೆರೆ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಧಿ​ಕಾರಿಗಳ ಜೊತೆ ಕೇವಲ 5 ನಿಮಿಷದಲ್ಲಿ ಸಂವಾದ ಮಾಡಿರುವುದು ಮುಖ್ಯವಲ್ಲ. ಆದರೆ, ಆಗಸ್ಟ್‌ನಿಂದ ಇಲ್ಲಿಯವರೆಗೆ ಸರ್ಕಾರ ಏನು ಮಾಡಿದೆ ಎನ್ನುವುದು ಮುಖ್ಯ. ನೆರೆಗೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಜನ ದಡ್ಡರಲ್ಲ. ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಸಚಿವ ಸಿ.ಸಿ.ಪಾಟೀಲ ಅವರ ಹೇಳಿಕೆ ಸಹಜವಾಗಿ ಮಾತನಾಡಿದ್ದು, ಅದಕ್ಕೆ ವಿಶೇಷ ಅರ್ಥ ಬೇಡ. ಆದರೆ ತಾತ್ಕಾಲಿಕ ರಸ್ತೆ ದುರಸ್ತಿಯ 500 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದು ಎಲ್ಲವು ಸುಗಮವಾಗಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

ಜೆಡಿಎಸ್‌ ಸಹವಾಸ ಮಾಡಿದ್ದೇ ತಪ್ಪಾಯಿತು ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ನಿಜವಿದೆ. ಏಕೆಂದರೆ ಅವರ ಸಹವಾಸ ಮಾಡಿದಕ್ಕೆ ಮೈಸೂರು ಜಿಲ್ಲೆಯಿಂದ ಬಾಗಲಕೋಟೆ ಜಿಲ್ಲೆಗೆ ಬರಲು ಕಾರಣವಾಯಿತು ಎಂದು ಲೇವಡಿ ಮಾಡಿದರು.

click me!