ಮೊದಲಿಗೆ ಗುಂಡಿಟ್ಟು, ಬಳಿಕ 15 ಬಾರಿ ಚುಚ್ಚಿ ತಿವಾರಿ ಹತ್ಯೆ
ಲಖನೌನಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಹಿಂದೂ ಸಮಾಜದ ಮುಖಂಡ ಕಮಲೇಶ್ ತಿವಾರಿ ದೇಹಕ್ಕೆ 15 ಬಾರಿ ಚಾಕುವಿನಿಂದ ಇರಿಯಲಾಗಿತ್ತು. ಅಲ್ಲದೆ, ಅವರ ತಲೆಗೆ ಗುಂಡು ಹಾರಿಸಲಾಗಿತ್ತು ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ಹೊರಬಿದ್ದಿದೆ.
ಲಖನೌ [ಅ.24]: ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಹಿಂದೂ ಸಮಾಜದ ಮುಖಂಡ ಕಮಲೇಶ್ ತಿವಾರಿ ದೇಹಕ್ಕೆ 15 ಬಾರಿ ಚಾಕುವಿನಿಂದ ಇರಿಯಲಾಗಿತ್ತು. ಅಲ್ಲದೆ, ಅವರ ತಲೆಗೆ ಗುಂಡು ಹಾರಿಸಲಾಗಿತ್ತು ಎಂಬ ವಿಚಾರ ಮರಣೋತ್ತರ ಪರೀಕ್ಷೆಯ ವರದಿಯಿಂದ ಬಯಲಾಗಿದೆ.
ಕುತ್ತಿಗೆ ಭಾಗದಲ್ಲಿ ತೀವ್ರವಾಗಿ ಚಾಕು ಇರಿದ ಗುರುತುಗಳು ಪತ್ತೆಯಾಗಿದ್ದು, ಕಪಾಳ ಮತ್ತು ಎದೆಯವರೆಗಿನ ಭಾಗಗಳನ್ನು ಗುರಿಯಾಗಿಸಿಕೊಂಡೇ ಚಾಕು ಇರಿತ ನಡೆಸಲಾಗಿದೆ. 10 ಸೆಂ. ಮೀಟರ್ ಆಸುಪಾಸಿನಲ್ಲೇ ಚಾಕು ಇರಿತದ ಗಾಯದ ಗುರುತುಗಳು ಬಿದ್ದಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ತಿವಾರಿ ಮೇಲೆ ಗುಂಡಿನ ದಾಳಿ ಸಹ ನಡೆಸಲಾಗಿದ್ದು, ಅವರ ಗದ್ದದ ಭಾಗದಲ್ಲಿ ಒಂದು ಬುಲೆಟ್ ಪತ್ತೆಯಾಗಿದೆ ಎಂದು ವಿವರಿಸಲಾಗಿದೆ.
ತಿವಾರಿ ಟು ಒವೈಸಿ: ಸಾವರ್ಕರ್ ‘ಭಾರತ’ ವಿರೋಧಿಸುವ ‘ರತ್ನ’ಗಳು!...
ದುಷ್ಕರ್ಮಿಗಳು ಮೊದಲಿಗೆ ತಿವಾರಿ ಮೇಲೆ ಗುಂಡು ಹಾರಿಸಿದ್ದಾರೆ. ಆ ನಂತರ, ಪಿಸ್ತೂಲ್ನಿಂದ 2ನೇ ಗುಂಡು ಹಾರಿಸಲು ಸಾಧ್ಯವಾಗದೇ ಇರುವುದರಿಂದಾಗಿ, ದುಷ್ಕರ್ಮಿಗಳು ಚಾಕು ಮತ್ತು ಇನ್ನಿತರ ಚೂಪಾದ ಆಯುಧಗಳಿಂದ ದಾಳಿ ಮಾಡಿರಬಹುದಾದ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಳೆದ ಶುಕ್ರವಾರ ಲಖನೌನ ನಾಕಾ ಹಿಂಡೋಲಾದಲ್ಲಿರುವ ತಮ್ಮ ನಿವಾಸದ ಬಳಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ತಿವಾರಿ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು.