Asianet Suvarna News Asianet Suvarna News

ಮಳೆ ಬಂದಿಲ್ಲ, ಕೃಷಿ ಕೆಲಸ ಆರಂಭವಾಗಿಲ್ಲ, ಹೊರನಾಡಿಗೆ ಹೋಗಿ ಬಂದರೆ ಹೇಗೆ?

ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಬಿತ್ತನೆಗೆ ಸಿದ್ಧಾನದ ಅನ್ನದಾತನಿಗೆ ದಿನಾಲೂ ಆಕಾಶ ನೋಡುವುದು ಕೆಲಸವಾಗಿದೆ. ಮಳೆಗಾಗಿ ಪ್ರಾರ್ಥಿಸುವುದು ಬಿಟ್ಟರೆ ಬೇರೆ ದಾರಿ ಗೊತ್ತಾಗುತ್ತಿಲ್ಲ. ಇಂಥ ಕೃಷಿಕರ ಕೈ ಹಿಡಿಯೋದು ಹೊರನಾಡ ಅನ್ನಪೂರ್ಣೇಶ್ವರಿ. 

Annapoorneshwari temple of Horanadu in Chikkamaglauru district good for farmers
Author
First Published Jun 24, 2023, 3:16 PM IST | Last Updated Jun 24, 2023, 3:16 PM IST

- ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು : ದೇವಸ್ಥಾನಗಳು  ಒಂದಲ್ಲೊಂದು ವೈಶಿಷ್ಟತೆಗಳಿಂದ  ಕೂಡಿರುತ್ತದೆ. ಇದರಲ್ಲಿ ಕೃಷಿಕರ ಆರಾಧ್ಯ ದೇವ ಎಂದೇ ಪ್ರಸಿದ್ದ ಪಡೆದ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನವೂ ಒಂದು. ಪ್ರತಿನಿತ್ಯವೂ ಭಕ್ತರಿಗೆ ಅನ್ನದಾನ ಮಾಡುವ ಮೂಲಕವೇ ಈ ಆದಿಶಕ್ತಿ ಅನ್ನಪೂಣೇಶ್ವರಿ ದೇವಾಲಯ  ಪ್ರಸಿದ್ದಿ. ಭದ್ರಾನದಿ ತೀರದಲ್ಲಿ ನೆಲೆಸಿರುವ ಆದಿಶಕ್ತಿ ಅನ್ನಪೂಣೇಶ್ವರಿ ದರ್ಶನವನ್ನು ಪಡೆಯಲು ಹೊರ ರಾಜ್ಯಗಳಿಂದಲೂ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಜಿಲ್ಲಾ ಕೇಂದ್ರದಿಂದ 100 ಕಿಲೋ ದೂರ: 
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ 100 ಕಿಲೋ ಮೀಟರ್ ದೂರದಲ್ಲಿರುವ ಹೊರನಾಡಿನ ಅನ್ನಪೂಣೇಶ್ವರಿ ದೇವಸ್ಥಾನ. ಕಳಸ ತಾಲೂಕಿನ ಹೊರನಾಡಿಗೆ ಬರಲು ಮೂಡಿಗೆರೆ ಟು ಕೊಟ್ಟಿಗೆಹಾರ ಒಂದು ದಾರಿಯಾದರೆ, ಮತ್ತೊಂದು ಬಾಳೆಹೊನ್ನೂರು ಟು ಮಾಗುಂಡಿ ಮೂಲಕವೂ ಹೊರನಾಡಿಗೆ ಬರಬಹುದು. ದಟ್ಟವಾದ ಅರಣ್ಯ, ಕಾಫಿ ತೋಟಗಳ ಮಧ್ಯೆ ಎದುರಾಗುವುದೇ ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂಣೇಶ್ವರಿ ಸನ್ನಿಧಿ. ಜೀರ್ಣೋದ್ಧಾರಗೊಂಡು ಆದಿ ಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಎಂದು ಮರುನಾಮಕರಣ ಮಾಡಲಾಗಿದೆ. ನೈಸರ್ಗಿಕ ಸಸ್ಯವರ್ಗದ ಹಸಿರು ಅರಣ್ಯ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯದಿಂದ ಈ ದೇವಸ್ಥಾನ ಆವೃತ್ತವಾಗಿದೆ. ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ಪ್ರತಿಷ್ಠಾಪನೆಯನ್ನು ಅಗಸ್ತ್ಯ ಮಹರ್ಷಿಗಳು ನಾಲ್ಕು ಶತಮಾನಗಳ ಹಿಂದೆಯೇ ಮಾಡಿದ್ದರು. ದೇವಾಲಯದ ಆವರಣವು ಯಾವಾಗಲೂ ತೆರೆದಿರುತ್ತದೆ. ಯಾತ್ರಾರ್ಥಿಗಳಿಗೆ ಉಚಿತ ಆಹಾರ, ಕಡಿಮೆ ದರದಲ್ಲಿ ಆಶ್ರಯವೂ ಇಲ್ಲಿದೆ.  ಪ್ರಸಾದದ ಊಟವನ್ನು ಮಧ್ಯಾಹ್ನ 12:00 ರಿಂದ 2:30ರವರೆಗೆ ರಾತ್ರಿ ಭೋಜನ ಪ್ರಸಾದ ಊಟವನ್ನು 7ರಿಂದ ರಾತ್ರಿ 9:00 ರ ನಡುವೆ ನೀಡಲಾಗುತ್ತದೆ. ದೇವಸ್ಥಾನ ಆವರಣದಲ್ಲಿ ಮೂರು ಯಾತ್ರಿ ನಿವಾಸಿಗಳಿದ್ದು, ಕಡಿಮೆ ದರದಲ್ಲಿ ವಸತಿ ವ್ಯವಸ್ಥೆಯೂ ಇದೆ. ಬರುವ ಭಕ್ತರ ಅನುಕೂಲಕ್ಕಾಗಿ ಪಾರ್ಕೀಂಗ್, ಶೌಚಾಲಯದ ವ್ಯವಸ್ಥೆಗೇನೂ ಕುಂದಿಲ್ಲ. 

Annapoorneshwari temple of Horanadu in Chikkamaglauru district good for farmers
 
ದೇವಸ್ಥಾನದ ಇತಿಹಾಸ : 
ಸುಮಾರು 400 ವರ್ಷಗಳ ಹಿಂದೆ 5ನೇ ಧರ್ಮಕರ್ತರವರೆಗೆ ಒಂದು ಸಣ್ಣ ಪೂಜಾ ಸ್ಥಳವಾಗಿತ್ತು ಈ ದೇವಸ್ಥಾನ. ಜ್ಯೋತಿಷ್ಯ ವಾಸ್ತುಶಿಲ್ಪ ಮತ್ತು ಹಿಂದೂ ಪುರಾಣಗಳ ಎಲ್ಲಾ ಮಾರ್ಗಸೂಚಿಗಳನ್ನು ಪೂರೈಸಿದ ಅನ್ನಪೂರ್ಣೇಶ್ವರಿ ದೇವಿಯ ಸಂಪೂರ್ಣ ಅಲಂಕರಿಸಿದ ಕಲ್ಲಿನ ಶಿಲ್ಪದೊಂದಿಗೆ ಅನ್ನಪೂರ್ಣೇಶ್ವರಿ ದೇವಸ್ಥಾನದ ನವೀಕರಣವು 1962ರಲ್ಲಾಯಿತು. ಶೃಂಗೇರಿ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರಿಂದ ಮಹಾಕುಂಭಾಭಿಷೇಕವೂ ನೆರವೇರಿದೆ. ಚಿನ್ನದಿಂದ ಮಾಡಲ್ಪಟ್ಟ ಈ ದೇವಿಯ ದೈವಿಕ ವಿಗ್ರಹ, ಆಭರಣಗಳೊಂದಿಗೆ ಪ್ರಜ್ವಲಿಸುವುದನ್ನು ನೋಡುವುದೇ ಭಕ್ತರಿಗೊಂದು ಭಾಗ್ಯ . ದೇವಿಯ ಕೈಯಲ್ಲಿ ಶಂಖ, ಶ್ರೀ ಚಕ್ರ , ದೇವಿ ಗಾಯತ್ರಿಯನ್ನು ಹಿಡಿದು ನೆಲೆ ನಿಂತಿದ್ದಾಳೆ. ಕೃಷಿಕರ ಆರಾಧ್ಯದೇವತೆಯಾಗಿರುವ ಅನ್ನಪೂರ್ಣೇಶ್ವರಿ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. 

ಮಗುವಿಗೆ ಅಕ್ಷರಾಭ್ಯಾಸ ಮಾಡಿಸಲು ಶೃಂಗೇರಿಗೆ ಹೋಗಬೇಕಾ? ಹೀಗ್ ಮಾಡಿ

ರಥೋತ್ಸವ:  
ಪ್ರತಿ ವರ್ಷ ಫೆಬ್ರವರಿಯಿಂದ ಮಾರ್ಚ್‌ನಲ್ಲಿ ಐದು ದಿನ ರಥೋತ್ಸವ ಆಚರಿಸಲಾಗುತ್ತದೆ. ಅಕ್ಷಯ ತೃತೀಯದಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.  ಇದು ಅನ್ನಪೂರ್ಣೇಶ್ವರಿ ದೇವಿಯ ಜನನ ಮತ್ತು ಬೇಸಿಗೆಯ ಆರಂಭವನ್ನು ಗುರುತಿಸುವುದರಿಂದ ಪ್ರತಿ ವರ್ಷವೂ ಏಪ್ರಿಲ್ ಮತ್ತು ಮೇ ನಡುವೆ ಆಚರಿಸಲಾಗುತ್ತದೆ. ಇನ್ನು ನವರಾತ್ರಿಯಲ್ಲಿ ದುರ್ಗಾ ದೇವಿಯ ಒಂಬತ್ತು ದೈವಿಕ ರೂಪಗಳಿಗೆ ಮೀಸಲಾದ ಒಂಬತ್ತು ದಿನಗಳ ಹಬ್ಬವನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಎರಡು ಕಣ್ಣು ಸಾಲದು.

ಹೊರನಾಡಿಗೆ ತಲುಪುವುದು ಹೇಗೆ?: 
ಭಕ್ತರು ಸ್ವಂತ ವಾಹನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ರಾಜ್ಯದ ಎಲ್ಲಾ ಪ್ರಮುಖ ಜಿಲ್ಲೆಗಳಿಂದ KSRTC ಬಸ್ಸುಗಳ ಉತ್ತಮ ಸಂಪರ್ಕವಿದೆ. ಇದರ ಜೊತೆ ಖಾಸಗಿ ಬಸ್ಸುಗಳೂ ಇವೆ. ರೈಲು, ವಿಮಾನದ ಸೌಲಭ್ಯ ಮಂಗಳೂರು ತನಕವಿದ್ದು ಅಲ್ಲಿಯಿಂದ ರಸ್ತೆ ಮೂಲಕವೇ ಹೊರನಾಡಿಗೆ ಬರಬೇಕು. 

ಬೆಂಗಳೂರಿನಿಂದ ಕೇದಾರನಾಥಕ್ಕೆ ಪ್ರಯಾಣ ವೆಚ್ಚ ಎಷ್ಟು? ಹೋಗೋದು ಹೇಗೆ?

Latest Videos
Follow Us:
Download App:
  • android
  • ios