ಬಿಳಿ ಪಂಚೆ, ಶರ್ಟ್ ತೊಟ್ಟು ಸಕ್ರಿಯ ರಾಜಕಾರಣದಲ್ಲಿ ಅಣ್ಣಾಮಲೈ ಈಗ ಬ್ಯುಸಿಯಾಗಿರಬಹುದು. ಆದರೆ, ಕನ್ನಡಿಗರ ಅಚ್ಚುಮೆಚ್ಚಿನ ಸಿಂಗಂ ಖ್ಯಾತಿ ಕಾಕಿ ಡ್ರೆಸ್‌ನ ಅಣ್ಣಾಮಲೈ ಪರ್ಸನಲ್ ಲೈಫ್ ಹೇಳಿ ಕೊಂಡಿದ್ದು ಕಡಿಮೆ. ಈಗ ಮಡದಿ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ!

ಕರ್ನಾಟಕದ ಸಿಂಗಂ ಎನಿಸಿಕೊಂಡಿದ್ದ‌ ಮಾಜಿ ಪೊಲೀಸ್ ಅಧಿಕಾರಿ, ತಮಿಳುನಾಡು‌ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಈಗ ಸಕ್ರಿಯ ರಾಜಕಾರಣಿ. ತಮಿಳುನಾಡಿನಲ್ಲಿ ಶತಾಯಗತಾಯ ಬಿಜೆಪಿ ನೆಲೆಯೂರಿಸಬೇಕೆಂದು ಟೊಂಕ ಕಟ್ಟಿ‌ನಿಂತಿರೋ ಅಣ್ಣಾಮಲೈ, ದಿನಕ್ಕೊಂದು ವಿವಾದದಲ್ಲಿಯೂ ಸಿಲುಕುತ್ತಿದ್ದಾರೆ. ಆಡಳಿತರೂಢ ಡಿಎಂಕೆ ಜತೆಗೆ ಅಣ್ಣಾಮಲೈ ಮುಗಿ ಬೀಳೋದು ಇತ್ತೀಚೆಗೆ ಸರ್ವೆ ಸಾಮಾನ್ಯವಾಗಿದೆ. ಕರ್ನಾಟಕದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಹೆಸರು ಮಾಡಿದ್ದ ಅಣ್ಣಾಮಲೈ, ಈಗ ರಾಜಕೀಯದಲ್ಲೂ ಸಖತ್ ಸುದ್ದಿಯಲ್ಲಿರ್ತಾರೆ. ಅಷ್ಟಕ್ಕೂ ಈಗ ಅಣ್ಣಾಮಲೈ ‌ಹೊಸದೊಂದು ವಿಚಾರದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದ್ದಾರೆ. ಅದು ಅವರ ಖಾಸಗಿ‌ ಬದುಕು, ಪತ್ನಿ, ಮದುವೆ, ಪ್ರೀತಿಯ ಬಗ್ಗೆ ಅಣ್ಣಾಮಲೈ ‌ಮುಕ್ತವಾಗಿ ಮಾತನಾಡಿರೋದು ಜನರ ಮನಸೆಳೆದಿದೆ.

Add Asianetnews Kannada as a Preferred SourcegooglePreferred

ಇದುವರೆಗೂ ಒಮ್ಮೆಯೂ ಸಾರ್ವಜನಿಕವಾಗಿ‌ ತನ್ನ ಪತ್ನಿ (Wife), ಮಗ (Son) ಕುಟುಂಬದ (Family) ಬಗ್ಗೆ ಗುಟ್ಟುಬಿಟ್ಟು ಕೊಡದ ಅಣ್ಣಾಮಲೈ, ಮೊದಲ ಬಾರಿಗೆ ತಮ್ಮ ಪ್ರೀತಿ (Love), ಮದುವೆ (Wedding), ಪತ್ನಿಯ ಬಗ್ಗೆ ತಮಿಳಿನ ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಅಣ್ಣಾಮಲೈ ಪತ್ನಿ ಹೆಸರು ಅಖಿಲಾ ಸ್ವಾಮಿನಾಥನ್. ಮೂಲತಃ ಕೊಯಮೂತ್ತಿನ ಉದ್ಯಮಿಯ ಪುತ್ರಿ ಅಖಿಲಾ, ಹುಟ್ಟಿದ್ದು, ಬೆಳೆದದ್ದು ಬೆಂಗಳೂರಿನಲ್ಲಿ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. 

ಅಣ್ಣಾಮಲೈಗೆ ಸಿಕ್ಕಿದೆ ಅಮಿತ ಬಲ: 6 ತಿಂಗಳಲ್ಲಿ ಬದಲಾಗುತ್ತಾ ದ್ರಾವಿಡ ರಾಜ್ಯದ ರಾಜಕೀಯ!?

ಅಣ್ಣಾಮಲೈ- ಅಖಿಲಾ ಒಂದೇ ಕಾಲೇಜಿನಲ್ಲಿ ‌ಓದಿದವರು. ಅಣ್ಣಾಮಲೈ ಮೆಕಾನಿಕಲ್, ಅಖಿಲಾ‌ ಕಂಪ್ಯೂಟರ್ ಸೈನ್ಸ್ ಓದಿದವರು. ಇಬ್ಬರ ಸ್ಚಭಾವವೂ ತದ್ವಿರುದ್ಧ. ‌ಅಣ್ಣಾಮಲೈ ತುಂಬಾ ಅಗ್ರೆಸಿವ್, ಖಡಕ್. ಅಖಿಲಾ ಮಿತಭಾಷಿ, ಮೃದು ಸ್ವಭಾವದ ಹುಡುಗಿ. ಈ ತದ್ವಿರುದ್ಧ ಸ್ವಭಾವವೇ ಇಬ್ಬರನ್ನೂ ಪ್ರೀತಿಯ ಬಲೆಯಲ್ಲಿ ಸಿಲುಕಿಸಿತ್ತು. ಬೆಂಗಳೂರಿನ IIMನಲ್ಲಿ ಓದು‌‌ ಮುಗಿಸಿದ್ದ ಅಖಿಲಾ, ದೇಶದ ಟಾಪ್ ಐಟಿ‌ ಕಂಪನಿಗಳಲ್ಲಿ ಕೆಲಸ ‌ಗಿಟ್ಟಿಸಿದ್ರು. ತುಂಬಾ ಬುದ್ದಿವಂತ ಹೆಣ್ಣು ಮಗಳು ಅಖಿಲಾ ಮನಸ್ಸು ‌ಮಾಡಿದ್ರೆ ಐಟಿ ಕಂಪನಿಗಳಲ್ಲಿ ದೊಡ್ಡ ಹುದ್ದೆ ಏರಬಹುದಾಗಿತ್ತು. ಆ ಸಾಮರ್ಥ್ಯವೂ ಆಕೆಗಿತ್ತು. ಆದ್ರೆ ಪತಿ ಅಣ್ಣಾಮಲೈ ಸಾಧನೆಗಾಗಿ ‌ತನ್ನ ವೃತ್ತಿ ಬದುಕು ‌ಬಲಿ ಕೊಟ್ಟವರು ಅಖಿಲಾ ಸ್ವಾಮಿನಾಥನ್. 

'ನನ್ನ ರಾಜಕೀಯ ಏಳಿಗೆಗಾಗಿ, ನನ್ನ ಗೆಲುವಿಗಾಗಿ ಅಖಿಲಾ‌ ತನ್ನ ಕೆರಿಯರ್ ಅನ್ನೇ ಬಿಟ್ಟಳು. ಆಕೆ ನನಗಿಂತ‌ ಒಳ್ಳೆಯ ಪತಿ ಪಡೆಯಲು ಎಲ್ಲ ರೀತಿಯಲ್ಲೂ ಅರ್ಹಳು. ಆದ್ರೆ‌ ತಾನು ಪ್ರೀತಿಸಿದ ವ್ಯಕ್ತಿಗಾಗಿ ತನ್ನ ಜೀವನವನ್ನೇ‌ ಸಂಪೂರ್ಣ ತ್ಯಾಗ ಮಾಡಿದಳು. ಅವಳ‌ ತ್ಯಾಗಕ್ಕೆ ಯಾವುದೂ ಸರಿ ಸಾಟಿ ಇಲ್ಲ,' ಎಂದು ಭಾವುಕರಾಗಿ ಮಾತನಾಡಿದ್ದಾರೆ ಅಣ್ಣಾಮಲೈ. ‌

ತಮಿಳುನಾಡಿನಲ್ಲಿ 6 ತಿಂಗಳ ಕಾಲ ಅಣ್ಣಾಮಲೈ ಪಾದಯಾತ್ರೆ; ರಾಮೇಶ್ವರಂನಲ್ಲಿ ಅಮಿತ್‌ ಶಾ ಚಾಲನೆ

ಅಣ್ಣಾಮಲೈ ‌ಮತ್ತು ಅಖಿಲಾ ಮೇಡ್‌ ಫಾರ್‌ ಈಚ್ ಅದರ್ (Made for Each Other) ಎಂಬಂಥ‌ ಜೋಡಿ. ತಮ್ಮ ಕುಟುಂಬವನ್ನು ‌ಸಾರ್ವಜನಿಕ‌ರಿಂದ ದೂರ ಇಟ್ಟವರು. ಅಖಿಲಾ‌ ಯಾವ ಸಮಾರಂಭದಲ್ಲೂ ಕಾಣಿಸಿಕೊಳ್ಳಲ್ಲ. ಕುಟುಂಬದ ಫೋಟೋ ಸಹ ಹೊರಬಾರದಂತೆ ನೋಡಿಕೊಳ್ಳುವ ಅಖಿಲಾ, ಮಗನ ಓದು, ಕುಟುಂಬ‌‌‌‌ ನಿರ್ವಹಣೆಯಲ್ಲಿ ಬ್ಯುಸಿ.‌ ಪತಿ ಅಣ್ಣಾಮಲೈ ‌ರಾಜಕೀಯ ಜೀವನದ ಯಶಸ್ಸಿಗಾಗಿ ತನ್ನ ಕೆರಿಯರ್ ತೊರೆದು, ಗಂಡನಿಗೆ ಹೆಗಲಾಗಿ ನಿಂತ ಅಖಿಲರಂಥವರಿಂದಲೇ ಪುರುಷರು ಸಾಧನೆ‌ ಮಾಡೋದು ಸಾಧ್ಯವಾಗಿರೋದು!

ಅಂದ ಹಾಗೆ ಅಣ್ಣಾಮಲೈ ಚಿಕ್ಕಮಗಳೂರು, ಉಡುಪಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕನ್ನಡಿಗರ ಮನ ಗೆದ್ದವರು. ಆದರೆ, ಮೋದಿ ಆಡಳಿತದಿಂದ ಪ್ರೇರೇಪಿತರಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ ಈಗ.