ಮಹಿಳೆಯರ ಜತೆಗೆ ಪುರುಷರು ಸಹ ಕುಟುಂಬ ಸದಸ್ಯರ ಅರ್ಜಿ ನೋಂದಣಿಗೆ ಆಗಮಿಸಿದ್ದರು. ಅಂತ್ಯೋದಯ, ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರ ಮಹಿಳಾ ಯಜಮಾನಿಗೆ ಮಾತ್ರ ಯೋಜನೆ ಅನ್ವಯವಾಗುವುದರಿಂದ ಪಡಿತರ ಕಾರ್ಡ್‌ಗಳೊಂದಿಗೆ ಕಾರ್ಡ್‌ನ ಮುಖ್ಯ ಮಹಿಳಾ ಯಜಮಾನಿಗಳು ಹಾಗೂ ಕುಟುಂಬ ಸದಸ್ಯರು ಸೈಬರ್‌ ಕೇಂದ್ರಗಳಲ್ಲಿ ಜಮಾವಣೆಗೊಂಡಿದ್ದರು.

ಬಳ್ಳಾರಿ(ಜು.20): ಮಹಿಳಾ ಸಬಲೀಕರಣ ಆಶಯದ ರಾಜ್ಯ ಸರ್ಕಾರದ ಮಹತ್ವದ ‘ಗೃಹಲಕ್ಷ್ಮಿ’ ಯೋಜನೆ ನೋಂದಣಿಗೆ ಕ್ಷಣಗಣನೆ ಶುರುವಾಗಿದ್ದು, ನಗರದ ಬಳ್ಳಾರಿ ಒನ್‌, ಗ್ರಾಮೀಣ ಒನ್‌ ಹಾಗೂ ಸೈಬರ್‌ ಕೇಂದ್ರಗಳಲ್ಲಿ ಜನರು ಅರ್ಜಿ ಸಲ್ಲಿಸಲು ಜಮಾಯಿಸಿದ ದೃಶ್ಯ ಕಂಡುಬಂತು. ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ ಶುರುವಾಗಿರುವುದರಿಂದ ಕೆಲವು ನೋಂದಣಿ ಕೇಂದ್ರಗಳಲ್ಲಿ ಮಾತ್ರ ಜನಜಂಗುಳಿ ಕಂಡುಬಂತು. ಉಳಿದೆಡೆ ಜನರ ಆಗಮನ ಸಾಧಾರಣವಾಗಿತ್ತು.

Add Asianetnews Kannada as a Preferred SourcegooglePreferred

ನಗರದ ಬೆಂಗಳೂರು ರಸ್ತೆ, ರಾಯಲ್‌ ವೃತ್ತ, ಕಪ್ಪಗಲ್‌ ರಸ್ತೆ, ಜಿಲ್ಲಾಧಿಕಾರಿ ಕಚೇರಿ ವೃತ್ತದ ಬಳಿಯ ಖಾಸಗಿ ಸೈಬರ್‌ ಕೇಂದ್ರಗಳಲ್ಲಿ ‘ಗೃಹಲಕ್ಷ್ಮಿ’ ಯೋಜನೆಯ ಅರ್ಜಿ ಸಲ್ಲಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಮಹಿಳೆಯರ ಜತೆಗೆ ಪುರುಷರು ಸಹ ಕುಟುಂಬ ಸದಸ್ಯರ ಅರ್ಜಿ ನೋಂದಣಿಗೆ ಆಗಮಿಸಿದ್ದರು. ಅಂತ್ಯೋದಯ, ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರ ಮಹಿಳಾ ಯಜಮಾನಿಗೆ ಮಾತ್ರ ಯೋಜನೆ ಅನ್ವಯವಾಗುವುದರಿಂದ ಪಡಿತರ ಕಾರ್ಡ್‌ಗಳೊಂದಿಗೆ ಕಾರ್ಡ್‌ನ ಮುಖ್ಯ ಮಹಿಳಾ ಯಜಮಾನಿಗಳು ಹಾಗೂ ಕುಟುಂಬ ಸದಸ್ಯರು ಸೈಬರ್‌ ಕೇಂದ್ರಗಳಲ್ಲಿ ಜಮಾವಣೆಗೊಂಡಿದ್ದರು.

ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ

ಮೊಬೈಲ್‌ಗಳ ಮೂಲಕ ನೋಂದಣಿಗೆ ಅವಕಾಶವಿಲ್ಲವಾದ್ದರಿಂದ ಅರ್ಹ ಯೋಜನೆಯ ನಗರ ವ್ಯಾಪ್ತಿಯ ಫಲಾನುಭವಿಗಳು ನೇರವಾಗಿ ಖಾಸಗಿ ಸೈಬರ್‌ ಕೇಂದ್ರಗಳು, ಬಳ್ಳಾರಿ ಒನ್‌ ಕೇಂದ್ರಗಳಿಗೆ ತೆರಳಿ ನೋಂದಣಿಗೆ ಕಾದು ಕುಳಿತಿದ್ದರು. ಬೆಳಗ್ಗೆ ಕೆಲ ಹೊತ್ತು ಸೈಬರ್‌ ಕೇಂದ್ರಗಳು ಹಾಗೂ ಬಳ್ಳಾರಿ ಒನ್‌ ಕೇಂದ್ರಗಳಲ್ಲಿ ಸರ್ವರ್‌ ಸಮಸ್ಯೆ ಕಾಡಿತು. ಬಳಿಕ ಸರಿಯಾಯಿತು.

ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಒನ್‌ ಕೇಂದ್ರಗಳಿದ್ದು, ಸಾರ್ವಜನಿಕರು ಆತುರ ಮಾಡದೆ ಅರ್ಜಿಯನ್ನು ನೋಂದಾಯಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್‌ ತಿಳಿಸಿದರು.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಬುಧವಾರ ಜಿಲ್ಲೆಯ ಎಲ್ಲ ಕಡೆ ‘ಗೃಹಲಕ್ಷ್ಮಿ’ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುಗೊಂಡಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 135 ಸೇವಾ ಕೇಂದ್ರಗಳಿವೆ. ಈ ಪೈಕಿ ಬಳ್ಳಾರಿಯಲ್ಲಿರುವ 35 ಸೇವಾ ಕೇಂದ್ರಗಳಿವೆ. ಇದಲ್ಲದೆ ಖಾಸಗಿ ವೆಬ್‌ಸೈಟ್‌ ಕೇಂದ್ರಗಳಿಗೂ ತೆರಳಿ ಅರ್ಜಿಯನ್ನು ನೋಂದಾಯಿಸಿಕೊಳ್ಳಬಹುದು ಎಂದರು.

ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಲು ಯಾವೆಲ್ಲ ದಾಖಲೆಗಳು ಅಗತ್ಯ: ಯಾರು ಅರ್ಜಿ ಸಲ್ಲಿಸಬಹುದು?

‘ಗೃಹಲಕ್ಷ್ಮಿ’ ಯೋಜನೆಗೆ ಅರ್ಜಿ ಹಾಕಲು ಬಂದಿರುವೆ. ಮುಂದಿನ ತಿಂಗಳಿನಿಂದ ದುಡ್ಡ ಹಾಕ್ತಾರ ಅಂತಾರ ಎಂದು ಹೇಳ್ತಾ ಇದ್ದಾರೆ. ಪ್ರತಿ ತಿಂಗಳು ಎರಡು ಸಾವಿರ ಕೊಟ್ರೆ ಹೆಚ್ಚು ಅನುಕೂಲ ಆಗ್ತೈತೆ ಎಂದು ಬಳ್ಳಾರಿ ಹುಸೇನ್‌ನಗರ ನಿವಾಸಿ ಲಕ್ಷ್ಮಮ್ಮ ತಿಳಿಸಿದ್ದಾರೆ. 

‘ಗೃಹಲಕ್ಷ್ಮಿ’ ಯೋಜನೆಯಿಂದ ಹೆಣ್ಣುಮಕ್ಕಳಿಗೆ ಹೆಚ್ಚು ಅನುಕೂಲ ಆಗ್ತೈತೆ. ತಿಂಗಳಿಗೆ ಒಂದಿಷ್ಟುಹಣ ಬಂದರೆ ಸಣ್ಣಪುಟ್ಟ ಖರ್ಚುಗಳನ್ನು ಹೊಂದಿಸಬಹುದು ಅಂತ ಬಳ್ಳಾರಿ ವಿಶಾಲನಗರ ನಿವಾಸಿ ರುದ್ರಾಣಿ ಹೇಳಿದ್ದಾರೆ. 
ಸರ್ಕಾರ ಒಳ್ಳೇ ಕೆಲಸ ಮಾಡೈತೆ. ಹೆಣ್ಣು ಮಕ್ಕಳಿಗೆ ಬಸ್‌ ಫ್ರೀ ಮಾಡ್ಯಾರ. ತಿಂಗ್ಳಿಗೆ ಎರಡು ಸಾವಿರ ಹಾಕ್ತಾರ. ಇದರಿಂದ ಮನೆ ಖರ್ಚು ನಡೆದು ಹೋಗ್ತೈತೆ ಎಂದು ಬಳ್ಳಾರಿ ತಾಲೂಕು ರೂಪನಗುಡಿ ಗ್ರಾಮದ ರೈತ ವಿಘ್ನೇಶ್‌ ತಿಳಿಸಿದ್ದಾರೆ.