Asianet Suvarna News Asianet Suvarna News

ಯಾವುದು ಲೈಂಗಿಕ ಕಿರುಕುಳ? : ಯಾವಾಗ ದೂರು ನೀಡಬಹುದು..?

  • ಸಂವಿಧಾನ ಎಲ್ಲರೂ ಸಮಾನವಾಗಿ ಬದುಕಲು, ಪುರುಷರಂತೆ ಮಹಿಳೆಯರು ಸಹ ದುಡಿಯುವ ಅವಕಾಶ ನೀಡಿದೆ.
  • ಮಹಿಳೆಯು ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ
  • ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಮತ್ತು ಪರಿಹಾರ ಕಾಯ್ದೆ ಬಗ್ಗೆ ಜಿಲ್ಲಾ ನ್ಯಾ. ನಟರಾಜ್ ಅವರಿಂದ ಅರಿವು
chikkaballapur District Court Judge Nataraj Explains About  sexual harassment on women snr
Author
Bengaluru, First Published Oct 8, 2021, 3:52 PM IST

 ಚಿಕ್ಕಬಳ್ಳಾಪುರ (ಅ.08):  ಸಂವಿಧಾನ ಎಲ್ಲರೂ ಸಮಾನವಾಗಿ ಬದುಕಲು, ಪುರುಷರಂತೆ ಮಹಿಳೆಯರು ಸಹ ದುಡಿಯುವ ಅವಕಾಶ ನೀಡಿದೆ. ಆದರೆ ದುಡಿಯುವ ಕಾರ್ಯಸ್ಥಾನದಲ್ಲಿ ಮಹಿಳೆಯು ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳಕ್ಕೆ (Sexual Harassment) ಒಳಗಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಟರಾಜ್.ಎಸ್‌ (Nataraj S) ತಿಳಿಸಿದರು.

 ಚಿಕ್ಕಬಳ್ಳಾಪುರ ( Chikkaballapura) ನಗರದ ಸಿವಿವಿ ಕ್ಯಾಂಪಸ್‌ ನ ಬಿ.ಎಡ್‌ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (Legal Services Authority) , ವಕೀಲರ ಸಂಘ, ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಮತ್ತು ಪರಿಹಾರ ಕಾಯ್ದೆ 2013ರ (Prevention of Sexual Harassment at the Workplace - POSH 2013)  ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

'ಅಪ್ರಾಪ್ತೆಯ ಕೈಹಿಡಿದು ಪ್ರಪೋಜ್‌ ಮಾಡೋದು ಲೈಂಗಿಕ ಶೋಷಣೆ ಅಲ್ಲ!'

ಎಲ್ಲರಿಗೂ ಕಾಯ್ದೆಯ ಅರಿವು ಅಗತ್ಯ

2013ರ ಉದ್ಯೋಗಸ್ಥ ಮಹಿಳೆಯರಿಗೆ (Working Women) ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ಕಾಯ್ದೆ ರೂಪುಗೊಂಡಿದ್ದು, ಈ ಕಾಯ್ದೆಯು ಮಹಿಳಾ ಸುರಕ್ಷತೆಗೆ ಸಂಪೂರ್ಣ ಅವಕಾಶ ಕಲ್ಪಿಸಿದೆ. ಈ ಕಾಯ್ದೆಯ ಬಗ್ಗೆ ಎಲ್ಲರೂ ತಿಳಿದುಕೊಳ್ಳವುದು ಅತ್ಯಗತ್ಯವಾಗಿದೆ. ಮಹಿಳೆಯರನ್ನು ಒಳಗೊಂಡಂತೆ 10ಕ್ಕಿಂತ ಹೆಚ್ಚು ಜನರು ಒಂದೆಡೆ ಕೆಲಸ ಮಾಡುವ ಸರ್ಕಾರಿ, ಖಾಸಗಿ ಸಂಸ್ಥೆ, ನಿಗಮ, ಮಂಡಳಿ ಅಥವಾ ಯಾವುದೇ ರೀತಿಯ ಸಂಸ್ಥೆಯಲ್ಲಿ ಮಹಿಳೆಯರ ಕುಂದು ಕೊರತೆಗಳ ದೂರುಗಳನ್ನು ಆಲಿಸಲು ಆಂತರಿಕ ಸಮಿತಿಯನ್ನು ರಚಿಸಲು 2013ರ ಉದ್ಯೋಗಸ್ಥ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಮತ್ತು ಪರಿಹಾರ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

10 ಜನರಿಗಿಂತ ಕಡಿಮೆ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಡೆದರೆ ಅವರು ಸ್ಥಳೀಯ ಜಿಲ್ಲಾ, ತಾಲ್ಲೂಕುವಾರು ಸಮಿತಿಗಳಲ್ಲಿ ದೂರು ನೀಡಲು ಅವಕಾಶವಿರುತ್ತದೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (Women and child welfare department) ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ ಎಂದರು.

ಆಕ್ಷೇಪಾರ್ಹ ಪೋಸ್ಟ್‌ಗೆ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ಹೊಣೆ ಅಲ್ಲ!

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಲಕ್ಷ್ಮೀಕಾಂತ್‌ ಜಾನಕಿ ಮಿಸ್ಕಿನ್‌ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭ, ಉದ್ಯೋಗಸ್ಥ ಮಹಿಳೆಯರು ಹಾಗೂ ಬಿ.ಎಡ್‌ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾವುದು ಲೈಂಗಿಕ ಕಿರುಕುಳ?

ಮಹಿಳಾ ಉದ್ಯೋಗಿಯು ಕೆಲಸ ಮಾಡುವ ಕಾರ್ಯಸ್ಥಾನದಲ್ಲಿ ಯಾವುದೇ ಪುರುಷನು ಮಹಿಳೆಯ ದೇಹವನ್ನು ಮುಟ್ಟುವುದು, ಅಶ್ಲೀಲ ಚಿತ್ರಗಳನ್ನು ತೋರಿಸುವುದು, ಅಶ್ಲೀಲ ಸಂದೇಶ ಕಳುಹಿಸುವುದು, ದುರುದ್ದೇಶದಿಂದ ಕೆಲಸದಲ್ಲಿ ಕಿರುಕುಳ ಕೊಡುವುದು, ಬೆದರಿಕೆ ಒಡ್ಡುವುದು, ಲೈಂಗಿಕವಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಬೇರೆ ಬೇರೆ ರೀತಿಯಲ್ಲಿ ತೊಂದರೆಕೊಡುವ ಪ್ರವೃತ್ತಿ ತೋರುವುದು, ಕೆಟ್ಟದೃಷ್ಠಿಯಿಂದ ನಿರಂತರವಾಗಿ ದಿಟ್ಟಿಸಿ ನೋಡುವುದು ಈ ರೀತಿಯ ನಡವಳಿಕೆಯನ್ನು ಯಾವುದೇ ಪುರುಷರು ಮಾಡಿದರೂ ಅವರ ವಿರುದ್ಧ ಆಂತರಿಕ ಸಮಿತಿಯಲ್ಲಿ ದೂರು ಸಲ್ಲಿಸಿ ನ್ಯಾಯ ಪಡೆಯಬಹುದು ಎಂದು ನ್ಯಾಯಾಧೀಶರು ತಿಳಿಸಿದರು.
 

Follow Us:
Download App:
  • android
  • ios