ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದರಲ್ಲೂ ಹಳ್ಳಿಗಳು ನಿಧಾನವಾಗಿ ಆಧುನಿಕರಣದತ್ತ ಮುಖಮಾಡುತ್ತಿದ್ದಂತೆ ರೈತರು ಪಾಲ್ಗೊಳ್ಳುತ್ತಿದ್ದ ಅದೆಷ್ಟೋ ಹಳ್ಳಿ ಸೊಗಡಿನ ಕ್ರೀಡೆಗಳು ಮಾಯವಾಗಿವೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಏ.14): ಇತ್ತೀಚೆಗೆ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಅದರಲ್ಲೂ ಹಳ್ಳಿಗಳು (Villages) ನಿಧಾನವಾಗಿ ಆಧುನಿಕರಣದತ್ತ ಮುಖಮಾಡುತ್ತಿದ್ದಂತೆ ರೈತರು (Farmers) ಪಾಲ್ಗೊಳ್ಳುತ್ತಿದ್ದ ಅದೆಷ್ಟೋ ಹಳ್ಳಿ ಸೊಗಡಿನ ಕ್ರೀಡೆಗಳು ಮಾಯವಾಗಿವೆ. ಗ್ರಾಮೀಣ ಕ್ರೀಡೆಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ವರ್ಷಪೂರ್ತಿ ಹೊಲೆ ಗದ್ದೆಗಳಲ್ಲಿನ ಉಳುಮೆ ಕಾರ್ಯಗಳೆಲ್ಲ ಮೂಗಿದ ನಿಮಿತ್ತ ಚಿಕ್ಕಮಗಳೂರಿನಲ್ಲಿ ಎತ್ತುಗಳಿಗಾಗಿಯೇ ಎತ್ತಿನಗಾಡಿಗಳ ಸ್ಪರ್ಧೆ (Bullock Cart Race) ಏರ್ಪಡಿಸಲಾಗಿತ್ತು. ರಾಜ್ಯ ಮೂಲೆಮೂಲೆಗಳಿಂದ ಬಂದು ಯುದ್ಧಕ್ಕೆ ಸನ್ನದ್ದರಾದಂತಿದ್ದ ಎತ್ತುಗಳು ನೋಡುಗರ ಗಮನ ಸೆಳೆದವು.

ಕಿಕ್ಕಿರಿದು ನೆರೆದಿದ್ದು ಜನರಿಂದ ಚಪ್ಪಾಳೆ ಸಿಳ್ಳೆ: ಒಂದೆಡೆ ಸವಾರನ ಹೊಡೆತಕ್ಕೆ ಜಿಗಿದೋಡ್ತಿರೋ ಎತ್ತುಗಳು. ಮತ್ತೊಂದೆಡೆ ನುಗ್ಗಿ ಬರೋ ಗಾಡಿಗಳಿಂದ ತಪ್ಪಿಸಿಕೊಳ್ಳೊ ಪ್ರೇಕ್ಷಕರು. ಹೌದು! ರೈತ ಈ ದೇಶದ ಬೆನ್ನೆಲುಬು. ಆದರೆ ರೈತನ ಬೆನ್ನೆಲುಬು ರಾಸುಗಳು. ಅಂತಹಾ ರಾಸುಗಳಿಗಾಗೇ ಚಿಕ್ಕಮಗಳೂರಿನ ತೇಗೂರಿನಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನ ಏರ್ಪಡಿಸಿದ್ದರು. ಜೋಡೆತ್ತಿನಗಾಡಿ ಸ್ಪರ್ಧೆಯೂ ಯುಗಾದಿ ಹಬ್ಬ ಹಾಗೂ ಹನುಮ ಜಯಂತಿ ಅಂಗವಾಗಿ ನಡೆಯಿತು. ಅರಸು ಗೆಳೆಯರ ಬಳಗ ನಡೆಸ್ತಿರೋ ಈ ಸ್ಪರ್ಧೆಗೆ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ ಸೇರಿ ರಾಜ್ಯದ ನಾನಾ ಭಾಗದಿಂದ 70ಕ್ಕೂ ಅಧಿಕ ಜೋಡೆತ್ತುಗಳು ಆಗಮಿಸಿದ್ದವು.

Chikkamagaluru: ಐತಿಹಾಸಿಕ ಮಹಾಕುಂಭಾಭಿಷೇಕಕ್ಕೆ ಹರಿಹರಪುರ ಸಾಕ್ಷಿ

ಗ್ರಾಮೀಣ ಕ್ರೀಡೆಯನ್ನ ಉತ್ತೇಜಿಸೋ ಸಲುವಾಗಿ ಇಲ್ಲಿ ಗೆದ್ದ ರಾಸುಗಳಿಗೆ ಆಕರ್ಷಕ ಬಹುಮಾನವನ್ನು ನೀಡುತ್ತಾರೆ. ಗ್ರಾಮೀಣ ಕ್ರೀಡೆಗಳು ನಶಿಸ್ತಿವೆ ಅನ್ನೋ ಕೂಗು ಚಿಕ್ಕಮಗಳೂರಿಗೆ ಅನ್ವಯವಾಗುವುದಿಲ್ಲ, ಯಾಕಂದರೆ ಇಲ್ಲಿ ಆಗಿಂದಾಗ್ಗೆ ಇಂತಹಾ ಗ್ರಾಮೀಣ ಕ್ರೀಡೆಗಳು ನಡೆಯುತ್ತಲ್ಲೇ ಇರುತ್ತವೆ. ಜೋಡೆತ್ತಿನ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸಿದ್ದರು. ಕಿಕ್ಕಿರಿದು ನೆರೆದಿದ್ದು ಜನರಿಂದ ಚಪ್ಪಾಳೆ ಸಿಳ್ಳೆ ಹಾಕಿ ರಾಸುಗಳಿಗೆ ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವೃದ್ದರು, ಮಹಿಳೆಯರು ಮಕ್ಕಳಾದಿಯಾಗಿ ಸುತ್ತಮುತ್ತಲ ಹೊಲ ಗದ್ದೆಗಳಲ್ಲಿ ಕುಳಿತು ಸ್ಪರ್ಧೆಯನ್ನು ವೀಕ್ಷಿಸಿದರು. ಅಕ್ಕಪಕ್ಕದಲ್ಲಿದ್ದ ಮನೆ ಕಟ್ಟಡಗಳ ಮೇಲೆ ಕುಟುಂಬಸ್ತರು ಕುಳಿತು ಸ್ಪರ್ಧೆಯನ್ನು ಕಣ್ತುಂಬಿಕೊಂಡರು

ನೋಡುಗರ ಮನಸೆಳೆದ ಎತ್ತಿನಗಾಡಿ ಸ್ಪರ್ಧೆ: ಜನರತ್ತ ನುಗ್ಗಿ ಬರೋ ಎತ್ತಿನ ಗಾಡಿಗಳಿಂದ ತಪ್ಪಿಸಿಕೊಳೋದು ಪ್ರೇಕ್ಷಕರಿಗೆ ಹರಸಾಹಸವೇ ಸರಿ. ಇನ್ನು ರೈತರು ಸ್ಪರ್ಧೆಗಾಗಿಯೇ ಎತ್ತುಗಳನ್ನ ಮೀಸಲಿಡ್ತಾರೆ. ಕೆಲ ರೈತರು ಹೊಲ ಗದ್ದೆಗಳಲ್ಲಿನ ಕೆಲಸ ಮುಗಿದ ಮೇಲೆ ಇಂತಹ ಆಟೋಟಗಳಲ್ಲಿ ತಮ್ಮ ರಾಸುಗಳನ್ನ ಓಡಿಸಿ ಖುಷಿ ಪಡ್ತಾರೆ. ಕೆಲವರು ಇಂತಹಾ ಸ್ಪರ್ಧೆಗಳಿಗಾಗಿಯೇ ರಾಸುಗಳನ್ನ ಸಾಕ್ತಾರೆ. ಸ್ಪರ್ಧೆಯ ಹದಿನೈದು ದಿನ ಮುಂಚಿತವಾಗಿಯೇ ಎತ್ತುಗಳಿಗೆ ವಿಶೇಷ ತರಬೇತಿ ಜೊತೆ ತಯಾರಿಯನ್ನೂ ಮಾಡ್ತಾರೆ. ಪ್ರತಿ ದಿನ ವಾಕ್ ಮಾಡಿಸುತ್ತಾರೆ. ದಿನಕ್ಕೆರಡು ಬಾರಿ ಈಜು ಹೊಡೆಸುತ್ತಾರೆ. 

ಇಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳದ ಜೊತೆ ಮೊಟ್ಟೆ ಹಾಗೂ ಮೆಂತೆ ಮುದ್ದೆಯನ್ನೂ ನೀಡ್ತಾರೆ. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲೊದ್ಕಿಂತ ಭಾಗವಹಿಸೋದೆ ರೈತರಿಗೆ ಸಂತಸ. ಮಲೆನಾಡಿನಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನಗಾಡಿ ಸ್ಪರ್ಧೆಯನ್ನ ಎಂಟತ್ತು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದರು. ಸ್ಪರ್ಧೆಯನ್ನು ನೋಡಿದ ರೈತರು ಇಂತಹಾ ಕ್ರೀಡೆಗಳು ನಿರತಂರವಾಗಿರಲೆಂದು ಹಾರೈಸಿದರು. ಮಂಡ್ಯ, ಹಾಸನ, ಸಕಲೇಶಪುರ, ಮೈಸೂರು, ಶ್ರೀರಂಗಪಟ್ಟಣ, ಕೆಂಪನಹಳ್ಳಿ, ಹಂಪಾಪುರ, ಕೋಟೆ, ತೇಗೂರು, ತರೀಕೆರೆ, ಅಜ್ಜಂಪುರ ಸೇರಿದಂತೆ 70 ಕ್ಕೂ ಹೆಚ್ಚು ಜೋಡೆತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ರೋಮಾಂಚನ ಪೈಪೋಟಿ ನೀಡಿದವು.

KGF 2 ಬಿಡುಗಡೆಗೆ ಆಗ್ರಹಿಸಿ ಯಶ್‌ ಅಭಿಮಾನಿಗಳ ಪ್ರತಿಭಟನೆ: ಸಮಾಧಾನ ಮಾಡಿದ ಸಿ.ಟಿ.ರವಿ

ಪ್ರಥಮ 75 ಸಾವಿರ, ದ್ವಿತೀಯ 50 ಸಾವಿರ, 30 ಸಾವಿರ, ನಾಲ್ಕನೆ ಬಹುಮಾನ 20 ಸಾವಿರದ ಜೊತೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ ಎಂದು ಆಯೋಜನಕರು ಮಾಹಿತಿ ನೀಡಿದರು. ಒಟ್ಟಾರೆ, ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿತ್ತಿರುವ ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರಿನ ತೇಗೂರಿನಲ್ಲಿ ನಡೆದ ಈ ಸ್ಪರ್ಧೆ ಜನಮನ ಸೆಳೆಯಿತು. ಇಂತಹ ಕಾರ್ಯಕ್ರಮಗಳ ನೆಪದಲ್ಲಾದರೂ ಗ್ರಾಮೀಣ ಕ್ರೀಡೆಗಳು ಉಳಿಯಲಿ, ಬೆಳೆಯಲಿ ಅನ್ನೋದು ನಮ್ಮ ಆಶಯ.