Asianet Suvarna News Asianet Suvarna News

ಮಾದಕದ್ರವ್ಯದ ಸುನಾಮಿಗೆ ನಲುಗಿತೇ ಈಶಾನ್ಯ ಭಾರತವೆಂಬ ಸ್ವರ್ಗ?

ಇತ್ತೀಚೆಗೆ, ಭಾರತ ಸರ್ಕಾರ ಗಡಿಗಳ ಆಚೆ ಈಚೆ ಜನರ ಸುಲಭ ಸಂಚಾರಕ್ಕೆ (ಫ್ರೀ ಮೂವ್ಮೆಂಟ್ ರೆಜಿಮ್ - ಎಫ್ಎಂಆರ್) ನಿರ್ಬಂಧ ಹೇರಿದೆ. ಕಳೆದ ವರ್ಷ ಎಪ್ರಿಲ್ 24ರಂದು ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಗಡಿ ಹಂಚಿಕೊಳ್ಳುವ ಮಣಿಪುರದ ಜಿಲ್ಲೆಯೊಂದರಿಂದ 4,18,000 ಡಾಲರ್ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದರು. ಇದು ಈಶಾನ್ಯ ಭಾರತದಲ್ಲಿ ಮಾದಕದ್ರವ್ಯ ಎಷ್ಟು ದೊಡ್ಡ ಪಿಡುಗಾಗಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.

North East India paradise lost to narcotic tsunami drug smuggling across the myanmar border rav
Author
First Published Jul 15, 2024, 11:18 AM IST | Last Updated Jul 15, 2024, 11:18 AM IST

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮಯನ್ಮಾರ್ ಜೊತೆಗೆ ಗಡಿ ಹಂಚಿಕೊಳ್ಳುವ ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೇ 2023ರಲ್ಲಿ ಅತ್ಯಂತ ಹಿಂಸಾತ್ಮಕವಾದ ಜನಾಂಗೀಯ ಘರ್ಷಣೆಗಳು ಆರಂಭಗೊಂಡವು. ಒಂದು ಜನಾಂಗೀಯ ಗುಂಪು ತನ್ನನ್ನು ಭಾರತೀಯ ಸಂವಿಧಾನದಡಿ ಅಧಿಕೃತವಾಗಿ ಪರಿಶಿಷ್ಟ ಜನಾಂಗ ಎಂದು ಗುರುತಿಸಬೇಕು ಎಂದು ಆಗ್ರಹಿಸಿದ್ದು ಈ ಹಿಂಸಾಚಾರಕ್ಕೆ ಕಿಡಿ ಹತ್ತಿಸಿತ್ತು. ಹಿಂಸಾಚಾರ ಆರಂಭಗೊಂಡ ಕೆಲವೇ ದಿನಗಳಲ್ಲಿ ಮಣಿಪುರ ರಾಜ್ಯದ ವಿವಿಧ ಪ್ರದೇಶಗಳಿಗೆ ವ್ಯಾಪಿಸಿತು. ಆರಂಭಿಕ ಸಂಘರ್ಷಗಳು ಶುರುವಾದ ಒಂದು ವರ್ಷದ ಒಳಗಾಗಿ, ಅಂದಾಜು 220 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 1,100ಕ್ಕೂ ಹೆಚ್ಚು ಜನರು ಈ ಗಲಭೆಗಳಲ್ಲಿ ಗಾಯಗೊಂಡಿದ್ದು, ಬಹುತೇಕ 60,000 ಜನರು ತಮ್ಮ ಮನೆಗಳನ್ನು ಬಿಟ್ಟು ತೆರಳಬೇಕಾಗಿ ಬಂತು. ಇದರೊಡನೆ, ಮಾದಕದ್ರವ್ಯದ ಪಿಡುಗೂ ಈಶಾನ್ಯ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಮಾಧ್ಯಮಗಳು ಹಲವಾರು ಬಾರಿ ಅಕ್ರಮವಾಗಿ ಪಾಪ್ಪಿ (ಗಸಗಸೆ) ಬೆಳೆಯುವುದು ಮತ್ತು ಮಯನ್ಮಾರ್‌ನಿಂದ ಭಾರತಕ್ಕೆ ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆ ನಡೆಸುವುದು ನಡೆಯುತ್ತಿದೆ ಎಂದು ವರದಿ ಮಾಡಿವೆ. ಈ ಬೆಳವಣಿಗೆಯನ್ನು ಕೇಂದ್ರ ಗೃಹ ಸಚಿವಾಲಯದ ವರದಿಗಳೂ ಖಚಿತಪಡಿಸಿವೆ. ಈಶಾನ್ಯ ಭಾರತದಲ್ಲಿ ಮಾದಕದ್ರವ್ಯದ ಬಳಕೆ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ, ಡ್ರಗ್ ಸಿಂಡಿಕೇಟ್‌ಗಳು, ನೈಜೀರಿಯಾದ ಕಾರ್ಟೆಲ್‌ಗಳೊಡನೆ ಕೈ ಜೋಡಿಸಿ ಕಾರ್ಯಾಚರಿಸುವ ಕಳ್ಳಸಾಗಾಣಿಕೆದಾರರ ಉಪಸ್ಥಿತಿಯಂತಹ ಹೊಸ ಸಮಸ್ಯೆಗಳು ಮಾದಕದ್ರವ್ಯದ ಪಿಡುಗನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದು, ಅದನ್ನು ನಿಯಂತ್ರಿಸುವುದೇ ಕಷ್ಟಕರವಾಗುವಂತೆ ಮಾಡಿವೆ.

ಆಧುನಿಕ ನಿರ್ವಹಣಾ ವ್ಯವಸ್ಥೆ:

ಈಶಾನ್ಯ ಭಾರತ(Northeast India)ದ ಏಳು ರಾಜ್ಯಗಳನ್ನು 'ಸಪ್ತ ಸಹೋದರಿಯರು' ಎಂದು ಕರೆಯಲಾಗುತ್ತದೆ. ಈ ರಾಜ್ಯಗಳು ದೀರ್ಘಕಾಲದಿಂದಲೂ ಗಡಿಯಾಚೆಗಿನ ಅಕ್ರಮ ಮಾದಕದ್ರವ್ಯ ಕಳ್ಳಸಾಗಾಣಿಕೆ(Drug trafficking)ಯೊಡನೆ ಸಂಪರ್ಕ ಹೊಂದಿದ್ದವು. ಈ ವ್ಯಾಪಾರ ಮಯನ್ಮಾರ್ ನೇತೃತ್ವದ 'Golden Triangle' ಭಾಗವಾಗಿದೆ. ಜಾಗತಿಕ ಮಾದಕದ್ರವ್ಯ ವ್ಯಾಪಾರದಲ್ಲಿ ಮಯನ್ಮಾರ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣದಿಂದಾಗಿ, ಭಾರತೀಯ ಪೊಲೀಸರಿಗೆ ಗಡಿ ಪ್ರದೇಶದಲ್ಲಿ ನಡೆಯುವ ಅಕ್ರಮ ಮಾದಕದ್ರವ್ಯ ಸಾಗಾಣಿಕೆಯ ವಿರುದ್ಧ ಸರ್ಕಾರದ ಶಿಸ್ತು ಕ್ರಮಗಳನ್ನು ಜಾರಿಗೆ ತರುವ ಅಧಿಕಾರ ನೀಡಲಾಗಿದೆ.

ಮಯನ್ಮಾರ್ ಜೊತೆಗಿನ 1,642 ಕಿಲೋಮೀಟರ್ ಉದ್ದನೆಯ ಗಡಿಯಾದ್ಯಂತ, ನಿರಂತರವಾಗಿ ಎಲ್ಲೆಲ್ಲಿ ಭದ್ರತಾ ದೌರ್ಬಲ್ಯಗಳಿವೆ ಎಂದು ಪತ್ತೆಹಚ್ಚುವ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಕಣ್ಗಾವಲು ವ್ಯವಸ್ಥೆಯನ್ನು ಉತ್ತಮಪಡಿಸಲು ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲಾಗುತ್ತದೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ದೀರ್ಘ ವ್ಯಾಪ್ತಿಯ ವಿಚಕ್ಷಣಾ ಉಪಕರಣಗಳು, ವೀಕ್ಷಣಾ ಉಪಕರಣಗಳು ಮತ್ತು ಯುದ್ಧರಂಗದಲ್ಲಿ ಬಳಸುವ ಕಣ್ಗಾವಲು ರೇಡಾರ್‌ಗಳನ್ನು ಅಳವಡಿಸಲಾಗಿದೆ.

ಸಿಲಿಕಾನ್ ಸಿಟಿಯ ಕರಾಳ ಮುಖ: ಬೆಂಗಳೂರಿನ ಸುವ್ಯವಸ್ಥೆಗೆ ಸವಾಲಾದ ಬೈಕರ್ ಗ್ಯಾಂಗ್‌ಗಳು ಮತ್ತು ಭ್ರಷ್ಟಾಚಾರ

ಇತ್ತೀಚೆಗೆ, ಭಾರತ ಸರ್ಕಾರ ಗಡಿಗಳ ಆಚೆ ಈಚೆ ಜನರ ಸುಲಭ ಸಂಚಾರಕ್ಕೆ (ಫ್ರೀ ಮೂವ್ಮೆಂಟ್ ರೆಜಿಮ್ - ಎಫ್ಎಂಆರ್) ನಿರ್ಬಂಧ ಹೇರಿದೆ. ಕಳೆದ ವರ್ಷ ಎಪ್ರಿಲ್ 24ರಂದು ಭದ್ರತಾ ಪಡೆಗಳು ಅಂತಾರಾಷ್ಟ್ರೀಯ ಗಡಿ ಹಂಚಿಕೊಳ್ಳುವ ಮಣಿಪುರದ ಜಿಲ್ಲೆಯೊಂದರಿಂದ 4,18,000 ಡಾಲರ್ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದರು. ಇದು ಈಶಾನ್ಯ ಭಾರತದಲ್ಲಿ ಮಾದಕದ್ರವ್ಯ ಎಷ್ಟು ದೊಡ್ಡ ಪಿಡುಗಾಗಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ. ಕಾನೂನಿನ ಪ್ರಕಾರ, ಅಂತಾರಾಷ್ಟ್ರೀಯ ಗಡಿಯಿಂದ ಭಾರತ ಅಥವಾ ಮಯನ್ಮಾರ್‌ನಲ್ಲಿ 16 ಕಿಲೋಮೀಟರ್ ಒಳಗೆ ವಾಸಿಸುವ ಗುಡ್ಡಗಾಡಿನ ಬುಡಕಟ್ಟು ಜನರು ಗಡಿ ದಾಟುವ ಪಾಸ್ ಹೊಂದುವ ಮೂಲಕ ಸುಲಭವಾಗಿ ಗಡಿ ದಾಟಿ ಸಂಚರಿಸಬಹುದು. ಈ ಪಾಸ್ ಒಂದು ವರ್ಷದ ಅವಧಿಯನ್ನು ಹೊಂದಿದ್ದು, ಒಂದು ಬಾರಿ ಗಡಿ ದಾಟಿದವರು ಪ್ರತಿ ಭೇಟಿಯಲ್ಲಿ ಗರಿಷ್ಠ ಎರಡು ವಾರಗಳ ಕಾಲ ಇನ್ನೊಂದು ದೇಶದಲ್ಲಿ ಉಳಿದುಕೊಳ್ಳಬಹುದು.

ಈ ಹಿಂದೆ, ಭಾರತದ ಈಶಾನ್ಯ ಭಾಗ ಅಪಾರ ಪ್ರಮಾಣದ ಮಾದಕದ್ರವ್ಯ ವ್ಯಸನ, ಎಚ್ಐವಿ / ಏಡ್ಸ್, ಮತ್ತು ಬಂಡಾಯಗಳಿಗೆ ಹೆಸರಾಗಿತ್ತು. ಆದರೆ, ಒಂದು ವೇಳೆ ತಕ್ಷಣವೇ ಈಶಾನ್ಯದ ಪರಿಸ್ಥಿತಿಯನ್ನು ಶಮನಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಗಂಭೀರ ಸ್ವರೂಪದ ಸಮಸ್ಯೆಗಳು ಉಂಟಾಗಬಹುದು ಎಂದು 2016ರ ವರದಿಯೊಂದು ಎಚ್ಚರಿಕೆ ನೀಡಿತ್ತು. ಅದೇ ಅವಧಿಯಲ್ಲಿ, ಇನ್ನೊಂದು ಅಧ್ಯಯನ ಈಶಾನ್ಯ ರಾಜ್ಯಗಳ ಮಾದಕದ್ರವ್ಯ ವ್ಯಸನ ಕೈಮೀರಿ ಹೋಗುತ್ತಿದೆ ಎಂದು ಎಚ್ಚರಿಕೆ ನೀಡಿತ್ತು.

ಹಿಂದೆ 2014ರಲ್ಲಿ, ಈಶಾನ್ಯ ಭಾರತದಲ್ಲಿ ಮಾದಕ ದ್ರವ್ಯಗಳ ವ್ಯಸನ ಬಹಳಷ್ಟು ವ್ಯಾಪಕವಾಗಿದ್ದು, ಕೇವಲ ಮಣಿಪುರ ಒಂದರಲ್ಲೇ 45,000ದಿಂದ 50,000 ಮಾದಕ ವ್ಯಸನಿಗಳಿದ್ದಾರೆ ಎಂದು ಅಂದಾಜಿಸಲಾಗಿತ್ತು. ಅವರಲ್ಲಿ ಅರ್ಧಕ್ಕೂ ಹೆಚ್ಚು ಜನರು ಸಿರಿಂಜುಗಳ ಮೂಲಕ ದೇಹಕ್ಕೆ ಮಾದಕದ್ರವ್ಯ ಪಡೆಯುತ್ತಿದ್ದರು. ಆ ಬಳಿಕವೂ ಈಶಾನ್ಯದ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಲೇ ಸಾಗಿದೆ.

ಇತ್ತೀಚಿನ ವರದಿಯೊಂದರ ಪ್ರಕಾರ, ಮಣಿಪುರದ ಯುವಜನರು ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ಬಳಸುತ್ತಿದ್ದಾರೆ. ಡಿಪ್ಲೊಮ್ಯಾಟ್ ವರದಿಯ ಪ್ರಕಾರ, ಹೆರಾಯಿನ್ ಅತ್ಯಂತ ಸಾಮಾನ್ಯವಾಗಿ ಬಳಸುವ (54.3%) ದ್ರವ್ಯವಾಗಿದ್ದು, ಇದರ ಬಳಿಕ ಓಪಿಯಾಯ್ಡ್‌ಗಳು (47.1%) ಮತ್ತು ಮೆಥಾಂಫೆಟಮೈನ್ (41.2%) ಗಳು ಬಳಕೆಯಾಗುತ್ತಿವೆ. ಮಣಿಪುರದಲ್ಲಿ ಎರಡನೆಯದಾಗಿ ಅತ್ಯಧಿಕ ಪ್ರಮಾಣದಲ್ಲಿ ಬಳಕೆಯಾಗುವ ಮಾದಕದ್ರವ್ಯಗಳೆಂದರೆ ಗಾಂಜಾ (32.8%), ನಿದ್ರಾಜನಕಗಳು (ಸೆಡೇಟಿವ್ಸ್ 27.5%) ಮತ್ತು ಇನ್ಹೇಲೆಂಟ್‌ಗಳಾಗಿವೆ (ಮೂಗಿನ ಮೂಲಕ ಎಳೆದುಕೊಳ್ಳುವ ದ್ರವ್ಯ 17.4%). ಇನ್ನಷ್ಟು ಗಾಬರಿ ಮೂಡಿಸುವ ವಿಚಾರವೆಂದರೆ, 48.6% ಮಾದಕದ್ರವ್ಯ ಬಳಕೆದಾರರು ದೇಹಕ್ಕೆ ಸೇರಿಸುವ ಮಾದಕ ವಸ್ತುಗಳನ್ನು ಹೊಂದಲು ಸೂಜಿಗಳು ಮತ್ತು ಸಿರಿಂಜುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಹೆರಾಯಿನ್ ವ್ಯಾಪಾರ:

ಹೆರಾಯಿನ್ 1983ರಲ್ಲಿ  ಭಾರತದಲ್ಲಿ ಮೊದಲಬಾರಿಗೆ ಮಯನ್ಮಾರ್ ಜೊತೆಗೆ ಗಡಿ ಹಂಚಿಕೊಳ್ಳುವ ಮಣಿಪುರದ ವಾಯುವ್ಯ ಭಾಗದ ಗುಡ್ಡಗಾಡು ಪ್ರದೇಶವಾದ ಚುರಾಚಂದ್‌ ಜಿಲ್ಲೆಯಲ್ಲಿ ಕಾಣಿಸಿಕೊಂಡಿತು. ಅದಾದ ಬಳಿಕ ಶೀಘ್ರವಾಗಿ ಹೆರಾಯಿನ್ 15ರಿಂದ 30ರ ವಯೋಮಾನದ ಯುವ ಜನತೆಯಲ್ಲಿ ಸಾಮಾನ್ಯ ಪಿಡುಗಾಗಿ ಪರಿಣಮಿಸಿತು. ನಂತರ ಮಾದಕ ವ್ಯಸನ ಮಣಿಪುರವನ್ನು ಮೀರಿ, ಇತರ ರಾಜ್ಯಗಳಿಗೂ ವ್ಯಾಪಿಸಿತು. 2019ರ ಸರ್ಕಾರಿ ವರದಿಯೊಂದರ ಪ್ರಕಾರ, ಓಪಿಯಾಯ್ಡ್ ಬಳಕೆ ಅರುಣಾಚಲ ಪ್ರದೇಶದಲ್ಲಿ 22.1%, ಮಿಜೋರಾಂನಲ್ಲಿ 25.67%, ನಾಗಾಲ್ಯಾಂಡ್‌ನಲ್ಲಿ 25.22%, ಮಣಿಪುರದಲ್ಲಿ 14.22% ಮತ್ತು ಅಸ್ಸಾಂನಲ್ಲಿ 2.9% ಪ್ರಮಾಣದಲ್ಲಿದೆ.

ಮಯನ್ಮಾರ್‌ನಲ್ಲಿ ಸಿಂಥೆಟಿಕ್ ಡ್ರಗ್ ಸೇರಿದಂತೆ, ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಉತ್ಪಾದಿಸುವುದು ಭಾರತದ ಭದ್ರತೆಗೆ ಗಂಭೀರ ಅಪಾಯ ತಂದೊಡ್ಡಲಿದೆ ಎಂದು ಪರಿಗಣಿಸಲಾಗಿದೆ. ಅದರೊಡನೆ, ಮಯನ್ಮಾರ್‌ನಲ್ಲಿ ಪ್ರಸ್ತುತ ಎದುರಾಗಿರುವ ರಾಜಕೀಯ ಅಸ್ಥಿರತೆ ಮತ್ತು ಅಂತರ್ಯುದ್ಧದಂತಹ ಪರಿಸ್ಥಿತಿಗಳು ಮಯನ್ಮಾರ್‌ನ ಮಾದಕದ್ರವ್ಯ ಉತ್ಪಾದನೆ ಮತ್ತು ಸಾಗಾಣಿಕೆಯ ಮುಖ್ಯ ಪ್ರದೇಶಗಳಾದ ವಾ ಮತ್ತು ಶಾನ್ ರಾಜ್ಯಗಳ ಡ್ರಗ್ ಕಾರ್ಟೆಲ್‌ಗಳಿಗೆ ಪೂರಕವಾದ ಸನ್ನಿವೇಶ ಸೃಷ್ಟಿಸಿವೆ. ಮಯನ್ಮಾರ್‌ನ ವಾ ಮತ್ತು ಶಾನ್ ಪ್ರದೇಶಗಳಲ್ಲಿ ಉತ್ಪಾದಿಸುವ ಮಾದಕ ದ್ರವ್ಯಗಳ ಪೂರೈಕೆಗೆ ಈಶಾನ್ಯ ಭಾರತ ಅತ್ಯಂತ ಮುಖ್ಯ ಮಾರ್ಗವಾಗಿದೆ. ಈ ಪ್ರದೇಶಗಳಲ್ಲಿ ಡ್ರಗ್ ದೊರೆಗಳು, ಬಂಡುಕೋರ ಗುಂಪುಗಳು ಮತ್ತು ವಿದೇಶೀ ಪಾಲುದಾರರು ಜೊತೆಯಾಗಿ ಗಸಗಸೆ ಗದ್ದೆಗಳು ಮತ್ತು ಮಾದಕದ್ರವ್ಯ ಪ್ರಯೋಗಶಾಲೆಗಳನ್ನು ನಿರ್ವಹಿಸುತ್ತಾರೆ.

ಮಾದಕವಸ್ತು ಕಳ್ಳ ಸಾಗಾಣಿಕೆಯನ್ನು ತಡೆಯಲು ಕೇಂದ್ರ ಸರ್ಕಾರದ ಪ್ರಯತ್ನಗಳು ವಿರಳವೂ, ಅಕಾಲಿಕವೂ ಆಗಿದ್ದರೆ, ಈಶಾನ್ಯ ಭಾರತದ ರಾಜ್ಯ ಸರ್ಕಾರಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿಲ್ಲ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ, ರಾಜ್ಯಗಳ ನಡುವೆ ಮಾದಕದ್ರವ್ಯ ಕಳ್ಳ ಸಾಗಾಣಿಕೆಯ ವಿರುದ್ಧದ ಕ್ರಮಗಳು ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಮಾದಕದ್ರವ್ಯ ಉತ್ಪಾದನಾ ಪ್ರಮಾಣವನ್ನು ತೋರಿಸುವ ಮಾದಕದ್ರವ್ಯ ವಶಪಡಿಸಿಕೊಳ್ಳುವಿಕೆಗಳೂ ಅಪರೂಪ ಮತ್ತು ಕಡಿಮೆ ಪ್ರಮಾಣದಲ್ಲಿದ್ದವು.

ಆದರೆ, ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಗಡಿಯಾದ್ಯಂತ ಮಾದಕದ್ರವ್ಯ ಕಳ್ಳಸಾಗಣೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿ ಹೊಂದಿದ್ದು, 2022ರ ನಂತರವಂತೂ ತನ್ನ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಿತು. ಅಕ್ಟೋಬರ್ 2022ರಲ್ಲಿ ಅಸ್ಸಾಮಿನ ಗುವಾಹಟಿಯಲ್ಲಿ ಉನ್ನತ ಮಟ್ಟದ ಸಭೆಯ ಬಳಿಕ, ಕೇಂದ್ರ ಗೃಹ ಸಚಿವಾಲಯ 'ಮಾದಕದ್ರವ್ಯ ಮುಕ್ತ ಭಾರತ' ಅಭಿಯಾನದ ಅಂಗವಾಗಿ, ಈಶಾನ್ಯ ಭಾರತದಾದ್ಯಂತ ಅಂದಾಜು 40,000 ಕೆಜಿಗಳಷ್ಟು ಮಾದಕದ್ರವ್ಯಗಳನ್ನು ನಾಶಪಡಿಸಲಾಗಿದೆ ಎಂದು ಘೋಷಿಸಿತು.

ಅರ್ಬನ್ ಹೀಟ್ ಐಲ್ಯಾಂಡ್: ನಗರಗಳ ಕಾಂಕ್ರೀಟ್ ಗೂಡುಗಳು ಮತ್ತು ಸುಡುಸೆಖೆಯ ರಾತ್ರಿಗಳು

ಸರ್ಕಾರದ ಮಾದಕದ್ರವ್ಯ ತಡೆ ಇಲಾಖೆ ಅಂದಾಜು 1,50,000 ಕೆಜಿಗಳಷ್ಟು ಮಾದಕ ವಸ್ತುಗಳನ್ನು ನಾಶಪಡಿಸಿದ್ದು, ಇದು ಕೇಂದ್ರ ಸಚಿವಾಲಯ ವಿಧಿಸಿದ್ದ ಗುರಿಗಿಂತಲೂ ಎರಡು ಪಟ್ಟು ಹೆಚ್ಚಾಗಿತ್ತು ಎಂದು ಸರ್ಕಾರಿ ವರದಿಗಳು ಹೇಳಿವೆ. ಸರ್ಕಾರ ಓಪಿಯಂ ಬೆಳೆಯುವ ಪ್ರದೇಶಗಳನ್ನು ಗುರುತಿಸಿ ನಿರ್ವಹಿಸಲು ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ, ಮತ್ತು ಉಪಗ್ರಹ ಮ್ಯಾಪಿಂಗ್ ವ್ಯವಸ್ಥೆಗಳನ್ನು ಬಳಸುವುದಾಗಿ ತಿಳಿಸಿತ್ತು. ಅದರೊಡನೆ, ಉತ್ಪಾದನೆಯಿಂದ ಪೂರೈಕೆಯ ತನಕ ಸಮಗ್ರ ಮಾದಕದ್ರವ್ಯ ಸರಪಳಿಯನ್ನು ಸಂಪೂರ್ಣವಾಗಿ ತನಿಖೆಗೊಳಪಡಿಸಿ, ಸಂಪೂರ್ಣ ಮಾದಕದ್ರವ್ಯ ಜಾಲವನ್ನೇ ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿತ್ತು.

ಮಾದಕದ್ರವ್ಯದ ವಿರುದ್ಧ ತನ್ನ ಹೋರಾಟದ ಸಾಧನೆಗಳನ್ನು ವಿವರಿಸುತ್ತಾ, ಮೋದಿ ಸರ್ಕಾರ ತಾನು 2014-2022ರ ನಡುವೆ ನಡೆಸಿದ ಮಾದಕದ್ರವ್ಯ ವಶಪಡಿಸಿಕೊಳ್ಳುವಿಕೆಯನ್ನು ಯುಪಿಎ ಸರ್ಕಾರದ ಅವಧಿಯಲ್ಲಿ 2006ರಿಂದ 2013ರ ನಡುವಿನ ಮಾದಕದ್ರವ್ಯ ವಶದ ನಡುವೆ ಹೋಲಿಸಿ ಅಂಕಿಅಂಶಗಳನ್ನು ನೀಡಿತ್ತು. ಮೋದಿ ಸರ್ಕಾರ 2014-2022ರಲ್ಲಿ ಮಾದಕದ್ರವ್ಯ ಸಾಗಾಣಿಕೆದಾರರ ವಿರುದ್ಧ 3,172 ಪ್ರಕರಣಗಳನ್ನು ದಾಖಲಿಸಿದ್ದರೆ, ಯುಪಿಎ ಸರ್ಕಾರ 2006ರಿಂದ 2013ರ ನಡುವೆ ಕೇವಲ 1,257 ಪ್ರಕರಣಗಳನ್ನು ದಾಖಲಿಸಿತ್ತು ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳು ಹೇಳಿವೆ.

ಅದರೊಡನೆ, ಮಾದಕದ್ರವ್ಯಕ್ಕೆ ಸಂಬಂಧಿಸಿದಂತೆ ಬಂಧನಗಳ ಪ್ರಮಾಣವೂ 260% ಹೆಚ್ಚಳ ಕಂಡಿದೆ. 2006-2013ರಲ್ಲಿ 1,362 ಜನರ ಬಂಧನವಾಗಿದ್ದರೆ, 2014 ಮತ್ತು 2022ರ ನಡುವೆ 4,888 ಜನರನ್ನು ಬಂಧಿಸಲಾಗಿದೆ. ಮಾದಕದ್ರವ್ಯ ವಶಪಡಿಸುವಿಕೆಯ ವಿಚಾರದಲ್ಲಿ, 2006-2013ರ ನಡುವೆ 91.9 ಮಿಲಿಯನ್ ಡಾಲರ್ ಮೌಲ್ಯದ 1,52,000 ಕೆಜಿ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. 2014-2022ರ ಅವಧಿಯಲ್ಲಿ, ಸರ್ಕಾರಿಸ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ದಾಳಿ ನಡೆಸಿ, 296.8 ಮಿಲಿಯನ್ ಡಾಲರ್ ಮೌಲ್ಯದ 3,30,000 ಕೆಜಿ ಪ್ರಮಾಣದ ಮಾದಕದ್ರವ್ಯ ವಶಪಡಿಸಿಕೊಂಡಿವೆ.

ಭಾರತ ಸರ್ಕಾರ ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಘೋಷಿಸಿದ್ದು, ಭಾರತದ ಆರ್ಥಿಕತೆ ಮತ್ತು ಭದ್ರತೆಗೆ ಸವಾಲಾಗುವ ಕಪ್ಪು ಹಣ ಮತ್ತು ಸಂಘಟಿತ ಮಾಫಿಯಾಗಳನ್ನು ಗುರಿಯಾಗಿಸಿ ಕಾರ್ಯಾಚರಿಸುತ್ತಿದೆ. ಈಶಾನ್ಯ ಭಾರತದ ಬಹುತೇಕ ರಾಜ್ಯ ಸರ್ಕಾರಗಳು ಗಡಿಯಾಚೆಗಿನ ಮಾದಕದ್ರವ್ಯ ವ್ಯಾಪಾರದ ವಿರುದ್ಧ ಆಗಾಗ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಅಪಾರ ಪ್ರಮಾಣದಲ್ಲಿ ವಿವಿಧ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿವೆ. ಆದರೆ, ಮಾದಕದ್ರವ್ಯದ ಪಿಡುಗು ಪೂರ್ಣವಾಗಿ ತೊಲಗಲು ಇನ್ನೂ ಬಹಳಷ್ಟು ಸಮಯ, ಕಾರ್ಯದ ಅವಶ್ಯಕತೆಯಿದೆ ಎಂದು ಇದು ಸಾಬೀತುಪಡಿಸಿದೆ.

Latest Videos
Follow Us:
Download App:
  • android
  • ios