Asianet Suvarna News Asianet Suvarna News

'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'

ಸದ್ಯಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ಮಾತ್ರ ವಾಸ್ತವ. ಎನ್‌ಆರ್‌ಸಿ ಇನ್ನೂ ಚರ್ಚೆಯ ಹಂತದಲ್ಲಿದೆ. 130 ಕೋಟಿಗಿಂತ ಹೆಚ್ಚಿರುವ ಭಾರತೀಯರಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯನ್ನೂ ಸಹ ಎನ್‌ಆರ್‌ಸಿಯಿಂದ ಹೊರಗಿಡುವುದಿಲ್ಲ. ಯಾರೂ ಅದರ ಬಗ್ಗೆ ಭಯಪಡಬೇಕಾಗಿಲ್ಲ.

No one needs to fear or worry about NRC and CAA says Prakash Javadekar
Author
Bengaluru, First Published Dec 23, 2019, 12:11 PM IST

ಇಡೀ ದೇಶವು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚಿಸುತ್ತಿದೆ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಂಡವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರೋಧಿಗಳು ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಸತ್ಯಸಂಗತಿಗಳನ್ನು ಎತ್ತಿ ತೋರಿಸುವುದು ಇಂದು ಅಗತ್ಯ.

ಮೊದಲನೆಯದಾಗಿ, ಪೌರತ್ವ ತಿದ್ದುಪಡಿ ಕಾಯ್ದೆ-2019 ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಎರಡೂ ವಿಭಿನ್ನ ವಿಷಯಗಳಾಗಿವೆ. ಇಂದು ಎದ್ದಿರುವ ಅನುಮಾನಗಳು ಮುಖ್ಯವಾಗಿ ಈ ಎರಡು ಸಮಸ್ಯೆಗಳನ್ನು ಒಂದುಗೂಡಿಸುವ ಗುರಿಯನ್ನು ಹೊಂದಿವೆ. ಹೀಗಾಗಿ ಅಲ್ಪಸಂಖ್ಯಾತ ಸಮುದಾಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುತ್ತಿವೆ. ಇದು ಕೆಲವು ಜನರ ಪ್ರತಿಭಟನೆಗೆ ಕಾರಣವಾಗಿದೆ. ಮುಸ್ಲಿಮರಿಗೆ ಲಭ್ಯವಿರುವ ರಕ್ಷಣೆಗಳನ್ನು ಕೊನೆಗೊಳಿಸಲಾಗುತ್ತದೆ ಮತ್ತು ಅವರನ್ನು ಹೊರಗಿನವರು ಎಂದು ಘೋಷಿಸಲಾಗುತ್ತದೆ ಎಂಬ ಸುಳ್ಳು ವದಂತಿಗಳ ಭಯವನ್ನು ಸೃಷ್ಟಿಸಲಾಗಿದೆ.

ಪೌರತ್ವ ಕಾಯ್ದೆ ಸಮೀಕ್ಷೆ: ತೀವ್ರ ಪ್ರತಿಭಟನೆಯ ನಡುವೆಯೂ ಅಚ್ಚರಿಯ ಜನಮತ!

ನಿರಾಶ್ರಿತರ ರಕ್ಷಣೆ ನಮ್ಮ ಕರ್ತವ್ಯ

ಮೊದಲನೆಯದಾಗಿ, ಪೌರತ್ವ ತಿದ್ದುಪಡಿ ಮಸೂದೆಯನ್ನು ಅರ್ಥಮಾಡಿಕೊಳ್ಳೋಣ. ದೇಶದ ವಿಭಜನೆಯವರೆಗೂ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಭಾರತದ ಭಾಗವಾಗಿದ್ದವು. ಅಷ್ಘಾನಿಸ್ತಾನವು ಈ ಉಪಖಂಡದ ದೊಡ್ಡ ಪ್ರದೇಶವಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸೃಷ್ಟಿಗೆ ಆಧಾರವೆಂದರೆ ಧರ್ಮ. ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಆ ದೇಶಗಳಿಗೆ ಹೋದರು ಮತ್ತು ಅಧಿಕ ಸಂಖ್ಯೆಯ ಹಿಂದೂಗಳು ಆ ದೇಶಗಳಿಂದ ಭಾರತಕ್ಕೆ ಬಂದರು.

ನಿರಾಶ್ರಿತರಿಗೆ ಭಾರತದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಆ ಸಮಯದಲ್ಲಿ ಮಹಾತ್ಮಾ ಗಾಂಧಿಯವರು, ‘ಒಂದು ಭಾರತವನ್ನು ಈಗ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವುದು ನಮ್ಮ ಕರ್ತವ್ಯ’ ಎಂದು ಹೇಳಿದ್ದರು: ಇದೇ ರೀತಿಯ ಅಭಿಪ್ರಾಯಗಳನ್ನು ನೆಹರೂ ಮತ್ತು ಸರ್ದಾರ್‌ ಪಟೇಲ… ಅವರೂ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಲಕ್ಷಾಂತರ ನಿರಾಶ್ರಿತರಿಗೆ ಪೌರತ್ವ ನೀಡಲಾಯಿತು.

ಇಂದು ಪಾಕಿಸ್ತಾನ, ಅಷ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಎಲ್ಲವೂ ಸ್ವಯಂಘೋಷಿತ ಇಸ್ಲಾಮಿಕ್‌ ರಾಷ್ಟ್ರಗಳಾಗಿವೆ. ಆದ್ದರಿಂದ, ಆ ದೇಶಗಳಲ್ಲಿ ಧಾರ್ಮಿಕತೆಯ ಆಧಾರದ ಮೇಲೆ ಮುಸ್ಲಿಮರಿಗೆ ಕಿರುಕುಳ ಪ್ರಶ್ನಾರ್ಹವಲ್ಲ. ಭಾರತದಲ್ಲಿ, ಪವಿತ್ರವಾದ ನಂಬಿಕೆಯು ಯಾವುದೇ ಧರ್ಮವಲ್ಲ, ಬದಲಿಗೆ ಸಂವಿಧಾನವಾಗಿದೆ. ಆದ್ದರಿಂದ, ಹಿಂದೂ, ಸಿಖ್‌, ಕ್ರಿಶ್ಚಿಯನ್‌, ಬೌದ್ಧ ಮತ್ತು ಪಾರ್ಸಿ ನಿರಾಶ್ರಿತರಿಗೆ ರಕ್ಷಣೆ ನೀಡುವ ನೀತಿಯನ್ನು ಭಾರತ ಯಾವಾಗಲೂ ಅನುಸರಿಸುತ್ತಿದೆ.

ಮಂಗಳೂರು ಗೋಲಿಬಾರ್, ಸಿಐಡಿ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ!

ಆಗ ಬೆಂಬಲಿಸಿದವರು ಈಗ..

2003 ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ನೀತಿಯನ್ನು ಕಾನೂನುಬದ್ಧವಾಗಿ ಔಪಚಾರಿಕಗೊಳಿಸುವತ್ತ ಮೊದಲ ಹೆಜ್ಜೆ ಇಟ್ಟಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡಲಾಗುವುದು ಎಂದು ಘೋಷಿಸಿತು. ಇಂದು ಪ್ರತಿಭಟನೆ ನಡೆಸುತ್ತಿರುವ ಅನೇಕ ರಾಜಕೀಯ ಪಕ್ಷಗಳು ಆ ಸಮಯದಲ್ಲಿ ವಾಜಪೇಯಿ ಸರ್ಕಾರವನ್ನು ಬೆಂಬಲಿಸಿದ್ದವು ಎಂಬುದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ಇದಾದ ನಂತರ, 2004ರಲ್ಲಿ ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಅಧಿಕಾರ ವಹಿಸಿಕೊಂಡಿತು. ಅವರು ಮತ್ತೆ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದರು. ಅದೇ ಕೆಲಸವನ್ನು 2005ರಲ್ಲಿ ಮತ್ತೊಂದು ಬಾರಿ ಪುನರಾವರ್ತಿಸಲಾಯಿತು. ಆ ಸಂದರ್ಭದಲ್ಲಿ, ಕಮ್ಯುನಿಸ್ಟ್‌ ಪಕ್ಷಗಳು, ತೃಣಮೂಲ ಕಾಂಗ್ರೆಸ್‌ ಮತ್ತು ಈಗ ನಮ್ಮನ್ನು ವಿರೋಧಿಸುತ್ತಿರುವ ಹಲವಾರು ಪಕ್ಷಗಳು ಯುಪಿಎ ಸರ್ಕಾರದ ಪಾಲುದಾರರಾಗಿದ್ದವು.

2003ರ ಕಾಯ್ದೆಯು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ ನಿರಾಶ್ರಿತರ ಬಗ್ಗೆ ಮಾತ್ರ ಹೇಳುತ್ತದೆ. ಈಗಿನ ಹೊಸ ಕಾಯ್ದೆಯು ಧಾರ್ಮಿಕತೆ ಆಧಾರದ ಮೇಲೆ ಕಿರುಕುಳ ಅನುಭವಿಸುತ್ತಿರುವ ಹಿಂದೂಗಳು, ಸಿಖ್ಖರು, ಬೌದ್ಧರು, ಕ್ರಿಶ್ಚಿಯನ್ನರು, ಜೈನರು ಮತ್ತು ಪಾರ್ಸಿಗಳ ಬಗ್ಗೆ ಹೇಳುತ್ತದೆ. ನರೇಂದ್ರ ಮೋದಿ ಸರ್ಕಾರ ತಂದಿರುವ 2019ರ ಪೌರತ್ವ ತಿದ್ದುಪಡಿ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಷ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂಗಳು, ಸಿಖ್ಖರು, ಬೌದ್ಧರು, ಕ್ರಿಶ್ಚಿಯನ್ನರು, ಜೈನರು ಮತ್ತು ಪಾರ್ಸಿಗಳಿಗೆ ಪೌರತ್ವವನ್ನು ಒದಗಿಸುತ್ತದೆ. ಆದ್ದರಿಂದ ಇದು ಮೊದಲಿಗಿಂತ ಹೆಚ್ಚು ವಿಸ್ತಾರವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಸ್ವಾಗತಿಸಬೇಕಾಗಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ, ಕೆಲವು ಪಕ್ಷಗಳು 2004 ಮತ್ತು 2005ರಲ್ಲಿ ತೆಗೆದುಕೊಂಡ ನಿಲುವಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳುತ್ತಿವೆ. ಇದು ಬೂಟಾಟಿಕೆ.

NRC, CAA ತಡೆಯಲು 2 ದಾರಿ ತೋರಿಸಿದ ಚುನಾವಣಾ ಚಾಣಕ್ಯ

ಮುಸ್ಲಿಮರಿಗೆ ತೊಂದರೆಯಾಗಲ್ಲ

ಇಂದು ಕೇಳಲಾಗುತ್ತಿರುವ ಒಂದು ಪ್ರಶ್ನೆಯೆಂದರೆ: ಮುಸ್ಲಿಮರ ವಿರುದ್ಧ ಏಕೆ ತಾರತಮ್ಯ? ಇದಕ್ಕೆ ಉತ್ತರ: ಮುಸ್ಲಿಮರ ವಿರುದ್ಧ ಯಾವುದೇ ತಾರತಮ್ಯವಿಲ್ಲ. ಭವಿಷ್ಯದಲ್ಲಿಯೂ ಮುಸ್ಲಿಮರ ವಿರುದ್ಧ ಯಾವುದೇ ತಾರತಮ್ಯ ಇರಬಾರದು.

ಇಂದು ಭಾರತದ ಪ್ರಜೆಯಾಗಿರುವ ಒಬ್ಬ ಮುಸ್ಲಿಮರೂ ಸಹ ಈ ವಿಷಯದಲ್ಲಿ ಯಾವುದೇ ಅನನುಕೂಲತೆ ಅನುಭವಿಸುವುದಿಲ್ಲ. ಮುಸ್ಲಿಂ ನಾಗರಿಕರ ದೇಶಪ್ರೇಮದ ಮೇಲೆ ಯಾವುದೇ ಅನುಮಾನವಿಲ್ಲ. ಮುಸ್ಲಿಂ ನಾಗರಿಕರ ಹಕ್ಕುಗಳ ಬಗ್ಗೆ ಯಾವುದೇ ರಾಜಿಯನ್ನೂ ಮಾಡಿಕೊಳ್ಳುವುದಿಲ್ಲ.

ಪ್ರಸ್ತುತ ವಿಷಯವು ಭಾರತೀಯ ನಾಗರಿಕರಿಗೆ ಸಂಬಂಧಿಸಿಯೇ ಇಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಷ್ಘಾನಿಸ್ತಾನ ಇಸ್ಲಾಮಿಕ್‌ ರಾಷ್ಟ್ರಗಳಾದ್ದರಿಂದ ಮುಸ್ಲಿಮರು ಆ ದೇಶಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ, ಯಾವುದೇ ರಾಜಕೀಯ ಪಕ್ಷವೂ ಪ್ರಧಾನಿಯವರು ಸ್ವತಃ ಕೇಳಿದ ಪ್ರಶ್ನೆಗೆ ಉತ್ತರಿಸಿಲ್ಲ: ಆ ದೇಶಗಳಲ್ಲಿನ ಮುಸ್ಲಿಮರಿಗೆ ಭಾರತೀಯ ಪೌರತ್ವವನ್ನು ಪಡೆಯಲು ಸುಗಮ ಹಾದಿ ಒದಗಿಸಬೇಕೇ? ಭಾರತೀಯ ಪೌರತ್ವಕ್ಕಾಗಿ 30 ಕೋಟಿ ಜನರಿಗೆ ಸ್ಪಷ್ಟದಾರಿ ಒದಗಿಸುವುದು ಸೂಕ್ತವೇ? ಇದಕ್ಕೆ ಪ್ರತಿಪಕ್ಷಗಳು ಸಿದ್ಧವಾಗಿವೆಯೇ?

ವಿಶ್ವದ ಯಾವುದೇ ದೇಶವು ಪೌರತ್ವಕ್ಕೆ ಸುಲಭವಾದ ಮಾರ್ಗವನ್ನು ಒದಗಿಸುವುದಿಲ್ಲ. ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಕಾನೂನುಗಳಿವೆ ಮತ್ತು ಅಕ್ರಮ ವಲಸಿಗರನ್ನು ಯಾವಾಗಲೂ ಗಡೀಪಾರು ಮಾಡಲಾಗುತ್ತದೆ. ಇದು ಜಾಗತಿಕ ಕ್ರಮವಾಗಿದ್ದು, ಇದನ್ನು ಯಾರೂ ಆಕ್ಷೇಪಿಸುವುದಿಲ್ಲ. ಭಾರತವು ಅದೇ ತತ್ವವನ್ನು ಅನುಸರಿಸಿದಾಗ ಮಾತ್ರ ಕೆಲವರಿಗೆ ಇದರಲ್ಲಿ ಸಮಸ್ಯೆ ಕಾಣುವುದು ನಿಜಕ್ಕೂ ದುರದೃಷ್ಟಕರ.

ಅನುಮಾನ ರಾಜಕೀಯ ಪ್ರೇರಿತ

ಇಂಥವರೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿಯ ಬಗ್ಗೆ ಜನರ ಮನಸ್ಸಿನಲ್ಲಿ ಗೊಂದಲವನ್ನು ಬಿತ್ತುತ್ತಿದ್ದಾರೆ. ಜಗತ್ತಿನ ಎಲ್ಲ ಪ್ರಮುಖ ದೇಶಗಳು ನಾಗರಿಕರ ನೋಂದಣಿಯನ್ನು ಹೊಂದಿವೆ. ಭಾರತದಲ್ಲಿ ಇದೊಂದು ಕೊರತೆಯಿದ್ದು, ಅದನ್ನು ನೀಗಿಸಲು ಎನ್‌ಆರ್‌ಸಿ ಸಹಾಯ ಮಾಡುತ್ತದೆ. ರಾಜೀವ್‌ ಗಾಂಧಿ ಅವರು 1985ರಲ್ಲಿ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದಾಗ ಅಂತಹ ಎನ್‌ಆರ್‌ಸಿ ಅಗತ್ಯವನ್ನು ಮೊದಲು ಒಪ್ಪಿಕೊಂಡರು. ಅಸ್ಸಾಂನಲ್ಲಿನ ಇಂದಿನ ಎನ್‌ಆರ್‌ಸಿ, ಆ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿದೆ.

ಎನ್‌ಆರ್‌ಸಿ ಪಟ್ಟಿಯಲ್ಲಿ ಹೆಸರು ಇಲ್ಲದವರು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಸಂಪೂರ್ಣ ಪ್ರಕ್ರಿಯೆಯು ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ನಡೆದಿರುವುದರಿಂದ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸುವುದು ಸೂಕ್ತವಲ್ಲ.

ದೇಶದ ಉಳಿದ ಭಾಗಗಳಲ್ಲಿ ಎನ್‌ಆರ್‌ಸಿಗೆ ಸಂಬಂಧಿಸಿದಂತೆ, ಅದರ ವಿಧಾನಗಳು ಇನ್ನೂ ಅಂತಿಮವಾಗಿಲ್ಲ. ಈ ಹಂತದಲ್ಲಿ ಅದರ ಬಗ್ಗೆ ಸೃಷ್ಟಿಸಲಾಗುತ್ತಿರುವ ಅನುಮಾನಗಳು ರಾಜಕೀಯ ಪ್ರೇರಿತ ಮತ್ತು ದುರದೃಷ್ಟಕರ.

ಪೌರತ್ವ ಕಾಯ್ದೆ ಪರ ಜನಜಾಗೃತಿ: ತುಂಬಿ ತುಳುಕಿದ ಟೌನ್‌ ಹಾಲ್

ಆಧಾರ್‌ ಕಾರ್ಡ್‌ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ, ಬಡಜನರು ತಮ್ಮ ಗುರುತನ್ನು ಸಾಬೀತುಪಡಿಸಲು ದಾಖಲೆಗಳನ್ನು ಹೇಗೆ ನೀಡುತ್ತಾರೆ ಎಂಬ ಅನುಮಾನವನ್ನು ಜನರು ವ್ಯಕ್ತಪಡಿಸಿದರು. ಹತ್ತು ವರ್ಷಗಳ ನಂತರ, ನಾವು ಏನು ನೋಡುತ್ತಿದ್ದೇವೆ? ಬಹುತೇಕ ಎಲ್ಲ ಭಾರತೀಯ ಪ್ರಜೆಗಳಿಗೆ ಆಧಾರ್‌ ಕಾರ್ಡ್‌ ನೀಡಲಾಗಿದೆ. ಸ್ಪಷ್ಟವಾಗಿ, ಭಾರತದ ಜನರು ತಮ್ಮ ಸಾಮರ್ಥ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುವವರಿಗಿಂತಲೂ ಹೆಚ್ಚು ಬುದ್ಧಿವಂತರಿದ್ದಾರೆ.

ಕೆಸರಲ್ಲಿ ಕಲ್ಲು ಹುಡುಕುವವರು

ಸದ್ಯಕ್ಕೆ, ಪೌರತ್ವ ತಿದ್ದುಪಡಿ ಕಾಯ್ದೆ ಮಾತ್ರ ವಾಸ್ತವ. ಎನ್‌ಆರ್‌ಸಿ ಚರ್ಚೆಯ ಹಂತದಲ್ಲಿದೆ. ನಾನು ಒಂದನ್ನು ಮಾತ್ರ ಸ್ಪಷ್ಟಪಡಿಸುತ್ತೇನೆ; 130 ಕೋಟಿಗಿಂತ ಹೆಚ್ಚಿರುವ ಭಾರತೀಯ ನಾಗರಿಕರಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯನ್ನೂ ಸಹ ಎನ್‌ಆರ್‌ಸಿಯಿಂದ ಹೊರಗಿಡುವುದಿಲ್ಲ. ಯಾರೂ ಅದರ ಬಗ್ಗೆ ಭಯಪಡಬೇಕಾಗಿಲ್ಲ ಅಥವಾ ಚಿಂತಿಸಬೇಕಾಗಿಲ್ಲ. ಕೆಲವು ಶಕ್ತಿಗಳು ಹಿಂಸೆಯನ್ನು ಹುಟ್ಟುಹಾಕುತ್ತಿವೆ. ಅವರ ನಿಜ ಬಣ್ಣ ಶೀಘ್ರದಲ್ಲೇ ಬಯಲಾಗಲಿದೆ.

ಪ್ರಧಾನಿ ಮೋದಿಯವರ ಐತಿಹಾಸಿಕ ಎರಡನೇ ಚುನಾವಣಾ ಗೆಲುವು, ತ್ರಿವಳಿ ತಲಾಖ್‌ ಮಸೂದೆ, ಅಯೋಧ್ಯೆ ವಿಷಯದಲ್ಲಿನ ಶಾಂತಿಯುತ ನಿರ್ಣಯ, 370ನೇ ವಿಧಿಯ ರದ್ದು- ಈ ಎಲ್ಲ ಬೆಳವಣಿಗೆಗಳಿಂದ ಪ್ರತಿಪಕ್ಷಗಳು ನಿರಾಶೆಗೊಂಡಿವೆ ಎಂದು ತೋರುತ್ತದೆ. ಈಗ ಅವರು ಕೆಸರಿನಲ್ಲಿ ಅವಕಾಶವನ್ನು ಹುಡುಕುತ್ತಿದ್ದಾರೆ. ಆದರೆ ನಿರಾಶಾವಾದ ಮತ್ತು ನಕಾರಾತ್ಮಕ ರಾಜಕಾರಣಕ್ಕೆ ಭಾರತ ಇನ್ನು ಮುಂದೆ ಯಾವುದೇ ಅವಕಾಶ ನೀಡುವುದಿಲ್ಲ.

- ಪ್ರಕಾಶ್ ಜಾವಡೇಕರ್ 

Follow Us:
Download App:
  • android
  • ios