Asianet Suvarna News Asianet Suvarna News

India@75: ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬಿದ ಬೆಳಗಾವಿ ಹುದಲಿ ರಾಷ್ಟ್ರೀಯ ಶಾಲೆ

ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಘಟಿಸುವಲ್ಲಿ ಹಾಗೂ ಅಸ್ಪೃಶ್ಯತೆ ನಿವಾರಣೆ ವಿಚಾರದಲ್ಲಿ ಹುದಲಿಯ ಗಾಂಧಿ ಸೇವಾ ಸಂಘ ಹಾಗೂ ಖಾದಿ ಬಂಡಾರದ ಪಾತ್ರ ಹಿರಿದು.

Azadi Ki Amrith Mahothsav Role of Belagavi Hudali Gandhi Seva Sangh hls
Author
Bengaluru, First Published Jul 17, 2022, 1:34 PM IST

ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸಂಘಟಿಸುವಲ್ಲಿ ಹಾಗೂ ಅಸ್ಪೃಶ್ಯತೆ ನಿವಾರಣೆ ವಿಚಾರದಲ್ಲಿ ಹುದಲಿಯ ಗಾಂಧಿ ಸೇವಾ ಸಂಘ ಹಾಗೂ ಖಾದಿ ಬಂಡಾರದ ಪಾತ್ರ ಹಿರಿದು. ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುನ್ನಲೆಯಲ್ಲಿದ್ದ ಪುಟ್ಟಗ್ರಾಮ ಹುದಲಿಯಲ್ಲಿ ಈ ಎರಡು ಸಂಘಗಳು ಜನರನ್ನು ಸಂಘಟಿಸುವಲ್ಲಿ ತನ್ನದೇ ಆದ ಪಾತ್ರವಹಿಸಿದ್ದವು.

ಗಾಂಧೀಜಿಯಿಂದ ತೀವ್ರ ಪ್ರಭಾವಿತರಾಗಿದ್ದ ಅಣ್ಣು ಗುರೂಜಿ(ಬಾಲಕೃಷ್ಣ ಯೆಮಾಜಿ ದೇಶಪಾಂಡೆ) ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರ ರಾವ್‌ ದೇಶಪಾಂಡೆ ಅವರೊಂದಿಗೆ ಈ ಸಂಘಗಳ ಸ್ಥಾಪನೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆ ನೋಡಿದರೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿಯ ಅಣ್ಣು ಗುರೂಜಿ ಅವರ ಹೆಸರು ಯಾವತ್ತಿಗೂ ಚಿರಸ್ಥಾಯಿ. ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದ ಇವರು, ಸ್ವಾತಂತ್ರ್ಯದ ನಂತರವೂ ಮದುವೆಯಾಗದೇ ದೇಶಕ್ಕಾಗಿ ದುಡಿದು, ಮಡಿದರು.

India@75:ಅತ್ತಿಂಗಲ್ ದಂಗೆ- ಬ್ರಿಟಿಷರ ವಿರುದ್ಧ ಸಾಮಾನ್ಯ ಜನರ ಹೋರಾಟ

ರಾಷ್ಟ್ರೀಯ ಶಾಲೆ ಆರಂಭ: ಸಾತಂತ್ರ್ಯ ಹೋರಾಟಗಾರರಿಗೆ ಧೈರ್ಯ ಹಾಗೂ ರಾಷ್ಟ್ರೀಯ ಮನೋಭಾವ, ನೈತಿಕ ಗುಣಮಟ್ಟಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು ಅಣ್ಣು ಗುರೂಜಿ. ಈ ಶಾಲೆಯಿಂದಲೇ ಬಾಲಕೃಷ್ಣ ಇದ್ದ ಅವರು ಹೆಸರು ಅಣ್ಣು ಗುರೂಜಿ ಎಂದಾಯಿತು. ಈ ಶಾಲೆಗೆ ಅವರೇ ಪಾಠ ಮಾಡುತ್ತಿದ್ದರು. ಈ ಶಾಲೆ ಬರೋಬ್ಬರಿ ಮೂರು ವರ್ಷ ಕಾಲ ನಡೆದು ನಂತರ ಸ್ಥಗಿತಗೊಂಡಿತು. ಅಲ್ಲಿಯವರೆಗೂ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರಿಸಿದೆ. ಈ ಶಾಲೆಯಿಂದಲೇ ಬಾಲಕೃಷ್ಣ ಇದ್ದ ಅವರು ಹೆಸರು ಅಣ್ಣು ಗುರೂಜಿ ಎಂದಾಯಿತು.

ಗಾಂಧಿ ಸೇವಾ ಸಂಘದ ಪಾತ್ರ:

1924 ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದ ನಂತರ ಈ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿತು. 1937ರಲ್ಲಿ ಹುದಲಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಗಾಂಧಿ ಸೇವಾ ಸಂಘ ಸ್ಥಾಪಿತವಾಯಿತು. ಖಾದಿ ಬಳಕೆಗೆ ಉತ್ತೇಜನ ನ ಈಡಲಾಯಿತು. ಗಾಂಧೀಜಿ ಪ್ರಭಾವಕ್ಕೆ ಒಳಗಾಗಿ, ಅಣ್ಣು ಗುರೂಜಿ ಖಾದಿಯನ್ನೇ ಉಡಲು ಆರಂಭಿಸಿದರು. ಅವರ ತಾಯಿ ಕೂಡ ಖಾದಿ ಸೀರೆ ಮಾತ್ರ ಧರಿಸುತ್ತಿದ್ದರು. ಜನತೆಗೂ ಖಾಗಿ ಮಹತ್ವವನ್ನು ತಿಳಿಸಲಾಯಿತು.

ಪಿತೂರಿ ಮೂಲಕ ಬಂಧನ: 1947ರ ಚಲೇಜಾವ್‌ ಚಳವಳಿ ಮೂಲಕ ದೇಶದ ಸ್ವಾತಂತ್ರ್ಯದ ಹೋರಾಟ ವೇಗ ಪಡೆದುಕೊಂಡಿತು. ಈ ವೇಳೆ ಸರ್ಕಾರಿ ಕಚೇರಿ, ಪೊಲೀಸ್‌ ಠಾಣೆಗಳನ್ನು ಸುಡುವುದು, ರೈಲುಗಳ ಧ್ವಂಸ, ಸರ್ಕಾರಿ ಖಜಾನೆ ಲೂಟಿ ಹೀಗೆ ಕಿಚ್ಚು ಹೆಚ್ಚಿತು. ಈ ವೇಳೆ ಅಣ್ಣು ಗುರೂಜಿ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರ ತಂಡ ಪಾಶ್ಚಾಪುರದಲ್ಲಿ ಅಡಗಿದೆ ಎಂಬ ಸುದ್ದಿ ತಿಳಿದು ಬ್ರಿಟಿಷರು ಗುಂಡಿನ ಮಳೆಗರೆದರು.

ಆದರೆ ಅಷ್ಟರಲ್ಲಾಗಲೇ ಅಣ್ಣು ಗುರೂಜಿ ಮತ್ತು ಸಂಗಡಿಗರು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಈ ಸುದ್ದಿ ತಿಳಿದ ಬ್ರಿಟಿಷರು ಅಣ್ಣು ಗುರೂಜಿ ಹಾಗೂ ಅವರ ಸಂಗಡಿಗರನ್ನು ಹಿಡಿದುಕೊಟ್ಟರೆ .5 ಸಾವಿರ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದರು. ಅನ್ಯರ ಪಿತೂರಿ ಮೂಲಕ ವಿಜಯಪುರದಲ್ಲಿ ಅಣ್ಣು ಗುರೂಜಿ ಬ್ರಿಟಿಷರಿಗೆ ಸೆರೆಯಾಗಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಬಿಡುಗಡೆ ನಂತರ, ಕರ್ನಾಟಕ ಏಕೀಕರಣ, ಕನ್ನಡ ಸಂಘಟನೆಗಾಗಿ ಶ್ರಮಿಸಿ 1990ರ ಜುಲೈ 24ರಂದು ನಿಧನರಾದರು.

India@75: ಮಂಗಳೂರು ಕರಾವಳಿಯನ್ನು ಪರಕೀಯರ ಕೈಯಿಂದ ರಕ್ಷಿಸಿದ್ದ ರಾಣಿ ಅಬ್ಬಕ್ಕ

ಹುದಲಿ ತಲುಪುವುದು ಹೇಗೆ?

ಹುದಲಿ ಗ್ರಾಮ ಬೆಳಗಾವಿಯಿಂದ 28 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಬಸ್‌ ಮೂಲಕ ತಲುಪಬಹುದಾಗಿದೆ.

- ಮಂಜುನಾಥ ಗದಗಿನ

Follow Us:
Download App:
  • android
  • ios