Asianet Suvarna News Asianet Suvarna News

Health Tips : ತ್ರಿದೋಷದಿಂದ ದೇಹದಲ್ಲಾಗುತ್ತೆ ಈ ಬದಲಾವಣೆ

ಆಯುರ್ವೇದಕ್ಕೆ ಮತ್ತೆ ಜನರು ವಾಪಸ್ ಬರ್ತಿದ್ದಾರೆ. ಆಯುರ್ವೇದದಲ್ಲಿ ತ್ರಿದೋಷಕ್ಕೆ ಮಹತ್ವ ನೀಡಲಾಗಿದೆ. ಅದ್ರಂತೆ ಚಿಕಿತ್ಸೆ ಕೂಡ ನೀಡಲಾಗುತ್ತದೆ. ಆಯುರ್ವೇದದ ಮೊದಲ ಹೆಜ್ಜೆ ತ್ರಿದೋಷ ಹಾಗೂ ಅದ್ರಿಂದಾಗುವ ಸಮಸ್ಯೆಗಳು. ಇಂದು ನಾವು ಅದ್ರ ಬಗ್ಗೆ ಮಾಹಿತಿ ನೀಡ್ತೇವೆ.
 

How Ayurvedic Treatment Work In Tridosha
Author
First Published Oct 27, 2022, 3:54 PM IST

ಆಯುರ್ವೇದ ಚಿಕಿತ್ಸೆ ಅಂದ್ರೆ ಗಿಡಮೂಲಿಕೆ ಹಾಗೂ ನೈಸರ್ಗಿಕ ರೀತಿಯಲ್ಲಿ ಚಿಕಿತ್ಸೆ ನೀಡುವುದಾಗಿದೆ. ಕೊರೊನಾ ನಂತ್ರ ಆಯುರ್ವೇದ ಚಿಕಿತ್ಸೆಗೆ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಆಯುರ್ವೇದ ಚಿಕಿತ್ಸೆಯಿಂದ ದೇಹಕ್ಕೆ ಯಾವುದೇ ಅಡ್ಡಪರಿಣಾಮವಾಗುವುದಿಲ್ಲ. ಆಯುರ್ವೇದ ಚಿಕಿತ್ಸೆ ಪಡೆದಿದ್ದರೆ ಅಥವಾ ಅದರ ಬಗ್ಗೆ ಆಸಕ್ತಿ ಇರುವವರು ವಾತ, ಪಿತ್ತ ಹಾಗೂ ಕಫದ ಬಗ್ಗೆ ತಿಳಿದಿರುತ್ತಾರೆ. ಆದ್ರೆ ಇನ್ನೂ ಅನೇಕರಿಗೆ ಈ ವಾತ, ಪಿತ್ತ ಹಾಗೂ ಕಫದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹಾಗೆಯೇ ಈ ಮೂರು ನಮ್ಮ ದೇಹಕ್ಕೆ ಎಷ್ಟು ಮಹತ್ವ ಎಂಬುದು ಗೊತ್ತಿಲ್ಲ. ನಿಮ್ಮ ದೇಹದಲ್ಲಿ ವಾತ, ಪಿತ್ತ ಹಾಗೂ ಕಫ ಮೂರೂ ಸಮತೋಲನದಲ್ಲಿದ್ದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ. ಅದೇ ಈ ಮೂವರಲ್ಲಿ ಒಂದು ಏರುಪೇರಾದ್ರೂ ಆರೋಗ್ಯ ಹದಗೆಡುತ್ತದೆ. ಇದನ್ನು ತ್ರಿದೋಷ ಎಂದೂ ಕರೆಯುತ್ತಾರೆ. ವಾತ, ಪಿತ್ತ ಹಾಗೂ ಕಫದ ಅಸಮತೋಲನ ಅಂದ್ರೆ ತ್ರಿದೋಷದ ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.

ವಾತ (Vata,),ಕಫ (Kapha) ಮತ್ತು ಪಿತ್ತ (Pitta) ಅಸಮತೋಲನಗೊಳ್ಳಲು ಕಾರಣವೇನು? : ತ್ರಿದೋಷಕ್ಕೆ ಮುಖ್ಯವಾಗಿ ಎರಡು ಕಾರಣವಿದೆ. ಒಂದು  ನೈಸರ್ಗಿಕ ಕಾರಣವಾದ್ರೆ  ಮತ್ತೊಂದು ಅಸ್ವಾಭಾವಿಕ ಕಾರಣ.  ಋತು ಮತ್ತು ವಯಸ್ಸಿನ ಬದಲಾವಣೆಯಿಂದ ರೋಗಗಳು ಸಂಭವಿಸುತ್ತವೆ. ಇದನ್ನು ನಾವು ನೈಸರ್ಗಿಕ ಕಾರಣದಲ್ಲಿ ಸೇರಿಸ್ತೇವೆ. ತಪ್ಪು ಜೀವನಶೈಲಿ (Lifestyle), ತಪ್ಪು ಆಹಾರ ಪದ್ಧತಿ ಅಥವಾ ಯಾವುದೇ ಸಾಂಕ್ರಾಮಿಕ ಕಾಯಿಲೆಯಿಂದ ತ್ರಿದೋಷ ಉಂಟಾದರೆ ಅದನ್ನು ಅಸ್ವಾಭಾವಿಕ ಕಾರಣದಿಂದ ಬಂದಂತದ್ದು ಎನ್ನಬಹುದು.

ಕಫ ಬಾಲ್ಯದಲ್ಲಿ ಮಕ್ಕಳಿಗೆ ಹೆಚ್ಚು ಸಮಸ್ಯೆಯನ್ನುಂಟು ಮಾಡುವಂತಹದ್ದು. ಚಳಿಗಾಲ ಮತ್ತು ವಸಂತಕಾಲದಲ್ಲಿ ಕಫದ ಸಮಸ್ಯೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಆದರೆ ಪಿತ್ತ ಪ್ರೌಢಾವಸ್ಥೆಯಲ್ಲಿ ಮತ್ತು ಬೇಸಿಗೆಯ ಋತುವಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ವಾತ ದೋಷವು ವೃದ್ಧಾಪ್ಯದಲ್ಲಿ ಉಲ್ಬಣಗೊಳ್ಳುತ್ತದೆ. ಶರತ್ಕಾಲದ ಅವಧಿಯಲ್ಲಿ ವಾತದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದು ನೈಸರ್ಗಿಕ ಕಾರಣದಿಂದ ಆಗುವಂತಹದ್ದು. ಹಾಗಾಗಿ ದೊಡ್ಡ ಮಟ್ಟದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ನಿಮಗೆ ಕಾಡುವುದಿಲ್ಲ. ಆದ್ರೆ ಅಸ್ವಾಭಾವಿಕ ಕಾರಣದಿಂದ ವಾತ, ಪಿತ್ತ ಮತ್ತು ಕಫ ಇದ್ರಲ್ಲಿ ಯಾವುದರಲ್ಲಿ ಏರುಪೇರಾದ್ರೂ ಅನೇಕ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. 

ವಾತ ಹೆಚ್ಚಾದ್ರೆ ಕಾಡುವ ಸಮಸ್ಯೆಗಳು ಯಾವುವು? : ದೇಹದಲ್ಲಿ ವಾತ ಅಂದರೆ ಗಾಳಿ ಹೆಚ್ಚಾದಾಗ ತುಂಬಾ ದಿನಗಳಿಂದ ಕಾಡ್ತಿರುವ ಒತ್ತಡ (Stres), ಹದಗೆಟ್ಟ ಜೀವನಶೈಲಿ, ನಿದ್ರಾಹೀನತೆ (Sleeplessness) ಅಥವಾ ಸೂಕ್ತ ಪ್ರಮಾಣದಲ್ಲಿ ನಿದ್ರೆ ಮಾಡದೆ ಇರುವುದು, ವಾಯು ಹೆಚ್ಚಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ನಿಮಗೆ ವಾತದ ಸಮಸ್ಯೆ ಕಾಡಲು ಶುರುವಾಗುತ್ತದೆ.  ವಾತ ಹೆಚ್ಚಾದಾಗ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನಿಲ (Gas) ಉತ್ಪತ್ತಿಯಾಗುತ್ತದೆ. ಹೊಟ್ಟೆಯಲ್ಲಿ ವಾಯು ಹೆಚ್ಚಾಗುತ್ತದೆ. ನಿಮ್ಮ ಹೊಟ್ಟೆ ಉಬ್ಬಿಕೊಳ್ಳಲು ಶುರುವಾಗುತ್ತದೆ. ಸದಾ ಮೈ –ಕೈ ನೋವು, ಪ್ರಕ್ಷುಬ್ಧತೆ, ನಿದ್ರಾಹೀನತೆ ಮತ್ತು ದೇಹದ ಭಾಗಗಳು ಮರಗಟ್ಟಿದ ಅನುಭವ ನಿಮಗಾಗುತ್ತದೆ.  

ತುಪ್ಪದ ಜೊತೆ ಸಕ್ಕರೆ… ಸೇವಿಸಿ ನೋಡಿ ಆರೋಗ್ಯಕ್ಕೆ ಲಾಭವೋ ಲಾಭ

ಪಿತ್ತ ದೋಷದಿಂದ ಏನೆಲ್ಲ ಸಮಸ್ಯೆ ಕಾಡುತ್ತೆ ಗೊತ್ತಾ? : ಪಿತ್ತ ಹೆಚ್ಚಾದಂತೆ ಕೋಪ ಹೆಚ್ಚಾಗುತ್ತದೆ. ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಚರ್ಮದಲ್ಲಿ ದದ್ದುಗಳು ಕಾಣಿಸಿಕೊಳ್ಳುವುದಲ್ಲದೆ ಎದೆ ಉರಿ ಎನ್ನಿಸುತ್ತದೆ. ವಾಕರಿಕೆ, ತಲೆ ಸುತ್ತು, ತಲೆ ನೋವು (Headache), ದೇಹದ ಅಂಗಾಂಗಗಳಲ್ಲಿ ಬಿಸಿ ಅನುಭವವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗಿದೆ ಅಂದ್ರೆ ಪಿತ್ತ ದೋಷವೂ ಒಂದು ಕಾರಣವಿರಬಹುದು.
ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಮತ್ತು ಹಸಿವನ್ನು ನಿಯಂತ್ರಿಸುವ ಕೆಲಸವನ್ನು ಪಿತ್ತ ಮಾಡುತ್ತದೆ. ಪಿತ್ತ ಅಸಮತೋಲನಗೊಂಡಾಗ ಜೀರ್ಣಕ್ರಿಯೆಯ ಸಮಸ್ಯೆ  ಪ್ರಾರಂಭವಾಗುತ್ತವೆ. ಅತಿಯಾದ ಮಸಾಲೆ ಪದಾರ್ಥ ಸೇವನೆ ಹಾಗೂ ಕರಿದ ಆಹಾರ ಸೇವನೆ ಜೊತೆ ತುಂಬಾ ಸಮಯ ಹಸಿವು ಕಟ್ಟುವುದು ಹಾಗೂ ಬಿಸಿಲಿನಲ್ಲಿರುವುದು  ಕೂಡ ಕಾರಣವಾಗುತ್ತದೆ.

ವ್ಯಾಯಾಮ ಮಾಡ್ಬೇಕು ನಿಜ, ಅದಕ್ಕೆ ತಕ್ಕ ಫುಡ್ ತಿಂದ್ರೆ ಮತ್ತೂ ಒಳ್ಳೇದು!

ದೇಹದಲ್ಲಿರುವ ಕಫದಲ್ಲಿ ಏರುಪೇರಾದ್ರೆ? : ದೇಹದಲ್ಲಿ ಕಫ ಹೆಚ್ಚಾದ್ರೆ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. ಖಿನ್ನತೆ ಮಟ್ಟ ಹೆಚ್ಚಾಗುವು ಸಾಧ್ಯತೆಯಿರುತ್ತದೆ. ಚರ್ಮದಲ್ಲಿ ತುರಿಕೆ (Itching), ಆಗಾಗ ಕೆಮ್ಮು (Cough), ಕೀಲು ನೋವು, ಮೂಗಿನಲ್ಲಿ ಲೋಳೆ, ಎದೆ ಬಿಗಿತ, ತಲೆನೋವು ಮತ್ತು ಮುಖದ ಊತ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ. ನೀವು ಸರಿಯಾಗಿ ನಿದ್ರೆ ಮಾಡದೆ ಹೋದಲ್ಲಿ, ರಾತ್ರಿ ಹೆಚ್ಚು ಹೊತ್ತು ಎಚ್ಚರವಿದ್ದಲ್ಲಿ, ಸರಿಯಾಗಿ ಆಹಾರ ಸೇವನೆ ಮಾಡದೆ ಹೋದಲ್ಲಿ, ವ್ಯಾಯಾಮವಿಲ್ಲದ ದೇಹ ಹಾಗೂ ಅತಿಯಾದ ಸಿಹಿ ಸೇವನೆ , ಕರಿದ ಆಹಾರ ಸೇವನೆಯಿಂದ ನಿಮಗೆ ಪಿತ್ತದೋಷ ಕಾಣಿಸಿಕೊಳ್ಳುತ್ತದೆ.
 

Follow Us:
Download App:
  • android
  • ios