Asianet Suvarna News Asianet Suvarna News

Udupi: ಮೀನುಗಾರರಿಗೆ ಅಭಯವಿತ್ತ ತಾಯಿ ಮಹಾಲಕ್ಷ್ಮಿ ದೇವಾಲಯ ಬ್ರಹ್ಮಕಲಶೋತ್ಸವ!

ಕರಾವಳಿಯ ಮೀನುಗಾರ ಸಮುದಾಯದ ಹೆಮ್ಮೆಯ ಪ್ರತೀಕವಾದ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆರಂಭವಾಗಿದೆ . ಮೊಗವೀರ ಸಮುದಾಯದ, ಶೃದ್ಧೆಯ ಕೇಂದ್ರವಾದ ಈ ದೇವಸ್ಥಾನ, ತನ್ನ ಅಪೂರ್ವ ಶಿಲ್ಪ ರಚನೆ ಮತ್ತು ನಿರ್ಮಾಣಗಳಿಂದ, ಕರ್ನಾಟಕ ಕರಾವಳಿಗೆ ಹೆಮ್ಮೆ ಮೂಡಿಸುವಂತಿದೆ.

Brahmakalashotsava at Uchchila Mahalakshmi Temple in Udupi gvd
Author
Bangalore, First Published Apr 1, 2022, 2:50 PM IST

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಏ.01): ಕರಾವಳಿಯ ಮೀನುಗಾರ ಸಮುದಾಯದ ಹೆಮ್ಮೆಯ ಪ್ರತೀಕವಾದ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ (Mahalakshmi Temple Brahmakalashotsava) ಆರಂಭವಾಗಿದೆ . ಮೊಗವೀರ ಸಮುದಾಯದ, ಶೃದ್ಧೆಯ ಕೇಂದ್ರವಾದ ಈ ದೇವಸ್ಥಾನ, ತನ್ನ ಅಪೂರ್ವ ಶಿಲ್ಪ ರಚನೆ ಮತ್ತು ನಿರ್ಮಾಣಗಳಿಂದ, ಕರ್ನಾಟಕ (Karnataka) ಕರಾವಳಿಗೆ (Karavali) ಹೆಮ್ಮೆ ಮೂಡಿಸುವಂತಿದೆ. ಮುಂದಿನ 15 ದಿನಗಳ ಕಾಲ ಲಕ್ಷಾಂತರ ಜನ ಈ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನವನ್ನು ಭವ್ಯವಾಗಿ ಪುನರ್ ನಿರ್ಮಾಣ ಮಾಡಲಾಗಿದ್ದು, ದೇವಿಯ ಬಿಂಬದ ಪುನರ್ ಪ್ರತಿಷ್ಠಾಪನೆ, ಅಷ್ಠಬಂಧ  ಬ್ರಹ್ಮಕಲಶೋತ್ಸವ ಹಾಗೂ ಚತುಃಪವಿತ್ರ ನಾಗಮಂಡಲೋತ್ಸವಗಳನ್ನು ಏ.1ರಿಂದ 15ರವರೆಗೆ ವಿಜೃಂಭಣೆಯಿಂದ ನಡೆಸಲುದ್ದೇಶಿಸಲಾಗಿದೆ. 

ಈ ಕಾರ್ಯಕ್ರಮಗಳಲ್ಲಿ ಕಾಸರಗೋಡಿನ ಉಪ್ಪಳದಿಂದ ಉಡುಪಿಯ ಶಿರೂರುವರೆಗಿನ 2 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಲಿದ್ದಾರೆ ದ.ಕ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು 1957ರಲ್ಲಿ ಮೊಗವೀರ ಕುಲಗುರು ಕೀರ್ತಿಶೇಷ ಮಾಧವ ಮಂಗಲ ನೇತೃತ್ವದಲ್ಲಿ ದೀವಂಗತ ಸದಿಯ ಸಾಹುಕಾರರು ದಾನವಾಗಿ ನೀಡಿದ 16 ಎಕ್ರೆ ಜಮೀನಿನಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದೀಗ ಭಕ್ತರ ಆಶಯದಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿಸಿದಂತೆ, ಶ್ರೀ ಪ್ರಸನ್ನ ಗಣಪತಿ, ಭದ್ರಕಾಳಿ, ಶ್ರೀ ನಾಗರದೇವರ ಸಹಿತ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ಸುಮಾರು 28 ಕೋಟಿ ರು. ವೆಚ್ಚದಲ್ಲಿ 2 ವರ್ಷಗಳ ಅವಧಿಯಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಳಿಸಲಾಗಿದೆ. 

'ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ನೀಡಿದ್ದೇ ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ'

ಜೊತೆಗೆ 15 ಕೋಟಿ ರು. ವೆಚ್ಚದಲ್ಲಿ 2 ಸಭಾಂಗಣಗಳನ್ನೊಳಗೊಂಡ ಮೊಗವೀರ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿರುವ ದೇವಾಲಯದಲ್ಲಿ ಅಪೂರ್ವ ಕಲ್ಲಿನ ಮತ್ತು ದಾರು ಶಿಲ್ಪಗಳನ್ನು ನಿರ್ಮಿಸಲಾಗಿದೆ. ಇದೀಗ ಈ ಕ್ಷೇತ್ರವು ಕೇವಲ ಧಾರ್ಮಿಕ ಮಾತ್ರವಲ್ಲದೇ ಸಾಂಸ್ಕೃತಿಕ ಮತ್ತು ಪ್ರವಾಸಿ ತಾಣವೂ ಆಗುತ್ತಿದೆ. ಮುಂದೆ ಇಲ್ಲಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ ಶೈಕ್ಷಣಿಕ ಕೇಂದ್ರವನ್ನಾಗಿಯೂ ಅಭಿವೃದ್ಧಿಗೊಳಿಸಲಾಗುತ್ತದೆ. ಏ.1ರಂದು ನೂತನ ಭವ್ಯ ರಾಜಗೋಪುರ ಮತ್ತು ಲಕ್ಷ್ಮೀ ತೀರ್ಥ ಕೆರೆಯ ಉದ್ಘಾಟನೆ, ಏ.2ರಿಂದ 15ರವರೆಗೆ ಪ್ರತಿದಿನ ಸಂಜೆ 4ರಿಂದ 5ರವರೆಗೆ ಸಾವಿರ ಸುಮಂಗಲಿಯರಿಂದ ಕುಂಕುಮಾರ್ಚನೆ, ಮಹಾಮಂಗಳಾರತಿ, 6ರಂದು ದೇವಿಯ ಬಿಂಬ ಪ್ರತಿಷ್ಠೆ, ಸ್ವರ್ಣಕಲಶ ಪ್ರತಿಷ್ಠೆ, ಮಹಾಅನ್ನಸಂತರ್ಪಣೆ, 13ರಂದು ಮಹಾರಥೋತ್ಸವ, 15ರಂದು ನಾಗಮಂಡಲೋತ್ಸವ, 16ರಂದು ಸಂಪ್ರೋಕ್ಷಣೆಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ.

ಈ 15 ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಲಕ್ಷಾಂತರ ಮಂದಿಗೆ ಮಧ್ಯಾಹ್ನ ಮತ್ತು ರಾತ್ರಿಯ ಅನ್ನಸಂತರ್ಪಣೆಗೆ ಅವಿಭಜಿಕ ದಕ ಜಿಲ್ಲೆಗಳ ಮಠಮಂದಿರಗಳಿಂದ ಪ್ರಸಾದ ರೂಪದಲ್ಲಿ ಹೊರೆಕಾಣಿಕೆ ಬರಲಿದೆ. ಸುಮಾರು 2000ಕ್ಕೂ ಮಿಕ್ಕಿ ವಾಹನಗಳಲ್ಲಿ ಉತ್ತರ ಮತ್ತು ದಕ್ಷಿಣ ಭಾಗಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ತಂಡಗಳ ಮೆರವಣಿಗೆಯಲ್ಲಿ ದೇವಳಕ್ಕೆ ಹೊರೆಕಾಣಿಕೆ ತರಲಾಗುವುದು.  

ಪೇಜಾವರ ಶ್ರೀಗಳನ್ನು ಭೇಟಿಯಾದ ಮುಸ್ಲಿಂ ನಿಯೋಗ: ಶ್ರೀಗಳ ನಿಲುವು ಬೆಂಬಲಿಸಿದ ಸಂಸದ ಹೆಗಡೆ!

ಸಿಎಂ ಮತ್ತು ಸಚಿವರ ಭೇಟಿ: 15 ದಿನಗಳ ಕಾಲ ಪ್ರತಿದಿನ ಧಾರ್ಮಿಕ ಸಭೆಗಳು ನಡೆಯಲಿವೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಸರ್ಕಾರದ ಬಹುತೇಕ ಸಚಿವರು, ಶಾಸಕರು, ರಾಜಕೀಯ ಮುಖಂಡರು ಮತ್ತು ಉಡುಪಿ ದಕ ಜಿಲ್ಲೆಯ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕೇಂದ್ರ ಸರ್ಕಾರದ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ನೇತೃತ್ವದಲ್ಲಿ 20 ರಾಜ್ಯಗಳ ಸಾಂಸ್ಕೃತಿಕ ತಂಡಗಳು ಭಾಗವಹಿಸಲಿವೆ. ಜೊತೆಗೆ ಸ್ಥಳೀಯ ಕಲಾವಿದರಿಂದ ನೃತ್ಯವೈವಿಧ್ಯ, ಯಕ್ಷಗಾನ, ನಾಟಕ ಪ್ರದರ್ಶನವಿದೆ. ಸಂಗೀಿತ ನಿರ್ದೇಶಕ ವಿಜಯಪ್ರಕಾಶ್ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

Follow Us:
Download App:
  • android
  • ios