Asianet Suvarna News Asianet Suvarna News

ತ್ಯಾಗ, ಸಮಾನತೆ ಸಹ​ಬಾಳ್ವೆಯ ಸಂಕೇ​ತ ಬಕ್ರೀದ್‌..!

ಇಸ್ಲಾ​ಮಿ​ಕ್‌ ಹಿಜ​ರಿ ಕ್ಯಾಲೆಂಡರ್‌ನ ಕೊನೆಯ ತಿಂಗಳು ದುಲ್‌ಹ​ಜ್‌ ಹತ್ತನೇ ದಿನದಂದು ಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್‌ ಕರ್ಮದಲ್ಲಿ ತೊಡಗಿಕೊಳ್ಳುವಾಗ ವಿಶ್ವ​ದೆ​ಲ್ಲೆ​ಡೆ​ಯ ಮುಸ್ಲಿಮರು ಈದ್‌ ಆಚರಿಸುತ್ತಾರೆ.

Bakrid Symbol of Sacrifice and Coexistence grg
Author
First Published Jun 29, 2023, 11:03 AM IST

ಬೆಂಗಳೂರು(ಜೂ.29):  ಸಮಾನತೆ, ಸಹಬಾಳ್ವೆ, ಬಲಿದಾನ, ತ್ಯಾಗೋಜ್ವಲ ಬದುಕಿನ ಸಂದೇಶಗಳನ್ನು ಹೊತ್ತುಕೊಂಡು ಜಾಗತಿಕ ಮುಸಲ್ಮಾನರನ್ನು ಸಂಭ್ರಮದಲ್ಲಿ ತೇಲಾಡಿಸುವ ಬಕ್ರೀದ್‌ ಮತ್ತೊಮ್ಮೆ ಆಗತವಾಗಿದೆ. ಮುಸ್ಲಿಮರ ಅತ್ಯಂತ ಶ್ರೇಷ್ಠ, ಮಹತ್ವದ ದಿನಗಳಲ್ಲೊದಾದ ಬಕ್ರೀದ್‌ ಅಥವಾ ಈದುಲ್‌ ಅಳ್‌ಹಾ ಈ ಬಾರಿ ಜೂ.29ಕ್ಕೆ ಆಚರಿಸಲಾಗುತ್ತಿದೆ. ಅಂದರೆ ಇಸ್ಲಾ​ಮಿ​ಕ್‌ ಹಿಜ​ರಿ ಕ್ಯಾಲೆಂಡರ್‌ನ ಕೊನೆಯ ತಿಂಗಳು ದುಲ್‌ಹ​ಜ್‌ ಹತ್ತನೇ ದಿನದಂದು ಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್‌ ಕರ್ಮದಲ್ಲಿ ತೊಡಗಿಕೊಳ್ಳುವಾಗ ವಿಶ್ವ​ದೆ​ಲ್ಲೆ​ಡೆ​ಯ ಮುಸ್ಲಿಮರು ಈದ್‌ ಆಚರಿಸುತ್ತಾರೆ.

ಪ್ರವಾದಿಗಳಲ್ಲಿ ಓರ್ವರಾದ ಹಝ್ರತ್‌ ಇಬ್ರಾಹಿಂ, ಅವರ ಪುತ್ರ ಇಸ್ಮಾಯಿಲ್‌ ತ್ಯಾಗ​ದ ಜೀವನ ಸ್ಮರಣೆಯಾಗಿದೆ ಈದ್‌. ದೇವ ನಿಷ್ಠೆಗಾಗಿ ತನಗೆ ಏನ​ನ್ನೂ ತ್ಯಾಗ ಮಾಡಲು ಸಿದ್ಧನಿರಬೇಕೆಂಬುದೇ ಬಕ್ರೀದ್‌ ಸಾರುವ ಸಂದೇಶ. ಒಂದು ಪ್ರವಾದಿ ಕುಟುಂಬದ ಸಂಕಷ್ಟಗಳ ಸರಮಾಲೆ, ಕಷ್ಟಕಾರ್ಪಣ್ಯಗಳು, ಎದುರಿಸಿದ ಸವಾಲುಗಳನ್ನು ಸ್ಮರಿಸುವ ದಿನವಾಗಿದೆ ಈದ್‌. ಹಜ್‌ ಯಾತ್ರೆ, ಪ್ರಾಣಿ ಬಲಿ ಅರ್ಪಿಸುವಿಕೆ, ಉಪವಾಸ, ದಾನ, ಸಮಾನತೆಯ ಸಂದೇಶವು ಬಕ್ರೀದ್‌ ಎಂಬ ಮೂರ​ಕ್ಷ​ರದ ನಡುವೆ ಸುತ್ತು​ತ್ತಲೇ ಇರು​ತ್ತ​ವೆ.

ಇವರು 'ವೈರಿ'ಗಳಿಗಿಂತ ಡೇಂಜರ್: ಇಂತವರಿಂದ ದೂರ ಇರಿ ಅಂತಾರೆ ಚಾಣಕ್ಯರು..!

ಏನಿದು ಹಜ್‌ ಯಾತ್ರೆ?

ಮುಸ್ಲಿ​ಮರು ಕಡ್ಡಾ​ಯ​ವಾಗಿ ಮಾಡ​ಬೇ​ಕಾದ 5 ಕಾರ್ಯಗ​ಳಲ್ಲಿ ಐದ​ನೇ​ಯದು ಹಜ್‌. ದುಲ್‌ಹ​ಜ್‌ ತಿಂಗಳ ಆರಂಭ​ದಲ್ಲೇ ಪವಿತ್ರ ಮಕ್ಕಾ ಭೂಮಿ​ಯನ್ನು ತಲು​ಪುವ ಯಾತ್ರಿ​ಕರು ಅರಫಾ ಮೈದಾನ, ಸಫಾ ವರ್ಮಾ ಬೆಟ್ಟ, ಮಿನಾ, ಮುಝ್ದ​ಲಿಫಾ ಸೇರಿ​ದಂತೆ ಮಕ್ಕಾದ ವಿವಿಧ ಭಾಗ​ಗ​ಳಲ್ಲಿ ಹಜ್‌ ಕಾರ‍್ಯ​ಗ​ಳನ್ನು ಪೂರೈ​ಸು​ತ್ತಾರೆ. ತಿಂಗಳ 9ನೇ ದಿನದಂದು ಮಕ್ಕಾದ ‘ಅರಫಾ’ ಎಂಬ ಬೃಹತ್‌ ಮೈದಾನದಲ್ಲಿ ಜಗತ್ತಿನ ವಿವಿಧ ದಿಕ್ಕುಗಳಿಂದ ಬಂದ ಲಕ್ಷಾಂತರ ಮಂದಿ ಪವಿತ್ರ ಹಜ್‌ಗಾಗಿ ಒಂದುಗೂಡುತ್ತಾರೆ. ಅದೇ ದಿನ ಜಗತ್ತಿನೆಲ್ಲೆಡೆಯ ಮುಸ್ಲಿಮರು ಉಪವಾಸ ಕೈಗೊಂಡು, ತಿಂಗಳ 10ರಂದು ಅಂದರೆ ಮರುದಿನ ಈದ್‌ ಅಥವಾ ಹಬ್ಬ ಆಚರಿಸುತ್ತಾರೆ. ಮಕ್ಕಾದಲ್ಲಿ ಒಂದುಗೂಡಿದ ಹಜ್‌ ಯಾತ್ರಿಕರು ಒಕ್ಕೊರಲಿನಿಂದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾರೆ. ಬಡವ ಶ್ರೀಮಂತನೆಂಬ ಭೇದ ಭಾವವಿಲ್ಲದೇ, ಎಲ್ಲರೂ ಒಂದೇ ಎಂದು ಸಮಾನತೆಯ ಮೆಸೇ​ಜ್‌ ಜಗತ್ತಿಗೆ ಸಾರುತ್ತಾರೆ. ಜಗತ್ತಿನ ಶಾಂತಿ, ಎಲ್ಲರ ಸುಖ, ಲಾಭ​ಕ್ಕಾ​ಗಿ ಪ್ರಾರ್ಥಿಸುತ್ತಾರೆ.

ಅರಫಾ ಎಂಬ ಅಧ್ಬುತ!

ವಿಶ್ವದ 160ಕ್ಕೂ ಹೆಚ್ಚಿನ ರಾಷ್ಟ್ರಗಳಿಂದ ಬಂದ 25 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅರಫಾ ಮೈದಾನದಲ್ಲಿ ಒಂದುಗೂಡುವುದೇ ಒಂದು ಅದ್ಭುತ. ಅಲ್ಲಿ ಒಗ್ಗೂಡುವ ಜನರ ವಿಶೇಷತೆ ಏನೆಂದರೆ ಎಲ್ಲರೂ ಶ್ವೇತ ವಸ್ತ್ರವನ್ನಷ್ಟೇ ಧರಿಸುವುದು. ಹಜ್‌ನಲ್ಲಿ ಬಡವ, ಶ್ರೀಮಂತ ಯಾರೇ ಇರಲಿ, ಧರಿ​ಸ​ಬೇ​ಕಿ​ರು​ವುದು ಶುಭ್ರ ಬಿಳಿ ವಸ್ತ್ರ ಮಾತ್ರ. ಅಲ್ಲಿ ಧನಿಕನಿಗೂ ಬರಿಗಾಲಲ್ಲೇ ನಡೆಯುವವನ ಮಧ್ಯೆಯೂ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ. ವರ್ಗ, ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನ, ಪದವಿಗಳ ಯಾವುದೇ ವ್ಯತ್ಯಾಸಗಳಿಲ್ಲದೆ ಬಡವ, ಶ್ರೀಮಂತ, ರಾಜ, ರಾಜ​ಕಾ​ರಣಿ, ನಿರ್ಗತಿಕ ಕೂಡಾ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕದೈವ ವಿಶ್ವಾಸದ ಮಂತ್ರ ಜಪಿಸುತ್ತಾರೆ. ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಮನುಷ್ಯರೆಲ್ಲರೂ ಸಹೋದರರು ಮತ್ತು ಸಮಾನರು ಎಂಬ ಸಂದೇಶವನ್ನು ಜಗತ್ತಿಗೆ ಈ ಹಜ್‌ ಮೂಲಕ ಸಾರಲಾಗುತ್ತದೆ. ಇದೇ ಅರಫಾ ಮೈದಾನದಲ್ಲೇ ಅಂತಿಮ ಪ್ರವಾದಿ ಮುಹಮ್ಮದರು ಮಾಡಿದ ವಿದಾಯದ ಭಾಷಣ ಚರಿತ್ರೆಯ ಪುಟಗಳಲ್ಲಿ ಇಂದಿಗೂ ಅದ್ವಿತೀಯ ಭಾಷಣ ಎನಿಸಿಕೊಂಡಿದೆ.

ಬಕ್ರೀ​ದ್‌ಗೆ ಪ್ರಾಣಿ ಬಲಿ ಏಕೆ?

ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿ​ಲ್‌​ರನ್ನು ಬಲಿ​ಯ​ರ್ಪಿ​ಸಲು ಮುಂದಾಗುವ ರೋಚಕ ಘಟನೆಯೇ ಈ ಬಲಿ​ದಾನ ಅಥವಾ ಕುರ್ಬಾ​ನಿಯ ಹಿಂದಿ​ರುವ ಇತಿ​ಹಾ​ಸ. ಸುದೀರ್ಘ ಕಾಲದ ಬಳಿಕ ಜನಿಸಿದ ಮಗ ಇಸ್ಮಾಯಿಲ… ಜೊತೆ ಸಂತೋಷಭರಿತ ಜೀವನವನ್ನು ನಡೆಸುತ್ತಿರುವ ಇಬ್ರಾಹಿ​ಮ​ರು ಒಂದಿನ ವಿಶೇಷ ಕನಸು ಕಾಣು​ತ್ತಾರೆ. ಆದರೆ ಕನಸು ಮಾತ್ರ ವಿಚಿತ್ರ ಮತ್ತು ಅಚ್ಚರಿ. ತನ್ನ ಮಗನನ್ನೇ ಬಲಿಯರ್ಪಿಸುವ ಕನಸೊಂದನ್ನು ಕಾಣುವ ಇಬ್ರಾ​ಹಿ​ಮರು ಅದನ್ನು ಮಗ ಇಸ್ಮಾ​ಯಿ​ಲ​ರಿಗೂ ತಿಳಿ​ಸು​ತ್ತಾರೆ. ದೇವನ ಆದೇ​ಶ​ವ​ಲ್ಲ​ದಿ​ದ್ದರೂ ಕನ​ಸಲ್ಲಿ ಕಂಡಿದ್ದು ದೇವನ ಆದೇಶ ಎಂದು​ಕೊಂಡು ಪುತ್ರನ ಒಪ್ಪಿ​ಗೆ​ಯೊಂದಿಗೆ ಪುತ್ರ​ನನ್ನೇ ಬಲಿ​ಯ​ರ್ಪಿ​ಸಲು ಮುಂದಾ​ಗು​ತ್ತಾ​ರೆ. ಆದರೆ ಅಲ್ಲಾಹನಿಗೆ ಬೇಕಿದ್ದದ್ದು ಪ್ರವಾದಿ ಇಬ್ರಾ​ಹಿ​ಮರ ದೇವ​ನಿಷ್ಠೆ ಮಾತ್ರ​ವಾ​ಗಿತ್ತು. ಅದಕ್ಕಾಗಿಯೇ ಇಸ್ಮಾ​ಯಿ​ಲ​ರನ್ನು ಬಲಿ​ಯ​ರ್ಪಿ​ಸುವು​ದರ ಬದಲು ಇಬ್ರಾ​ಹಿ​ಮ​ರಿಗೆ ಆಡೊಂದನ್ನು ನೀಡುವ ಅಲ್ಲಾ​ಹನು ಅದನ್ನೇ ಬಲಿ​ಯ​ರ್ಪಿಸಿ ಎಂದು ಸೂಚಿ​ಸುತ್ತಾನೆ.

ಈ ಬಗ್ಗೆ ಕುರ್‌​ಆ​ನ್‌​ನಲ್ಲಿ ಅಲ್ಲಾ​ಹನು ಸ್ಪಷ್ಟ​ವಾಗಿ ಹೇಳು​ವುದು ನೋಡಿ. ‘ನಿಶ್ಚಯವಾಗಿಯೂ ಅದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು. ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು. ಆ ಘಟನೆಯ ನೆನ​ಪನ್ನು ಮುಂದಿನ ಜನಾಂಗದಲ್ಲೂ ಉಳಿಸಿದೆವು (ಕುರ್‌ಆ​ನ್‌ 37:106-108). ಇಂದು ಬಕ್ರೀದ್‌ ಸಂದರ್ಭ ಜಗತ್ತಿನ ಎಲ್ಲೆಡೆ ನೀಡಲಾಗುವ ಪ್ರಾಣಿ ಬಲಿಯು ಇಬ್ರಾಹಿಂ ಮತ್ತು ಅವರ ಪುತ್ರ ಇಸ್ಮಾ​ಲಿ​ಯರ ತ್ಯಾಗದ ಸಂದೇ​ಶ​ವ​ನ್ನಷ್ಟೇ ಸೂಚಿ​ಸು​ತ್ತದೆ. ‘ಅವುಗಳ ಮಾಂಸ, ರಕ್ತ ಯಾವು​ದೂ ಅಲ್ಲಾಹನಿಗೆ ತಲುಪುವುದಿಲ್ಲ. ಅವ​ನಿಗೆ ತಲು​ಪು​ವುದು ನಿಮ್ಮ ಧರ್ಮನಿಷ್ಠೆ ಮಾತ್ರ’ ಎಂದು ಕುರ್‌ಆ​ನ್‌ ಸಷ್ಟವಾಗಿ ಮಾನವನ ದೇವನಿಷ್ಠೆ​ಯತ್ತ ಬೊಟ್ಟು ಮಾಡು​ತ್ತ​ದೆ.

ಹೀಗೆ ಬಲಿ ನೀಡಲಾದ ಕುರ್ಬಾನಿ ಮಾಂಸವನ್ನು ಬಡವರಿಗೆ ಹಂಚಲಾಗುತ್ತದೆ. ಕುಟುಂಬಸ್ಥರಿಗೂ ಇದರ ಪಾಲು ಸಿಗುತ್ತದೆ. ಎಂದೂ ಮಾಂಸ ಬೇಯದ ಕಡುಬಡವನ ಒಲೆಯ ಮೇಲಿನ ಕೊರತೆಯೊಂದನ್ನು ಬಕ್ರೀದ್‌ ಇಲ್ಲವಾಗಿಸುತ್ತದೆ. ಆದರೆ ಕುರ್ಬಾನಿ ಹೆಸರಿನ ಅನ್ಯಾಯವನ್ನು ಇಸ್ಲಾಂ ಎಂದಿಗೂ ಒಪ್ಪುವುದಿಲ್ಲ. ಬದಲಾಗಿ ಸ್ಪಷ್ಟವಾಗಿ, ಕಠಿಣವಾಗಿ ವಿರೋಧಿಸುತ್ತದೆ. ಸಾಮರ್ಥ್ಯವಿದ್ದರೆ ಕುರ್ಬಾನಿ ನೀಡು ಎಂದು ಹೇಳುವ ಧರ್ಮ, ಅನ್ಯಾಯವಾಗಿ ಸಂಪಾದಿಸಿದ ಹಣದಿಂದ ಪ್ರಾಣಿ ಬಲಿ ನೀಡುವುದನ್ನು ವಿರೋಧಿಸುತ್ತದೆ. ಗಾಯಗೊಂಡ ಪ್ರಾಣಿಯನ್ನೂ ಕುರ್ಬಾನಿ ನೀಡಬಾರದು ಎಂದು ಆದೇಶಿಸುವ ಇಸ್ಲಾಂ, ಅನ್ಯರಿಂದ ಕಬಳಿಸಿದ, ಕಳ್ಳತನದ ಮೂಲಕ ನೀಡುವ ಪ್ರಾಣಿ ಬಲಿಯನ್ನು ಒಪ್ಪಲು ಸಾಧ್ಯವೇ?

ಬಕ್ರೀದ್‌ ಕುರ್ಬಾನಿ: ಲಕ್ಷಕ್ಕೆ ಬಿಕರಿಯಾದ ಟಗರು, ಹೋತಗಳು ಇಲ್ಲಿವೆ ನೋಡಿ..

ಈದ್‌ ಸಂಭ್ರ​ಮ​ದ​ಲ್ಲಿ ಜಗ​ತ್ತು

ಮುಸ್ಲಿ​ಮರ ಪಾಲಿಗೆ ರಂಜಾನ್‌ನಂತೆಯೇ ಅತ್ಯಂತ ಮಹ​ತ್ವ​, ಪ್ರಾಮು​ಖ್ಯ​ವಿ​ರುವ ದಿನ​ವಾ​ಗಿದೆ ಈ ಈದ್‌. ಅತ್ತ ಮಕ್ಕಾ ಮರು​ಭೂ​ಮಿ​ಯಲ್ಲಿ ಲಕ್ಷಾಂತರ ಮಂದಿ ಹಜ್‌ ಕರ್ಮ​ದಲ್ಲಿ ತೊಡ​ಗಿ​ಸಿ​ಕೊ​ಳ್ಳು​ವಾಗ ಅವರ ಜೊತೆ ಭಾವೈಕ್ಯತೆ ಪ್ರದರ್ಶಿಸುತ್ತಾ ವಿಶ್ವ​ದೆ​ಲ್ಲೆಡೆ ಮುಸ್ಲಿ​ಮರು ಈದ್‌ ಆಚ​ರಿ​ಸು​ತ್ತಾರೆ. ಹಬ್ಬದ ದಿನ ಸೂರ್ಯೋದಯದ ಬಳಿಕ ಒಂದು ವಿಶೇಷ ಸಾಮೂಹಿಕ ನಮಾಜ್‌ ನಡೆಯುತ್ತದೆ. ಅಲ್ಲಾ​ಹನ ಕೀರ್ತ​ನೆ​ಗ​ಳೊಂದಿಗೆ ಮಸೀದಿ, ಈದ್ಗಾ ವಠಾ​ರ ಸಂಭ್ರ​ಮ​ದಲ್ಲಿ ತೇಲಾ​ಡು​ತ್ತದೆ. ಧಾರ್ಮಿಕ ವಿದ್ವಾಂಸರು ಬದುಕಿಗೆ ಸಂಬಂಧಿಸಿದ ಚರಿ​ತ್ರೆ​ಯ ಪಾಠ​ಗ​ಳನ್ನು, ವರ್ತ​ಮಾ​ನಕ್ಕೆ ಅಗ​ತ್ಯ​ವೆ​ನಿ​ಸಿದ ಉಪ​ಯುಕ್ತ ಸಂದೇ​ಶ​ಗ​ಳನ್ನು ಜನ​ರಿಗೆ ನೀಡು​ತ್ತಾರೆ. ಬಳಿಕ ಪರ​ಸ್ಪರ ಹಸ್ತ​ಲಾ​ಘವ, ಆಲಿಂಗ​ನದ ಮೂಲಕ ಅನ್ಯರು, ಸ್ನೇಹಿ​ತರು, ಸಂಬಂಧ​ಗಳೇ ಸರಿ​ಯಿ​ಲ್ಲದ ನೆರೆ​ಕ​ರೆ​ಯ​ವರ ಜೊತೆ​ಗೂ ನಡೆ​ಸುವ ಹ್ರಸ್ವ ಮಾತು​ಕತೆ, ಹಬ್ಬದ ಶುಭ ಹಾರೈಕೆ ಮನಕ್ಕೆ ನೀಡುವ ಸಂತೋಷ ವರ್ಣಿ​ಸಲು ಸಾಧ್ಯವೇ ಇಲ್ಲ. ಬಳಿಕ ಕುಟುಂಬ​ಸ್ಥರು, ಅಕ್ಕಪಕ್ಕದ ಮನೆಗೆ ಭೇಟಿ ನೀಡಿ ಹಬ್ಬದ ಸಂತೋಷ ಹರ​ಡು​ವು​ದು ಪರ​ಸ್ಪರ ಹಗೆ, ದ್ವೇಷ​ಗ​ಳನ್ನು ಇಲ್ಲ​ವಾ​ಗಿ​ಸು​ತ್ತದೆ.

160+ ದೇಶಗಳ 25 ಲಕ್ಷಕ್ಕೂ ಹೆಚ್ಚು ಜನ ಪವಿತ್ರ ಮಕ್ಕಾದಲ್ಲಿ ರಾಜ, ಸೇವಕ, ಬಡವ, ಸಿರಿವಂತ ಎಂಬ ಭೇದವಿಲ್ಲದೆ ಹಜ್‌ ಕರ್ಮದಲ್ಲಿ ಭಾಗಿಯಾದರೆ, ಜಗತ್ತಿನೆಲ್ಲೆಡೆಯ ಮುಸ್ಲಿಮರು ಈ ದಿನ ಬಕ್ರೀದ್‌ ಹಬ್ಬ ಆಚರಿಸುತ್ತಾರೆ. ಇದು ಮುಸ್ಲಿಂ ಸಮುದಾಯವು ಸಮಾನತೆ, ಸಹಬಾಳ್ವೆ, ಬಲಿದಾನದ ಸಂದೇಶವನ್ನು ಜಗತ್ತಿಗೆ ಸಾರುವ ಹಬ್ಬ: ನಾಸಿರ್‌ ಸಜಿ​ಪ ಮಂಗಳೂರು

Follow Us:
Download App:
  • android
  • ios