Asianet Suvarna News Asianet Suvarna News

ಕೊಪ್ಪಳ: ಯುವಕನ ಶವ ಪತ್ತೆ, ಮರ್ಯಾದಾ ಹತ್ಯೆ ಶಂಕೆ

* ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬರಗೂರು ಗ್ರಾಮದಲ್ಲಿ ನಡೆದ ಘಟನೆ
* ರಾತ್ರಿ ತನ್ನ ಸ್ನೇಹಿತರ ಜತೆಗೆ ಪಾರ್ಟಿಗೆಂದು ಮನೆಯಿಂದ ಹೊರಹೋಗಿದ್ದ ಯುವಕ 
* ಕೆಲವು ದಿನಗಳ ಹಿಂದೆ ಪ್ರೀತಿ ವಿಷಯವಾಗಿ ಜಗಳ ಮಾಡಿಕೊಂಡಿದ್ದ ಮೃತ ಯುವಕ

Young Man Dead Body Found at Karatagi in Koppal grg
Author
Bengaluru, First Published Jun 24, 2021, 11:25 AM IST

ಕಾರಟಗಿ(ಜೂ.24): ಸ್ನೇಹಿತರ ಜತೆಗೆ ಮಂಗಳವಾರ ರಾತ್ರಿ ಪಾರ್ಟಿಗೆಂದು ಹೋದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಬರಗೂರು ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದ್ದು, ಮರ್ಯಾದಾ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಯುವಕನನ್ನು ಗ್ರಾಮದ ದಾನೇಶ ಕರಿಹನುಮಂತಪ್ಪ (24) ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ತನ್ನ ಸ್ನೇಹಿತರ ಜತೆಗೆ ಪಾರ್ಟಿಗೆಂದು ಮನೆಯಿಂದ ಹೊರಹೋಗಿದ್ದ ಯುವಕ ಬೆಳಗ್ಗೆ ಗ್ರಾಮದ ಸಮೀಪ ಮುಷ್ಟೂರು ರಸ್ತೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಗ್ರಾಮದ ಕೆಲವರೊಂದಿಗೆ ಕೆಲವು ದಿನಗಳ ಹಿಂದೆ ಪ್ರೀತಿ ವಿಷಯವಾಗಿ ಮೃತ ಯುವಕ ದಾನೇಶ ಜಗಳ ಮಾಡಿಕೊಂಡಿದ್ದು, ಇದೀಗ ಬೆಳಕಿಗೆ ಬಂದಿದೆ. ಸೇಡಿಗಾಗಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ಪ್ರೇಮಿಗಳ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌, ಡಿವೈಎಸ್‌ಪಿ ಆರ್‌.ಎಸ್‌. ಉಜ್ಜನಕೊಪ್ಪ, ಗಂಗಾವತಿ ಸಿಪಿಐ ಉದಯರವಿ, ಕಾರಟಗಿ ಪಿಎಸ್‌ಐ ಕೆ. ಮಲ್ಲಪ್ಪ ನೇತೃತ್ವದ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಶ್ವಾನದಳ ಕರೆಸಿದ್ದು ತನಿಖೆ ಚುರುಕುಗೊಳಿಸಲಾಗಿದೆ.

ಮೃತನ ತಂದೆ ಕರಿಹನುಮಂತಪ್ಪ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಕಾರಟಗಿ ಪೊಲೀಸರು, ಗ್ರಾಮದ ಯುವತಿ, ತಂದೆ-ತಾಯಿ ಹಾಗೂ ಸಹೋದರನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಶಂಕೆ:

ಕಳೆದ ಕೆಲವು ವರ್ಷಗಳಿಂದ ಗ್ರಾಮದ ಯುವತಿಯೊಬ್ಬಳನ್ನು ದಾನೇಶ ಪ್ರೀತಿಸುತ್ತಿದ್ದ. ಬೇರೆ ಜಾತಿಯಾಗಿರುವುದರಿಂದ ಯುವತಿ ಮನೆಯವರ ವಿರೋಧವಿತ್ತು. ಯುವಕನಿಗೆ ಈ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇಬ್ಬರ ಪ್ರೀತಿ ನಿರಂತರವಾಗಿ ಸಾಗಿದ್ದರಿಂದ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
 

Follow Us:
Download App:
  • android
  • ios