14 ತಿಂಗಳ ಗಾಯದ ವಿರಾಮದ ಬಳಿಕ ಮೊಹಮ್ಮದ್ ಶಮಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡಕ್ಕೆ ಮರಳಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಲಿದ್ದು, ಜನವರಿ 22 ರಿಂದ ಕೋಲ್ಕತ್ತಾದಲ್ಲಿ ಸರಣಿ ಆರಂಭ. ಉತ್ತಮ ಪ್ರದರ್ಶನದ ಹೊರತಾಗಿಯೂ ರಜತ್ ಪಾಟೀದಾರ್ಗೆ ಸ್ಥಾನ ಸಿಕ್ಕಿಲ್ಲ. ಅಕ್ಷರ್ ಪಟೇಲ್ ಉಪನಾಯಕರಾಗಿ ನೇಮಕಗೊಂಡಿದ್ದಾರೆ.
ಮುಂಬೈ: 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಗಾಯದ ಕಾರಣದಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರವುಳಿದಿದ್ದ ತಾರಾ ವೇಗಿ ಮೊಹಮ್ಮದ್ ಶಮಿ 14 ತಿಂಗಳ ಬಳಿಕ ಭಾರತ ತಂಡಕ್ಕೆ ಮರಳಿದ್ದಾರೆ. ಶನಿವಾರ ಪ್ರಕಟಗೊಂಡ ಇಂಗ್ಲೆಂಡ್ ವಿರುದ್ದ 5 ಪಂದ್ಯಗಳ ಟಿ20 ಸರಣಿಗೆ ಶಮಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಜ.22ರಿಂದ ಕೋಲ್ಕತಾದಲ್ಲಿ ಸರಣಿ ಆರಂಭಗೊಳ್ಳಲಿದೆ.
ಸೂರ್ಯ ಕುಮಾರ್ ಯಾದವ್ ನಾಯಕತ್ವ ವಹಿಸಲಿದ್ದಾರೆ. ಶಮಿ 20220 ನವೆಂಬರ್ನಲ್ಲಿ ಕೊನೆ ಬಾರಿ ಭಾರತ ತಂಡದ ಪರ ಟಿ20 ಆಡಿದ್ದರು. ಅಚ್ಚರಿ ಎಂಬಂತೆ ಅವರನ್ನು ಮತ್ತೆ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅವರು ಇಂಗ್ಲೆಂಡ್ ಏಕದಿನ, ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಆದರೆ ದೇಶಿ ಹಾಗೂ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಬ್ಯಾಟರ್ ರಜತ್ ಪಾಟೀದಾರ್ಗೆ ರಾಷ್ಟ್ರೀಯ ಆಯ್ಕೆ ಸಮಿತಿ ಮತ್ತೆ ಅನ್ಯಾಯ ಮಾಡಿದೆ.
ಪಾಟಿದಾರ್ಗೆ ಮಹಾಮೋಸ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಬ್ಯಾಟರ್ ರಜತ್ ಪಾಟೀದಾರ್ ಈ ಬಾರಿ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ದೇಶಿ ಕ್ರಿಕೆಟ್ನಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ರಜತ್ ಪಾಟೀದಾರ್ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿ 186.09ರ ಸ್ಟ್ರೈಕ್ರೇಟ್ನಲ್ಲಿ 428 ರನ್ ಸಿಡಿಸಿದ್ದರು. ಇನ್ನು ಒಟ್ಟಾರೆ 75 ಟಿ20 ಪಂದ್ಯಗಳನ್ನಾಡಿ 38.48ರ ಸರಾಸರಿಯಲ್ಲಿ 2,463 ರನ್ ಸಿಡಿಸಿದ್ದಾರೆ. ಪಾಟೀದಾರ್ ಮೂರನೇ ಕ್ರಮಾಂಕದಿಂದ ಹಿಡಿದು ಆರನೇ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಅನಾಯಾಸವಾಗಿ ಬ್ಯಾಟ್ ಬೀಸುವ ಕ್ಷಮತೆ ಹೊಂದಿದ್ದಾರೆ. ಇನ್ನು 2024ರಲ್ಲಿ ರಜತ್ ಪಾಟೀದಾರ್ ಟಿ20 ಕ್ರಿಕೆಟ್ನಲ್ಲಿ ಒಟ್ಟಾರೆ 823 ರನ್ ಸಿಡಿಸಿದ್ದಾರೆ. ಹೀಗಿದ್ದೂ ಪಾಟೀದಾರ್ ಅವರನ್ನು ಕಡೆಗಣಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
RCB ತಂಡದಲ್ಲಿದ್ದಾನೆ ಡೇಂಜರಸ್ ಬ್ಯಾಟರ್; 30 ಪಂದ್ಯ 9 ಶತಕ, 11 ಅರ್ಧಶತಕ! ಈತನೇ ಈ ಸಲ ಇಂಪ್ಯಾಕ್ಟ್ ಆಟಗಾರ?
ಇನ್ನುಳಿದಂತೆ ಟಿ20 ಸರಣಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ತಂಡಕ್ಕೆ ಆಯ್ಕೆಯಾಗಿಲ್ಲ. ಸಂಜು ಸ್ಯಾಮನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದು, ಧ್ರುವ್ ಜುರೆಲ್ ಕೂಡಾ ಸ್ಥಾನ ಗಿಟ್ಟಿಸಿ ಕೊಂಡಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ನಿತೀಶ್ ಕುಮಾರ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯಗಳು ಜನವರಿ 22, 25, 28, 31, ಫೆಬ್ರವರಿ 2 ರವರೆಗೆ ನಡೆಯಲಿವೆ.
ಅಕ್ಷರ್ ಉಪನಾಯಕ
ಕಳೆದ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಕ್ಷರ್ ಪಟೇಲ್ರನ್ನು ಬಿಸಿಸಿಐ ಇಂಗ್ಲೆಂಡ್ ಸರಣಿಗೆ ಉಪನಾಯಕನನ್ನಾಗಿ ನೇಮಿಸಿದೆ. ಈ ಮೊದಲು ಹಲವು ಸರಣಿಗಳಲ್ಲಿ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿರುತ್ತಿದ್ದರು. ಕಳೆದ ವರ್ಷ ಶ್ರೀಲಂಕಾ ಸರಣಿಗೆ ಹಾರ್ದಿಕ್ ಪಾಂಡ್ಯ ಬದಲು ಶುಭ್ಮನ್ ಗಿಲ್ರನ್ನು ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಬಳಿಕ ದ.ಆಫ್ರಿಕಾ ಟಿ20 ಸರಣಿಗೆ ಉಪನಾಯಕನ ಸ್ಥಾನ ಖಾಲಿ ಬಿಡಲಾಗಿತ್ತು. ಈ ಬಾರಿ ಸರಣಿಯಲ್ಲಿ ಗಿಲ್ ಬದಲು ಅಕ್ಷರ್ಗೆ ಹೊಣೆ ನೀಡಲಾಗಿದೆ.
ಭಾರತ ತಂಡ:
ಸೂರ್ಯಕುಮಾರ್ ಯಾದವ್(ನಾಯಕ), ಸಂಜು ಸ್ಯಾಮನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್.
