
ನಾಯಿ ಎಂತಹ ನಿಷ್ಠಾವಂತ ಪ್ರಾಣಿ ಎನ್ನುವುದು ಎಲ್ಲರಿಗೂ ಗೊತ್ತು. ತಮಗೆ ಒಂದು ತುತ್ತು ನೀಡಿದ ಮನುಷ್ಯನನ್ನು ಸಾಯುವ ತನಕ ನೆನಪಿಡುವಂತಹ ಪ್ರಾಣಿ ನಾಯಿ. ತನ್ನವರಿಗಾಗಿ ಪ್ರಾಣ ಕೊಡಲು ರೆಡಿಯಾಗಿರುತ್ತದೆ ನಾಯಿ. ಅಂತಹ ನಾಯಿಯೊಂದರ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಇದೇ ರೀತಿಯ ಹೃದಯಸ್ಪರ್ಶಿ ಘಟನೆ ಸಂಭವಿಸಿದೆ. ಅಲ್ಲಿ ಸಾಕು ನಾಯಿಯೊಂದು ತನ್ನ ಕೊನೆಯ ಉಸಿರಿನವರೆಗೂ ತನ್ನ ಮಾಲೀಕರೊಂದಿಗೆ ಇತ್ತು. ತನ್ನ ಮಾಲೀಕರ ಸಾವಿನ ಆಘಾತವನ್ನು ಸಹಿಸಲಾಗದೆ, ಅದು ಕೂಡ ಅಂತ್ಯಕ್ರಿಯೆಯ ಮೆರವಣಿಗೆಯ ಸಮಯದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆತುಲ್ ನಗರದ ಸಿವಿಲ್ ಲೈನ್ಸ್ ನಿವಾಸಿ 67 ವರ್ಷದ ಪ್ರದೀಪ್ ಜೈನ್, ಭೋಪಾಲ್ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು. ಅವರ ಮೃತದೇಹವನ್ನು ಕಳೆದ ಭಾನುವಾರ ಸಂಜೆ ಬೆತುಲ್ಗೆ ತರಲಾಯಿತು. ಮನೆಯಲ್ಲಿ ಅಂತ್ಯಕ್ರಿಯೆಯ ಸಿದ್ಧತೆಗಳು ನಡೆಯುತ್ತಿದ್ದವು, ಆದರೆ ಅವರ 15 ವರ್ಷಗಳ ಒಡನಾಡಿ ದುಗ್ಗು ಎನ್ನುವ ನಾಯಿ ತನ್ನ ಮಾಲೀಕನ ಸಾವಿನಿಂದ ದುಃಖಿತವಾಗಿತ್ತು. ದುಗ್ಗು ತನ್ನ ಯಜಮಾನನ ದೇಹವನ್ನು ಬಿಡಲು ಸಿದ್ಧವಿರಲಿಲ್ಲ. ಪದೇ ಪದೇ ಮಾಲಿಕನ ದೇಹದ ಬಳಿಗೆ ಹೋಗಿ ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿತ್ತು. ಅಂತ್ಯಕ್ರಿಯೆಯ ಸಿದ್ಧತೆಗಳ ಸಮಯದಲ್ಲಿ, ಕುಟುಂಬವು ನಾಯಿಯನ್ನು ಮತ್ತೊಂದು ಕೋಣೆಯಲ್ಲಿ ಇರಿಸಿತು, ಆದರೆ ದುಗ್ಗು ಅಳುತ್ತಾ ಹೊರಗೆ ಬರಲು ಪ್ರಯತ್ನಿಸುತ್ತಲೇ ಇತ್ತು. ಪ್ರದೀಪ್ ಜೈನ್ ಅವರ ಅಂತ್ಯಕ್ರಿಯೆಯ ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆ, ದುಗ್ಗು ಶವ ಯಾತ್ರೆಯನ್ನು ಹಿಂಬಾಲಿಸಲು ಶುರು ಮಾಡಿದನು. ಸ್ವಲ್ಪ ದೂರ ನಡೆದ ನಂತರ, ದುಗ್ಗು ಇದ್ದಕ್ಕಿದ್ದಂತೆ ಕುಸಿದು ಬಿದ್ದು ತನ್ನ ಮಾಲೀಕನ ಜೊತೆಯೇ ಉಸಿರು ನಿಲ್ಲಿಸಿದೆ. ಇದನ್ನು ನೋಡಿ ಅಲ್ಲಿದ್ದವರೆಲ್ಲ ಭಾವುಕರಾಗಿ ಕಣ್ಣಿರಿಟ್ಟಿದ್ದಾರೆ.
ಪ್ರದೀಪ್ ಜೈನ್ ಅವರನ್ನು ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು, ದುಗ್ಗುವಿಗೂ ಗೌರವಯುತ ಬೀಳ್ಕೊಡುಗೆ ನೀಡಲಾಯಿತು. ಕುಟುಂಬವು ಪ್ರದೀಪ್ ಜೈನ್ ಸಮೀಪದಲ್ಲಿಯೇ ದುಗ್ಗುವಿಗೆ ಪೂರ್ಣ ಗೌರವಗಳೊಂದಿಗೆ ಸಮಾಧಿ ಮಾಡಿದರು. ಈ ಕುರಿತು ಪ್ರದೀಪ್ ಜೈನ್ ಅವರ ಕಿರಿಯ ಸಹೋದರ ದಿಲೀಪ್ ಜೈನ್ ಮಾತನಾಡಿ, ದುಗ್ಗು ಕುಟುಂಬದ ಸದಸ್ಯರಂತೇ ಇತ್ತು. ದುಗ್ಗುವನ್ನು ಪ್ರದೀಪ್ ಜೈನ್ ಬಾಲ್ಯದಿಂದ ಪ್ರೀತಿಯಿಂದ ಬೆಳೆಸಿದ್ದರು. ಇಬ್ಬರ ನಡುವೆ ಗಾಢವಾದ ಭಾಂದವ್ಯ ಬೆಳೆದಿತ್ತು. ಪ್ರದೀಪ್ ಜೈನ್ ಮನೆಗೆ ಹಿಂದಿರುಗಿದಾಗಲೆಲ್ಲಾ, ದುಗ್ಗು ಖುಷಿಯಿಂದ ಅವರನ್ನು ಸ್ವಾಗತಿಸುತ್ತಿತ್ತು. ದುಗ್ಗು ಕುಟುಂಬ ಸದಸ್ಯರ ಪಾದಗಳನ್ನು ಮುಟ್ಟಿ ನಮಸ್ಕರಿಸಲು ಸಹ ಕಲಿತಿತ್ತು . ಅಷ್ಟೇ ಅಲ್ಲದೇ ಮಾಲೀಕರು ಅನಾರೋಗ್ಯಕ್ಕೆ ಒಳಗಾದಾಗ, ದುಗ್ಗು ತಿನ್ನುವುದು ಮತ್ತು ಕುಡಿಯುವುದನ್ನು ಸಹ ನಿಲ್ಲಿಸುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ. ಹೀಗೆ 15 ವರ್ಷಗಳ ಕಾಲ ತಮ್ಮ ಮಾಲೀಕರೊಂದಿಗೆ ಇದ್ದ ದುಗ್ಗು ಅವರಿಗೆ ಅಂತಿಮ ವಿದಾಯ ಹೇಳಿದ ರೀತಿ ಮಾತ್ರ ಎಲ್ಲರ ಮನಸ್ಸನ್ನು ಕಲುಕಿತು.