ವಿಜ್ಞಾನ, ಅಧ್ಯಾತ್ಮ ಸ್ವತಂತ್ರ ಮತ್ತು ಪೂರಕ ಕ್ಷೇತ್ರಗಳು: ಡಾ. ಜಯಂತ್ ವ್ಯಾಸನಕೆರೆ!

By nikhil vkFirst Published Jan 11, 2019, 3:49 PM IST
Highlights

'ವಿಜ್ಞಾನ ಮತ್ತು ಅಧ್ಯಾತ್ಮದ ನಡುವೆ ಘರ್ಷಣೆ ಎಂಬುದು ಸುಳ್ಳು'| 'ವಿಜ್ಞಾನ ಮತ್ತು ಅಧ್ಯಾತ್ಮ ಪರಸ್ಪರ ಪೂರಕ ಮತ್ತು ಸ್ವತಂತ್ರ ಕ್ಷೇತ್ರಗಳು'|  ಅಜೀಂ ಪ್ರೇಮ್ ಜೀ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ವ್ಯಾಸನಕೆರೆ ಅಭಿಪ್ರಾಯ| ಸುವರ್ಣನ್ಯೂಸ್.ಕಾಂ ಜೊತೆ ವಿಶೇಷ ಸಂದರ್ಶನ

ಬೆಂಗಳೂರು(ಜ.11): ವಿಜ್ಞಾನ ಮತ್ತು ಅಧ್ಯಾತ್ಮ ಎರಡೂ ಸ್ವತಂತ್ರ ಮತ್ತು ಪೂರಕ ಕ್ಷೇತ್ರಗಳಾಗಿದ್ದು, ಇವೆರಡರ ನಡುವೆ ಯಾವುದೇ ಘರ್ಷಣೆ ಅಥವಾ ಸಂಘರ್ಷ ಇಲ್ಲ ಎಂದು ಅಜೀಂ ಪ್ರೇಮ್ ಜೀ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ಜಯಂತ್ ವ್ಯಾಸನಕೆರೆ ಅಭಿಪ್ರಾಯಪಟ್ಟಿದ್ದಾರೆ.

ಇಂದು ಬಸವನಗುಡಿಯ ನ್ಯಾಶನಲ್ ಕಾಲೇಜ್‌ನಲ್ಲಿ ನಡೆದ ' ಗವಿ ಗಂಗಾಧರೇಶ್ವರ ದೇವಸ್ಥಾನದ ಖಗೋಳಿಯ ವಿದ್ಯಮಾನ' ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಡಾ. ಜಯಂತ್, ಸುವರ್ಣನ್ಯೂಸ್.ಕಾಂ ಜೊತೆ ಮಾತನಾಡಿದರು.

ವಿಜ್ಞಾನ ಮತ್ತು ಅಧ್ಯಾತ್ಮ ಎರಡು ವಿಭಿನ್ನ ಕ್ಷೇತ್ರಗಳು. ಆದರೆ ಅವೆರಡರ ಗುರಿ ಒಂದೇ. ವಿಶ್ವದ ಅಸ್ತಿತ್ವದ ಕಾರಣ ಹುಡುಕುತ್ತಿರುವ ಈ ಎರಡೂ ಕ್ಷೇತ್ರಗಳು ಆಯ್ದುಕೊಂಡ ಮಾರ್ಗ ಮಾತ್ರ ಬೇರೆ ಬೇರೆಯಾಗಿವೆ. ಅದರಂತೆ ಒಂದು ನಿರ್ದಿಷ್ಟ ಸಂಗತಿಯನ್ನು ಧೃಢೀಕರಿಸಲು ಎರಡೂ ಕ್ಷೇತ್ರಗಳು ಕೆಲವೊಮ್ಮೆ ಮುಖಾಮುಖಿಯಾಗಿವೆ. ಸತ್ಯದ ಅನ್ವೇಷಣೆಗೆ ಇದು ಅನಿವಾರ್ಯವೂ ಹೌದು ಎಂದು ಜಯಂತ್ ನುಡಿದರು.

ಅದರಂತೆ ಡಾ. ಜಯಂತ್ ವ್ಯಾಸನಕೆರೆ ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಪ್ರಶ್ನೆ: ಸಮಾಜದಲ್ಲಿ ನಿರ್ದಿಷ್ಟ ನಂಬಿಕೆಗಳು ಆಳವಾಗಿ ಬೇರೂರಿದಷ್ಟು ವಿಜ್ಞಾನವೇಕೆ ಜನರ ಮನಸ್ಸನ್ನು ಮುಟ್ಟಿಲ್ಲ?

ಉತ್ತರ: ಇದು ಭಾಗಶಃ ಒಪ್ಪತಕ್ಕ ವಾದ. ನಂಬಿಕೆ ಬಹಳ ವೇಗವಾಗಿ ಮತ್ತು ಬಹಳ ಆಳವಾಗಿ ಜನರ ಮನಸ್ಸಿನ ಕದ ತಟ್ಟುತ್ತದೆ. ಆದರೆ ವಿಜ್ಞಾನ ಹಾಗಲ್ಲ, ಒಂದು ನಿರ್ದಿಷ್ಟ ಸಂಗತಿಯನ್ನು ಧೃಢೀಕರಿಸಲು ಅದಕ್ಕೆ ಸಮಯ ಹಿಡಿಯುತ್ತದೆ. ಬಹುಶಃ ಈ ಸಮಯವೇ ವಿಜ್ಞಾನವನ್ನು ಸಮಾಜದಿಂದ ದೂರ ಇರುವಂತೆ ಮಾಡುತ್ತದೆ. ಅದರಂತೆ ಸಮಾಜ ಕೂಡ ವಿಜ್ಞಾನ ಕ್ಷೇತ್ರದ ಆಗುಹೋಗುಗಳಿಗೆ ಸ್ಪಂದಿಸಲು ವಿಳಂಬ ಮಾಡುತ್ತದೆ. ವಿಜ್ಞಾನದಿಂದಾಗುವ ಹೊಸ ಅನ್ವೇಷಣೆಗಳಿಗೆ ಮಾತ್ರ ಜನ ಸ್ಪಂದಿಸುತ್ತಾರೆಯೇ ಹೊರತು, ಆ ಅನ್ವೇಷಣೆಯ ಹಾದಿ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ.

ಪ್ರಶ್ನೆ: ವಿಜ್ಞಾನ, ನಂಬಿಕೆ ನಡುವಿನ ನಿರಂತರ ಘರ್ಷಣೆಗೆ ಕಾರಣವೇನು?

ಉತ್ತರ: ಇಲ್ಲ, ಹೀಗೆ ಹೇಳುವುದು ಸರಿಯಲ್ಲ. ವಿಜ್ಞಾನ ಮತ್ತು ನಂಬಿಕೆ ನಡುವೆ ಯಾವತ್ತೂ ಘರ್ಷಣೆ ಇಲ್ಲ. ಅವರೆಡೂ ಒಂದಕ್ಕೊಂದು ಪೂರಕ ಮತ್ತು ಅಷ್ಟೇ ಸ್ವತಂತ್ರ ಕ್ಷೇತ್ರಗಳು. ಸತ್ಯದ ಅನ್ವೇಷಣೆಗಾಗಿ ಬೇರೆ ಬೇರೆ ಮಾರ್ಗಗಳನ್ನು ಆಯ್ದುಕೊಂಡ ಈ ಕ್ಷೇತ್ರಗಳು, ಅದರಂತೆ ಕೆಲಸ ಮಾಡುತ್ತಿವೆ. ಆದರೆ ಒಂದು ನಿರ್ದಿಷ್ಟ ಸಂಗತಿಯನ್ನು ಧೃಢೀಕರಿಸಲು ಎರಡೂ ಕ್ಷೇತ್ರಗಳು ಕೆಲವೊಮ್ಮೆ ಮುಖಾಮುಖಿಯಾಗಿವೆ. ಸತ್ಯದ ಅನ್ವೇಷಣೆಗೆ ಇದು ಅನಿವಾರ್ಯವೂ ಹೌದು.

ಪ್ರಶ್ನೆ: ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನ ಕುರಿತು ಖಗೋಳಶಾಸ್ತ್ರ ಏನು ಹೇಳುತ್ತದೆ?

ಉತ್ತರ: ಈ ಪ್ರಶ್ನೆಗೆ ಉತ್ತರ ನೀಡುವ ಮೊದಲು ನಾನೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನವನ್ನು ಖಗೋಳಿಯ ವಿದ್ಯಮಾನ ಎಂದು ಹೇಳಿದಾಕ್ಷಣ ನಾವು ನಂಬಿಕೆಯನ್ನು ಪ್ರಶ್ನೆ ಮಾಡುತ್ತಿದ್ದೇವೆ ಎಂದು ಭಾವಿಸಬೇಕಿಲ್ಲ. ನಾವು ಕೇವಲ ಆ ಘಟನಾವಳಿಯ ಮತ್ತೊಂದು ಮಜಲನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ.

ಅದರಂತೆ ಗವಿ ಗಂಗಾಧರೇಶ್ವರ ಕ್ದೇವಸ್ಥಾನದಲ್ಲಿ ನಡೆಯುವ ಸೂರ್ಯ ಮಜ್ಜನ ಒಂದು ಖಗೋಳಿಯ ವಿದ್ಯಮಾನವಾಗಿದ್ದು, ಇದು ಕೇವಲ ಒಂದು ಬಾರಿ ನಡೆಯದೇ ವರ್ಷದಲ್ಲಿ ಎರಡು ಬಾರಿ ಘಟಿಸುತ್ತದೆ. ಇದಕ್ಕೆ ವಿಜ್ಞಾನ ಪೂರಕ ಸಾಕ್ಷಿಯನ್ನು ಒದಗಿಸುತ್ತದೆ.

ಗವಿ ಗಂಗಾಧರೇಶ್ವರ ಸೂರ್ಯ ಮಜ್ಜನ, ಬದಲಾಗತ್ತೆ ದಿನ: ಹೇಳತ್ತೆ ವಿಜ್ಞಾನ!

click me!