ರಾಜ್ಯಕ್ಕೆ ಮುಂಗಾರು ಪ್ರವೇಶ, ಮೊದಲ ದಿನವೇ 4 ಜಿಲ್ಲೆಗಳಲ್ಲಿ ಮಳೆ

By Kannadaprabha NewsFirst Published Jun 5, 2020, 7:35 AM IST
Highlights

ಜೂನ್‌ 1ರಂದು ಕೇರಳ ಪ್ರವೇಶಿಸಿದ್ದ ಮುಂಗಾರು ಮಾರುತಗಳು ರಾಜ್ಯಕ್ಕೆ ಗುರುವಾರ ಪ್ರವೇಶಿಸಿವೆ. ಇದರಿಂದ ಮುಂಗಾರು ಮಳೆಯನ್ನೇ ನಂಬಿರುವ ರೈತರು, ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಬೆಂಗಳೂರು(ಜೂ.05): ಜೂನ್‌ 1ರಂದು ಕೇರಳ ಪ್ರವೇಶಿಸಿದ್ದ ಮುಂಗಾರು ಮಾರುತಗಳು ರಾಜ್ಯಕ್ಕೆ ಗುರುವಾರ ಪ್ರವೇಶಿಸಿವೆ. ಇದರಿಂದ ಮುಂಗಾರು ಮಳೆಯನ್ನೇ ನಂಬಿರುವ ರೈತರು, ಜನರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಸಕ್ತ ಮುಂಗಾರು ಅವಧಿಯಲ್ಲಿ ದಕ್ಷಿಣ ಭಾತರದ ರಾಜ್ಯಗಳಲ್ಲಿ ಶೇ.102ರಷ್ಟು(ವಾಡಿಕೆಯಷ್ಟು) ಮಳೆಯಾಗಲಿದೆ. ಜುಲೈನಲ್ಲಿ ಶೇ.104ರಷ್ಟು, ಆಗಸ್ಟ್‌ ನಲ್ಲಿ ಶೇ.97ರಷ್ಟುವಾಡಿಕೆ ಮಳೆ ಆಗಿಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.

ಹೋಂ ಗಾರ್ಡ್‌ಗಳನ್ನ ಕೆಲಸದಿಂದ ತೆಗೆಯಲ್ಲ: ಗೃಹ ಸಚಿವ ಬೊಮ್ಮಾಯಿ

ಪ್ರವೇಶಿಸಿದ ಮೊದಲ ದಿನ ಚಾಮರಾಜನಗರ, ಹಾಸನ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಮುಂಗಾರು ಮಳೆಯ ಸಿಂಚನವಾಗಿದೆ. ಕಳೆದ ವರ್ಷ ಜೂನ್‌ 8ರಂದು ಕೇರಳ ಪ್ರವೇಶಿಸಿದ್ದ ಮುಂಗಾರು ಒಂದು ವಾರ ತಡವಾಗಿ ಅಂದರೆ ಜೂ.14ಕ್ಕೆ ರಾಜ್ಯ ಪ್ರವೇಶಿಸಿತ್ತು. ಅದಾದ ಬಳಿಕ ಮುಂಗಾರು ಸ್ವಲ್ಪ ಕ್ಷೀಣಿಸಿತ್ತು. ಆದರೆ, ಆಗಸ್ಟ್‌ ಮೊದಲ ವಾರದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಾಗಿ ಪ್ರವಾಹ ಸೃಷ್ಟಿಸಿದ್ದನ್ನು ಸ್ಮರಿಸಬಹುದಾಗಿದೆ.

ಕೃಷಿ ಚಟುಟಿಕೆ ಆರಂಭ:

ಕೊರೋನಾ ಸೋಂಕಿನಿಂತ ತತ್ತರಿಸಿದ ರೈತರಿಗೆ ವಾಡಿಕೆಯಂತೆ ಮುಂಗಾರು ಆರಂಭವಾಗಿರುವುದು ಸ್ವಲ್ಪ ನೆಮ್ಮದಿ ತಂದಿದೆ. ಜೊತೆಗೆ ಪೂರ್ವ ಮುಂಗಾರಿನ ಅವಧಿಯಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯವನ್ನೂ ಆರಂಭಿಸಲಾಗಿದೆ.

ಆರೆಂಜ್‌ ಅಲರ್ಟ್‌:

ಇನ್ನೂ ಇದೀಗ ‘ನಿಸರ್ಗ’ ಚಂಡಮಾರುತ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಮುಂಗಾರು ಮಳೆಯ ತೀವ್ರತೆಯೂ ಕಡಿಮೆಯಾಗಿದೆ. ಆದರೂ ಕರಾವಳಿ ಮತ್ತು ಮಲೆನಾಡು ಸೇರಿದಂತೆ ವಿವಿಧೆಡೆ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಲಕ್ಷಣ ಇರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ‘ಆರೆಂಜ್‌’ ಅಲರ್ಟ್‌ನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ರಾತ್ರಿ ಕರ್ಫ್ಯೂ ವೇಳೆ ಬಸ್‌, ಆಟೋ, ಕ್ಯಾಬ್‌ ಸಂಚಾರಕ್ಕೆ ಅನುಮತಿ

ಗುರುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡಿರುವ ಅಂಕಿ ಅಂಶದ ಪ್ರಕಾರ ಬುಧವಾರ ಕಾರವಾರದಲ್ಲಿ ಅತಿ ಹೆಚ್ಚು 15 ಸೆಂ.ಮೀ ಮಳೆಯಾದ ವರದಿಯಾಗಿದೆ. ಉತ್ತರ ಕನ್ನಡದ ಗೋಕರ್ಣದಲ್ಲಿ 10, ಹೊನ್ನಾವರದಲ್ಲಿ 8, ಮಂಕಿಯಲ್ಲಿ 7, ಕದ್ರಾ ಹಾಗೂ ಕೊಡಗಿನ ಭಾಗಮಂಡಲದಲ್ಲಿ ತಲಾ 6 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

click me!