
ಆತ್ಮಭೂಷಣ್
ಮಂಗಳೂರು (ಜು.20) : ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ದೇಶದ ಕರಾವಳಿ ಸಮುದ್ರವನ್ನೂ ತಟ್ಟಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಹಿಮಗಡ್ಡೆಗಳ ಕರಗುವಿಕೆ, ಸಮುದ್ರಗಳ ಹಿಗ್ಗುವಿಕೆ ಸಾಲಿಗೆ ಈಗ ಚಂಡಮಾರುತಗಳ ಹೆಚ್ಚಳವೂ ಸೇರುತ್ತಿದೆ. ಇಂತಹ ಚಂಡಮಾರುತಗಳು ಮುಂದಿನ ದಿನಗಳಲ್ಲಿ ಇನ್ನಷ್ಟುತೀವ್ರತೆ ಪಡೆದುಕೊಳ್ಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ನೀಡುತ್ತಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಚಂಡಮಾರುತ ಕೇರಳ ಮೂಲಕ ಕರ್ನಾಟಕ ಕರಾವಳಿ ಪ್ರವೇಶಿಸಿ ಮುಂಗಾರು ಹಂಗಾಮ ಶುರುವಾಗುವುದು ಪ್ರತಿ ವರ್ಷದ ವಾಡಿಕೆ. ಮಳೆಗಾಲದಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸುವ ಚಂಡಮಾರುತ ಹೆಚ್ಚಾಗಿ ಬಂಗಾಳಕೊಲ್ಲಿಯಿಂದಲೇ ಪಶ್ಚಿಮ ಕರಾವಳಿಗೆ ದಾಂಗುಡಿ ಇರಿಸುವುದು ಗಮನಾರ್ಹ. ಈಗ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಬೀಸುವ ಚಂಡಮಾರುತ ಸಂಖ್ಯೆ ಪರಸ್ಪರ ಸರಿಸಾಟಿಯಾಗಿದೆ. ಅಷ್ಟರ ಮಟ್ಟಿಗೆ ಜಾಗತಿಕ ತಾಪಮಾನದ ಏರಿಕೆಯ ಪರಿಣಾಮ ಕಂಡುಬರುತ್ತಿದೆ.
Mangaluru rains: ಕರಾವಳಿಯಲ್ಲಿ ಇಂದು, ನಾಳೆ ಆರೆಂಜ್ ಅಲರ್ಟ್!
ಕಳೆದ ಹಲವು ವರ್ಷಗಳಲ್ಲಿ ಅನೇಕ ಚಂಡಮಾರುತಗಳು ದಕ್ಷಿಣ ಹಾಗೂ ಪಶ್ಚಿಮ ಕರಾವಳಿಯನ್ನು ಹಾದುಹೋಗಿದೆ. ಕರಾವಳಿಗೆ ಸಾಕಷ್ಟುಹಾನಿಯನ್ನೂ ಉಂಟುಮಾಡಿದೆ. 2021ರಲ್ಲಿ ತೌಖ್ತೆ ಚಂಡಮಾರುತ ಕಾಣಿಸಿ ಜನಜೀವನವನ್ನು ಆತಂತಕ್ಕೆ ತಳ್ಳಿದಾಗ ಕರಾವಳಿ ನಿಯಂತ್ರಣ ವಲಯ(ಸಿಆರ್ಝಡ್) ಅಧಿಕಾರಿಗಳು ದ.ಕ. ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿ ಆತಂಕ ಮೂಡುವಂತೆ ಮಾಡಿದೆ.
ಬಂಗಾಳಕೊಲ್ಲಿಗೆ ಸರಿಸಾಟಿ: ಕರ್ನಾಟಕ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಕಾಣಿಸುವ ವಾರ್ಷಿಕ ಚಂಡಮಾರುತ ಸಂಖ್ಯೆ ಬಂಗಾಳಕೊಲ್ಲಿಯಷ್ಟೆತಲುಪಿದೆ. 2021ರಲ್ಲಿ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸಂಖ್ಯೆ 6 ಇತ್ತು, ಅರಬ್ಬಿ ಸಮುದ್ರದಲ್ಲಿ ಕೂಡ ಅಷ್ಟೇ ಸಂಖ್ಯೆಯ ಚಂಡಮಾರುತ ಎದ್ದಿತ್ತು.
2017ರ ವರೆಗೆ ಬಂಗಾಳಕೊಲ್ಲಿಯಲ್ಲಿ ಸರಾಸರಿ 4 ಚಂಡಮಾರುತ ಹುಟ್ಟಿಕೊಳ್ಳುತ್ತಿತ್ತು, ಆಗ ಅರಬ್ಬಿ ಸಮುದ್ರದಲ್ಲಿ ಕೇವಲ ಒಂದು ಚಂಡಮಾರುತ ಬಂದುಹೋಗುತ್ತಿತ್ತು. 2018ರಲ್ಲಿ ಬಂಗಾಳಕೊಲ್ಲಿಯಲ್ಲಿ 4 ಚಂಡಮಾರುತ ಕಂಡುಬಂದರೆ, ಅರಬ್ಬಿ ಸಮುದ್ರದಲ್ಲಿ 3 ಚಂಡಮಾರುತ ಬೀಸುತ್ತಿತ್ತು. ಇದು 2019ರಲ್ಲಿ ಬಂಗಾಳದಲ್ಲಿ 4, ಅರಬ್ಬಿ ಸಮುದ್ರದಲ್ಲಿ 5ಕ್ಕೆ ಏರಿಕೆಯಾಯಿತು. 2020ರಲ್ಲಿ ಈ ಸಂಖ್ಯೆ ಬಂಗಾಳದಲ್ಲಿ 3ರಲ್ಲಿ ಇದ್ದರೆ, ಅರಬ್ಬಿ ಸಮುದ್ರದಲ್ಲಿ 2ಕ್ಕೆ ಇಳಿದಿತ್ತು. ಆದರೆ 2021ರಲ್ಲಿ ಏಕಾಏಕಿ ಬಂಗಾಳಕೊಲ್ಲಿಯಲ್ಲೂ, ಅರಬ್ಬಿ ಸಮುದ್ರದಲ್ಲೂ ಚಂಡಮಾರುತ ಸಂಖ್ಯೆ 6ರ ವರೆಗೆ ತಲುಪಿದೆ.
ಚಂಡಮಾರುತ ಏರಿಕೆ ಎಫೆಕ್ಟ್:
ಕಳೆದ ಐದು ವರ್ಷಗಳಲ್ಲಿ ಚಂಡಮಾರುತಗಳ ಬೀಸುವ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮ ಎನ್ನುತ್ತಾರೆ ಹವಾಮಾನ ಇಲಾಖೆ ತಜ್ಞರು. ಚಂಡಮಾರುತದಲ್ಲೂ ಸಾಮಾನ್ಯ ಚಂಡಮಾರುತ, ತೀವ್ರ ಚಂಡಮಾರುತ, ಜಾಸ್ತಿ ಚಂಡಮಾರುತ, ಅತಿ ತೀವ್ರ ಚಂಡಮಾರುತ ಹಾಗೂ ಅತ್ಯಂತ ತೀವ್ರ ಚಂಡಮಾರುತ ಎಂದು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಅತ್ಯಂತ ತೀವ್ರ ಚಂಡಮಾರುತ ಕೂಡ ಕರಾವಳಿಗೆ ಬಂದುಹೋಗಿದೆ.
ಬಂಗಾಳಕೊಲ್ಲಿಯಲ್ಲಿ ಬಿರುಗಾಳಿ ಚಂಡಮಾರುತ ಕಾಣಿಸಿದರೆ, ಇಲ್ಲಿ ಮಾನ್ಸೂನ್ ಚಂಡಮಾರುತವಾಗಿ ಕಾಣಿಸಿಕೊಳ್ಳುತ್ತದೆ. ಎರಡು ಚಂಡಮಾರುತಗಳೂ ಸಾಕಷ್ಟುಹಾನಿಯನ್ನು ಉಂಟುಮಾಡುತ್ತವೆ.
ಸಮುದ್ರ ಉಷ್ಣಾಂಶ ಏರಿಕೆ:
ಹವಾಮಾನ ಇಲಾಖೆ ಪ್ರಕಾರ ಸಮುದ್ರದ ಉಷ್ಣತೆ ಶೇ.26ರಿಂದ ಶೇ.28ರ ವರೆಗೂ ಏರಿಕೆಯಾದರೆ ಆಗ ಚಂಡಮಾರುತ ಎಫೆಕ್ಟ್ ಆಗುವುದು ಜಾಸ್ತಿ ಎನ್ನುತ್ತಾರೆ. ಸಮುದ್ರ ಅಲೆಗಳ ಅಬ್ಬರ ಜತೆಗೆ ಮೇಲ್ಮೈ ಗಾಳಿಯೂ ತೀವ್ರವಾಗಿ ತೀರ ಪ್ರದೇಶಗಳಿಗೆ ಅಪ್ಪಳಿಸಿ ಹಾನಿ ಎಸಗುತ್ತದೆ.
ಭವಿಷ್ಯದ ದಿನಗಳಲ್ಲಿ ಚಂಡಮಾರುತಗಳ ಸಂಖ್ಯೆ ಕಡಿಮೆಯಾಗಲಿದೆ. ಹಾಗೆಂದು ಚಂಡಮಾರುತ ಕಾಣಿಸಿದರೆ, ಅದರ ತೀವ್ರತೆ ಮಾತ್ರ ಬಹಳಷ್ಟುಜಾಸ್ತಿ ಇರಬಹುದು. ಗುಡುಗು, ಮಿಂಚು, ಸಿಡಿಲು ಮತ್ತಷ್ಟುಜಾಸ್ತಿಯಾಗಬಹುದು ಜಿನಿವಾದಲ್ಲಿರುವ ಜಾಗತಿಕ ಹವಾಮಾನ ನಿರ್ವಹಣಾ ವಿಭಾಗದ ತಂಡ ಇವುಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದು, ಇದಕ್ಕೆ ಇನ್ನೂ ಪರಿಹಾರ ದೊರಕಿಲ್ಲ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.
ಇನ್ನು 2 ವರ್ಷದಲ್ಲಿ ಇಂಟರ್ನೆಟ್ ಅಂತ್ಯ, ಆರ್ಥಿಕತೆ ಮೇಲೆ ತೀವ್ರ ಪರಿಣಾಮ: ಇದರ ಹಿಂದಿದೆ ಅಚ್ಚರಿಯ ಕಾರಣ!
ಚಂಡಮಾರುತ ಅಬ್ಬರ ನಿಯಂತ್ರಣಕ್ಕೆ ತಾಂತ್ರಿಕತೆ ಶಿಫಾರಸು
ಭಾರಿ ಚಂಡಮಾರುತ ವೇಳೆ ಸಂಭವಿಸುವ ಕಡಲಬ್ಬರ, ಅಲೆಗಳ ಅಪ್ಪಳಿಸುವಿಕೆಯಿಂದ ಉಂಟಾಗುವ ಹಾನಿಯನ್ನು ನಿಯಂತ್ರಿಸಲು ಸಿಆರ್ಝಡ್ ಅಧಿಕಾರಿಗಳು ತಜ್ಞರಿಂದ ಸಿದ್ಧಪಡಿಸಿದ ವರದಿಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಪ್ರಸ್ತಾಪಿಸಿದ್ದಾರೆ.
ಸಮುದ್ರದಲ್ಲಿ ಅಲೆಗಳು ತೀರಕ್ಕೆ ಅಪ್ಪಳಿಸುವುದು ಸಾಮಾನ್ಯ, ಆದರೆ ಭಾರಿ ಗಾತ್ರದ ಅಲೆಗಳು ತೀರವನ್ನು ಅಸ್ತವ್ಯಸ್ತಗೊಳಿಸುವುದನ್ನು ನಿಯಂತ್ರಿಸಲು ಸಮುದ್ರದ ನೀರಿನೊಳಗೆ ಎಂಜಿನಿಯರಿಂಗ್ ತಾಂತ್ರಿಕತೆಯನ್ನು ಅಳವಡಿಕೊಳ್ಳುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಬ್ರೇಕ್ವಾಟರ್ ಸೇರಿದಂತೆ ವಿವಿಧ ತಾಂತ್ರಿಕತೆಗಳನ್ನು ಮಾಡಲು ಸಾಧ್ಯವಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ