Covid 19 Third Wave: '2​​-3 ದಿನಕ್ಕೇ ರಾಜ್ಯದಲ್ಲಿ ಕೋವಿಡ್‌ ದ್ವಿಗುಣ, ಇನ್ನಷ್ಟು ಕಠಿಣ ನಿರ್ಬಂಧ'

By Kannadaprabha NewsFirst Published Jan 14, 2022, 8:35 AM IST
Highlights

*  2ನೇ ಅಲೆಯಲ್ಲಿ 8 ದಿನಕ್ಕೆ ದ್ವಿಗುಣ, ಈಗ 2-3 ದಿನಕ್ಕೆ ಡಬಲ್‌
*  ಹೀಗೇ ಹೆಚ್ಚುತ್ತಿದ್ದರೆ ಇನ್ನಷ್ಟು ಕಠಿಣ ನಿರ್ಬಂಧ
*  ಬೆಂಗಳೂರು ಮಾತ್ರವಲ್ಲ ಎಲ್ಲೆಡೆ ಸೋಂಕು ಏರಿಕೆ 
 

ಬೆಂಗಳೂರು(ಜ.14):  ರಾಜ್ಯದಲ್ಲಿ(Karnataka) ಕೊರೋನಾ(Coronavirus) ಸೋಂಕು ಪ್ರಕರಣಗಳು ಎರಡರಿಂದ ಮೂರು ದಿನಗಳಲ್ಲಿಯೇ ದ್ವಿಗುಣಗೊಳ್ಳುತ್ತಿದ್ದು, ಪ್ರಕರಣಗಳ ಹೆಚ್ಚಳ ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ಒಂದನೇ ಅಲೆಯಲ್ಲಿ (2020) ಸೋಂಕು ಪ್ರಕರಣಗಳು 10-12 ದಿನಕ್ಕೆ, ಎರಡನೇ ಅಲೆಯಲ್ಲಿ (2021) ಎಂಟು ದಿನಕ್ಕೆ ದ್ವಿಗುಣವಾಗುತ್ತಿತ್ತು. ಆದರೆ, ಸದ್ಯ ಮೂರನೇ ಅಲೆಯಲ್ಲಿ(Covid 3rd Wave) ಎರಡರಿಂದ ಮೂರು ದಿನಗಳೊಳಗೆ ದ್ವಿಗುಣವಾಗುತ್ತಿದೆ. ಇದು ಸೋಂಕು ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ, ತಿಂಗಳಾಂತ್ಯದವರೆಗೂ ರಾತ್ರಿ ಮತ್ತು ವಾರಾಂತ್ಯದ ಕಫ್ರ್ಯೂ ವಿಸ್ತರಿಸಲಾಗಿದ್ದು, ಪ್ರಕರಣಗಳನ್ನು ಆಧರಿಸಿ ಇನ್ನಷ್ಟು ಹೆಚ್ಚಿನ ನಿರ್ಬಂಧ ವಿಧಿಸಲಾಗುತ್ತದೆ ಎಂದರು.

Covid 19 Third Wave: ಬೆಂಗ್ಳೂರಲ್ಲಿ 233 ದಿನ ಬಳಿಕ 15,000+ ಕೇಸ್‌: ಬೆಚ್ಚಿಬಿದ್ದ ಜನತೆ..!

ಜನವರಿ 1-11 ರವರೆಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ 62,641 ಆಗಿದ್ದು, ಆಸ್ಪತ್ರೆಯಲ್ಲಿ(Hospital) ಶೇ.6ರಷ್ಟು, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ(Covid Care Center) ಶೇ.1ರಷ್ಟು, ಮನೆ ಐಸೋಲೇಶನ್‌ನಲ್ಲಿ(Home Isolation) ಶೇ.93ರಷ್ಟು ಸೋಂಕಿತರಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿರುವುದರಿಂದ ಚಿಕಿತ್ಸೆಗೆ(Treatment) ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾಜ್ಯದ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಶೇ.30ರಷ್ಟು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಂದಿರಾಗಾಂ​ಧಿ ಮಕ್ಕಳ ಆಸ್ಪತ್ರೆಯನ್ನು ಕೋವಿಡ್‌ ಸೋಂಕಿತ ಮಕ್ಕಳ(Children) ಚಿಕಿತ್ಸೆಗೆ ಮೀಸಲಿಡಲಾಗಿದೆ. ಎಲ್ಲಾ ಶಾಲೆಗಳಲ್ಲಿ(Schools) 15 ದಿನಕ್ಕೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ(Health Checkup) ಮಾಡಲಾಗುತ್ತಿದೆ ಎಂದರು.

ಅಗತ್ಯ ಸಿದ್ಧತೆಗೆ 243 ಕೋಟಿ ವೆಚ್ಚ:

ಈಗಾಗಲೇ ಮೂರನೇ ಅಲೆಗಾಗಿ 243 ಕೋಟಿ ರು. ವೆಚ್ಚದಲ್ಲಿ, 147 ತಾಲೂಕು ಆಸ್ಪತ್ರೆಗಳಲ್ಲಿ 6,386 ಆಕ್ಸಿಜನ್‌ ಹಾಸಿಗೆಗಳು, 2,928 ಐಸಿಯು ಹಾಸಿಗೆಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. 19 ಜಿಲ್ಲಾಸ್ಪತ್ರೆಗಳಲ್ಲಿ 665 ಆಕ್ಸಿಜನ್‌ ಹಾಸಿಗೆ, 263 ಐಸಿಯು ಹಾಸಿಗೆಗಳನ್ನು 25 ಕೋಟಿ ರು. ವೆಚ್ಚದಲ್ಲಿ ಅಳವಡಿಸಲಾಗಿದೆ. 266 ಪಿಎಸ್‌ಎ ಘಟಕ ರಾಜ್ಯಕ್ಕೆ ದೊರೆತಿದ್ದು, 217 ಕಾರ್ಯಾರಂಭವಾಗಿದೆ. 3,460 ವೆಂಟಿಲೇಟರ್‌, 8,100 ಆಕ್ಸಿಜನ್‌ ಸಾಂದ್ರಕ ಲಭ್ಯವಿದೆ ಎಂದು ತಿಳಿಸಿದರು.

ಮೂರನೇ ಅಲೆಯಲ್ಲಿ ಸೋಂಕಿನ ಪರಿಣಾಮ ತೀವ್ರವಾಗಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ. ಸದ್ಯ ಹಲವರಿಗೆ ಸೋಂಕಿನ ಲಕ್ಷಣ ಹೆಚ್ಚಾಗುತ್ತಿದೆ. ಅದರಲ್ಲೂ ಲಸಿಕೆ(Vaccine) ಪಡೆಯದವರಲ್ಲಿ ಸೋಂಕಿನ ತೀವ್ರತೆ ಹೆಚ್ಚಿದೆ. 45 ಲಕ್ಷ ಮಂದಿ ಎರಡನೇ ಡೋಸ್‌ನಿಂದ ದೂರ ಉಳಿದಿದ್ದಾರೆ. ತಕ್ಷಣ ಬಂದು ಎರಡನೇ ಡೋಸ್‌ ಪಡೆಯಬೇಕು. 15-18 ವರ್ಷದ 32 ಲಕ್ಷ ಮಕ್ಕಳಿದ್ದು, ಶೇ.54ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಉಳಿದವರರಿಗೆ ಶೀಘ್ರ ಪೂರ್ಣಗೊಳಿಸಲಾಗುತ್ತದೆ. ಲಸಿಕೆಗೆ ಅರ್ಹವಲ್ಲದ 15 ವರ್ಷದೊಳಗಿನ ಮಕ್ಕಳನ್ನು ಸೋಂಕಿನಿಂದ ರಕ್ಷಿಸಲು ಹೆಚ್ಚಿನ ನಿಗಾವಹಿಸಬೇಕು ಎಂದು ಮುನ್ನೆಚ್ಚರಿಕೆ ನೀಡಿದರು.

Corona Crisis: ದೇಶದಲ್ಲಿ ಒಂದೇ ದಿನ 2.47 ಲಕ್ಷ ಪ್ರಕರಣ: ಆತಂಕದಲ್ಲಿ ಜನತೆ

ಪರೀಕ್ಷೆ 2.3 ಲಕ್ಷ ಗುರಿ:

ಕೋವಿಡ್‌ ಪರೀಕ್ಷೆಗೆ(Covid Test) ಪ್ರತಿ ದಿನ 2ಲಕ್ಷದ ಗುರಿ ನೀಡಿದ್ದು,ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ 1.3 ಲಕ್ಷಕ್ಕೆ , ರಾಜ್ಯಾದ್ಯಂತ್ಯ 2.3 ಲಕ್ಷಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ. ಬೆಂಗಳೂರಿನಲ್ಲಿ(Bengaluru) 1 ಲಕ್ಷದಷ್ಟು ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 265 ಕೊರೋನಾ ಪ್ರಯೋಗಾಲಯ ಸ್ಥಾಪಿಸಿದ್ದು, ರೂಪಾಂತರಿ ಪತ್ತೆಗೆ ವಂಶವಾಹಿ ಪರೀಕ್ಷೆ ಪ್ರಯೋಗಾಲಯ(ಜೀನೋಮಿಕ್‌ ಸೀಕ್ವೆನ್ಸ್‌ ಲ್ಯಾಬ್‌) ಆರಂಭಿಸಲಾಯಿತು. ಶೀಘ್ರದಲ್ಲಿಯೇ ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲೂ ಆರಂಭವಾಗಲಿದ್ದು, ಕೇಂದ್ರ ಸರ್ಕಾರದ 4 ಸೇರಿ ಜೀನೋಮಿಕ್‌ ಸೀಕ್ವೆನ್ಸ್‌ ಲ್ಯಾಬ್‌ ಸಂಖ್ಯೆ 9ಕ್ಕೆ ಹೆಚ್ಚಲಿವೆ. ಇನ್ನು 1,875 ಮಾದರಿಗಳನ್ನು ಒಮ್ಮೆಗೇ ರೂಪಾಂತರಿ ಪರೀಕ್ಷೆ ಮಾಡುವ ಸೌಲಭ್ಯವಿದೆ ಎಂದು ತಿಳಿಸಿದರು.

ಬೆಂಗಳೂರು ಮಾತ್ರವಲ್ಲ ಎಲ್ಲೆಡೆ ಸೋಂಕು ಏರಿಕೆ:

ಡಿಸೆಂಬರ್‌ 28ರಂದು ಬೆಂಗಳೂರಿನಲ್ಲಿ 269 ಹಾಗೂ ಉಳಿದ ಭಾಗದಲ್ಲಿ 87 ಸೇರಿ ಒಟ್ಟು 356 ಪ್ರಕರಣ ಇತ್ತು. ಜ.5ರಂದು ಬೆಂಗಳೂರಿನಲ್ಲಿ 3,605, ರಾಜ್ಯದಲ್ಲಿ 641 ಪ್ರಕರಣಗಳು ಕಂಡುಬಂದವು. ಆದರೆ, ಜ.11ರಂದು ಬೆಂಗಳೂರಿನಲ್ಲೇ 10,800 ಪ್ರಕರಣಗಳು, ರಾಜ್ಯದ ಉಳಿದೆಡೆ 3,673 ಪ್ರಕರಣಗಳು ಹೆಚ್ಚಳವಾದವು. ಡಿಸೆಂಬರ್‌ 28ರಿಂದ ಜನವರಿ 11 ರವರೆಗೆ (15 ದಿನಗಳಲ್ಲಿ) ಬೆಂಗಳೂರಿನಲ್ಲಿ ಶೇ.32.65 ರಾಜ್ಯದಲ್ಲಿ ಶೇ.36ರಷ್ಟುಪ್ರಕರಣದ ಸರಾಸರಿ ಏರಿಕೆ ವೇಗ ಕಂಡುಬಂದಿದೆ ಎಂದು ಮಾಹಿತಿ ನೀಡಿದರು.
 

click me!