ಬರಗಾಲ: ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್, ಬಿಂದಿಗೆಯಿಂದ ನೀರು ತಂದು ಹಾಕ್ತಿರೋ ರೈತರು!

By Ravi JanekalFirst Published Sep 21, 2023, 2:33 PM IST
Highlights

ಮಳೆ ಇಲ್ಲದೇ ಬಿರುಕು ಬಿಟ್ಟಿರುವ ನೆಲ, ಒಣಗಿ ಹೋಗಿರೋ ಬೆಳೆ. ಬೆಳೆ ಉಳಿಸಿಕೊಳ್ಳಲು ಆಗಾಗ ಟ್ಯಾಂಕರ್ ಮೂಲಕ ಮತ್ತು ಬಿಂದಿಗೆಯಿಂದ ನೀರನ್ನು ತಂದು ಹಾಕುತ್ತಿರುವ ರೈತರು ದಿನನಿತ್ಯ ಹರಸಾಹಸ ಪಡುತ್ತಿದ್ದಾರೆ.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಸೆ.21) : ಮಳೆ ಇಲ್ಲದೇ ಬಿರುಕು ಬಿಟ್ಟಿರುವ ನೆಲ, ಒಣಗಿ ಹೋಗಿರೋ ಬೆಳೆ. ಬೆಳೆ ಉಳಿಸಿಕೊಳ್ಳಲು ಆಗಾಗ ಟ್ಯಾಂಕರ್ ಮೂಲಕ ಮತ್ತು ಬಿಂದಿಗೆಯಿಂದ ನೀರನ್ನು ತಂದು ಹಾಕುತ್ತಿರುವ ರೈತರು ದಿನನಿತ್ಯ ಹರಸಾಹಸ ಪಡುತ್ತಿದ್ದಾರೆ. ಇದು ಬರಪೀಡಿತ ಬಳ್ಳಾರಿ ಮತ್ತು ವಿಜಯನಗರದ ಸ್ಥಿತಿ. ರಾಜ್ಯ ಸರ್ಕಾರವೇನು ಬರವೆಂದು ಘೋಷಣೆ ಮಾಡಿದೆ. ಆದ್ರೇ ಅದರಿಂದಾಗೋ ಲಾಭವಾದ್ರೂ ಏನು..? ಅನ್ನೋದನ್ನು ರೈತರು ಇದೀಗ ಪ್ರಶ್ನೆಮಾಡುತ್ತಿದ್ಧಾರೆ. ಬಳ್ಳಾರಿಯಲ್ಲಿ ಬರಪರಿಸ್ಥಿತಿ ಕುರಿತ ಒಂದು ವರದಿ ಇಲ್ಲಿದೆ ನೋಡಿ. 

ಬೆಳೆ ಉಳಿಸಿಕೊಳ್ಳಲು ಬಳ್ಳಾರಿ ರೈತರ ಹರಸಾಹಸ

ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಮಳೆಯಿಲ್ಲದೇ ಬೆಳೆ ಕಳೆದುಕೊಂಡು ಕಂಗಾಲಾಗಿರೋ ಅನ್ನದಾತರು. ಬೆಳೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅನ್ನದಾತರ ಪರದಾಟ ಅಷ್ಟಿಷ್ಟಲ್ಲ. ಇಷ್ಟಾದ್ರೂ ಬೆಳೆ ಉಳಿಯುತ್ತದೆ ಅನ್ನೋ ನಂಬಿಕೆಯೇ ಇಲ್ಲವಾಗಿದೆ. ರಾಜ್ಯದಲ್ಲಿರೋ ಬಹುತೇಕ ತಾಲೂಕುಗಳು ಇದೀಗ ಬರಗಾಲದಿಂದ ತತ್ತರಿಸಿ ಹೋಗಿವೆ. ಅದರಲ್ಲೂ ಗಣಿನಾಡು ಬಳ್ಳಾರಿ ಮತ್ತು ವಿಜಯನನಗರ ಜಿಲ್ಲೆಯ ಎಲ್ಲಾ ಹತ್ತು ತಾಲೂಕುಗಳು  ರಾಜ್ಯ ಸರ್ಕಾರ ಬರವೆಂದು ಘೋಷಣೆ ಮಾಡಿದೆ. ಆದ್ರೇ ಅದರಿಂದಾಗೋ ಲಾಭವೇನು ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಯಾಕಂದ್ರೆ, ಮುಂಗಾರು ಕೈಕೊಟ್ಟ ಪರಿಣಾಮ ಹತ್ತಿ, ಮೆಣಸಿನಕಾಯಿ, ದಾಳಿಂಬೆ, ಭತ್ತ, ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಿವೆ. ಹೊಸಪೇಟೆಯಲ್ಲಿ ರಾಜ್ಯದ ಎರಡನೇ ಅತಿದೊಡ್ಡ ತುಂಗಭದ್ರ ಜಲಾಶಯವಿದ್ರೂ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಡ್ಯಾಂ ತುಂಬಿಲ್ಲ. ಕಾಲುವೆಗಳ ಮೂಲಕ ಬಿಟ್ಟ ನೀರು ಕೆಳಭಾಗದಲ್ಲಿ ತಲುಪುತ್ತಿಲ್ಲ ಹೀಗಾಗಿ ಬೆಳೆ ಒಣಗುತ್ತಿದ್ದು, ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಕಲಘಟಗಿ ಬಂದ್ ಯಶಸ್ವಿ- ಸಂತೋಷ ಲಾಡ್ ವಿರುದ್ಧ ರೈತರ ಆಕ್ರೋಶ

ಮುಂಗಾರು ಮಳೆ ಕೈಕೊಟ್ಟರು, ಮಲೆನಾಡಿನಲ್ಲಿ ಜುಲೈ ತಿಂಗಳಲ್ಲಿ ಸುರಿದ ಮಳೆ ಪರಿಣಾಮ ನೂರು ಟಿಎಂಸಿ ಸಾಮರ್ಥ್ಯದ ತುಂಗಭದ್ರ ಜಲಾಶಯ ಶೇ 80ರಷ್ಟು ತುಂಬಿತ್ತು. ಕಾಲುವೆಗಳ ಮೂಲಕ ಇದೀಗ ರಾಜ್ಯದ ಮತ್ತು ಆಂಧ್ರ ಮತ್ತು ತೆಲಂಗಾಣಕ್ಕೆ ನೀರನ್ನು ಹರಿಸುತ್ತಿರೋ ಹಿನ್ನೆಲೆ ಇದೀಗ 60 ಟಿಎಂಸಿ ಮಾತ್ರ ನೀರಿದೆ. ಇರೋ ನೀರು ಮುಂದಿನ ಮುಂಗಾರಿನವರೆಗೂ ಬಳ್ಳಾರಿ ಕೊಪ್ಪಳ, ವಿಜಯನಗರ ಮತ್ತು ರಾಯಚೂರು ಸೇರಿದಂತೆ ಆಂಧ್ರದ ಕೆಲ ಜಿಲ್ಲೆಗಳಿಗೆ ಕುಡಿಯುವ ನೀರು ಸೇರಿದಂತೆ ಬೆಳೆಗೆ ನೀರು ಹರಿಸಬೇಕು. ಈಗಿರೋ ನೀರು ಅಲ್ಲಿಯವರೆಗೂ ಸಾಲೋದಿಲ್ಲ. ಅಲ್ಲದೇ ಕಾಲೂವೆಗಳ ನೀರು ಕೆಳಭಾಗದವರೆಗೂ ಹೋಗುತ್ತಿಲ್ಲ.  ಹೀಗಾಗಿ ಬೆಳೆ ಸಂಪೂರ್ಣ ಒಣಗುತ್ತಿದೆ.  

ಪರಿಹಾರವಿಲ್ಲ ಮೇವು‌ ನೀಡ್ತಿಲ್ಲ ಗೋಶಾಲೆ ನಿರ್ಮಾಣ ಮಾಡಿಲ್ಲ

 ರಾಜ್ಯದ ಸರ್ಕಾರ ಬರಪೀಡತ ತಾಲೂಕು ಎಂದು ಘೋಷಣೆ ಮಾಡಿದೆ. ಆದ್ರೇ, ಈವರೆಗೂ ಗೋಶಾಲೆ ನಿರ್ಮಾಣ, ರೈತರಿಗೆ ಪರಿಹಾರ ನೀಡೋದು ಅಥವಾ ಕೃಷಿ ಇಲಾಖೆಯಿಂದ ಬೆಳೆಹಾನಿ ಬಗ್ಗೆ ರೈತರಿಗೆ ಜಾಗೃತಿ ಮೂಡಿಸೋದಾಗಿರಲಿ ಯಾವುದೇ ಕೆಲಸವನ್ನು ಮಾಡಿಲ್ಲ. ಹೀಗಾಗಿ ಬರ ಘೋಷಣೆ ಮಾಡೋದಷ್ಟೇ ಅಲ್ಲ ಮೊದಲು ಪರಿಹಾರ ನೀಡೋ ಕೆಲಸ ಮಾಡಿ ಎನ್ನುತ್ತಿದ್ದಾರೆ ರೈತರು. 

ಭಾರತ ಎಂದು ಹೇಳುವುದರಿಂದ ಬಡವರು ಶ್ರೀಮಂತರಾಗಿ ಬಿಡುತ್ತಾರೆಯೇ?: ಸಚಿವ ಲಾಡ್

click me!