Earthquake| ಸತತ ಕಂಪನ, ಬೆಚ್ಚಿದ ಉತ್ತರ ಕರ್ನಾಟಕ: 7 ದಿನದಲ್ಲಿ 10 ಬಾರಿ ಭೂಕಂಪನ!

By Kannadaprabha NewsFirst Published Oct 12, 2021, 7:39 AM IST
Highlights

* ಸತತ ಭೂಕಂಪನಕ್ಕೆ ಉ.ಕರ್ನಾಟಕ ತತ್ತರ

* ಕಾರಣ ಪತ್ತೆಗೆ ಜನರ ಆಗ್ರಹ

* ಕಳೆದ 7 ದಿನದಲ್ಲಿ 10 ಬಾರಿ ಭೂಕಂಪನ

* ವಿಜಯಪುರ, ಕಲಬುರಗಿ ಜನ ಕಂಗಾಲು

ಕಲಬುರಗಿ(ಅ.12): ಕಳೆದೊಂದು ತಿಂಗಳಿಂದ ಉತ್ತರ ಕರ್ನಾಟಕದ ವಿಜಯಪುರ(Vijayapura) ಮತ್ತು ಕಲಬುರಗಿ(Kalaburagi) ಜಿಲ್ಲೆಗಳ ನಾನಾ ಭಾಗಗಳಲ್ಲಿ ಭೂಮಿ ಕಂಪಿಸುತ್ತಿದ್ದು(Earthquake), ನಾಗರಿಕರು ಭಯಭೀತಿಗೊಂಡಿದ್ದಾರೆ. ಸೋಮವಾರ ಕೂಡ ಕಲಬುರಗಿ ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನಲ್ಲಿ ರಾತ್ರಿ 9.50ಕ್ಕೆ ಮತ್ತೆ ಭೂಕಂಪನ ಸಂಭವಿಸಿದೆ. ಈ ಸರಣಿ ಕಂಪನಗಳು ಭೂಕಂಪನವೋ ಅಥವಾ ಕೇವಲ ಭೂಮಿಯಿಂದ ಬರುತ್ತಿರುವ ಸದ್ದೋ ಎಂದು ಜನರು ಗೊಂದಲಕ್ಕೊಳಗಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಗಡಿಕೇಶ್ವಾರದ ಜನರು ಸೋಮವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಸರ್ಕಾರ ತಮ್ಮ ಆತಂಕಕ್ಕೆ ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ಅಥವಾ ತಜ್ಞರಾಗಲಿ ಇದುವರೆಗೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.

ವಿಜಯಪುರ-ಕಲಬುರಗಿಯಲ್ಲಿ ಮತ್ತೆ ಭೂಕಂಪನ: ಆತಂಕದಲ್ಲಿ ಜನತೆ

7 ದಿನದಲ್ಲಿ 10 ಬಾರಿ ಕಂಪನ:

ಸೆ.4ರಿಂದ ಅ.11ರವರೆಗಿನ ಅವಧಿಯಲ್ಲಿ ಜಿಲ್ಲೆಯ ವಿಜಯಪುರ, ಸಿಂದಗಿ(Sindagi), ಬ.ಬಾಗೇವಾಡಿ, ಕೊಲ್ಹಾರ, ತಿಕೋಟಾ ತಾಲೂಕುಗಳಲ್ಲಿ ಭೂಮಿ ಕಂಪಿಸಿದೆ. ಒಟ್ಟು ಎಂಟು ಬಾರಿ ಭೂಮಿ ಕಂಪನವಾಗಿದ್ದು, ಐದು ಬಾರಿ ಭೂಕಂಪನವು ರಿಕ್ಟರ್‌ ಮಾಪಕದಲ್ಲಿ ದಾಖಲಾಗಿದೆ.

ಇನ್ನು ಕಲಬುರಗಿಯ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಸುತ್ತಮುತ್ತ ಕ​ಳೆದ 6 ವರ್ಷ (2015ರಿಂದ)ದಿಂದ ಭಾರೀ ಸದ್ದು ಮತ್ತು ಭೂಮಿ ಕಂಪಿಸಿದ ಅನುಭವ ಆಗುತ್ತಿದೆ. ಭಾನುವಾರವೂ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 3.4 ಕಂಪನ ದಾಖಲಾಗಿದೆ.

ಕಳೆದ ವರ್ಷದ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ರಾಜ್ಯ ಪ್ರಕೃತಿ ವಿಕೋಪ ಕೋಶದ ಹಿರಿಯ ತಜ್ಞರು, ಭೂವಿಜ್ಞಾನಿಗಳು ನಾಲ್ವರಿದ್ದ ತಂಡ ಈ ಊರಿಗೆ ಭೇಟಿ ನೀಡಿ ಭೂ ಪದರಿನ ಅಧ್ಯಯನ ಮಾಡಿ ಹೋಗಿತ್ತು. ಅತಿಯಾದ ಮಳೆಯಾದಾಗ ಮಳೆ ನೀರು ಅಲ್ಲಲ್ಲಿ ಮಡುಗಟ್ಟಿನಿಂತಿದ್ದು ಭೂಮಿಯೊಳಗೆ ಸಾಗುವಾಗ ಹಾಗೂ ಭೂಮಿಯ ಕೆಳಗಡೆ ಇರುವ ಶಿಲಾ ಪದರಗಳಲ್ಲಿ ನಡೆಯುವ ಸಹಜ ಪ್ರಕ್ರಿಯೆ ಇಂತಹ ಸದ್ದು, ಸಣ್ಣ ಕಂಪನಗಳಿಗೆ ಮೂಲ. ಇಂತಹ ಘಟನೆಗಳು ಸಹಜ ಪ್ರಕ್ರಿಯೆಯಾಗಿದ್ದು ಯಾವುದೇ ಅನಾಹುತ ಆಗುವುದಿಲ್ಲ. ಅದೇ ರೀತಿ ಭಯಪಡಬೇಕಾಗಿಲ್ಲ ತಜ್ಞರ ತಂಡ ಹೇಳಿ ಹೋಗಿದೆ ಎಂದು ಹೇಳಿದೆ. ಆದರೂ ನಿರಂತರವಾಗಿ ಈ ಪ್ರಕ್ರಿಯೆ ನಡೆಯುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ವಿಜಯಪುರದಲ್ಲಿ ಮತ್ತೆ ಭೂ ಕಂಪನ, ಮನೆ ಬಿರುಕು, ಜನರ ಆತಂಕ

ಇದೇ ಚಿಂಚೋಳಿ ತಾಲೂಕಿನ ಹಸರಗುಂಡಗಿ-ಗುರಂಪಳ್ಳಿ ಗ್ರಾಮಗಳಲ್ಲಿ 2001-02ರಲ್ಲಿ ಈ ಸಮಸ್ಯೆ ಉದ್ಭಸಿದ್ದಾರ ಸರ್ಕಾ​ರ ಜನರ ನೆರವಿಗೆ ಧಾವಿಸಿ ಬಂದು ಕಂಬಳಿ ನೀಡಿತ್ತಲ್ಲದೆ ಊರವರ ಬೇಡಿಕೆಯಂತೆ 4. 35 ಕೋಟಿ ರು ವೆಚ್ಚದಲ್ಲಿ ಜಿಪಂ ಅನುದಾನದಿಂದ ಭೂಕಂಪ ಪೀಡಿತ ಊರುಗಳ ಜನರಿಗೆ ಶೆಡ್‌ ನಿರ್ಮಿಸಿ ಅಭಯ ಹೇಳಿತ್ತು. ಆದೇ ರೀತಿ ಇಂದ್ರಪಾಡ ಹೊಸಳ್ಳಿ ಗ್ರಾಮದಲ್ಲಿಯೂ 2016ರಲ್ಲಿ 100 ಶೆಡ್‌ ನಿರ್ಮಿಸಿ ಕೊಡಲಾಗಿತ್ತು. ಇದೀಗ ಈ ಊರುಗಳಲ್ಲಿ ಭೂಕಂಪನವಾಗಲಿ, ಸದ್ದಾಗಲಿ ಕೇಳಿಬರುತ್ತಿಲ್ಲ. ಈಗ ಗಡಿಕೇಶ್ವರ ಗ್ರಾಮಸ್ಥರೂ ಶೆಡ್‌ ನಿರ್ಮಿಸಿಕೊಡುವಂತೆ ಬೇಡಿಕೆಯಿಟ್ಟಿದ್ದಾರೆ.

ಶಿಲಾಪದರದ ಘರ್ಷಣೆ ಕಾರಣವೇ?

ವಿಜಯಪುರ ಜಿಲ್ಲೆಯು ಏಷ್ಯಾದಲ್ಲಿಯೇ ಅತಿ ದೊಡ್ಡದಾದ ಬೃಹತ್‌ ಆಲಮಟ್ಟಿಅಣೆಕಟ್ಟನ್ನು ಹೊಂದಿದೆ. ನೀರಿನ ಪ್ರಮಾಣ ಸಂಗ್ರಹ ಸಾಮರ್ಥ್ಯ ಕೂಡ (123 ಟಿಎಂಸಿ) ಅತಿ ಹೆಚ್ಚು. ಹೀಗಾಗಿ ಭೂಮಿಯಲ್ಲಿ ನೀರು ಇಂಗಿ ಆಳವನ್ನು ಸೇರುತ್ತಿದೆ. ಜತೆಗೆ ಜಿಲ್ಲೆಯಲ್ಲಿ ಕೆರೆ ನೀರು ಸಂಗ್ರಹ ಕೂಡ ಹೆಚ್ಚಾಗಿದ್ದರಿಂದ ಅಂತರ್ಜಲಮಟ್ಟಹೆಚ್ಚಳವಾಗಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ವಿಜಯಪುರ ಜಿಲ್ಲೆಯು ಹೆಚ್ಚಾಗಿ ಕಪ್ಪು ಮಣ್ಣಿನಿಂದ ಕೂಡಿದೆ. ಹೀಗಾಗಿ ಈ ಕಪ್ಪು ಮಣ್ಣಿನಲ್ಲಿ ನೀರು ವೇಗವಾಗಿ ಮತ್ತು ಬೇಗನೆ ಇಂಗುತ್ತವೆ. ಜತೆಗೆ ಅಂತಹ ಕಪ್ಪು ಭೂಮಿಯೊಳಗೆ ಶಿಲಾಪದರಗಳು ಘರ್ಷಣೆಗೆ ಒಳಗಾಗುತ್ತವೆ ಎಂದೂ ಹೇಳಲಾಗುತ್ತಿದೆ. ಈ ಹಿಂದೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ, ಕುದರಿಸಾಲವಾಡಗಿ, ಹುಣಸ್ಯಾಳ ಪಿ.ಬಿ. ಗ್ರಾಮಗಳಲ್ಲಿ ಭೂಮಿ ಕಂಪಿಸಿದಾಗ ವಿಜಯಪುರದಿಂದ ಬಂದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ತಂಡ ಕೂಡ ಇದನ್ನು ಸಾಬೀತುಪಡಿಸಿತ್ತು. ಹೆಚ್ಚು ಮಳೆಯಾದ ಕಡೆಗೆ ಭೂಮಿಯೊಳಗಿನ ಸ್ತರಗಳು ಚಲಿಸುತ್ತವೆ. ಇಂತಹ ಸಂದರ್ಭದಲ್ಲಿ ಭೂಕಂಪನದಂತಹ ಅನುಭವವಾಗುತ್ತದೆ. ಆದರೆ, ಅದು ಭೂಕಂಪನವಲ್ಲ, ಶಬ್ದ ಕಂಪನ ಎಂದೂ ಈ ತಂಡ ವಿಶ್ಲೇಷಣೆ ಮಾಡಿತ್ತು. ಹೀಗಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ಸಂಭವಿಸುತ್ತಿರುವ ಭೂಕಂಪನಕ್ಕೂ ಇದೆ ಕಾರಣವಿರಬಹುದೇ ಎಂಬ ಅನುಮಾನ ಕೂಡ ಈಗ ಬಲವಾಗಿದೆ.

ನಿನ್ನೆ, ಮೊನ್ನೆ ಮತ್ತೆ ಭೂಕಂಪ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಭಾನುವಾರ ಮತ್ತು ಸೋಮವಾರ ರಾತ್ರಿಯ ವೇಳೆ ಭೂಕಂಪನ ಸಂಭವಿಸಿದೆ. ಇಲ್ಲಿನ ಗಡಿಕೇಶ್ವಾರ ಗ್ರಾಮದ ಸುತ್ತಮುತ್ತ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಭೂಮಿ ಕಂಪಿಸುತ್ತಿದೆ ಎಂದು ಜನರು ಗೋಳು ತೋಡಿಕೊಂಡಿದ್ದಾರೆ. ಕಳೆದ ವರ್ಷ ಇಲ್ಲಿಗೆ ತಜ್ಞರು ಭೇಟಿ ನೀಡಿ ಅಧ್ಯಯನ ನಡೆಸಿ, ಆತಂಕ ಪಡುವಂಥದ್ದೇನೂ ಇಲ್ಲ ಎಂದು ಹೇಳಿದ್ದಾರೆ. ಆದರೂ ಜನರು ಭಯದಲ್ಲಿದ್ದಾರೆ.

click me!