Davis Cup 2024: 60 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಭಾರತ ಟೆನಿಸ್ ತಂಡ ಪ್ರಯಾಣ?

By Kannadaprabha NewsFirst Published Dec 18, 2023, 9:36 AM IST
Highlights

ಭಾನುವಾರ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಈ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ರಾಮ್‌ಕುಮಾರ್‌ ರಾಮನಾಥನ್‌, ಶ್ರೀರಾಮ್‌ ಬಾಲಾಜಿ, ಯೂಕಿ ಭಾಂಬ್ರಿ, ನಿಕಿ ಪೂಣಚ್ಚ ಹಾಗೂ ಸಾಕೇತ್‌ ಮೈನೇನಿ ಇದ್ದಾರೆ.

ನವದೆಹಲಿ(ಡಿ.18): 60 ವರ್ಷಗಳ ಬಳಿಕ ಭಾರತ ಟೆನಿಸ್‌ ತಂಡ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ದಟ್ಟವಾಗಿದೆ. 2024ರ ಫೆ. 3, 4 ರಂದು ಡೇವಿಸ್‌ ಕಪ್‌ ವಿಶ್ವ ಗುಂಪು 1ರ ಪ್ಲೇ-ಆಫ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಬೇಕಿದ್ದು, ಈ ಪಂದ್ಯದ ಆತಿಥ್ಯ ಹಕ್ಕು ಪಾಕಿಸ್ತಾನಕ್ಕೆ ಸಿಕ್ಕಿದೆ.

ಭಾನುವಾರ ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಈ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ರಾಮ್‌ಕುಮಾರ್‌ ರಾಮನಾಥನ್‌, ಶ್ರೀರಾಮ್‌ ಬಾಲಾಜಿ, ಯೂಕಿ ಭಾಂಬ್ರಿ, ನಿಕಿ ಪೂಣಚ್ಚ ಹಾಗೂ ಸಾಕೇತ್‌ ಮೈನೇನಿ ಇದ್ದಾರೆ.

ಈಗಾಗಲೇ ಪಂದ್ಯವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸಲು ಎಐಟಿಎಫ್‌ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌ (ಐಟಿಎಫ್‌)ಗೆ ಮನವಿ ಸಲ್ಲಿಸಿದ್ದರೂ, ಇನ್ನೂ ನಿರ್ಧಾರ ಹೊರಬಿದ್ದಿಲ್ಲ. ಪಾಕಿಸ್ತಾನ ಟೆನಿಸ್‌ ಫೆಡರೇಶನ್‌ (ಪಿಟಿಎಫ್‌) ಪಂದ್ಯವನ್ನು ತನ್ನ ತವರಿನಲ್ಲೇ ನಡೆಸುವುದಾಗಿ ಪಟ್ಟು ಹಿಡಿದಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಕ್ಲಬ್‌ಗೆ ಆಸ್ಟ್ರೇಲಿಯಾದ ನೇಥನ್‌ ಲಯನ್‌

ಒಂದು ವೇಳೆ ಐಟಿಎಫ್‌ ಪಂದ್ಯದ ಸ್ಥಳಾಂತರಕ್ಕೆ ಒಪ್ಪದೆ, ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರೆ ಆಗ ಭಾರತ ತಂಡ ಪಂದ್ಯ ಕೈಚೆಲ್ಲಿದಂತಾಗಲಿದ್ದು, ವಿಶ್ವ ಗುಂಪು-2ಗೆ ಹಿಂಬಡ್ತಿ ಪಡೆಯಲಿದೆ.

ಭಾರತ ಟೆನಿಸ್‌ ತಂಡ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ತೆರಳಿದ್ದು 1964ರಲ್ಲಿ. ಆ ಮುಖಾಮುಖಿಯಲ್ಲಿ ಭಾರತ 4-0ಯಲ್ಲಿ ಜಯಭೇರಿ ಬಾರಿಸಿತ್ತು. ಪಾಕಿಸ್ತಾನ ವಿರುದ್ಧ ಭಾರತ ಈ ವರೆಗೂ ಡೇವಿಸ್‌ ಕಪ್‌ನಲ್ಲಿ 8 ಬಾರಿ ಸೆಣಸಿದ್ದು, ಒಮ್ಮೆಯೂ ಸೋತಿಲ್ಲ.

ಪ್ಯಾರಾ ಖೇಲೋ: ರಾಜ್ಯದ ಸವಿತಾಗೆ ಟಿಟಿ ಸ್ವರ್ಣ!

ಬೆಂಗಳೂರು: ಉದ್ಘಾಟನಾ ಆವೃತ್ತಿಯ ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ತೆರೆ ಬಿದ್ದಿದ್ದು, ಕರ್ನಾಟಕ ಒಟ್ಟು 30 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಕೂಟದ ಕೊನೆಯ ದಿನವಾದ ಭಾನುವಾರ ಟೇಬಲ್‌ ಟೆನಿಸ್‌ನಲ್ಲಿ ರಾಜ್ಯಕ್ಕೆ 1 ಚಿನ್ನ, 2 ಬೆಳ್ಳಿ, 3 ಕಂಚಿನ ಪದಕಗಳು ದೊರೆತವು.

ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್ ಸರಣಿಯಿಂದ ಮೊಹಮ್ಮದ್ ಶಮಿ ಔಟ್..!

ಮಹಿಳೆಯರ ಕ್ಲಾಸ್‌-8ರ ವಿಭಾಗದಲ್ಲಿ ಸವಿತಾ ಅಜ್ಜನಕಟ್ಟಿ ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಅವರು ಗುಜರಾತ್‌ನ ಸರಳ ಸೋಲಂಕಿ ವಿರುದ್ಧ 11-5, 11-3, 11-7 ಸೆಟ್‌ಗಳಲ್ಲಿ ಗೆದ್ದರು. ಪುರುಷರ ಕ್ಲಾಸ್‌-7 ವಿಭಾಗದಲ್ಲಿ ಸಂಜೀವ್‌ ಹಮ್ಮಣ್ಣನವರ್, ಕ್ಲಾಸ್‌-8 ವಿಭಾಗದಲ್ಲಿ ಶಶಿಧರ್‌ ಕುಲ್ಕರ್ಣಿ ಬೆಳ್ಳಿಗೆ ತೃಪ್ತಿಪಟ್ಟರೆ, ಮಹಿಳೆಯರ ಕ್ಲಾಸ್‌-7ನಲ್ಲಿ ಮಯಾವ್ವ, ಪುರುಷರ ಕ್ಲಾಸ್‌-7ನಲ್ಲಿ ಸಂಜೀವ್‌ ಕುಮಾರ್‌ ಹಜೇರಿ, ಕ್ಲಾಸ್‌-8 ವಿಭಾಗದಲ್ಲಿ ಅಜಯ್‌ ಜಿ.ವಿ. ಕಂಚಿನ ಪದಕ ಪಡೆದರು.

ಕರ್ನಾಟಕ ಕೂಟದಲ್ಲಿ ಒಟ್ಟಾರೆ 7 ಚಿನ್ನ, 10 ಬೆಳ್ಳಿ ಹಾಗೂ 13 ಕಂಚಿನ ಪದಕ ಪಡೆದು, ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿತು. 40 ಚಿನ್ನ, 39 ಬೆಳ್ಳಿ, 35 ಕಂಚಿನೊಂದಿಗೆ ಒಟ್ಟು 114 ಪದಕ ಗೆದ್ದ ಹರ್ಯಾಣ ಸಮಗ್ರ ಚಾಂಪಿಯನ್‌ ಎನಿಸಿತು.


 

click me!